ಆಗಸ್ಟ್ ಮೊದಲ ದಿನವೇ ಭರ್ತಿಯಾದ ತುಂಗಾ ಜಲಾಶಯ, 65 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ನೀರಿನ ಆತಂಕ ಹೆಚ್ಚಾಗುತ್ತಿದ್ದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಕೆಲ ಜಲಾಶಗಳು ಭರ್ತಿಯಾಗುತ್ತಿದೆ. ಆಗಸ್ಟ್ 1 ರಂದೇ ತುಂಗಾ ಜಲಾಶಯ ಭರ್ತಿಯಾಗಿದ್ದು ನೀರು ಬಿಡುಗಡೆ ಮಾಡಲಾಗಿದೆ.

ಆಗಸ್ಟ್ 1 ರಂದೇ ತುಂಗಾ ಜಲಾಶಯ
ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಪ್ರಮುಖವಾಗಿ ತುಂಗಾ ನದಿ ಪಾತ್ರದ ಶೃಂಗೇರಿ , ಕೊಪ್ಪ, ತೀರ್ಥಹಳ್ಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಕಳೆದ ಹಲವು ದಿನಗಳಿಂದ ನೀರಿನ ಕೊರತೆ ಎದುರಿಸುತ್ತಿದ್ದ ತುಂಗಾ ಜಲಾಶಯ ಇದೀಗ ಭಾರಿ ಮಳೆಯಿಂದ ಭರ್ತಿಯಾಗಿದೆ. ಮಳೆಗಾಲ ಆರಂಭಗೊಂಡ ಬರೋಬ್ಬರಿ 2 ತಿಂಗಳ ಬಳಿಕ ತುಂಗಾ ಜಲಶಯ ಭರ್ತಿಯಾಗಿದೆ.
ಮಲೆನಾಡಿನ ಜೀವನದಿಗೆ ಕಳೆ
ಮಲೆನಾಡಿನ ಜೀವನಾಡಿ ಎಂದೇ ಗುರುತಿಸಿಕೊಂಡಿರುವ ತುಂಗಾ ನದಿ ತುಂಬಿ ಹರಿಯುತ್ತಿದೆ. ಪರಿಣಾಮ ತುಂಬಾ ಜಲಾಶಯ ಭರ್ತಿಯಾಗಿದೆ. ಕಳೆದೆರಡು ದಿನದಿಂದ ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ತುಂಗಾಜಲಾಯಶಕ್ಕೆ ನೀರು ಹರಿದು ಬಂದಿದೆ. ತುಂಗಾ ಜಲಾಶಯ ಭರ್ತಿಯಾದ ಪರಿಣಾಮ ನದಿಗೆ ನೀರು ಬಿಡಲಾಗಿದೆ.
65 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತುಂಗಾ ಜಲಾಶಯದಿಂದ ಸುಮಾರು 65 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಜಲಾಶಯದ 22 ಗೇಟ್ ತೆರೆಯಲಾಗಿದೆ. ತುಂಗಾ ಜಲಾಶಯದ ಎಲ್ಲಾ ಗೇಟ್ ತೆರೆಯಲಾಗಿದ್ದು ನೀರು ರಭಸದಿಂದ ಹರಿಯುತ್ತಿದೆ. ತುಂಗಾ ಜಲಾಶಯ ಇದೀಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ನದಿ ಪಾತ್ರದ ಜನರಿಗೆ ಎಚ್ಚರಿಕೆ
ತುಂಗಾ ಜಲಾಶದಲ್ಲಿ 3.24 ಟಿಎಂಸಿ ನೀರಿನ ಸಂಗ್ರವಾಗಲಿದೆ. 588.24 ಮೀಟರ್ ಎತ್ತರದ ತುಂಗಾ ಜಲಾಶಯ ಭರ್ತಿಯಾಗಿದೆ. ಪರಿಣಾಮ ನದಿ ಪಾತ್ರದ ಕೆಳಭಾಗದ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆಯಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಭಾರಿ ಮಳೆ
ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಬಾರಿ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿದೆ. ಕುದುರೆಮುಖ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಾಲತಿ ನದಿ ಉಕ್ಕಿ ಹರಿಯುತ್ತಿದ್ದು ನಾಬಳ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ರಸ್ತೆಗಳು ಜಲಾವೃತ
ಶೃಂಗೇರಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಸೆಗಳು ಜಲಾವೃತಗೊಂಡಿದೆ. ಶೃಂಗೇರಿ ದೇಗುಲದ ಪಾರ್ಕಿಂಗ್ ಲಾಟ್ ಗೆ ಹೋಗುವ ಪ್ಯಾರಲಲ್ ರಸ್ತೆ ಜಲಾವೃತಗೊಂಡಿದೆ. ರಸ್ತೆ ಮೇಲೆ ಮೂರರಿಂದ ನಾಲ್ಕು ಅಡಿಗಳಷ್ಟು ನೀರು ನಿಂತಿದೆ.

