- Home
- Karnataka Districts
- ತುಮಕೂರಿನಲ್ಲಿ 200 ಅಡಿಕೆ ಗಿಡಗಳ ಕಡಿದ ಕಿಡಿಗೇಡಿಗಳು, ಮತ್ತೊಂದೆಡೆ ಕೆರೆ ಒಡೆದು ನೀರು ಪೋಲು
ತುಮಕೂರಿನಲ್ಲಿ 200 ಅಡಿಕೆ ಗಿಡಗಳ ಕಡಿದ ಕಿಡಿಗೇಡಿಗಳು, ಮತ್ತೊಂದೆಡೆ ಕೆರೆ ಒಡೆದು ನೀರು ಪೋಲು
ತುಮಕೂರು ಜಿಲ್ಲೆಯಲ್ಲಿ ರೈತರೊಬ್ಬರ 200 ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ. ಚೆನ್ನತಿಮ್ಮನಪಾಳ್ಯ ಗ್ರಾಮದಲ್ಲಿ ಕೆರೆ ಏರಿ ಒಡೆದು ನೀರು ಪೋಲಾಗಿ ರೈತರಿಗೆ ಬೆಳೆ ಹಾನಿಯಾಗಿದೆ. ದುರಸ್ತಿ ಕಾಮಗಾರಿಯಲ್ಲಿನ ಲೋಪದೋಷಗಳಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತುಮಕೂರು (ಆ.08): ರೈತ ಜಮೀನಿನಲ್ಲಿ ಬೆಳೆದಿದ್ದ 200ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕತ್ತಿರಿಸಿ ಹಾಕಿ ವಿಕೃತಿ ಮರೆದಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಚಿತ್ತಗಾನಹಳ್ಳಿ ಗ್ರಾಮದಲ್ಲಿ ದುಷ್ಕೃತ್ಯ ನಡೆದಿದೆ. ಗ್ರಾಮದ ರೈತ ರಂಗಣ್ಣ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಸುಮಾರು 200 ಕ್ಕೂ ಹೆಚ್ಚು ನಾಲ್ಕು ವರ್ಷದ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಮಚ್ಚಿನಿಂದ ಕತ್ತರಿಸಿ ಹಾಕಿದ್ದಾರೆ.
ಈ ಗಿಡಗಳನ್ನು ರಂಗಣ್ಣ ಸುಮಾರು ನಾಲ್ಕು ವರ್ಷಗಳಿಂದ ಸಾಕಿ ಬೆಳೆಸಿಕೊಂಡಿದ್ದರು. ಕಳೆದ ರಾತ್ರಿ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ ಗಿಡಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದು, ಇಂದು ಬೆಳಿಗ್ಗೆ ತೋಟದ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೆರೆ ಏರಿ ಹೊಡೆದು ನೀರು ಪೋಲು:
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಚೆನ್ನತಿಮ್ಮನಪಾಳ್ಯ ಗ್ರಾಮದಲ್ಲಿ ಕೆರೆ ಏರಿ ಒಡೆದು ನೀರು ಪೋಲಾಗಿರುವ ಘಟನೆ ಸಂಭವಿಸಿದೆ. ಕೆರೆಯ ನೀರು ಹೊಳೆಯಂತೆ ಹರಿದು ರೈತರ ಜಮೀನಿಗೆ ನುಗ್ಗಿದ್ದು, ಬೆಳೆ ಹಾನಿಯ ಉಂಟಾಗಿದೆ. ಕಳೆದ 15 ದಿನಗಳ ಹಿಂದೆ ಇದೇ ಕೆರೆ ಏರಿ ಒಡೆದು ಅರ್ಧ ನೀರು ಹೊರಹೋಗಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳಲಾಗಿರಲಿಲ್ಲ.
ಗ್ರಾಮಸ್ಥರ ಆಕ್ರೋಶದ ನಡುವೆ, ಕುಣಿಗಲ್ ಶಾಸಕ ಡಾ. ರಂಗನಾಥ್ ಸಮ್ಮುಖದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಬಂದು ಏರಿಯನ್ನು ಸರಿಪಡಿಸಿದ್ದರು. ನಂತರ ಹೇಮಾವತಿ ನಾಲೆಯ ನೀರು ಬಿಟ್ಟು ಕೆರೆ ತುಂಬಿಸಲಾಯಿತು.
ಆದರೆ ಕಾಮಗಾರಿ ದೋಷಪೂರಿತವಾಗಿದ್ದರಿಂದ ಇಂದು ಮತ್ತೆ ಕೆರೆ ಏರಿ ಒಡೆದು ಸಂಪೂರ್ಣ ನೀರು ಖಾಲಿಯಾಗಿದೆ. ಕೆರೆಯ ನೀರನ್ನೇ ಅವಲಂಬಿಸಿಕೊಂಡು ಭತ್ತ, ರಾಗಿ, ಜೋಳ ಬೆಳೆದಿದ್ದ ರೈತರು ಈಗ ಆತಂಕದಲ್ಲಿದ್ದಾರೆ. ಗ್ರಾಮಸ್ಥರ ಆಕ್ರೋಶ ಪ್ರಕಾರ, ಅಧಿಕಾರಿಗಳ ಬೇಜವಾಬ್ದಾರಿತನವೇ ಈ ಸ್ಥಿತಿಗೆ ಕಾರಣ. ಗ್ರಾಮಸ್ಥರು ಕೂಡಲೇ ಕೆರೆ ಏರಿಯನ್ನು ಶಾಶ್ವತವಾಗಿ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.