- Home
- Karnataka Districts
- ಮುರಿದ ಬಿದ್ದ ಮದುವೆ, ಮತ್ತೆ ತಗ್ಲಾಕ್ಕೊಂಡ ಹರಿಪ್ರಸಾದ; ಮೊದಲ ಪತ್ನಿಯಾಯ್ತು, ಈಗ ಮಂಡ್ಯ ಹುಡುಗಿಯಿಂದಲೂ ಮತ್ತೊಂದು ಶಾಕ್!
ಮುರಿದ ಬಿದ್ದ ಮದುವೆ, ಮತ್ತೆ ತಗ್ಲಾಕ್ಕೊಂಡ ಹರಿಪ್ರಸಾದ; ಮೊದಲ ಪತ್ನಿಯಾಯ್ತು, ಈಗ ಮಂಡ್ಯ ಹುಡುಗಿಯಿಂದಲೂ ಮತ್ತೊಂದು ಶಾಕ್!
ತುಮಕೂರು: ಕಾನೂನುಬದ್ದವಾಗಿ ಡಿವೋರ್ಸ್ ಪಡೆಯದೇ ಎರಡನೇ ಮದುವೆಯಾಗಲು ರೆಡಿಯಾಗಿದ್ದ ದೈಹಿಕ ಶಿಕ್ಷಕ ಹರಿಪ್ರಸಾದ್ಗೆ ಭಾನುವಾರ ಮೊದಲ ಪತ್ನಿ ಕಲ್ಯಾಣ ಮಂಟಪದಲ್ಲಿ ಹೈಡ್ರಾಮಾ ಮಾಡಿದ್ದರು. ಇದೀಗ ಮಂಡ್ಯ ಮೂಲದ ಯುವತಿ ಕೂಡಾ ಹರಿಪ್ರಸಾದನಿಗೆ ಶಾಕ್ ನೀಡಿದ್ದಾಳೆ. ಏನಿದು ಪ್ರಕರಣ? ನೋಡೋಣ ಬನ್ನಿ

ಎಡೆಯೂರಿನಲ್ಲಿ ನಡೆಯುತ್ತಿದ್ದ ಮದುವೆ ಕೊನೆಯ ಕ್ಷಣದಲ್ಲಿ ರದ್ದು
ಎಡೆಯೂರಿನ ಮಂಟಪದಲ್ಲಿ ನಡೆಯುತ್ತಿದ್ದ ಹರಿಪ್ರಸಾದ್ ಎನ್ನುವ ದೈಹಿಕ ಶಿಕ್ಷಕರ ಮದುವೆಯನ್ನು ಮೊದಲ ಪತ್ನಿ ರಂಪಾಟ ಮಾಡಿ ನಿಲ್ಲಿಸಿದ್ದರು. ಮೋಸದ ಮದುವೆಯಾಗುವುದು ನಿಂತಿದ್ದರಿಂದ ಕೆಲಕಾಲ ಇಡೀ ಕಲ್ಯಾಣ ಮಂಟಪವೇ ಗೊಂದಲದ ಗೂಡಾಗಿ ಪರಿಣಮಿಸಿತ್ತು.
ಹರಿಪ್ರಸಾದನಿಗೆ ಮತ್ತೊಂದು ಶಾಕ್
ಇದೀಗ ಎರಡನೇ ಮದುವೆಯಾಗಲು ರೆಡಿಯಾಗಿದ್ದ ಹರಿಪ್ರಸಾದ್ ಗೆ ಮತ್ತೊಂದು ಶಾಕ್ ಎದುರಾಗಿದ್ದು, ಮಂಡ್ಯ ಮೂಲದ ಯುವತಿ ಕುಡಾ ಹರಿಪ್ರಸಾದ್ಗೆ ಶಾಕ್ ಕೊಟ್ಟಿದ್ದಾಳೆ. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮೃತೂರು ಠಾಣೆಯಲ್ಲಿ ದೂರು ನೀಡಿದ್ದಾಳೆ.
ಹರಿಪ್ರಸಾದನ ಮೇಲೆ ಕೇಸ್ ಜಡಿದ ಮಂಡ್ಯ ಯುವತಿ
ಹರಿಪ್ರಸಾದ್ ತಮಗೆ ಮೊದಲು ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು ಮೋಸದಿಂದ ಎರಡನೇ ಮದುವೆಯಾಗಲು ಮುಂದಾಗಿದ್ದಾನೆ.
ದೂರಿನಲ್ಲಿ ಏನಿದೆ?
ಮದುವೆಗೆಂದು ಲಕ್ಷ ಲಕ್ಷ ಹಣ ಹಾಗೂ ಚಿನ್ನಾಭರಣಗಳನ್ನು ಹರಿಪ್ರಸಾದ್ ಪಡೆದುಕೊಂಡಿದ್ದಾನೆ. ಆತ ಪಡೆದ ಹಣ ಹಾಗೂ ವಸ್ತುಗಳನ್ನು ವಾಪಾಸ್ ಕೊಡಿಸುವಂತೆ ಅಮೃತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ನಿನ್ನೆಯಷ್ಟೇ ನಡೆದಿದ್ದ ಮದುವೆ ಹೈಡ್ರಾಮಾ
ಬೆಂಗಳೂರಿನ ಖಾಸಗಿ ಶಾಲೆಯ ದೈಹಿಕ ಶಿಕ್ಷಕನಾಗಿರುವ ಹರಿಪ್ರಸಾದ್, ಮೊದಲ ಹೆಂಡತಿ ಡಿವೋರ್ಸ್ ವಿಚಾರ ಕೋರ್ಟ್ ನಲ್ಲಿರುವಾಗಲೇ ಮತ್ತೊಂದು ಮದುವೆಗೆ ರೆಡಿಯಾಗಿದ್ದ. ಕಳೆದ ಮೂರು ವರ್ಷಗಳ ಹಿಂದೆ ಪರಿಚಯವಾದ ಮಂಡ್ಯ ಮೂಲದ ಯುವತಿ ಜತೆ ಮದುವೆಗೆ ರೆಡಿಯಾಗಿದ್ದ. ನಿನ್ನೆ ಕಲ್ಯಾಣ ಮಂಟಪದಲ್ಲಿ ಮದುವೆ ವೇಳೆ ಮೊದಲ ಪತ್ನಿ ಎಂಟ್ರಿ ಕೊಟ್ಟು, ಭಾರೀ ಹೈಡ್ರಾಮಾದ ಬಳಿಕ ಮದುವೆ ನಿಂತು ಹೋಗಿತ್ತು.
ಯುವತಿ ಹಾಗೂ ಆಕೆಯ ತಾಯಿಗೆ ಗೊತ್ತಿತ್ತು ಎಂದ ಹರಿಪ್ರಸಾದ
ಇನ್ನೊಂದೆಡೆ ಮೊದಲನೇ ಮದುವೆ ವಿಚಾರ ಯುವತಿ ಹಾಗೂ ಆಕೆಯ ತಾಯಿಗೆ ಗೊತ್ತಿತ್ತು ಎಂದು ಹರಿಪ್ರಸಾದ್ ಹೇಳಿದ್ದಾರೆ. ಇವರ ಪೈಕಿ ಯಾರು ಹೇಳುವುದು ಸತ್ಯ, ಮತ್ತೆ ಯಾರು ಹೇಳುವುದು ಸುಳ್ಳು ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.

