- Home
- Karnataka Districts
- Vande Bharat Express: ಸಕಲೇಶಪುರದಲ್ಲಿ ವಂದೇ ಭಾರತ್ ರೈಲಿಗೆ ಸ್ವಾಗತ ಬೆನ್ನಲ್ಲೇ ಸಿಕ್ಕಿತು ಮತ್ತೊಂದು ಗುಡ್ನ್ಯೂಸ್
Vande Bharat Express: ಸಕಲೇಶಪುರದಲ್ಲಿ ವಂದೇ ಭಾರತ್ ರೈಲಿಗೆ ಸ್ವಾಗತ ಬೆನ್ನಲ್ಲೇ ಸಿಕ್ಕಿತು ಮತ್ತೊಂದು ಗುಡ್ನ್ಯೂಸ್
ಹಾಸನ: ಮಂಗಳೂರು ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಇದರೊಂದಿಗೆ ಬಹುದಿನ ಕನಸು ನನಸಾಗಿದೆ. ಇಂದು ಬೆಳ್ಳಂಬೆಳಗ್ಗೆ ಸಕಲೇಶ್ವರಪುರಕ್ಕೆ ಆಗಮಿಸಿದ್ದ ವಂದೇ ಭಾರತ್ ರೈಲಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಶಿರಾಡಿಘಾಟ್ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭ
ಶಿರಾಡಿಘಾಟ್ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಆಗಸ್ಟ್ 11ರಿಂದ ಆರಂಭವಾಗಿದೆ. ಸಕಲೇಶಪುರದವರೆಗೆ ವಿದ್ಯುಧೀಕರಣ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದೆ.
20 ಬೋಗಿ, 1080 ಮಂದಿ ಪ್ರಯಾಣಕ್ಕೆ ಅವಕಾಶ
ಇಂದು ಬೆಳ್ಳಂ ಬೆಳಗ್ಗೆ ಸಕಲೇಶಪುರಕ್ಕೆ ಆಗಮಿಸಿದ ವಂದೇ ಭಾರತ್ ರೈಲಿಗೆ ಶಾಸಕ ಸಿಮೆಂಟ್ ಮಂಜು ಅವರು ಸ್ವಾಗತ ಮಾಡಿ ಪೂಜೆ ಸಲ್ಲಿಕೆ ಮಾಡಿದರು. 20 ಬೋಗಿಗಳ ವಂದೇ ಭಾರತ್ ರೈಲಿನಲ್ಲಿ 1,080 ಪ್ರಯಾಣಿಕರಿಗೆ ಅವಕಾಶ ಇದ್ದು, ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.
ಪೂಜೆ ಸಲ್ಲಿಸಿ ವಂದೇ ಭಾರತ್ ರೈಲು ಸ್ವಾಗತಿಸಿದ ಶಾಸಕ ಸಿಮೆಂಟ್ ಮಂಜು
ವಂದೇ ಭಾರತ್ ರೈಲು ಸ್ವಾಗತಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು ಅವರು, ವಂದೇ ಭಾರತ್ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಇಂಟರ್ಸಿಟಿ ಸೇರಿದಂತೆ ಮತ್ತಷ್ಟು ರೈಲು ಸೇವೆ ಸಕಲೇಶಪುರಕ್ಕೆ ವಿಸ್ತರಣೆಯಾಗಲಿದೆ ಎಂಬ ಗುಡ್ನ್ಯೂಸ್ ನೀಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ನೆರೆದಿದ್ದ ಹಲವು ಸಾರ್ವಜನಿಕರು ವಂದೇ ಭಾರತ್ ರೈಲನ್ನು ಸ್ವಾಗತಿಸಿದರು.
ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ
ರೈಲು ಬೆಳಗ್ಗೆ 6:42ಕ್ಕೆ ಸಕಲೇಶಪುರ ನಿಲ್ದಾಣಕ್ಕೆ ಆಗಮಿಸಿತ್ತು. ಆ ಬಳಿಕ 10.55ರ ವೇಳೆಗೆ ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣ ತಲುಪಿತ್ತು. ಈ ಪ್ರಯೋಗಿಕ ಪರೀಕ್ಷೆ ಆಗಸ್ಟ್ 20ರ ವರೆಗೂ ನಡೆಯಲಿದ್ದು, ಈ ಪ್ರಯೋಗ ಯಶಸ್ವಿಯಾದ ಬಳಿಕ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭವಾಗಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜೂನ್ ತಿಂಗಳೊಳಗೆ ರೈಲು ಸಂಚಾರ ನಡೆಸಲಿದೆ ಎಂದು ಈ ಹಿಂದೆ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಅವರು ತಿಳಿಸಿದ್ದರು, ಆದರೆ ಈ ಗುರಿ ಮಿಸ್ ಆಗಿತ್ತು.
ಪ್ರಯಾಣಿಕರಿಗೆ ವಿಮಾನದಲ್ಲಿ ಸಂಚಾರ ಮಾಡಿದ ಅನುಭವ
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸಕಲೇಶಪುರದ ಜನರಿಗೆ ಇದು ಸುದಿನ, ನಾನು ಶಾಸಕನಾದ ಸಂದರ್ಭದಲ್ಲಿ ವಿ ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ದೇಶದ ಪ್ರಧಾನಿಗಳ ಕನಸು ಸ್ವಾವಲಂಬಿ ಭಾರತ, ಇದರಂತೆ ವಂದೇ ಭಾರತ ರೈಲು ದೇಶದಾದ್ಯಂತಹ ಮೂಲೆ ಮೂಲೆಗಳಲ್ಲಿ ಸಂಚಾರ ಮಾಡುತ್ತಿದೆ. ಬೆಂಗಳೂರಿಗೆ ಪ್ರಯಾಣಿಸುವವರಿಗೆ ಇದು ಬಹಳ ಆರಾಮಾದಾಯಕ ಅವಕಾಶವನ್ನು ನೀಡುತ್ತದೆ. ರಾತ್ರಿ ವೇಳೆ ಘಾಟ್ ಪ್ರದೇಶದಲ್ಲಿ ಬಸ್ನಲ್ಲಿ ಬರುವುದು ಅಥವಾ ವಿಮಾನ ಮೂಲಕ ಬರುವುದಕ್ಕಿಂತ ವಂದೇ ಭಾರತ್ ರೈಲು ಉತ್ತಮ ಆಯ್ಕೆ. ಈ ರೈಲಿನಲ್ಲಿ ಪ್ರಯಾಣಿಸುವವರಿಗೆ ವಿಮಾನದಲ್ಲಿ ಹೋಗುತ್ತಿರುವ ಅನುಭವ ಆಗುತ್ತದೆ. ಮುಂದಿನ ದಿನಗಳಲ್ಲಿ ಸ್ಲೀಪರ್ ಸೇವೆ ಕೂಡ ಸಿಗಲಿದೆ. ಒಮ್ಮೆ 1080 ಮಂದಿ ಪ್ರಯಾಣಿಸಬಹುದು, ಈ ಭಾಗದ ಜನರಿಗೆ ಸರ್ಕಾರ ನೀಡಿದ ಮಹತ್ವದ ಯೋಜನೆ ಇದಾಗಿದೆ ಎಂದು ತಿಳಿಸಿದ್ದಾರೆ.
ವಂದೇ ಭಾರತ್ ರೈಲಿಗೆ ಇಲ್ಲಿ ಮಾತ್ರ ಪ್ರತಿ ಗಂಟೆಗೆ 30 ಕಿಲೋಮೀಟರ್ ವೇಗ ನಿಗದಿ
ವಿಶೇಷ 8 ಕೋಚ್ಗಳ ವಂದೇ ಭಾರತ್ ರೈಲಿನ ಮೂಲಕ ಪ್ರಯೋಗಿಕ ಸಂಚಾರ ನಡೆಯುತ್ತಿದ್ದು, ಪಶ್ಚಿಮ ಘಟ್ಟಗಳ ನಡುವೆ ಸಾಗುವ ಹಾದಿಯಲ್ಲಿ ಬ್ರೇಕಿಂಗ್ ಸಿಸ್ಟಮ್, ಸುರಕ್ಷತೆ ಸೇರಿದಂತೆ ಹಲವು ವಿಚಾರಗಳ ಕುರಿತು ಅಧಿಕಾರಿಗಳ ತೀವ್ರ ನಿಗಾ ಇಟ್ಟಿದ್ದಾರೆ. ಈ ಪೈಕಿ ಸಕಲೇಶಪುರದಿಂದ ಸುಬ್ರಹ್ಮಣ್ಯದ ನಡುವಿನ 55 ಕಿಲೋಮೀಟರ್ ಮಾರ್ಗ ಅತ್ಯಂತ ಸವಾಲಿನಿಂದ ಕೂಡಿದೆ. ವಂದೇ ಭಾರತ್ ರೈಲು 180 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡುವ ಸಾಮರ್ಥ್ಯವಿದ್ದರು, ಸಕಲೇಶಪುರದಿಂದ ಪಶ್ಚಿಮ ಘಟ್ಟಗಳ ನಡುವೆ ಸಂಚಾರದ ವೇಳೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ವೇಗ ಪ್ರತಿ ಗಂಟೆಗೆ 30 ಕಿಲೋಮೀಟರ್ ವೇಗ ನಿಗದಿ ಮಾಡಲಾಗಿದೆ.
ಮಂಗಳೂರು, ಬೆಂಗಳೂರು ನಡುವೆ ಮಾತ್ರ ಪ್ರಯಾಣಿಸಲು ಒತ್ತಾಯ
ಇನ್ನು, ಮಂಗಳೂರು ಸೆಂಟ್ರಲ್ ರೈಲಿ ನಿಲ್ದಾಣದಲ್ಲಿ ನಿಲುಗಡೆಯನ್ನು ಕೈಬಿಡಲಾಗಿದೆ ಎಂಬ ಊಹಾಪೋಹಗಳು ಹರಿದಾಡಿತ್ತು. ಆದರೆ ಇದನ್ನು ರೈಲ್ವೆ ಇಲಾಖೆ ಇದುವರೆಗೂ ದೃಢಪಡಿಸಿಲ್ಲ. ಬೆಂಗಳೂರು-ಮಂಗಳೂರು ನಡುವೆ ಮಾತ್ರ ರೈಲು ಓಡಬೇಕು ಎಂಬ ಬೇಡಿಕೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ರೈಲ್ವೆ ಇಲಾಖೆ ಸ್ಪಷ್ಟನೆ ನೀಡುವ ನಿರೀಕ್ಷೆ ಇದೆ.
ಮಂಗಳೂರು- ಬೆಂಗಳೂರು ನಡುವೆ ಪ್ರಯಾಣ ಸಮಯ ಎಷ್ಟು?
ಬೆಂಗಳೂರು ಮಂಗಳೂರು ವಂದೇ ಭಾರತ್ ರೈಲು ಪ್ರಯಾಣ ಟ್ರಯಲ್ ರನ್ ವೇಳೆ 8.5 ಗಂಟೆ ತೆಗೆದುಕೊಳ್ಳುವ ಸಾಧ್ಯತ ಇದೆ. ಇನ್ನು ನಿಲ್ದಾಣಗಳ ನಿಲುಗಡೆ ಸೇರಿದಂತೆ ಇತರ ಸಮಯಗಳ ಕುರಿತು ಟ್ರಯಲ್ ರನ್ ಬಳಿಕ ಸೂಕ್ತ ಮಾಹಿತಿ ಹೊರಬೀಳಲಿದೆ. ಟೆಸ್ಟ್ ಬಳಿಕ ವಂದೇ ಭಾರತ್ ಬೆಂಗಳೂರು ಮಂಗಳೂರು ಪ್ರಯಾಣ ಸಮಯದ ಸಂಪೂರ್ಣ ಚಿತ್ರಣ ಹೊರಬೀಳಲಿದೆ.

