ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಮೊಬೈಲ್ ಫೋನ್, ಪೆನ್ಡ್ರೈವ್ ಪತ್ತೆಯಾಗಿದೆ. ಈ ಸಂಬಂಧ ಪ್ರಜ್ವಲ್ ಮತ್ತು ಇನ್ನೊಬ್ಬ ಕೈದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಿಸಿಬಿ ತನಿಖೆ ನಡೆಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಜೈಲಾಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಅಪರಾಧಿ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಮೊಬೈಲ್ ಫೋನ್, ಪೆನ್ಡ್ರೈವ್, ಡೈರಿ, ಚಾರ್ಜರ್ ಪತ್ತೆಯಾಗಿರುವುದು ತೀವ್ರ ಸಂಚಲನ ಮೂಡಿಸಿದೆ. ಈ ಸಂಬಂಧ ಸಿಸಿಬಿ ) ಪೊಲೀಸ್ ಇನ್ಸ್ಪೆಕ್ಟರ್ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಇಬ್ಬರು ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಿಸಿಬಿ ಮತ್ತು ಸ್ಥಳೀಯ ಪೊಲೀಸರು ಜಂಟಿ ತನಿಖೆ ಕೈಗೊಂಡಿದ್ದಾರೆ. ಮಾತ್ರವಲ್ಲ ಘಟನೆ ಸಂಬಂಧ ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ
ಭದ್ರತಾ ವಿಭಾಗ-3ರ ಮೊದಲ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 4ರಲ್ಲಿ ಸಿಸಿಬಿ ಪೊಲೀಸರು ದಿಢೀರ್ ಪರಿಶೀಲನೆ ನಡೆಸಿದಾಗ ನೀಲಿ ಬಣ್ಣದ 'ರೆಡ್ಮಿ 5G' ಮೊಬೈಲ್ ಫೋನ್, ಬಿಳಿ ಬಣ್ಣದ ಚಾರ್ಜರ್, ನೀಲಿ ಬಣ್ಣದ ಪಾಕೆಟ್ ನೋಟ್ಬುಕ್ ಹಾಗೂ ಒಂದು 'ಸ್ಯಾನ್ಡಿಸ್ಕ್' ಪೆನ್ಡ್ರೈವ್ ಪತ್ತೆಯಾಗಿದ್ದು, ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿ ಪ್ರತಾಪ್ ರಾಯ್ ಅವರನ್ನು ಮೊದಲ ಆರೋಪಿ (A1) ಹಾಗೂ ಪ್ರಜ್ವಲ್ ರೇವಣ್ಣ ಅವರನ್ನು ಎರಡನೇ ಆರೋಪಿ (A2) ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಜಪ್ತಿಯಾದ ಮೊಬೈಲ್ ಫೋನ್ನಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣಗಳು ಆ್ಯಪ್ಗಳು ಹಾಗೂ ನೆಟ್ಫ್ಲಿಕ್ಸ್, ಪ್ರೈಮ್ ವೀಡಿಯೊದಂತಹ ಒಟಿಟಿ ಆ್ಯಪ್ಗಳು ಇರುವುದು ಪತ್ತೆಯಾಗಿದೆ. ಆದರೆ, ಈ ಆ್ಯಪ್ಗಳ ಅಕೌಂಟ್ ಪಾಸ್ವರ್ಡ್ಗಳು ತಮಗೆ ತಿಳಿದಿಲ್ಲ ಎಂದು ಇಬ್ಬರು ಕೈದಿಗಳು ಕೂಡ ವಿಚಾರಣೆ ವೇಳೆ ತಿಳಿಸಿದ್ದು, ಫೋನ್ ಎಲ್ಲಿಂದ ಬಂತು ಎಂಬ ಬಗ್ಗೆ ಬಾಯಿ ಬಿಟ್ಟಿಲ್ಲ.
ಲಾಯರ್ ಮತ್ತು ಸಂಬಂಧಿಗಳಿಗೆ ಕರೆ ಮಾಡುತ್ತಿದ್ದ ಪ್ರಜ್ವಲ್ ರೇವಣ್ಣ
ವಿಚಾರಣೆ ವೇಳೆ ಆರೋಪಿ ಪ್ರತಾಪ್ ರಾಯ್, ಈ ಮೊಬೈಲ್ ಫೋನ್ ತನಗೇ ಸೇರಿದ್ದು ಎಂದು ಒಪ್ಪಿಕೊಂಡಿದ್ದು, ವಕೀಲರು ಹಾಗೂ ಸಂಬಂಧಿಕರಿಗೆ ಕರೆ ಮಾಡಲು ಬಳಸುತ್ತಿದ್ದುದಾಗಿ ಹೇಳಿದ್ದಾನೆ. ಇತ್ತ ಅಪರಾಧಿ ಪ್ರಜ್ವಲ್ ರೇವಣ್ಣ ಕೂಡ ಪ್ರತಾಪ್ನಿಂದ ಮೊಬೈಲ್ ಪಡೆದು ತಮ್ಮ ವಕೀಲರು ಮತ್ತು ಸಂಬಂಧಿಕರಿಗೆ ಕರೆ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರ ದೂರಿನ ಕಾಫಿಯಲ್ಲಿ ಉಲ್ಲೇಖವಾಗಿದೆ.
ಪ್ರಸ್ತುತ ಪರಪ್ಪನ ಅಗ್ರಹಾರ ಮತ್ತು ಸಿಸಿಬಿ ಪೊಲೀಸರು ಈ ಮೊಬೈಲ್ ಜೈಲಿನೊಳಗೆ ಹೇಗೆ ಬಂತು ಹಾಗೂ ಯಾರ ಜೊತೆಗೆಲ್ಲಾ ಸಂವಹನ ನಡೆಸಲಾಗಿದೆ ಎಂದು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮಧ್ಯಾಹ್ನದೊಳಗೆ ಮೊಬೈಲ್ ಜೈಲಿನ ಒಳಗೆ ಹೇಗೆ ಬಂತು ಎಂಬುದರ ಬಗ್ಗೆ ತಿಳಿಸಬೇಕೆಂದು ಜೈಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ನೋಟೀಸ್ ಕೊಟ್ಟು ಅಮಾನತು ಮಾಡಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಹಾಗೂ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.


