- Home
- Karnataka Districts
- ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ವೇಳೆ ಬಂದ ಸುಂಟರಗಾಳಿ; ಕೂದಲೆಳೆ ಅಂತರದಲ್ಲಿ ಬದುಕುಳಿದ ಸತೀಶ್ ಜಾರಕಿಹೊಳಿ!
ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ವೇಳೆ ಬಂದ ಸುಂಟರಗಾಳಿ; ಕೂದಲೆಳೆ ಅಂತರದಲ್ಲಿ ಬದುಕುಳಿದ ಸತೀಶ್ ಜಾರಕಿಹೊಳಿ!
ರಾಣೆಬೆನ್ನೂರಿನಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಳಿಕ, ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಸುಂಟರಗಾಳಿಗೆ ಬೃಹತ್ ಪೆಂಡಾಲ್ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಸಚಿವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಬಗ್ಗೆ ವಿವರ ತಿಳಿಯಿರಿ.

ರಾಣೆಬೆನ್ನೂರಿನಲ್ಲಿ ನಡೆದ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಳಿಕ, ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾಗ ಸುಂಟರಗಾಳಿಗೆ ಬೃಹತ್ ಪೆಂಡಾಲ್ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಸಚಿವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿಂದು ನಡೆದ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಾರ್ಯಕ್ರಮ ಮುಗಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದ ಸಂದರ್ಭದಲ್ಲಿ, ಸುಂಟರಗಾಳಿಗೆ ಸಿಲುಕಿ ಬೃಹತ್ ಪೆಂಡಾಲ್ ಕುಸಿದು ಬಿದ್ದಿದೆ. ಸಚಿವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮ ಮುಗಿಸಿ ಹೊರಡುತ್ತಿದ್ದ ಸಚಿವರನ್ನು ಮಾಧ್ಯಮದವರು ಮಾತನಾಡಿಸುತ್ತಿದ್ದರು. ಈ ವೇಳೆ ಏಕಾಏಕಿ ಧೂಳು ಮಿಶ್ರಿತ ಭಾರಿ ಸುಂಟರಗಾಳಿ ಬೀಸಿದ್ದು, ಸಚಿವರ ಬೆನ್ನಹಿಂದೆಯೇ ಇದ್ದ ಬೃಹತ್ ಪೆಂಡಾಲ್ ಹಾರಿ ಕುಸಿದು ಬಿತ್ತು. ಪೆಂಡಾಲ್ ಕುಸಿಯುತ್ತಿದ್ದಂತೆಯೇ ಸಚಿವರು ಹಾಗೂ ಅಲ್ಲಿದ್ದವರು ಕ್ಷಣ ಕಾಲ ವಿಚಲಿತರಾದರು. ಅದೃಷ್ಟವಶಾತ್ ಸಚಿವರು ಹಾಗೂ ಯಾರಿಗೂ ಯಾವುದೇ ಗಾಯಗಳಾಗಿಲ್ಲ.
ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ, ನರೇಗಾ ಯೋಜನೆಯಿಂದ ಗಾಂಧೀಜಿಯವರ ಹೆಸರು ಕೈಬಿಟ್ಟ ಕೇಂದ್ರದ ಕ್ರಮವನ್ನು ಖಂಡಿಸಿದರು. 'ಬಿಜೆಪಿಯವರು ಗಾಂಧೀಜಿಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುತ್ತಾರೆ, ಇತಿಹಾಸದಲ್ಲಿ ಅವರ ಪಾತ್ರವೇ ಇಲ್ಲ ಎನ್ನುತ್ತಾರೆ. ಈಗ ಮನರೇಗಾದಿಂದ ಅವರ ಹೆಸರನ್ನೇ ತೆಗೆದಿದ್ದಾರೆ.
ನಾವು ಗಟ್ಟಿಯಾಗಿ ನಿಲ್ಲದೇ ಇದ್ದರೆ ಮುಂದೊಂದು ದಿನ ಅಂಬೇಡ್ಕರ್ ಅವರ ಹೆಸರನ್ನು ಇತಿಹಾಸದಿಂದ ಅಳಿಸುವ ಪ್ರಯತ್ನವೂ ನಡೆಯುತ್ತದೆ. ಅವರ ಹೆಸರನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ' ಎಂದು ಆತಂಕ ವ್ಯಕ್ತಪಡಿಸಿದರು.
ಬಳ್ಳಾರಿ ಗಲಾಟೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವರು, 'ಅಧಿಕಾರಿಗಳ ಲೋಪದೋಷ ಇರುವುದರಿಂದಲೇ ಎಸ್ಪಿ ಅಮಾನತು ಮಾಡಲಾಗಿದೆ. ಗಲಾಟೆ ತಡೆಯುವ ಅವಕಾಶ ಇತ್ತು, ಕಠಿಣ ಕ್ರಮ ತಗೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಅದೊಂದು ವೈಯಕ್ತಿಕ ಸಣ್ಣ ಜಗಳ, ಆದರೆ ದೊಡ್ಡ ಮಟ್ಟಕ್ಕೆ ಬೆಳೆಯಬಾರದಿತ್ತು.
ನ್ಯಾಯಾಂಗ ತನಿಖೆಯ ಬೇಡಿಕೆ ಬಗ್ಗೆ ಉತ್ತರಿಸುತ್ತಾ, 'ನಮ್ಮವರೇ ತನಿಖೆ ಮಾಡುವಾಗ ಬೇರೆ ತನಿಖೆ ಯಾಕೆ? ತನಿಖಾ ವರದಿ ಬರಲಿ ನೋಡೋಣ' ಎಂದರು. ಇನ್ನು ಬಹುನಿರೀಕ್ಷಿತ ಸಂಪುಟ ವಿಸ್ತರಣೆಯ ಕುರಿತು ಕೇಳಿದ ಪ್ರಶ್ನೆಗೆ, 'ಸಂಕ್ರಾಂತಿ ಬಳಿಕ ಏನಾಗುತ್ತೋ ಕಾದು ನೋಡೋಣ, ನನಗೇನೂ ಗೊತ್ತಿಲ್ಲ' ಎಂದು ಮಾರ್ಮಿಕವಾಗಿ ಉತ್ತರಿಸಿದರು.

