ಧಾರವಾಡದ ನೆಹರು ನಗರದಲ್ಲಿ, ಕಾರಿಗೆ ಕುರಿಯೊಂದು ಅಡ್ಡ ಬಂದ ಕಾರಣಕ್ಕೆ ಶುರುವಾದ ವಾಗ್ವಾದವು ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಯುವಕನೊಬ್ಬ ಗರ್ಭಿಣಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿದ್ದಾನೆ. ಈ ಘಟನೆಯು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಯುವಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

ಧಾರವಾಡ: ಇಲ್ಲಿನ ನೆಹರು ನಗರ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರಸ್ತೆ ದಾಟುತ್ತಿದ್ದ ಕುರಿಯೊಂದು ಕಾರಿನ ಮುಂದೆ ಅಡ್ಡ ಬಂದ ಹಿನ್ನೆಲೆಯಲ್ಲಿ ಉಂಟಾದ ಸಣ್ಣ ಮಾತಿನ ಚಕಮಕಿಯೇ ನಂತರ ಗಂಭೀರ ವಾಗ್ವಾದಕ್ಕೆ ತಿರುಗಿ, ಗರ್ಭಿಣಿ ಮಹಿಳೆಗೆ ಅವಮಾನ ಮಾತನಾಡಿದ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಘಟನೆ ಧಾರವಾಡದ ನೆಹರೂ ನಗರ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ನಡೆದಿದ್ದು, ಇದರ ವಿಡಿಯೋ ಮತ್ತು ಮಾಹಿತಿ ಇದೀಗ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಘಟನೆ ವೇಳೆ ಕಾರಿನಲ್ಲಿ ಬಂದಿದ್ದ ಯುವಕ ಸಂದೀಪ್ ಎಂಬಾತ ಕುರಿಯೊಂದು ಕಾರಿನ ಮುಂದೆ ಅಡ್ಡ ಬಂದಿದ್ದಕ್ಕೆ ಕೋಪಗೊಂಡು ಅಲ್ಲಿ ನಿಂತಿದ್ದ ಮಹಿಳೆಯೊಂದಿಗೆ ವಾಗ್ವಾದ ಆರಂಭಿಸಿದ್ದಾನೆ.

ಕುರಿಗೆ ಕಣ್ಣು ಕಾಣಲ್ಲಾ, ನೀನೇ ನೋಡಿಕೊಂಡು ಹೋಗಬೇಕು

ರಸ್ತೆ ದಾಟುತ್ತಿದ್ದ ಕುರಿಯೊಂದು ಕಾರಿನ ಮುಂದೆ ಅಡ್ಡ ಬಂದ ಹಿನ್ನೆಲೆಯಲ್ಲಿ ಸಂದೀಪ್ ಕುರಿಗೆ ಕಣ್ಣು ಕಾಣಲ್ಲವೇ? ಎಂದು ದರ್ಪದ ಧಾಟಿಯಲ್ಲಿ ಪ್ರಶ್ನಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ಅದಕ್ಕೆ ಕಣ್ಣು ಕಾಣಲ್ಲಾ ನಿನಾದ್ರೂ ನೋಡಿಕ್ಕೊಂಡು ಹೋಗು ಎಂದು ಹೇಳಿದಾಗ ಮಾತಿನ ಚಕಮಕಿ ತೀವ್ರಗೊಂಡಿದೆ.

ಗರ್ಭಿಣಿ ಮಹಿಳೆ ವಿರುದ್ಧ ಅಶ್ಲೀಲ ಹಾಗೂ ಅವಾಚ್ಯ ಶಬ್ದ ಬಳಕೆ

ಈ ಸಂದರ್ಭದಲ್ಲಿ ಸಂದೀಪ್ ಹಾಗೂ ಅವನ ಜೊತೆಗಿದ್ದ ನಂದು ಎಂಬ ಮತ್ತೊಬ್ಬ ಯುವಕ ಗರ್ಭಿಣಿ ಮಹಿಳೆಯ ಮೇಲೆ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ. ಮಹಿಳೆಯ ಗರ್ಭಿಣಿ ಸ್ಥಿತಿಯನ್ನೂ ಲೆಕ್ಕಿಸದೆ ಅವಮಾನಕರವಾಗಿ ಮಾತನಾಡಿದ ಈ ಘಟನೆ ಸ್ಥಳೀಯ ನಿವಾಸಿಗಳ ಸಿಟ್ಟಿಗೆ ಕಾರಣವಾಗಿದೆ. ಘಟನೆ ನಡೆಯುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಕೂಡಲೇ ಸ್ಥಳಕ್ಕೆ ಬಂದು ಯುವಕ ಸಂದೀಪ್‌ನ್ನು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡಿದ್ದಾರೆ. ಗರ್ಭಿಣಿ ಮಹಿಳೆಯೊಂದಿಗೆ ಈ ರೀತಿಯಾಗಿ ವರ್ತಿಸಿರುವುದಕ್ಕೆ ಯುವಕರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಧಾರವಾಡದ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಸ್ಥಳೀಯರ ಪ್ರಕಾರ, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಗೆ ಅವಾಚ್ಯವಾಗಿ ಮಾತನಾಡಿರುವುದರಿಂದ ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ. ಒಟ್ಟಿನಲ್ಲಿ ಸಣ್ಣ ಕಾರಣದಿಂದ ಆರಂಭವಾದ ವಾಗ್ವಾದ ಗರ್ಭಿಣಿ ಮಹಿಳೆಗೆ ಅವಮಾನಕರವಾಗಿ ನಿಂದನೆ ಮಾಡುವ ಮಟ್ಟಕ್ಕೆ ತಲುಪಿರುವುದು ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.