- Home
- Karnataka Districts
- ಉದ್ಯಮಿ ಸುದೀಪ್ ಶೆಟ್ಟಿ ಕೇಸಲ್ಲಿ ಬಿಗ್ ಟ್ವಿಸ್ಟ್: ಅತ್ತೆ-ಮಾವ ಹಾಗೂ ವೇಣು ರಹಸ್ಯ ಬಿಚ್ಚಿಟ್ಟ ನಟಿ ಸೌಮ್ಯಾ ಶೆಟ್ಟಿ!
ಉದ್ಯಮಿ ಸುದೀಪ್ ಶೆಟ್ಟಿ ಕೇಸಲ್ಲಿ ಬಿಗ್ ಟ್ವಿಸ್ಟ್: ಅತ್ತೆ-ಮಾವ ಹಾಗೂ ವೇಣು ರಹಸ್ಯ ಬಿಚ್ಚಿಟ್ಟ ನಟಿ ಸೌಮ್ಯಾ ಶೆಟ್ಟಿ!
ನೆಲ್ಯಾಡಿಯ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮ*ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಯ ಸಾವಿಗೆ ತಾನೇ ಕಾರಣ ಎಂಬ ಆರೋಪವನ್ನು ಪತ್ನಿ, ನಟಿ ಸೌಮ್ಯ ಶೆಟ್ಟಿ ನಿರಾಕರಿಸಿದ್ದು, ಬದಲಾಗಿ ಪತಿಯ ಸಾಲದ ಸಮಸ್ಯೆ ಮತ್ತು ಅವರ ಮನೆಯವರ ಕಿರುಕುಳದ ಬಗ್ಗೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಉದ್ಯಮಿ ಸುದೀಪ್ ಕೇಸಿಗೆ ಟ್ವಿಸ್ಟ್
ಉಡುಪಿ (ಏ.02): ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ರಿಯಲ್ ಎಸ್ಟೇಟ್ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮ*ಹತ್ಯೆ ಪ್ರಕರಣ ಈಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸುದೀಪ್ ಸಾವಿಗೆ ಅವರ ಪತ್ನಿ, ನಟಿ ಸೌಮ್ಯ ಶೆಟ್ಟಿ ಅವರೇ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದರು. ಆದರೆ, ಈಗ ಈ ಎಲ್ಲಾ ಆರೋಪಗಳಿಗೆ ನಟಿ ಸೌಮ್ಯ ಶೆಟ್ಟಿ ಖಡಕ್ ಪ್ರತಿಕ್ರಿಯೆ ನೀಡಿದ್ದು, ಪತಿ ಸಾವಿನ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಮಾತ್ರವಲ್ಲದೆ, ಸುದೀಪ್ ಸಾವಿಗೆ ಅವರ ಮನೆಯವರ ಕಿರುಕುಳವೇ ಕಾರಣ ಎಂದು ಆರೋಪಿಸಿ ಕಾರ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾನು ರಂಪಾಟ ಮಾಡಿಲ್ಲ, ಆತಂಕಕ್ಕೊಳಗಾಗಿದ್ದೆ:
ಸುದೀಪ್ ಸಾವಿಗೂ ಮುನ್ನ ಸೌಮ್ಯ ಶೆಟ್ಟಿ ನೆಲ್ಯಾಡಿಗೆ ಬಂದು ರಂಪಾಟ ಮಾಡಿದ್ದರು ಎಂಬ ಅತ್ತೆ ಪುಷ್ಪಲತಾ ಶೆಟ್ಟಿ ಅವರ ಆರೋಪಕ್ಕೆ ಸೌಮ್ಯ ಉತ್ತರಿಸಿದ್ದಾರೆ. 'ಸುದೀಪ್ ಅವರ ಮೊಬೈಲ್ ಸ್ವಿಚ್ ಆಫ್ ಇದ್ದ ಕಾರಣ ನಾನು ಆತಂಕಗೊಂಡು ನೆಲ್ಯಾಡಿಗೆ ಹೋಗಿದ್ದೆ. ಅಲ್ಲಿ ಅವರ ಮನೆಯವರು ನನಗೆ ಅಸಭ್ಯ ಭಾಷೆಯಲ್ಲಿ ಬೈದರು. ಹೆಂಡತಿಯಾಗಿ ನಾನು ಅಲ್ಲಿ ಧ್ವನಿ ಎತ್ತಿದ್ದು ನಿಜ, ಆದರೆ ಅದು ರಂಪಾಟವಲ್ಲ. ನಾನು ವಿಷ ಹಾಕಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು, ಬೇಕಿದ್ದರೆ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಿ' ಎಂದು ಸವಾಲು ಹಾಕಿದ್ದಾರೆ.
ಸಾಲದ ಬಾಧೆ
ಸುದೀಪ್ ಶೆಟ್ಟಿ ಅವರ ಸಾವಿಗೆ ಸಾಲದ ಸಮಸ್ಯೆ ಮತ್ತು ಕುಟುಂಬದ ಒತ್ತಡವೇ ಕಾರಣ ಎಂದು ಸೌಮ್ಯ ಶೆಟ್ಟಿ ಹೇಳಿದ್ದಾರೆ. 'ಸುದೀಪ್ ಅವರಿಗೆ ಕಳೆದ 8-9 ವರ್ಷಗಳಿಂದ ಸಾಲ ಇತ್ತು. ಆದರೆ ಮಾರ್ಚ್ 16ರಂದು ಅವರು ನೆಲ್ಯಾಡಿಯ ತಮ್ಮ ತಂದೆಯ ಮನೆಗೆ ಹೋದ ನಂತರವೇ ಪರಿಸ್ಥಿತಿ ಬದಲಾಗಿದೆ.
ಮನೆಯವರ ಕಿರುಕುಳ
ನಮ್ಮ ಮದುವೆಗೆ ಅವರ ಮನೆಯವರು ಒಪ್ಪುತ್ತಿಲ್ಲ ಎಂಬ ಬೇಸರ ಅವರಿಗಿತ್ತು. ತಂದೆಯ ಮನೆಗೆ ಹೋಗಿ ಬಂದ ನಂತರ ಅವರು ಆತ್ಮ*ಹತ್ಯೆಯ ನಿರ್ಧಾರ ಮಾಡಿದ್ದಾರೆ ಎಂದರೆ, ಅಲ್ಲಿ ಅವರಿಗೆ ಮಾನಸಿಕ ಕಿರುಕುಳ ನೀಡಿ ಪ್ರಚೋದಿಸಿರುವ ಸಂಶಯ ನನಗಿದೆ' ಎಂದು ಸೌಮ್ಯ ಗಂಭೀರವಾಗಿ ಹೇಳಿದ್ದಾರೆ.
ಇದನ್ನೂ ಓದಿ:ಬಕೆಟ್ ನೀರಲ್ಲಿ ಮುಳುಗಿ ಸತ್ತ 11 ತಿಂಗಳ ಮಗು; ಪತ್ರ ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ ತಾಯಿ
ವೇಣು ಶೆಟ್ಟಿ ಜಾತಕ ಬಿಚ್ಚಿಟ್ಟ ಸೌಮ್ಯ:
ಈ ಪ್ರಕರಣದಲ್ಲಿ ಸೌಮ್ಯಳ ಹಳೆ ಪ್ರೇಮಿ ಎಂದು ಹೇಳಿಕೊಂಡು ಆರೋಪ ಮಾಡಿದ್ದ ವೇಣು ಶೆಟ್ಟಿ ವಿರುದ್ಧವೂ ಸೌಮ್ಯ ಶೆಟ್ಟಿ ಕಿಡಿಕಾರಿದ್ದಾರೆ. 'ವೇಣು ಶೆಟ್ಟಿ ಒಬ್ಬ ನಾಟಕ ಕಲಾವಿದ, ಆತನ ಕ್ಯಾರೆಕ್ಟರ್ ಸರಿ ಇಲ್ಲ. ಹಲವು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದ ಆತನ ಬಗ್ಗೆ ತಿಳಿಯುತ್ತಿದ್ದಂತೆಯೇ ನಾನು ದೂರವಾಗಿದ್ದೆ. ಆದರೆ ಆತ ಸುದೀಪ್ ಅವರ ತಂದೆಯ ತಲೆ ಕೆಡಿಸಿ ಈ ಆತ್ಮ*ಹತ್ಯೆಗೆ ಪ್ರಚೋದನೆ ನೀಡಿದ್ದಾನೆ. ಆತನ ಬಗ್ಗೆ ಇರುವ ಎಲ್ಲಾ ದಾಖಲೆಗಳನ್ನು ನಾನು ಪೊಲೀಸರಿಗೆ ನೀಡುತ್ತೇನೆ' ಎಂದು ಎಚ್ಚರಿಕೆ ನೀಡಿದ್ದಾರೆ.
ಆರೋಪ-ಪ್ರತ್ಯಾರೋಪ
ಈಗಾಗಲೇ ಸೌಮ್ಯ ಶೆಟ್ಟಿ ಅವರು ಸುದೀಪ್ ಮನೆಯವರು ಹಾಗೂ ವೇಣು ಶೆಟ್ಟಿ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉದ್ಯಮಿಯ ಸಾವಿನ ಸುತ್ತಲಿನ ಈ ಆರೋಪ-ಪ್ರತ್ಯಾರೋಪಗಳು ಕರಾವಳಿಯಲ್ಲಿ ತೀವ್ರ ಸಂಚಲನ ಮೂಡಿಸಿವೆ.

