- Home
- Karnataka Districts
- ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಹತ್ಯೆ ಕೇಸ್, ಪತ್ನಿ ಹಾಗೂ ಪ್ರಿಯಕರನಿಗೆ ಗಲ್ಲು ಶಿಕ್ಷೆ
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಹತ್ಯೆ ಕೇಸ್, ಪತ್ನಿ ಹಾಗೂ ಪ್ರಿಯಕರನಿಗೆ ಗಲ್ಲು ಶಿಕ್ಷೆ
ಮದುವೆಯಾದ ಕೆಲ ವರ್ಷಗಳಲ್ಲೇ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆ ಅಡ್ಡಿಯಾದ ಪತಿಯನ್ನು ಪ್ರಿಯಕರ ಜೊತೆ ಸೇರಿದ ಹತ್ಯೆ ಮಾಡಿದ್ದಳು. ಈ ಪ್ರಕರಣದ ತೀರ್ಪು ಇದೀಗ ಹೊರಬಿದ್ದಿದೆ.ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಪತಿಯ ಹತ್ಯೆ ಕೇಸ್ ತೀರ್ಪು
ಅಕ್ರಮ ಸಂಬಂಧ ಹಲವು ಸಂಸಾರಗಳನ್ನು ಹಾಳು ಮಾಡಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುವ ಪತಿ ಅಥವಾ ಪತ್ನಿಯನ್ನು ಹತ್ಯೆ ಮಾಡಿದ ಹಲವು ಘಟನೆಗಳು ನಡೆದಿದೆ. ಹೀಗೆ ಶಿವಮೊಗ್ಗದ ಭದ್ರಾವತಿಯ ಪೇಪರ್ಟೌನ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿಯ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆ ಘಟನೆ ನಡೆದಿತ್ತು. ಪತ್ನಿ ಹಾಗೂ ಆಕೆಯ ಪ್ರಿಯಕರ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದರು. ಇದೀಗ ಈ ಪ್ರಕರಣ ಸಂಬಂಧ ತೀರ್ಪು ಪ್ರಕಟಗೊಂಡಿದೆ. ಪತ್ನಿ ನ್ಯಾನ್ಸಿ ಹಾಗೂ ಆಕೆಯ ಪ್ರಿಯಕರನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಏನಿದು ಘಟನೆ?
ಖಾಸಗಿ ನರ್ಸಿಂಗ್ ಹೋಂನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಫ್ಲೋರಾ ನ್ಯಾನ್ಸಿ 2020ರಲ್ಲಿ ಟ್ಯಾಕ್ಸಿ ಚಾಲಕ ಬಿ.ಎಸ್.ಪ್ರಕಾಶ್ ಬಾಬು ಎಂಬುವರ ಜತೆ ವಿವಾಹವಾಗಿದ್ದಳು. ಕೆಲವೇ ವರ್ಷದಲ್ಲಿ ನ್ಯಾನ್ಸಿಗೆ ರಾಜಶೇಕರಯ್ಯ ಜೊತೆ ಅನೈತಿಕ ಸಂಬಂಧ ಹುಟ್ಟಿತ್ತು. ಇದು ತೀವ್ರಗೊಂಡಿತ್ತು. ಇದಕ್ಕೆ ಪತಿ ಪ್ರಕಾಶ್ ಬಾಬು ಅಡ್ಡಿಯಾಗಿದ್ದ. ಈ ಸಂಬಂಧ ಇಬ್ಬರಿಗೂ ಜಗಳವಾಗಿದೆ. ಪತ್ನಿಯ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ.
ಹತ್ಯೆಗೆ ಭರ್ಜರಿ ಪ್ಲಾನ್ ಮಾಡಿದ್ದ ಪತ್ನಿ
2020ನೇ ಜ.15ರ ರಾತ್ರಿ ಸುರಗಿತೋಪಿನಲ್ಲಿರುವ ತನ್ನ ಮನೆಯಲ್ಲಿ ಪತಿಗೆ ಹಾಗಲಕಾಯಿ ಜ್ಯೂಸ್ನಲ್ಲಿ ಮತ್ತು ಭರಿಸುವ ಮಾತ್ರೆ ಬೆರೆಸಿ ಕುಡಿಸಿದ್ದಳು. ನಿದ್ರೆಗೆ ಜಾರಿದ್ದ ಪ್ರಕಾಶ್ಬಾಬುನ ಕತ್ತು ಹಿಸುಕಿ ರಾಜಶೇಖರಯ್ಯ ಹಾಗೂ ಫ್ಲೋರಾ ನ್ಯಾನ್ಸಿ ಸೇರಿ ಕೊಲೆ ಮಾಡಿದ್ದರು. ಬಳಿಕ ಇಬ್ಬರೂ ಪ್ರಕಾಶ್ಬಾಬು ಶವವನ್ನು ಆತನ ಕಾರಿನಲ್ಲಿ ತೆಗೆದುಕೊಂಡು ಹೋಗಿ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಭದ್ರಾ ನಾಲೆಗೆ ಎಸೆದಿದ್ದರು.
ವಿಚಾರಣೆಯಲ್ಲಿ ಹೊರಬಂದ ಸತ್ಯ
ಘಟನೆ ನಡೆದ ಮೂರು ದಿನ ಬಳಿಕ ಶವ ದೊರಕಿದ್ದು, ಆರಂಭದಲ್ಲಿ ಪ್ರಕಾಶ್ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಮೃತನ ಸಹೋದರ ಫ್ರಾನ್ಸಿಸ್ ನೀಡಿದ ದೂರಿನ ಮೇಲೆ ತನಿಖೆ ಆರಂಭಿಸಿದ ಪೇಪರ್ಟೌನ್ ಠಾಣೆ ಪೊಲೀಸರು, ಫ್ಲೋರಾ ನ್ಯಾನ್ಸಿ ಹಾಗೂ ಆಕೆ ಪ್ರಿಯಕರನನ್ನು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ.
ಇಬ್ಬರಿಗೂ ಗಲ್ಲು ಶಿಕ್ಷೆ
ಇಬ್ಬರ ವಿರುದ್ಧ ಐಪಿಸಿ ಕಲಂ 302 ಹಾಗು 201ರಡಿ ಪ್ರಕರಣ ದಾಖಲಾಗಿತ್ತು. ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಇಬ್ಬರಿಗೂ ಗಲ್ಲುಶಿಕ್ಷೆ ಹಾಗೂ 14 ಲಕ್ಷ ರೂ. ದಂಡ ವಿಧಿಸಿದ್ದಾರೆ. ಮೃತನ ಸಹೋದರ ಫ್ರಾನ್ಸಿಸ್ಗೆ ಐದು ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

