ಶಿವಂ ಇನ್ವೆಸ್ಟ್ಮೆಂಟ್ ಪ್ರಕರಣದ ಬೆನ್ನಲ್ಲೇ, ಬೆಳಗಾವಿ ಮೂಲದ ಆದಿತ್ಯರಾಜ್ ಕ್ಯಾಪಿಟಲ್ ಎಂಬ ಮತ್ತೊಂದು ಕಂಪನಿ ಬೆಳಕಿಗೆ ಬಂದಿದೆ. ಈ ಕಂಪನಿಯು ವರ್ಷಕ್ಕೆ ಶೇ. 60ರಷ್ಟು ಬಡ್ಡಿ ಹಾಗೂ 15 ತಿಂಗಳಲ್ಲಿ ಹಣ ಡಬಲ್ ಮಾಡುವ ಆಮಿಷವೊಡ್ಡಿ ನೂರಾರು ಕೋಟಿ ಸಂಗ್ರಹಿಸಿದೆ. ಕಾನೂನುಬದ್ಧ ಒಪ್ಪಂದಗಳ ಮೂಲಕ ಹೂಡಿಕೆದಾರರನ್ನು ಆಕರ್ಷಿಸುತ್ತಿರುವುದು ಮತ್ತೊಂದು ದೊಡ್ಡ ವಂಚನೆಯ ಅನುಮಾನಕ್ಕೆ ಕಾರಣವಾಗಿದೆ.
ಬೆಳಗಾವಿ: ಬೆಳಗಾವಿ ಮೂಲದ ಶಿವಾನಂದ ನೀಲಣ್ಣವರ ನೇತೃತ್ವದ ಶಿವಂ ಇನ್ವೆಸ್ಟಮೆಂಟ್ ಪ್ರೈ.ಲಿ. ಹೆಚ್ಚಿನ ಬಡ್ಡಿ ಕೊಡುವ ಭರವಸೆ ನೀಡಿ ಸಾವಿರಾರು ಕೋಟಿ ಹಣ ನಂಗ್ರಹ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಮಧ್ಯೆಯೇ ಇಂತಹುದೇ ಮತ್ತೊಂದು ಹೂಡಿಕೆ ಕಂಪನಿ ಗ್ರಾಹಕರಿಗೆ ಹೆಚ್ಚಿನ ಬಡ್ಡಿಯ ಭರವಸೆ ನೀಡಿ ನೂರಾರು ಕೋಟಿ ಹಣ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.

ಹೌದು, ಶಿವಂ ಇನ್ವೆಸ್ಟಮೆಂಟ್ ಪ್ರೈ.ಲಿ. ವರ್ಷಕ್ಕೆ ಪ್ರತಿಶತ 36 ಬಡ್ಡಿ ಕೊಡುವುದಾಗಿ ಹೇಳಿ ಜನರಿಂದ ಅಕ್ರಮವಾಗಿ ಸಾವಿರಾರು ಕೋಟಿ ಹಣ ಸಂಗ್ರಹಿಸಿದ ಆರೋಪದಲ್ಲಿ ಅದರ ಸಂಸ್ಥಾಪಕ ಶಿವಾನಂದ ನೀಲಣ್ಣವರ ಅವರನ್ನು ಬಂಧಿಸಿರುವ ಪೊಲೀಸರು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಸಿಐಡಿ ಕಂಪನಿಯ ಆಳ ಅಗಲ ಜಾಲಾಡುತ್ತಿದೆ.
ಈ ಮಧ್ಯೆ ಶಿವಂ ಕಂಪನಿ ವರ್ಷಕ್ಕೆ ಪ್ರತಿಶತ 36 ಬಡ್ಡಿ ಹಣ ನೀಡುವುದಾಗಿ ಹೇಳಿದ್ದರೆ ಬೆಳಗಾವಿ ಮೂಲದ ಮತ್ತೊಂದು ಕಂಪನಿ ಆದಿತ್ಯರಾಜ್ ಕ್ಯಾಪಿಟಲ್ ತಿಂಗಳಿಗೆ ಪ್ರತಿಶತ 5 ಅಂದ್ರೆ ವರ್ಷಕ್ಕೆ ಪ್ರತಿಶತ 60 ಪರ್ಸೆಂಟ್ ರಿಟರ್ನ್ ಕೊಡುವುದಾಗಿ ಹೇಳಿ ಜನರಿಂದ ನೂರಾರು ಕೋಟಿ ಹಣ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.
ಈ ಕಂಪನಿಯಲ್ಲಿ ಹಣ ತೊಡಗಿಸಿದರೆ ಕೇವಲ 15 ತಿಂಗಳಲ್ಲಿ ಈ ಹಣ ಡಬಲ್ ಆಗಲಿದೆಯಂತೆ. ಇಲ್ಲಿ ಎರಡು ಆಯ್ಕೆಗಳಿವೆ. ಒಂದು ಹೂಡಿಕೆ ಮಾಡಿ 15 ತಿಂಗಳಿಗೆ ಡಬಲ್ ಹಣ ಪಡೆಯುವುದು, ಇನ್ನೊಂದು ಹೂಡಿಕೆ ಮಾಡಿ ಅದಕ್ಕೆ ಪ್ರತಿ ತಿಂಗಳು ಪ್ರತಿಶತ 5ರಂತೆ ಬಡ್ಡಿ ಹಣ ಪಡೆಯುವುದು. 20ನೇ ತಿಂಗಳಿಗೆ ನೀವು ಹೂಡಿಕೆ ಮಾಡಿದ ಹಣವೂ ನಿಮ್ಮ ಖಾತೆಗೆ ಮರಳಲಿದೆ. ಈ ಯೋಜನೆಯಲ್ಲಿ 20 ತಿಂಗಳಿಗೆ ನಿಮ್ಮ ಹಣ ಡಬಲ್ ಆಗಲಿದೆ.
ಈ ಕಂಪನಿ ಕಳೆದ ಮೂರುವರೆ ವರ್ಷಗಳಿಂದ ಬೆಳಗಾವಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಭಾಗ್ಯನಗರ 5ನೇ ಕ್ರಾಸ್ನಲ್ಲಿ ಕಚೇರಿ ಹೊಂದಿದ್ದು, ವರ್ಷದಲ್ಲಿ ಎರಡ್ಮೂರು ಬಾರಿ ಸ್ಟಾರ್ ಹೋಟೆಲ್ಗಳಲ್ಲಿ ಹೂಡಿಕೆದಾರ ತರಬೇತಿ ಹೆಸರಿನಲ್ಲಿ ಸಭೆ ನಡೆಸಿ ಹೆಚ್ಚಿನ ಹೂಡಿಕೆ ಮಾಡಿದವರಿಗೆ, ಈಗಿರುವ ಪ್ಲಾನ್ ಮೆಚ್ಯೂರಿಟಿ ಆಗಿ ಮರಳಿ ಆ ಹಣವನ್ನು ಹೂಡಿಕೆ ಮಾಡುವವರಿಗೆ ಆಕರ್ಷಕ ಗಿಫ್ಟ್ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಇಲ್ಲಿಯವರೆಗೆ ಡಬಲ್ ಆದ ಹಣವನ್ನು ಅಲ್ಲಿಯೇ ಮರಳಿ ತೊಡಗಿಸಲು ಪ್ರೇರೇಪಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಶಿವಂ ಅಸೋಸಿಯೇಟ್ಸ್ ಪ್ರಕರಣ ಸಂಚಲನ ಸೃಷ್ಟಿಸಿರುವ ಮಧ್ಯೆಯೇ ಕಳೆದ ಭಾನುವಾರ ಬೆಳಗಾವಿಯ ಕೋಟೆಕೆರೆ ಬಳಿಯ ಖಾಸಗಿ ಹೋಟೆಲ್ನಲ್ಲಿ ಕಂಪನಿ ಹೂಡಿಕೆದಾರರ ತರಬೇತಿ ಕಾರ್ಯಾಗಾರ ಆಯೋಜಿಸಿತ್ತು. ಸುದ್ದಿ ತಿಳಿದು ಕೆಲವು ಪತ್ರಕರ್ತರು ಹೋಟೆಲ್ ಒಳಗೆ ಹೋಗಲು ಯತ್ನಿಸಿದರೂ ಒಳಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿದು ಬಂದಿದೆ.
ವ್ಯವಹಾರಕ್ಕೆ ಕಾನೂನು ಮುದ್ರೆ?
ಹಾಗಂತ ಈ ಕಂಪನಿಯೇನೂ ಕದ್ದುಮುಚ್ಚಿ ವ್ಯವಹಾರ ಮಾಡುತ್ತಿಲ್ಲ. ಬಹಿರಂಗವಾಗಿಯೇ ಪ್ರಚಾರ ಮಾಡುತ್ತ, ಸ್ಟಾರ್ ಹೋಟೆಲ್ಗಳಲ್ಲಿ ಗ್ರಾಹಕರನ್ನು ಸೇರಿಸಿ ಅದ್ಧೂರಿ ಕಾರ್ಯಕ್ರಮ ಮಾಡುತ್ತ ಹೂಡಿಕೆದಾರರನ್ನು ಸೆಳೆಯುತ್ತಿದೆ. ಹೂಡಿಕೆ ಮಾಡುವವರಿಗೆ ₹100 ರೂಪಾಯಿ ಬಾಂಡ್ ಪೇಪರ್ದಲ್ಲಿ ಅಗ್ರಿಮೆಂಟ್ ಮಾಡಿ ನೋಟರಿ ಸಹ ಮಾಡಿಸಿಕೊಡುತ್ತಿದೆ. ಎಷ್ಟು ಹೂಡಿಕೆ ಮಾಡಲಾಗುತ್ತಿದೆ, ಎಷ್ಟು ಅವಧಿಯರೆಗೆ ಹೂಡಿಕೆಗೆ ಸಿಗುವ ಬಡ್ಡಿ ಹಾಗೂ ಎಷ್ಟು ತಿಂಗಳಿಗೆ ಎಷ್ಟು ಹಣ ಮರಳಿ ಸಿಗಲಿದೆ ಎಂಬುದನ್ನು ಈ ಅಗ್ರಿಮೆಂಟ್ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗುತ್ತಿದೆ. ₹100 ಬಾಂಡ್ ಪೇಪರ್ನಲ್ಲಿ ನೋಟರಿ ಸಹಿತ ಅಗ್ರಿಮೆಂಟ್ ಮಾಡಿಕೊಡುತ್ತಿರುವುದರಿಂದ ನಿಮಗೆ ಕಾನೂನಿನ ರಕ್ಷಣೆ ಇದೆ ಎಂದು ನಂಬಿಸಿ ಹೂಡಿಕೆದಾರರನ್ನು ಆಕರ್ಷಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಸಂಗ್ರಹಿಸಿದ ಹಣ ಎಲ್ಲಿ ಹೂಡಿಕೆ?
ಜನರಿಂದ ಸಂಗ್ರಹಿಸುವ ಹಣವನ್ನು ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಅಗ್ರಿಮೆಂಟ್ನಲ್ಲಿ ಈ ಅಂಶವೂ ಇರುತ್ತದೆ. ಅಗ್ರಿಮೆಂಟ್ ಪ್ರಕಾರ ಹೂಡಿಕೆದಾರನ ಅಕೌಂಟ್ ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆಯ ಎಲ್ಲ ವ್ಯವಹಾರವನ್ನು ಕಂಪನಿ ನಿರ್ವಹಿಸಲಿದೆ. ಅದು 400 ಟ್ರೇಡಿಂಗ್ ದಿನಗಳವರೆಗೆ ಮಾತ್ರ ಊರ್ಜಿತವಾಗಿರಲಿದೆ. ಹೂಡಿಕೆಗೆ ಪ್ರತಿಯಾಗಿ ತಿಂಗಳಿಗೆ ಬಡ್ಡಿ ಶೇ.5 ಹಾಗೂ ಅಸಲು ಶೇ.5 ಸೇರಿ ತಿಂಗಳಿಗೆ 10 ಪರ್ಸೆಂಟ್ ಸಿಗಲಿದೆ ಎಂದು ಅಗ್ರಿಮೆಂಟ್ನಲ್ಲಿಯೇ ಸ್ಪಷ್ಟವಾಗಿ ನಮೂದಿಸಲಾಗಿದೆ. 400 ಟ್ರೇಡಿಂಗ್ ದಿನಗಳು ಮುಕ್ತಾಯವಾದ ಬಳಿಕ ಹೂಡಿಕೆಯ ಹಣ ಮರಳಿ ಅಕೌಂಟ್ಗೆ ಜಮಾ ಆಗಲಿದೆ ಎಂದು ಅಗ್ರಿಮೆಂಟ್ನಲ್ಲಿ ಹೇಳಲಾಗಿದೆ.
ಹೇಗೆ ಡಬಲ್ ಆಗಲಿದೆ?
ಹೂಡಿಕೆದಾರ 1 ಲಕ್ಷ ಹೂಡಿಕೆ ಮಾಡಿದರೆ 15 ತಿಂಗಳಿಗೆ ಈ ಹಣ ಬಡಲ್ ಅಂದರೆ ₹2 ಲಕ್ಷ ಆಗಲಿದೆ. ಎರಡನೇ ಸ್ಕೀಂನಲ್ಲಿ ಹೂಡಿಕೆದಾರ ₹5 ಲಕ್ಷ ಹಣ ಹೂಡಿದರೆ ತಿಂಗಳಿಗೆ ಶೇ.5ರಷ್ಟು ಬಡ್ಡಿಯ ಲೆಕ್ಕದಲ್ಲಿ ಪ್ರತಿ ತಿಂಗಳು ₹50 ಸಾವಿರದಂತೆ 20 ತಿಂಗಳವರೆಗೆ ನಿಮ್ಮ ಖಾತೆಗೆ ಹಣ ಜಮೆ ಆಗಲಿದೆ. 20ನೇ ತಿಂಗಳಿಗೆ ನೀವು ಹೂಡಿಕೆ ಮಾಡಿದ ₹5 ಲಕ್ಷ ಸಿಗಲಿದೆ. ಅಂದರೆ 5+5 20 ತಿಂಗಳಿಗೆ ಡಬಲ್ ಅಂದ್ರೆ ₹5 ಲಕ್ಷ ಹೂಡಿಕೆ ಮಾಡಿದವರಿಗೆ ₹10 ಲಕ್ಷ ಸಿಗಲಿದೆ.
ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿ. ಹಿನ್ನೆಲೆ ಏನು?
ಈ ಕಂಪನಿಯ ಮಾಲೀಕ ಮಹಾರಾಷ್ಟ್ರದ ಬಾರಾಮತಿ ಮೂಲದವರು. ಈ ಹಿಂದೆ ಮಹಾರಾಷ್ಟ್ರದಲ್ಲಿ ಇಂತಹುದೇ ವ್ಯವಹಾರ ನಡೆಸಿ ದೂರು ದಾಖಲಾದ ಬಳಿಕ ಅಲ್ಲಿನ ವ್ಯವಹಾರ ಬಂದ್ ಮಾಡಿ ಬೆಳಗಾವಿಗೆ ಸ್ಥಳಾಂತರ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳಗಾವಿಯಲ್ಲೂ ಕೆಲವರು ದೂರು ನೀಡಿದರೂ ಪೊಲೀಸರು ಹೆಚ್ಚಿನ ಆಸಕ್ತಿ ತೋರಿಸಿಲ್ಲ ಎನ್ನಲಾಗುತ್ತಿದೆ. ಕಂಪನಿ ಮೇಲೆ ದೂರುಗಳು ಬಂದಾಗ ಹಣದ ಆಮಿಷ ಒಡ್ಡಿ ಅದು ಬಹಿರಂಗವಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.


