ಇಂದೋರ್ ಮತ್ತೆ ದೇಶದ ಮೊದಲ ಸ್ವಚ್ಛ ನಗರ, ಬೆಂಗಳೂರಿಗೆ ಈ ಗರಿ ಯಾವಾಗ?
ಇಂದೋರ್ ಎಂಟನೇ ಬಾರಿಗೆ ಭಾರತದ ಅತ್ಯಂತ ಸ್ವಚ್ಛ ನಗರಿ ಪ್ರಶಸ್ತಿ ಪಡೆದಿದೆ. ಸೂರತ್ ಮತ್ತು ನವಿ ಮುಂಬೈ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಈ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನವದೆಹಲಿಯಲ್ಲಿ ಪ್ರದಾನ ಮಾಡಿದರು.

ಇಂದೋರ್ ನಗರ ಸತತವಾಗಿ ಎಂಟನೇ ಬಾರಿ ಭಾರತದ ಅತ್ಯಂತ ಸ್ವಚ್ಛ ನಗರಿ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸೂರತ್ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗೊಂಡಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನವಿ ಮುಂಬೈ ಮೂರನೇ ಸ್ಥಾನದಲ್ಲಿದೆ. 3-10 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ನೋಯ್ಡಾ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ ಚಂಡೀಗಢ ಮತ್ತು ಮೈಸೂರು ಇವೆ. ಮೈಸೂರು ಸಹ ಪ್ರತಿವರ್ಷ ಟಾಪ್ 10ರಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ.
'ಸ್ವಚ್ಛ ಸರ್ವೇಕ್ಷಣ್' ಮಿಷನ್ ಯೋಜನೆಯಡಿಯಲ್ಲಿ ಸಾರ್ವಜನಿಕರನ್ನು ಜೊತೆ ಪಟ್ಟಣ, ನಗರಗಳನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿರಲಾಗುತ್ತದೆ. ಸಮಾಜದ ಎಲ್ಲಾ ವರ್ಗಗಳಲ್ಲಿ ನಾವು ವಾಸಿಸುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತದೆ. ಕಳೆದ 9 ವರ್ಷಗಳಿಂದ 'ಸ್ವಚ್ಛ ಸರ್ವೇಕ್ಷಣ್' ಮಿಷನ್ ಅಡಿಯಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಿಕೊಂಡು ಬರಲಾಗುತ್ತಿದೆ.
ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ ಮತ್ತು ಸೇವಾ ವಿತರಣೆಯನ್ನು ಮೌಲ್ಯಮಾಪನ ಮಾಡಲು 10 ನಿಯತಾಂಕಗಳು ಮತ್ತು 54 ಸೂಚಕಗಳ ಚೌಕಟ್ಟನ್ನು ಬಳಸಿಕೊಂಡು 4,500 ಕ್ಕೂ ಹೆಚ್ಚು ನಗರಗಳನ್ನು ಒಳಗೊಂಡಿದೆ. ಕೇಂದ್ರದ ಪ್ರಕಾರ ಸ್ವಚ್ಛ ಸರ್ವೇಕ್ಷಣ 2024-25 54 ಸೂಚಕಗಳೊಂದಿಗೆ 10 ಉತ್ತಮವಾಗಿ ವ್ಯಾಖ್ಯಾನಿಸಲಾದ ನಿಯತಾಂಕಗಳನ್ನು ಬಳಸಿಕೊಂಡು "ನಗರ ಸ್ವಚ್ಛತೆಯನ್ನು ನಿರ್ಣಯಿಸಲು ಸ್ಮಾರ್ಟ್, ರಚನಾತ್ಮಕ ವಿಧಾನ" ಮತ್ತು ಸೇವಾ ವಿತರಣೆಯನ್ನು ಅಳವಡಿಸಿಕೊಂಡಿದೆ.
ಬೆಂಗಳೂರಿಗೆ ಈ ಗರಿ ಯಾವಾಗ?
ರಾಜಧಾನಿ ಬೆಂಗಳೂರಿನಲ್ಲಿ ಒಂದು ಸಣ್ಣ ಮಳೆಯಾದ್ರೂ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆ ಮೇಲೆ ಹರಿಯಲು ಶುರುವಾಗುತ್ತದೆ. ತಗ್ಗು ಪ್ರದೇಶ ಸೇರಿದಂತೆ ಇಡೀ ಲೇಔಟ್, ಪ್ರತಿಷ್ಠಿತ ಅಪಾರ್ಟ್ಮೆಂಟ್ಗಳು ಮುಳುಗಡೆಯಾಗುತ್ತವೆ. ಕಂಡ್ ಕಂಡಲ್ಲಿ ರಸ್ತೆ ಕಾಮಗಾರಿಗಳು ಯಾವಾಗಲೂ ನಡೆಯುತ್ತಿರುತ್ತವೆ. ಸ್ವಚ್ಛತೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಸರ್ಕಾರ ಕೋಟಿ ಕೋಟಿ ಹಣ ಮೀಸಲಿಟ್ಟರೂ ಬೆಂಗಳೂರಿನ ಕಸದ ಸಮಸ್ಯೆ ಮಾತ್ರ ಹಾಗೆ ಉಳಿದುಕೊಂಡಿದೆ.