ಭಾರತೀಯ ರೈಲ್ವೇಯಿಂದ ಗಂಗಾ ಗಯಾ ಸಂಗಮ್ ಯಾತ್ರೆ ಆರಂಭ, ಭಾರತ ದರ್ಶನಕ್ಕೆ ವಿಶೇಷ ರೈಲು
ಪ್ರವಿತ್ರ ಹಾಗೂ ಪ್ರಸಿದ್ಧ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಭಾರತೀಯ ರೈಲ್ವೇ ವಿಶೇಷ ಗಂಗಾ ಗಯಾ ಸಂಗಮ್ ಯಾತ್ರೆ ಆರಂಭಿಸಿದೆ. ಇದಕ್ಕಾಗಿ ಭಾರತ ಗೌರವ್ ಸ್ಪೆಷಲ್ ರೈಲು ನಿಯೋಜನೆ ಮಾಡಲಾಗಿದೆ. ಟಿಕೆಟ್ ಬೆಲೆ, ದಿನಾಂಕ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಗಂಗಾ ಗಯಾ ಸಂಗಮ್ ಯಾತ್ರೆ
ಭಾರತದ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಭಾರತೀಯ ರೈಲು ವಿಶೇಷ ಪ್ಯಾಕೇಜ್ ಘೋಷಿಸಿದೆ. ಗಂಗಾ ಗಯಾ ಸಂಗಮ್ ಯಾತ್ರೆ ವಿಶೇಷ ಧಾರ್ಮಿಕ ಪ್ರವಾಸ ರೈಲು ಆರಂಭಿಸಲಾಗಿದೆ. ಕಾಶಿ, ಪ್ರಯಾಗರಾಜ್, ಬಿಹಾರದ ಗಯಾ ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳ ದರ್ಶನವನ್ನು ಸುಲಭ ಹಾಗೂ ಮತ್ತಷ್ಟು ಅರಾಮದಾಯಕ ಮಾಡಲು ಭಾರತೀಯ ರೈಲ್ವೇ ಈ ಹೊಸ ರೈಲು ಯಾತ್ರೆ ಘೋಷಿಸಿದೆ.
ಎಷ್ಟು ದಿನ, ಯಾವೆಲ್ಲಾ ಕ್ಷೇತ್ರ ದರ್ಶನ
ಗಂಗಾ ಗಯಾ ಸಂಗಮ್ ವಿಶೇಷ ಯಾತ್ರೆ 9 ದಿನಗಳ ಯಾತ್ರೆಯಾಗಿದೆ. 8 ರಾತ್ರಿ ಹಾಗೂ 9 ದಿನಗಳ ಈ ಯಾತ್ರೆಯಲ್ಲಿ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯ, ಸಂಕಟ ಮೋಚನ ಹನುಮಾನ್ ಮಂದಿರ ಮತ್ತು ಸಾಯಂಕಾಲದ ಗಂಗಾ ಆರತಿ ವೀಕ್ಷಣೆ, ತ್ರಿವೇಣಿ ಸಂಗಮ (ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಮಿಲನ), ಹನುಮಾನ್ ಮಂದಿರ ಹಾಗೂ ಆನಂದ ಭವನ, ಪಿತೃ ಕಾರ್ಯಗಳಿಗೆ ಪ್ರಸಿದ್ಧವಾದ ವಿಷ್ಣುಪಾದ ದೇವಾಲಯ ಮತ್ತು ಮಹಾಬೋಧಿ ದೇವಾಲಯ (ಬೋಧಗಯಾ) ದರ್ಶನ ಮಾಡಿಸಲಾಗುತ್ತದೆ.
ಟಿಕೆಟ್ ದರ ಎಷ್ಟು?
ಎಕಾನಮಿ ಕೆಟಗರಿಯಲ್ಲಿ ಟಿಕೆಟ್ ಬುಕ್ ಮಾಡುವುದಾದರೆ 18,000 ರೂಪಾಯಿಯಿಂದ ಆರಂಭ ಗೊಳ್ಳುತ್ತಿದೆ. ಇದು ಎಸಿ ರೈಲು ಪ್ರಯಾಣ, ಎಸಿ ರಹಿತ ಹೋಟೆಲ್ ತಂಗುವಿಕೆ, ಶಾಖಾಹಾರಿ ಊಟ ಎಲ್ಲವೂ ಒಳಗೊಂಡಿದೆ. ಸ್ಟಾಂಡರ್ಡ್ ರೈಲು ಟಿಕೆಟ್ ದರ 20,500 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಈ ಟಿಕೆಟ್ನಲ್ಲಿ ಎಸಿ ರೈಲು ಪ್ರಯಾಣ, ಉತ್ತಮ ಎಸಿ ಹೋಟೆಲ್ ಕೊಠಡಿಗಳು, ಸ್ಥಳೀಯ ವೀಕ್ಷಣೆಗೆ ವಾಹನ ನೀಡಲಾಗುತ್ತದೆ. ಕಂಫರ್ಟ್ ಟಿಕೆಟ್ ಬೆಲೆ 24,000 ರೂಪಾಯಿ. ಇದರಲ್ಲಿ 2AC ಅತ್ಯುತ್ತಮ ರೈಲು ಪ್ರಯಾಣ, ಪ್ರೀಮಿಯಂ ಹೋಟೆಲ್ ವಾಸ್ತವ್ಯ ನೀಡಲಾಗುತ್ತದೆ.
ಪ್ರಯಾಣಿಕರಿಗೆ ಸಿಗುವ ಸೌಲಭ್ಯ
- ಆಹಾರ ಸೌಲಭ್ಯ: ಪ್ರವಾಸದ ಪೂರ್ಣ ಅವಧಿಯಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಶುದ್ಧ ಸಸ್ಯಾಹಾರಿ ಊಟ.
- ವಸತಿ: ನಿಗದಿತ ನಗರಗಳಲ್ಲಿ ದಿನಪೂರ್ತಿ ವಿಶ್ರಾಂತಿಗೆ ಸೂಕ್ತ ಹೋಟೆಲ್ ಕೊಠಡಿಗಳ ವ್ಯವಸ್ಥೆ.
- ಸ್ಥಳೀಯ ಪ್ರಯಾಣ: ರೈಲು ನಿಲ್ದಾಣದಿಂದ ಪ್ರ his ಸನೀಯ ಸ್ಥಳಗಳಿಗೆ ತೆರಳಲು ಎಸಿ/ನಾನ್-ಎಸಿ ಬಸ್ ಸೌಕರ್ಯ.
- ಸುರಕ್ಷತೆ & ಗೈಡ್: ಪ್ರತಿಯೊಂದು ಕೋಚ್ಗೂ ಭದ್ರತಾ ಸಿಬ್ಬಂದಿ ಮತ್ತು ಪ್ರವಾಸಿಗರಿಗೆ ನೆರವಾಗಲು ಟೂರ್ ಎಸ್ಕಾರ್ಟ್
ರೈಲು ಹೊರಡುವ ದಿನಾಂಕ
ಈ ವಿಶೇಷ ಪುಣ್ಯ ಕ್ಷೇತ್ರಗಳ ದರ್ಶನದ ರೈಲು ಹೈದರಾಬಾದ್ನಿಂದ ಪ್ರಯಾಣ ಆರಂಭಿಸಲಿದೆ. ಹೈದರಾಬಾದ್ನಿಂದ ವಯಾ ಕೋಲ್ಕತಾ ಮೂಲಕ ಗಯಾ ಪ್ರಯಾಣ ಬೆಳೆಸಲಿದೆ. ಇತ್ತ ಕೊನೆಯ ದಿನ ಅಂದರೆ 9ನೇ ದಿನ ಲಖನೌದಿಂದ ಹೈದರಾಬಾದ್ಗೆ ಮರಳಲಿದೆ. ಈ ವಿಶೇಷ ರೈಲಿನ ಮೊದಲ ಪ್ರಯಾಣ ಸೆಪ್ಟೆಂಬರ್ 2 ರಂದು ಆರಂಭಗೊಂಡು ಸೆಪ್ಟೆಂಬರ್ 9ಕ್ಕೆ ಅಂತ್ಯಗೊಳ್ಳಲಿದೆ.
ಟಿಕೆಟ್ ಬುಕಿಂಗ್
ಪವಿತ್ರ ಕ್ಷೇತ್ರಗಳ ದರ್ಶನಕ್ಕೆ ಆಸಕ್ತರು, ಭಕ್ತರು ಭಾರತೀಯ ರೈಲ್ವೇ ಅಧಿಕೃತ ರೈಲ್ವೇ ವೆಬ್ಸೈಟ್ ಮೂಲಕ, ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಇನ್ನು ರೈಲು ನಿಲ್ದಾಣಗಳಲ್ಲಿರುವ ಪ್ರಾದೇಶಿಕ ಕಚೇರಿಗಳಲ್ಲೂ ರೈಲು ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

