ಕದನ ವಿರಾಮ ಮೇ.18ರವರೆಗೆ ವಿಸ್ತರಣೆ: ಮತ್ತೊಮ್ಮೆ ಭಾರತ-ಪಾಕ್ ಡಿಜಿಎಂಒ ಮಟ್ಟದ ಸಭೆ
ಭಾರತ-ಪಾಕಿಸ್ತಾನ ಗಡಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಕದನ ವಿರಾಮವನ್ನು ಮೇ 18, 2025 ರವರೆಗೆ ವಿಸ್ತರಿಸಲಾಗಿದೆ. ಡಿಜಿಎಂಒ ಮಟ್ಟದಲ್ಲಿ ಮತ್ತೊಂದು ಮಾತುಕತೆ ನಡೆಯಲಿದೆ.

ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಹಳ್ಳಿಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಉಭಯ ದೇಶಗಳ ಮಧ್ಯೆ ಎದ್ದಿದ್ದ ಉದ್ವಿಗ್ನತೆಯಿಂದಾಗಿ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದ ಗ್ರಾಮಸ್ಥರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಈ ನಡುವೆ ಎರಡೂ ದೇಶಗಳು ಕದನ ವಿರಾಮವನ್ನು ಮೇ 18, 2025 ರವರೆಗೆ ವಿಸ್ತರಿಸಿವೆ. ಇದರ ಜೊತೆಗೆ ಭಾರತ ಮತ್ತು ಪಾಕಿಸ್ತಾನ ದೇಶದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ಮಟ್ಟದಲ್ಲಿ ಮತ್ತೊಂದು ಮಾತುಕತೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಭಾರತ ಮತ್ತು ಪಾಕಿಸ್ತಾನದ ನಡುವೆ ಮೇ 10ರಂದು ಘೋಷಿಸಲಾಗಿದ್ದ ಕದನ ವಿರಾಮ ಒಪ್ಪಂದವನ್ನು ಮೇ 18 ರವರೆಗೆ ವಿಸ್ತರಿಸಲಾಗಿದೆ ಎಂದು ಘೋಷಿಸಿದ್ದಾರೆ. ಮೇ 12 ರಂದು ಉಭಯ ದೇಶಗಳ ಡಿಜಿಎಂಓ ಮಟ್ಟದ ಮೊದಲ ಸಭೆ ನಡೆದಿತ್ತು. ಸೇನಾ ಅಧಿಕಾರಿಗಳ ನಡುವೆ ಹಾಟ್ಲೈನ್ ಸಂವಹನ ನಡೆದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತ ಮತ್ತು ಪಾಕಿಸ್ತಾನಗಳು ನಿಯಂತ್ರಣ ರೇಖೆ (LoC) ಮತ್ತು ಗಡಿಭಾಗಗಳಲ್ಲಿ ಇರುವ ಪ್ರಕ್ಷ್ಯುಬ್ದ ವಾತಾವರಣವನ್ನು ಕ್ರಮೇಣ ಕಡಿಮೆ ಮಾಡಲು ಒಪ್ಪಿಕೊಂಡಿವೆ.
ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ಘಟನೆ ಬಳಿಕ, ಭಾರತವು "ಆಪರೇಷನ್ ಸಿಂದೂರ್" ಹೆಸರಿನಲ್ಲಿ ಮೇ 7 ಮತ್ತು 8 ರಂದು ಪಾಕ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತು. ಇದರ ಜೊತೆಗೆ ರಾಜತಾಂತ್ರಿಕ ಹಂತದಲ್ಲಿಯೂ ಗಂಭೀರ ಕ್ರಮಗಳನ್ನು ಕೈಗೊಂಡು, ದಶಕಗಳ ಕಾಲ ಜಾರಿಯಲ್ಲಿದ್ದ ಸಿಂಧೂ ನದಿ ಜಲ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಡ್ರೋನ್ ಹಾಗೂ ರಾಕೆಟ್ ದಾಳಿಗಳನ್ನು ನಡೆಸಿತು. ಆದರೆ ಭಾರತವು ಬಹುಪಾಲು ದಾಳಿಗಳನ್ನು ತಡೆಯಿತು ಮತ್ತು ತಿರುಗೇಟು ನೀಡಿತು.
ಮೇ 10 ರಂದು ಎರಡೂ ದೇಶಗಳು ಭೂಮಿ, ವಾಯು ಮತ್ತು ಜಲ ಗಡಿಯಲ್ಲಿ ಎಲ್ಲಾ ಮಿಲಿಟರಿ ದಾಳಿಗಳನ್ನು ನಿಲ್ಲಿಸಲು ಒಪ್ಪಂದಕ್ಕೆ ಬಂದು ತಕ್ಷಣವೇ ಜಾರಿಗೊಳಿಸಿದರು. ಆದರೆ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಈ ಒಪ್ಪಂದವನ್ನು ಉಲ್ಲಂಘಿಸಿದ ಆರೋಪ ಎದುರಿಸಿತು. ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, "ಪಾಕಿಸ್ತಾನ ಶಾಂತಿಯ ನಿಟ್ಟಿನಲ್ಲಿ ಮಾತುಕತೆಗೆ ಸಿದ್ಧ" ಎಂಬ ಉಲ್ಲೇಖದೊಂದಿಗೆ ಭಾರತವನ್ನು ಸಂವಾದಕ್ಕೆ ಆಹ್ವಾನಿಸಿದರು. ಇದಕ್ಕೂ ಮುನ್ನ, ಇಸ್ಲಾಮಾಬಾದ್, ಭಾರತವು ತೆಗೆದುಕೊಂಡ ಸಿಂಧೂ ಜಲ ಒಪ್ಪಂದ ಸ್ಥಗಿತ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಪತ್ರ ಬರೆದಿತ್ತು.
ಮೋದಿ ಸ್ಪಷ್ಟ ಎಚ್ಚರಿಕೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು “ಆಪರೇಷನ್ ಸಿಂದೂರ್” ಕುರಿತಾಗಿ ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ, "ನೀರು ಮತ್ತು ರಕ್ತ ಒಂದೇ ಸಮಯದಲ್ಲಿ ಹರಿಯಲು ಸಾಧ್ಯವಿಲ್ಲ" ಎಂದು ಸ್ಪಷ್ಟವಾಗಿ ಎಚ್ಚರಿಸಿದರು. ಭಯೋತ್ಪಾದನೆ ನಿಲ್ಲದ ಹೊರತು ಭಾರತದ ಕಠಿಣ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು. ಭಯೋತ್ಪಾದನೆ ಮತ್ತು ಮಾತುಕತೆ ಒಂದೇ ಸಮಯದಲ್ಲಿ ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಕೂಡ ಒಂದೆಡೆ ನಡೆಯಲು ಸಾಧ್ಯವಿಲ್ಲ ಎಂಬುದು ಪಾಕಿಸ್ತಾನಕ್ಕೆ ಭಾರತದ ಸ್ಪಷ್ಟ ಸಂದೇಶ. ಭಾರತ ತನ್ನ ಮುಂದಿನ ಕ್ರಮಗಳನ್ನು ಪಾಕಿಸ್ತಾನದ ನಡವಳಿಕೆಗೆ ಅನುಗುಣವಾಗಿ ರೂಪಿಸಲಿದೆ. ಗಡಿಯಲ್ಲಿ ಶಾಂತಿ ಬಯಸುವ ಪ್ರಾಮಾಣಿಕತೆ ಪಾಕಿಸ್ತಾನದಿಂದ ಹೊರಬರುತ್ತದೆಯೇ ಇಲ್ಲವೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.