ಪದೇ ಪದೇ ಕಾಡುವ ಶೀತ, ಕೆಮ್ಮಿಗೆ ಹವಾಮಾನ ಕಾರಣವಲ್ಲ, ಡಾಕ್ಟರ್ ನೀಡುವ ಎಚ್ಚರಿಕೆ ಏನು?
ಆಗಾಗ ಶೀತ, ಕೆಮ್ಮು, ಆಯಾಸ ಆಗ್ತಿದ್ಯಾ? ಹವಾಮಾನ ಬದಲಾಗ್ತಿದೆ, ಮಳೆ – ಬಿಸಿಲಿಗೆ ಹೀಗಾಗ್ತಿದೆ ಅಂತ ನೀವಂದ್ಕೊಂಡಿದ್ದೀರಾ? ಹವಾಮಾನದಿಂದ ಹೀಗೆಲ್ಲ ಆಗೋದೇ ಇಲ್ಲ ಅಂತಿದ್ದಾರೆ ವೈದ್ಯರು.

ಅಭ್ಯಾಸದಿಂದ ಅನಾರೋಗ್ಯ
ವಾತಾವರಣ ಬದಲಾಗ್ತಿದೆ. ಬೆಳಿಗ್ಗೆ ಬಿಸಿಲಿದ್ರೆ ಸಂಜೆ ಮಳೆ. ಇದ್ರಿಂದಾಗಿ ಜನರ ಆರೋಗ್ಯದಲ್ಲೂ ಏರುಪೇರಾಗ್ತಿದೆ. ಕೆಮ್ಮು, ನೆಗಡಿ, ಜ್ವರ ಅಂತ ಜನರು ಹಾಸಿಗೆ ಹಿಡಿತಿದ್ದಾರೆ. ಶೀತ, ಗಂಟಲು ನೋವು, ಆಯಾಸ ಕಾಣಿಸಿಕೊಳ್ತಿದ್ದಂತೆ ನಾವು ಆರೋಪ ಮಾಡೋದು ವಾತಾವರಣವನ್ನು. ಋತು ಬದಲಾಗ್ತಿದೆ ಹಾಗಾಗಿ ಅನಾರೋಗ್ಯ ಕಾಡ್ತಿದೆ ಅಂತ ಆರೋಪ ಮಾಡಿ ಸುಮ್ಮನಾಗ್ತೇವೆ. ಆದ್ರೆ ಆಗಾಗ ನಿಮಗೆ ಶೀತ, ಆಯಾಸ, ಕೆಮ್ಮು ಕಾಣಿಸಿಕೊಳ್ತಿದ್ದರೆ ಅದಕ್ಕೆ ವಾತಾವರಣ ಬದಲಾವಣೆ ಕಾರಣವಲ್ಲ. ನಿಮ್ಮ ಅಭ್ಯಾಸಗಳೇ ನಿಮಗೆ ಶತ್ರು.

ರೋಗ ನಿರೋಧಕ ಶಕ್ತಿ
ನೀವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗಲು ಹವಾಮಾನ ಕಾರಣ ಅಲ್ವೇ ಅಲ್ಲ ಅಂತ ತಜ್ಞರು ಹೇಳ್ತಾರೆ. ಇದಕ್ಕೆ ನಿಮ್ಮ ನಿತ್ಯದ ಅಭ್ಯಾಸ ಕಾರಣವಾಗುತ್ತೆ. ನೀವು ಪ್ರತಿ ದಿನ ಮಾಡುವ ಅನೇಕ ಕೆಲಸಗಳು ನಿಧಾನವಾಗಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ರೋಗನಿರೋಧಕ ಶಕ್ತಿ ಕಡಿಮೆಯಾದಂತೆ ಅನಾರೋಗ್ಯ ಹೆಚ್ಚು.
ನಿದ್ರೆ ಕೊರತೆ
ನೀವು ಎಷ್ಟು ಗಂಟೆ ನಿದ್ರೆ ಮಾಡ್ತೀರಿ ಎಂಬುದು ಮಾತ್ರ ಮುಖ್ಯವಲ್ಲ, ಯಾವ ಪ್ರಮಾಣದಲ್ಲಿ ನಿದ್ರೆ ಮಾಡ್ತೀರಿ ಎಂಬುದು ಕೂಡ ಅಗತ್ಯ. ಕೆಲವರು ಪ್ರತಿ ದಿನ ಆರರಿಂದ ಏಳು ಗಂಟೆ ನಿದ್ರೆ ಮಾಡ್ತಾರೆ. ಆದ್ರೆ ನಿದ್ರೆ ಗಾಢವಾಗಿರೋದಿಲ್ಲ. ಅಸಮರ್ಪಕ ನಿದ್ರೆ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಅಂಥವರು ಪದೇ ಪದೇ ಶೀತ, ಕೆಮ್ಮು ಮತ್ತು ಆಸ್ತಮಾದಿಂದ ಬಳಲುತ್ತಾರೆ. ರಾತ್ರಿ ಆಗಾಗ್ಗೆ ಎಚ್ಚರಗೊಳ್ಳುತ್ತಿದ್ದರೆ, ಗೊರಕೆ ಹೊಡೆಯುತ್ತಿದ್ದರೆ ಅಥವಾ ನಿದ್ರೆ ಮಾಡುವ ಮುನ್ನ ಮೊಬೈಲ್ ನೋಡ್ತಿದ್ದರೆ ಇದೆಲ್ಲವೂ ದೇಹವನ್ನು ದುರ್ಬಲಗೊಳಿಸುತ್ತದೆ.
ದುರ್ಬಲ ರೋಗನಿರೋಧಕ ಶಕ್ತಿಯಿಂದ ಈ ಸಮಸ್ಯೆ
ನಿದ್ರಾಹೀನತೆ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವುದು ಮಾತ್ರವಲ್ಲ ಹೃದ್ರೋಗ, ಬೊಜ್ಜು ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಳವಾದ ನಿದ್ರೆಯ ಸಮಯದಲ್ಲಿ ದೇಹ ತನ್ನನ್ನು ತಾನೇ ಸರಿಪಡಿಸಿಕೊಳ್ಳುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ಪ್ರೋಟೀನ್ಗಳನ್ನು ಉತ್ಪಾದಿಸುತ್ತದೆ. ನಿದ್ರೆ ಕಡಿಮೆಯಾದ್ರೆ ಇದ್ರ ಉತ್ಪಾದನೆ ಕಡಿಮೆಯಾಗುತ್ತದೆ.
ಜೀವನ ಶೈಲಿಯಿಂದ ಅಡ್ಡಪರಿಣಾಮ
ರೋಗನಿರೋಧಕ ಶಕ್ತಿ ದುರ್ಬಲಗೊಳ್ಳಲು ಜೀವನ ಶೈಲಿ ಕೂಡ ಕಾರಣ. ಕಳಪೆ ಆಹಾರ ಪದ್ಧತಿ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಸಂಸ್ಕರಿಸಿದ ಆಹಾರ ಸೇವನೆ, ಫಾಸ್ಟ್ ಫುಡ್ ಸೇವನೆ ಜನರನ್ನು ಬೇಗ ಅಸ್ವಸ್ಥಗೊಳಿಸುತ್ತದೆ. ದೇಹಕ್ಕೆ ಅಗತ್ಯ ಪೋಷಕಾಂಶ ಸಿಗುವುದಿಲ್ಲ. ಪ್ರೋಟೀನ್, ಕಬ್ಬಿಣ, ಸತು, ವಿಟಮಿನ್ಗಳು, ಫೈಬರ್ ಮತ್ತು ಸಾಕಷ್ಟು ನೀರು ದೇಹಕ್ಕೆ ಅಗತ್ಯ.
ನೀರಿನ ಕೊರತೆ
ಕಡಿಮೆ ನೀರು ಸೇವನೆ ದೊಡ್ಡ ಸಮಸ್ಯೆಯಾಗಿದೆ. ಇದು ರೋಗನಿರೋಧಕ ಶಕ್ತಿ ಮತ್ತು ಉರಿಯೂತದ ಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ವೈದ್ಯರ ಪ್ರಕಾರ, ಸಾಕಷ್ಟು ನೀರು ಕುಡಿಯದಿರುವುದು ದೇಹದಲ್ಲಿ ಲೋಳೆಯನ್ನು ದಪ್ಪವಾಗಿಸುತ್ತದೆ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
ಮನೆಯೂ ರೋಗಕ್ಕೆ ಕಾರಣ
ಮನೆ ಅಥವಾ ಕಚೇರಿಯಲ್ಲಿ ಮುಚ್ಚಿದ ಕೋಣೆಗಳಲ್ಲಿ ದೀರ್ಘಕಾಲ ಇರುವುದು ಕೂಡ ಆರೋಗ್ಯಕ್ಕೆ ಹಾನಿಕರ. ಹವಾನಿಯಂತ್ರಿತ ಕೊಠಡಿಗಳು, ಧೂಳು, ಕಳಪೆ ಗಾಳಿ ಮತ್ತು ಕಿಕ್ಕಿರಿದ ಒಳಾಂಗಣ ಸ್ಥಳಗಳಲ್ಲಿ ವೈರಸ್ಗಳು ಮತ್ತು ಅಲರ್ಜಿನ್ಗಳು ಹೆಚ್ಚು ಕಾಲ ಉಳಿಯುತ್ತವೆ. ಅದ್ರ ಸ್ವಚ್ಛತೆ ಜೊತೆ ಶುದ್ಧಗಾಳಿ, ವಾಕಿಂಗ್ ಬಹಳ ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

