- Home
- Karnataka Districts
- Hassan
- ತವರೂರು ಅಂದರೆ ಚೆನ್ನಮ್ಮಗೆ ತಾಯಿಯಂಥ ಪ್ರೀತಿ.. 3 ದೇವಸ್ಥಾನ, ಹೈಸ್ಕೂಲ್, ಆಸ್ಪತ್ರೆ ಏನೆಲ್ಲ ಕಟ್ಟಿಸಿಕೊಟ್ಟಿದ್ದರು?
ತವರೂರು ಅಂದರೆ ಚೆನ್ನಮ್ಮಗೆ ತಾಯಿಯಂಥ ಪ್ರೀತಿ.. 3 ದೇವಸ್ಥಾನ, ಹೈಸ್ಕೂಲ್, ಆಸ್ಪತ್ರೆ ಏನೆಲ್ಲ ಕಟ್ಟಿಸಿಕೊಟ್ಟಿದ್ದರು?
ನಾವು ಅನಾಥರಾದೇವು ಅಂತಾ ಮುತ್ತಿಗೆ ಹಿರೇಹಳ್ಳಿ ಗ್ರಾಮದ ಜನರು ಚೆನ್ನಮ್ಮ ಅವರನ್ನು ಕಳೆದುಕೊಂಡು ಕಣ್ಣೀರು ಇಡುತ್ತಿದ್ದಾರೆ. ಗ್ರಾಮದ ಜನರ ಈ ಕಣ್ಣೀರಿಗೆ ಚೆನ್ನಮ್ಮ ಜೊತೆಗಿನ ಭಾವನಾತ್ಮಕ ಸಂಬಂಧ ಇದೆ. ಅದೇ ಕಾರಣಕ್ಕೆ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.. ಈ ಕುರಿತ ಸ್ಟೋರಿ ಇಲ್ಲಿದೆ.

ನಾವು ಅನಾಥರಾದೇವು.. ತವರೂರಿನ ಜನ ಕಣ್ಣೀರು
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಅಗಲಿಕೆ ಹಾಸನ ಜಿಲ್ಲೆಯ ಮುತ್ತಿಗೆ ಹಿರೇಹಳ್ಳಿ ಗ್ರಾಮವನ್ನು ಅಕ್ಷರಶಃ ಶೋಕಸಾಗರದಲ್ಲಿ ಮುಳುಗಿಸಿದೆ. ಆ ಗ್ರಾಮಕ್ಕೆ ಅವರು ಕೇವಲ ಒಬ್ಬ ಗಣ್ಯ ವ್ಯಕ್ತಿಯಾಗಿರಲಿಲ್ಲ. ಬದಲಿಗೆ ಇಡೀ ಊರನ್ನು ಸಲಹುವ ತಾಯಿಯಾಗಿದ್ದರು. ತವರು ಊರೆಂದರೆ ಅತಿಯಾದ ಪ್ರೀತಿ ಹೊಂದಿದ್ದ ಚೆನ್ನಮ್ಮ ಅವರು, ಗ್ರಾಮದ ಅಭಿವೃದ್ಧಿಗಾಗಿ ಮಾಡಿದ ಕೆಲಸಗಳು ಇಂದು ಕಣ್ಣಮುಂದೆ ಬಂದು ನಿಂತಿವೆ.
ಗ್ರಾಮವೇ ದೇವಾಲಯ!
ಚೆನ್ನಮ್ಮನವರಿಗೆ ತಮ್ಮ ಹುಟ್ಟೂರು ಮುತ್ತಿಗೆ ಹಿರೇಹಳ್ಳಿ ಎಂದರೆ ಎಲ್ಲಿಲ್ಲದ ಪ್ರೀತಿ. ಊರಿನ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಗ್ರಾಮದಲ್ಲಿ ಸುಸಜ್ಜಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪಶು ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಯನ್ನು ಕಟ್ಟಿಸುವಲ್ಲಿ ಅವರ ಶ್ರಮ ದೊಡ್ಡದಿದೆ. ಅಷ್ಟೇ ಅಲ್ಲದೆ, ಭಕ್ತಿಯ ಸಂಕೇತವಾಗಿ ಗ್ರಾಮದಲ್ಲಿ ಮೂರು ಭವ್ಯ ದೇವಸ್ಥಾನಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಊರಿನವರು ಯಾವುದೇ ಸಮಸ್ಯೆ ಹೊತ್ತು ಬಂದರೆ ತಕ್ಷಣ ಸ್ಪಂದಿಸುತ್ತಿದ್ದ ಅವರು, ಗ್ರಾಮಸ್ಥರ ಪಾಲಿನ ಧೀಶಕ್ತಿಯಾಗಿದ್ದರು.
ನಾವು ಅನಾಥರಾದೆವು: ಕಣ್ಣೀರು ಹಾಕಿದ ಸಂಬಂಧಿಕರು!
ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮದ ಸಂಬಂಧಿಕರು ದುಃಖತಪ್ತರಾಗಿದ್ದಾರೆ. ಚೆನ್ನಮ್ಮನವರು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಈಗ ನಾವು ಅಕ್ಷರಶಃ ಅನಾಥರಾಗಿದ್ದೇವೆ ಎಂದು ಸಂಬಂಧಿಯೊಬ್ಬರು ಅಳುತ್ತಾ ನೆನಪಿಸಿಕೊಂಡಿದ್ದಾರೆ.
ಕೈಯಾರೆ ಅಡುಗೆ ಮಾಡಿ ಬಡಿಸುತ್ತಿದ್ದ ಅನ್ನಪೂರ್ಣೇಶ್ವರಿ
ಎಷ್ಟೇ ಅಂತಸ್ತು ಇದ್ದರೂ ಚೆನ್ನಮ್ಮನವರಿಗೆ ಕಿಂಚಿತ್ತೂ ಅಹಂಕಾರವಿರಲಿಲ್ಲ. ತವರು ಊರಿನಿಂದ ಯಾರೇ ಅವರ ಮನೆಗೆ ಹೋದರೂ, ಕೆಲಸದವರ ಕೈಯಲ್ಲಿ ಊಟ ಹಾಕಿಸುತ್ತಿರಲಿಲ್ಲ. ಸ್ವತಃ ತಾವೇ ಅಡುಗೆ ಮಾಡಿ, ಕೈಯಾರೆ ಬಡಿಸಿ ಸಂಭ್ರಮಿಸುತ್ತಿದ್ದರು. ನಮ್ಮ ಮನೆಗೆ ಹೋದರೆ ಅವರೇ ಊಟ ಬಡಿಸಬೇಕಿತ್ತು, ಅಷ್ಟು ಪ್ರೀತಿ ಅವರಿಗೆ ಸಂಬಂಧಗಳ ಮೇಲೆ ಎಂದು ಗ್ರಾಮಸ್ಥರು ಸ್ಮರಿಸುತ್ತಿದ್ದಾರೆ. ಹಬ್ಬ ಹರಿದಿನ ಹಾಗೂ ಜಾತ್ರೆಗೆ ಬಂದಾಗ ಬಡಬಗ್ಗರಿಗೆ ಹಣ ನೀಡಿ ಸಹಾಯ ಮಾಡುತ್ತಿದ್ದರು.
ಚೆನ್ನಾಂಬಿಕಾ ದೇವಿಯ ಮೊದಲ ಪೂಜೆ ಇವರಿಗೇ ಮೀಸಲು!
ಚೆನ್ನಮ್ಮ ಅವರ ದೈವಭಕ್ತಿಗೆ ಮುತ್ತಿಗೆ ಹಿರೇಹಳ್ಳಿಯೇ ಸಾಕ್ಷಿ. ಗ್ರಾಮದ ಐದು ಊರುಗಳು ಸೇರಿ ಮಾಡುವ ವರ್ಷದ ದೊಡ್ಡ ಜಾತ್ರೆಯಲ್ಲಿ ಚೆನ್ನಾಂಬಿಕಾ ದೇವಿಗೆ ಮೊದಲ ಪೂಜೆ ಸಲ್ಲಿಕೆಯಾಗುವುದೇ ಚೆನ್ನಮ್ಮ ಅವರಿಗೆ. ಅವರು ಪೂಜೆ ಮುಗಿಸಿ ಹೊರಬರುವವರೆಗೂ ಯಾರೂ ಒಳಗೆ ಹೋಗುವಂತಿರಲಿಲ್ಲ. ಅಂತಹ ಗೌರವ ಮತ್ತು ಭಕ್ತಿ ಆ ಗ್ರಾಮದಲ್ಲಿ ಅವರಿಗಿತ್ತು.
ಕಷ್ಟಗಳಿಗೆ ಹೆಗಲಾಗುತ್ತಿದ್ದ ಮಹತಾಯಿ
ಸಂಬಂಧಗಳಿಗೆ ಬೆಲೆ ಕೊಡುತ್ತಿದ್ದ, ಊರಿನ ಪ್ರತಿಯೊಬ್ಬರ ಕಷ್ಟಕ್ಕೆ ಹೆಗಲಾಗುತ್ತಿದ್ದ ಒಬ್ಬ ಮಹಾನ್ ಚೇತನ ಇಂದು ಮರೆಯಾಗಿದೆ. ಮುತ್ತಿಗೆ ಹಿರೇಹಳ್ಳಿ ಗ್ರಾಮದ ಪ್ರತಿಯೊಂದು ಮಗು, ಹಿರಿಯರು ಇಂದು ನಮ್ಮಮ್ಮ ಇಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಜನರ ಮನಸ್ಸಿನಲ್ಲಿ ಚೆನ್ನಮ್ಮ
ಚೆನ್ನಮ್ಮನವರ ಭೌತಿಕ ಕಾಯ ಮರೆಯಾದರೂ, ಅವರು ನಿರ್ಮಿಸಿದ ಶಾಲೆ, ಆಸ್ಪತ್ರೆ ಮತ್ತು ದೇವಸ್ಥಾನಗಳ ರೂಪದಲ್ಲಿ ಅವರು ಆ ಗ್ರಾಮದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.

