ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ಸುದ್ದಿ ಕೇಳಿ ಜೈಲಿನಲ್ಲಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ ಭಾವುಕರಾಗಿದ್ದಾರೆ. ಅಜ್ಜಿಯ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೋರಿ ಅವರು ತುರ್ತು ಪೆರೋಲ್ಗಾಗಿ ಅರ್ಜಿ ಸಲ್ಲಿಸಿದ್ದು, ಜೈಲು ಅಧಿಕಾರಿಗಳ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.
ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ನಿ ಚೆನ್ನಮ್ಮ ಅವರು ನಿನ್ನೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಜ್ಜಿಯ ಅಗಲಿಕೆಯ ಸುದ್ದಿ ಕೇಳಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕಿದ್ದಾರೆ.
ಅಜ್ಜಿಯನ್ನ ನೆನೆದು ಕಣ್ಣೀರು
ಅಜ್ಜಿ ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ತೀವ್ರ ಭಾವುಕರಾಗಿದ್ದಾರೆ ಎನ್ನಲಾಗಿದೆ. ಅಜ್ಜಿಯ ಒಡನಾಟವನ್ನು ನೆನೆದು ಜೈಲಿನ ಕೊಠಡಿಯಲ್ಲಿ ಪ್ರಜ್ವಲ್ ಕಣ್ಣೀರು ಹಾಕಿದ್ದಾರೆ. ಅಜ್ಜಿಯ ಸಾವಿನಿಂದ ತೀವ್ರ ಬೇಸರಗೊಂಡಿರುವ ಅವರು, ರಾತ್ರಿಯಿಡೀ ಸರಿಯಾಗಿ ನಿದ್ದೆ ಮಾಡದೆ ಚಡಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂತಿಮ ದರ್ಶನಕ್ಕಾಗಿ ಪೆರೋಲ್ ಅರ್ಜಿ
ತಮ್ಮ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ಅವರ ಅಂತಿಮ ದರ್ಶನ ಪಡೆಯಲು ಪ್ರಜ್ವಲ್ ರೇವಣ್ಣ ಈಗ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಅಜ್ಜಿಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೋರಿ ಪ್ರಜ್ವಲ್ ಪರ ವಕೀಲರು ಜೈಲು ಅಧಿಕಾರಿಗಳಿಗೆ ತುರ್ತು ಪೆರೋಲ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಅನ್ಶು ಕುಮಾರ್ ಅವರಿಗೆ ಪೆರೋಲ್ ಕೋರಿ ಅರ್ಜಿ ಸಲ್ಲಿಸಲಾಗಿದೆ. ಜೈಲು ನಿಯಮಾವಳಿಗಳ ಪ್ರಕಾರ ಈ ಅರ್ಜಿಯನ್ನು ಪರಿಶೀಲಿಸಲಿರುವ ಅನ್ಶು ಕುಮಾರ್, ಪ್ರಜ್ವಲ್ಗೆ ಪೆರೋಲ್ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅಧೀಕ್ಷಕರ ನಿರ್ಧಾರದ ಮೇಲೆ ಪ್ರಜ್ವಲ್ ರೇವಣ್ಣ ಅಜ್ಜಿಯ ಅಂತಿಮ ದರ್ಶನ ಪಡೆಯುತ್ತಾರೋ ಇಲ್ಲವೋ ಎಂಬುದು ನಿರ್ಧಾರವಾಗಲಿದೆ.
ಸದ್ಯ ಅಜ್ಜಿಯ ಅಂತಿಮ ದರ್ಶನ ಪಡೆಯಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ಪ್ರಜ್ವಲ್ ರೇವಣ್ಣ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ತಂದೆ ಹೆಚ್.ಡಿ. ರೇವಣ್ಣ ಹಾಗೂ ತಾಯಿ ಭವಾನಿ ರೇವಣ್ಣ ಅವರನ್ನೂ ಭೇಟಿಯಾಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ಪ್ರಜ್ವಲ್ಗೆ, ಅಜ್ಜಿಯ ಸಾವು ಮತ್ತಷ್ಟು ಆಘಾತ ತಂದಿದೆ.


