ಸರಿಗಮಪ ಫೈನಲಿಸ್ಟ್ ಇವರೇ… ಲಹರಿಗೆ ಸ್ಥಾನ ನೀಡದ ಶೋ ವಿರುದ್ಧ ವೀಕ್ಷಕರು ಗರಂ
ಸರಿಗಮಪ ರಿಯಾಲಿಟಿ ಶೋನ 6 ಜನ ಫೈನಲಿಸ್ಟ್ ಗಳ ಹೆಸರು ಪ್ರಕಟವಾಗಿದ್ದು, ಲಹರಿ ಮಹೇಶ್ ಗೆ ಸ್ಥಾನ ನೀಡದ್ದು ನೋಡಿ ವೀಕ್ಷಕರು ಕಿಡಿ ಕಾರಿದ್ದಾರೆ.

ಝೀ ಕನ್ನಡದ (Zee Kannada) ಜನಪ್ರಿಯವಾದ ಸಂಗೀತ ರಿಯಾಲಿಟಿ ಶೋ ಸರಿಗಮಪ ಸ್ಪರ್ಧೆ ಅಂತಿಮ ಹಂತವನ್ನು ತಲುಪಿದೆ. ಕಾರ್ಯಕ್ರಮದಲ್ಲಿ ಇದೀಗ ಫೈನಲ್ ಗೆ ಇನ್ನು ಒಂದೇ ಹಂತ ಬಾಕಿ ಇದೆ. ಅಷ್ಟರಲ್ಲೇ ವೀಕ್ಷಕರು ಶೋ ಮೇಲೆ ಗರಂ ಆಗಿದ್ದಾರೆ.
ಹೌದು, ಸರಿಗಮಪ (Saregamapa) ಅತ್ಯಂತ ಜನಪ್ರಿಯವಾದ ಸಂಗೀತ ಕಾರ್ಯಕ್ರಮವಾಗಿದ್ದು, ರಾಜ್ಯದ ಮೂಲೆ ಮೂಲೆಯಿಂದ ಅಷ್ಟೇ ಯಾಕೆ ಕನ್ನಡ ಹಾಡು ಹಾಡುವ ಬೇರೆ ರಾಜ್ಯದ ಸ್ಪರ್ಧಿಗಳು ಸಹ ಇಲ್ಲಿ ಬಂದು ಹಾಡುವ ಮೂಲಕ ಗಮನ ಸೆಳೆಯುತ್ತಾರೆ.
ಈ ಬಾರಿ ಒಬ್ಬರಿಗಿಂತ ಒಬ್ಬರು ಎನ್ನುವಂತೆ ರಾಜ್ಯದೆಲ್ಲೆಡೆಯಿಂದ ಸಿನಿಯರ್, ಜೂನಿಯರ್ ಸೇರಿ ಅದ್ಭುತ ಕಲಾವಿದರ ದಂಡೇ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಇದೀಗ ಮೂರು ತಿಂಗಳು ನಡೆದ ಸ್ಪರ್ಧೆಯಲ್ಲಿ ಕೊನೆಯ ಸುತ್ತಿಗೆ ಆರು ಜನರು ಆಯ್ಕೆಯಾಗಿದ್ದಾರೆ.
ಆರಂಭದಿಂದಲೂ ಶಿವನ ಹಾಡುಗಳನ್ನು ಹಾಡುತ್ತಾ, ತೀರ್ಪುಗಾರರ ಜೊತೆಗೆ ವೀಕ್ಷಕರೆ ಮನಗೆದ್ದ ಶಿವಾನಿ ಸ್ವಾಮಿ ಎರಡು ವಾರಗಳ ಮುನ್ನವೇ ಟಿಕೆಟ್ ಟು ಫಿನಾಲೆ ಪ್ರಶಸ್ತಿ ಪಡೆದಿದ್ದರು. ಇವರ ಜೊತೆಗೆ ಉಡುಪಿಯ ಆರಾಧ್ಯ ರಾವ್ ಕೂಡ ಫಿನಾಲೆ ಟಿಕೆಟ್ ಪಡೆದಿದ್ದರು.
ಕಳೆದ ವಾರ ನಡೆದ ಸೆಮಿ ಫಿನಾಲೆಯಲ್ಲಿ (Semi Finale) ರಶ್ಮಿ ಧರ್ಮೇಂದ್ರ, ಬಾಳು ಬೆಳಗುಂದಿ, ದ್ಯಾಮೇಶ ಹಾಗೂ ಅಮೋಘ ವರ್ಷ ಆಯ್ಕೆಯಾಗುವ ಮೂಲಕ ಒಟ್ಟು 6 ಜನ ಸ್ಪರ್ಧಿಗಳು ಫಿನಾಲೆ ತಲುಪಿದ್ದರು. ಆದರೆ ಸೀಸನ್ ಪೂರ್ತಿ ಅದ್ಭುತವಾಗಿ ಹಾಡಿಕೊಂಡು ಬಂದಂತಹ ಲಹರಿಗೆ ಸ್ಥಾನ ಸಿಕ್ಕಿಲ್ಲ ಎಂದು ವೀಕ್ಷಕರು ಕಿಡಿ ಕಾರಿದ್ದಾರೆ.
ಲಹರಿ ಮಹೇಶ್(Lahari Mahesh) ಅದ್ಭುತವಾದ ಗಾಯಕಿ, ಆಕೆ ಸೀಸನ್ ಆರಂಭದಿಂದಲೂ ಟಫ್ ಕಾಂಪಿಟೀಶನ್ ಕೊಟ್ಟು, ಕನ್ನಡದ ಶ್ರೇಯಾ ಘೋಷಲ್ ಈಕೆಆಗ್ತಾಳೆ ಎನ್ನುವ ಹೊಗಳಿಕೆಯನ್ನು ಪಡೆದಿದ್ದರು. ಇವರು ಫಿನಾಲೆ ಹಂತ ತಲುಪುತ್ತಾರೆ ಎನ್ನುವ ಭರವಸೆ ಎಲ್ಲರಿಗೂ ಇತ್ತು. ಆದರೆ ಆಕೆಯ ಬದಲಾಗಿ ದ್ಯಾಮೇಶ್, ಬಾಳು ಬೆಳಗುಂದಿ ಫೈನಲ್ ತಲುಪಿರುವುದು ವೀಕ್ಷಕರಿಗೆ ಕೋಪ ತರಿಸಿದೆ.
ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ವೀಕ್ಷಕರು ಶೋ ವಿರುದ್ಧ ಕಿಡಿ ಕಾರಿದ್ದು, ಲಹರಿಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಿಜವಾದ ಗಾಯಕರಿಗೆ ಬೆಲೆನೇ ಇಲ್ಲ, ಸಂಗೀತದ ಗಂಧ ಗಾಳಿ ಗೊತ್ತಿಲ್ಲದ ವೈರಲ್ ಸ್ಟಾರ್ ಗಳನ್ನು ಟಿಆರ್ ಪಿಗಾಗಿ ಉಳಿಸಿಕೊಂಡು, ಲಹರಿಯಂತಹ ಕಂಟೆಸ್ಟಂಟ್ ನ್ನು ಆಯ್ಕೆ ಮಾಡದಿರುವುದು ತುಂಬಾನೆ ಬೇಸರ ತಂದಿದೆ ಎಂದಿದ್ದಾರೆ.