- Home
- Karnataka Districts
- Davanagere
- ಪೊಲೀಸರ ಮೇಲೆ ಅನುಮಾನ.. 3 ತಿಂಗಳ ಹಿಂದೆ ಹೂತಿಟ್ಟಿದ್ದ ಅಮ್ಮನ ಶವ ತೆಗೆದು ಆಸ್ಪತ್ರೆಗೆ ಬಂದ ಅಣ್ಣ, ತಮ್ಮ!
ಪೊಲೀಸರ ಮೇಲೆ ಅನುಮಾನ.. 3 ತಿಂಗಳ ಹಿಂದೆ ಹೂತಿಟ್ಟಿದ್ದ ಅಮ್ಮನ ಶವ ತೆಗೆದು ಆಸ್ಪತ್ರೆಗೆ ಬಂದ ಅಣ್ಣ, ತಮ್ಮ!
ತಾಯಿಯ ಸಾವಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಆಕ್ರೋಶ.. ಪೊಲೀಸರು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ ಎಂಬ ಸಂಶಯ.. ಕೊನೆಗೆ ನ್ಯಾಯಕ್ಕಾಗಿ ಹಂಬಲಿಸಿದ ಮಕ್ಕಳು ಇಡೀ ದಾವಣಗೆರೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದಾರೆ. ಏನದು ಸ್ಟೋರಿ? ಓದಿ..
ಎಲ್ಲಿದೆ ನ್ಯಾಯ?
ದಾವಣಗೆರೆ: ತಾಯಿಯ ಸಾವಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಆಕ್ರೋಶ.. ಪೊಲೀಸರು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ ಎಂಬ ಸಂಶಯ.. ಕೊನೆಗೆ ನ್ಯಾಯಕ್ಕಾಗಿ ಹಂಬಲಿಸಿದ ಮಕ್ಕಳು ಇಡೀ ದಾವಣಗೆರೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದಾರೆ. 3 ತಿಂಗಳ ಹಿಂದೆ ಅಂತ್ಯಕ್ರಿಯೆ ಮಾಡಿದ್ದ ತಾಯಿಯ ಶವವನ್ನು ಸಮಾಧಿಯಿಂದ ಹೊರತೆಗೆದು ಬೈಕ್ನಲ್ಲಿ ಹೊತ್ತುಕೊಂಡು ಜಿಲ್ಲಾಸ್ಪತ್ರೆಗೆ ಬಂದಿರುವ ಘೋರ ಘಟನೆ ನಡೆದಿದೆ.
ಏನಿದು ಪ್ರಕರಣ?
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಆದಾಪುರ ಗ್ರಾಮದ ಈರಮ್ಮ ಎಂಬುವವರು ಏಪ್ರಿಲ್ 29ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ತಾಯಿಯ ಸಾವಿಗೆ ಅಕ್ಕಪಕ್ಕದ ಮನೆಯವರೇ ಕಾರಣ ಎಂದು ಮಗ ಮಂಜುನಾಥ್ ಆರೋಪಿಸಿದ್ದರು. ಈ ಸಂಬಂಧ 11 ಜನರ ವಿರುದ್ಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಲೆಬೆನ್ನೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು.
ಪೊಲೀಸರ ವಿರುದ್ಧ ಗಂಭೀರ ಆರೋಪ
ತಾಯಿಯ ಕೊಲೆ ಪ್ರಕರಣವನ್ನು ಪೊಲೀಸರು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬುದು ಮಕ್ಕಳಾದ ಮಂಜುನಾಥ್ ಮತ್ತು ವೆಂಕಟೇಶ್ ಅವರ ಗಂಭೀರ ಆರೋಪ. ನಮ್ಮ ತಾಯಿಯನ್ನು ಕೊಲೆ ಮಾಡಲಾಗಿದೆ, ಆದರೆ ಸರಿಯಾದ ತನಿಖೆ ನಡೆಯುತ್ತಿಲ್ಲ. ನಮಗೆ ಮೊದಲ ಮರಣೋತ್ತರ ಪರೀಕ್ಷೆಯ ಮೇಲೆ ನಂಬಿಕೆಯಿಲ್ಲ ಎಂದು ಪಟ್ಟು ಹಿಡಿದಿದ್ದರು. ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದಿದ್ದಾಗ ಮಕ್ಕಳೇ ಸಾಹಸಕ್ಕೆ ಕೈಹಾಕಿದ್ದಾರೆ.
ಮಧ್ಯರಾತ್ರಿ ಸಮಾಧಿ ಅಗೆದು ಶವದೊಂದಿಗೆ ಬೈಕ್ ಸವಾರಿ!
ನಿನ್ನೆ ಮಧ್ಯರಾತ್ರಿ ಹರಿಹರ ತಾಲೂಕಿನ ಆದಾಪುರ ಗ್ರಾಮದ ಸ್ಮಶಾನಕ್ಕೆ ಹೋದ ಅಣ್ಣ-ತಮ್ಮ, ತಾಯಿಯ ಸಮಾಧಿಯನ್ನು ಅಗೆದಿದ್ದಾರೆ. ಹೂತಿಟ್ಟಿದ್ದ ಶವವನ್ನು ಹೊರತೆಗೆದು ಬೆಡ್ಶೀಟ್ನಲ್ಲಿ ಸವಾರಿ ಮಾಡಿಕೊಂಡು ಬೈಕ್ ಮೇಲೆ ಕುರಿಸಿಕೊಂಡು ದಾವಣಗೆರೆ ಜಿಲ್ಲಾಸ್ಪತ್ರೆಗೆ ಹೊರಟಿದ್ದಾರೆ. 3 ತಿಂಗಳ ಹಿಂದಿನ ಶವವನ್ನು ಬೈಕ್ನಲ್ಲಿ ಹೊತ್ತು ಸಾಗುತ್ತಿದ್ದ ದೃಶ್ಯ ಮೈ ಜುಂ ಎನ್ನುವಂತಿತ್ತು.
ದಾರಿಯಲ್ಲಿ ಅಪಘಾತ, ಪೊಲೀಸರ ಎಂಟ್ರಿ
ಶವವನ್ನು ಹೊತ್ತು ದಾವಣಗೆರೆ ಹೊರವಲಯದಲ್ಲಿ ಬರುತ್ತಿದ್ದಾಗ ಆಕಸ್ಮಿಕವಾಗಿ ಬೈಕ್ ಅಪಘಾತಕ್ಕೀಡಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಬೆಡ್ಶೀಟ್ನಲ್ಲಿ ಸುತ್ತಿಟ್ಟಿದ್ದ ಶವವನ್ನು ಕಂಡು ಗಾಬರಿಯಾಗಿದ್ದಾರೆ. ಕೂಡಲೇ ಶವವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ತಾಯಿಯ ಮೃತದೇಹ ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿದ್ದು, ನಮ್ಮ ತಾಯಿಗೆ ನ್ಯಾಯ ಸಿಗಬೇಕು, ಹಿರಿಯ ವೈದ್ಯರಿಂದ ಮರು ಮರಣೋತ್ತರ ಪರೀಕ್ಷೆ ನಡೆಯಬೇಕು ಎಂದು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

