ಬೈರತಿ ಬಸವರಾಜ್ಗೆ ಸಂಕಷ್ಟ: ಬಿಕ್ಲು ಶಿವು ಕೊಲೆ ಪ್ರಕರಣದ ಎ1 ಆರೋಪಿ ಜಗ್ಗನ ಜೊತೆಗಿನ ಫೋಟೋ ವೈರಲ್!
ಬೆಂಗಳೂರಿನ ರೌಡಿಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಆರೋಪಿ ಜೊತೆ ಶಾಸಕ ಬೈರತಿ ಬಸವರಾಜ್ ಇರುವ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗಳು ಶಾಸಕರ ಸಂಬಂಧವನ್ನು ಬಹಿರಂಗಪಡಿಸುತ್ತಿವೆ. ಕೊಲೆಗೆ ಯಾವುದೇ ಸಂಬಂಧವಿಲ್ಲ ಎಂದು ಶಾಸಕರು ಹೇಳಿದ್ದರು.

ಬೆಂಗಳೂರು (ಜು.16): ಬೆಂಗಳೂರಿನ ರೌಡಿಶೀಟರ್ ಬಿಕ್ಲು ಶಿವು (ಶಿವಪ್ರಕಾಶ್) ಕೊಲೆ ಪ್ರಕರಣವು ಟ್ವಿಸ್ಟ್ ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಐದನೇ ಆರೋಪಿ (ಎ-5) ಆಗಿ ಎಫ್ಐಆರ್ನಲ್ಲಿ ಉಲ್ಲೇಖಗೊಂಡಿರುವ ಮಾಜಿ ಸಚಿವ ಹಾಗೂ ಮಹದೇವಪುರ ಶಾಸಕ ಬೈರತಿ ಬಸವರಾಜ್ ಕೊಲೆಗೂ ನನಗೂ ಸಂಬಂಧವಿಲ್ಲ. ಕೊಲೆ ಆರೋಪಿಯ ಬಗ್ಗೆ ಗೊತ್ತೇ ಇಲ್ಲ ಎಂದಿದ್ದರು. ಆದರೆ, ಇದೀಗ ಸ್ವತಃ ಬೈರತಿ ಬಸವರಾಜ್ ಜೊತೆಗೆ ಎ-1 ಆರೋಪಿ ಜಗ್ಗು ಅಲಿಯಾಸ್ ಜಗದೀಶ್ ಜೊತೆಗೆ ಇರುವ ಫೋಟೋಗಳು ವೈರಲ್ ಆಗಿದ್ದು, ಹೊಸ ಸಂಶಯಗಳು ಕಂಡುಬರುತ್ತಿವೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಚಿತ್ರಗಳು ಪ್ರಕರಣದಲ್ಲಿ ಮೊದಲ ಆರೋಪಿ (ಎ-1) ಆಗಿರುವ ಜಗದೀಶ್ ಅಲಿಯಾಸ್ ಜಗ್ಗನ ಜೊತೆಗೆ ಶಾಸಕ ಬೈರತಿ ಬಸವರಾಜ್ ಇರುವ ಸಂಬಂಧವನ್ನು ಬಹಿರಂಗಪಡಿಸುತ್ತಿವೆ. ಈ ಮೂಲಕ ಶಾಸಕರ ಮೇಲೆ ರಾಜಕೀಯ ಹಾಗೂ ಕಾನೂನು ಮಡಿಲಲ್ಲೇ ದೋಷಾರೋಪದ ಸಾಕ್ಷಿ ಜೋರಾಗುತ್ತಿದೆ.
ವೈರಲ್ ಫೋಟೋಗಳಿಂದ ಹೊಸ ಚರ್ಚೆ
ಎ-1 ಆರೋಪಿ ಜಗ್ಗ ಜೊತೆ ಶಾಸಕರು ಧಾರ್ಮಿಕ ಸಮಾರಂಭಗಳು ಹಾಗೂ ಜನ್ಮದಿನ ಆಚರಣೆಗಳಲ್ಲಿ ಭಾಗವಹಿಸುತ್ತಿರುವ ಚಿತ್ರಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ವಿಶೇಷವೆಂದರೆ, ಜಗ್ಗನನ್ನು ಶಾಸಕರ 'ಅತ್ಯಾಪ್ತ' ಎಂದು ಬಣ್ಣಿಸುವಂತೆ ಆ ಫೋಟೋಗಳು ಸಾಕ್ಷಿಯಾಗುತ್ತಿವೆ. ಕುಂಭಮೇಳದಲ್ಲೂ ಇಬ್ಬರು ಒಟ್ಟಾಗಿ ಭಾಗವಹಿಸಿರುವ ದೃಶ್ಯಗಳು ಲಭ್ಯವಾಗಿವೆ.
ಶಾಸಕರಿಗೆ ಬಿಗ್ ಪ್ರೆಶರ್
ನನಗೂ ಈ ಶಿವಪ್ರಕಾಶ್ ಕೊಲೆ ಪ್ರಕರಣಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿದಿಲ್ಲ. ಆರೋಪಿಗಳು ನನ್ನ ಬೆಂಬಲಿಗರು ಅಲ್ಲ, ಎಂದು ಶಾಸಕ ಬೈರತಿ ಬಸವರಾಜ್ ಈಗಾಗಲೇ ಹೇಳಿಕೆ ನೀಡಿದ್ದರು. ಇದೀಗ ಜಗ್ಗ ಜೊತೆಯಲ್ಲಿರುವ ಈ ಸಂಬಂಧದ ಫೋಟೋಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಇನ್ನು ಜಗ್ಗ, ಕಿರಣ್ ಸೇರಿದಂತೆ ಇತರ ಆರೋಪಿಗಳು ಹಲವು ವರ್ಷಗಳಿಂದ ಶಾಸಕರ ಜೊತೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಯಲಾಗುತ್ತಿದೆ.
ಆರೋಪಿಗಳ ಹಿನ್ನೆಲೆ ತನಿಖೆ: 10 ವರ್ಷದ ಕ್ರೈಂ ಹಿಸ್ಟರಿ ಕೈಗೆತ್ತಿಕೊಂಡ ಪೊಲೀಸರು
ಹೆಣ್ಣೂರು, ಇಂದಿರಾನಗರ ಹಾಗೂ ಭಾರತಿನಗರ ಠಾಣೆಗಳಲ್ಲಿ ದೌರ್ಜನ್ಯ, ಅಪಹರಣ, ಮಾರಾಮಾರಿ, ಆಸ್ತಿ ಸೆಟಲ್ಮೆಂಟ್ ಸೇರಿದಂತೆ ಹಲವು ಕೇಸ್ಗಳಲ್ಲಿ ಹೆಸರಿರುವ ಜಗ್ಗ, ಈ ಪ್ರಕರಣಕ್ಕೂ ಹಿಂದಿನ ಪ್ಲಾನಿಂಗ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದನೆಂಬುದು ಬೆಳಕಿಗೆ ಬಂದಿದೆ. ಜಗ್ಗನ ಮುಖಾಂತರ ಮಾಜಿ ಸಚಿವನು ಜಮೀನು ವ್ಯವಹಾರಗಳಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದರು ಎಂಬ ಆರೋಪ ಕೇಳಿಬರುತ್ತಿದೆ. ಹಲವು 'ಸಿವಿಲ್ ಸೆಟಲ್ಮೆಂಟ್' ಪ್ರಕರಣಗಳಲ್ಲಿ ಜಗ್ಗ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದನೆಂಬ ಮಾಹಿತಿಯೂ ಲಭ್ಯವಾಗಿದೆ. ಈಗಾಗಲೇ ಎಸ್ಕೇಪ್ ಆಗಿರುವ ಜಗ್ಗನಿಗಾಗಿ ಪೊಲೀಸರ ಶೋಧ ತೀವ್ರಗೊಂಡಿದೆ.
ಶಿವಪ್ರಕಾಶ್ ಡ್ರೈವರ್ ಮತ್ತು ಸೆಕ್ಯೂರಿಟಿಗೂ ಮಾರಣಾಂತಿಕ ಹಲ್ಲೆ:
ಕೊಲೆಯ ದಿನ, ಶಿವಪ್ರಕಾಶ್ ಜೊತೆಗೆ ಇದ್ದ ಡ್ರೈವರ್ ಲೋಕೇಶ್ ಹಾಗೂ ಸೆಕ್ಯೂರಿಟಿ ಇಮ್ರಾನ್ ಖಾನ್ಗೂ ಭೀಕರವಾಗಿ ಹಲ್ಲೆ ಮಾಡಲಾಗಿತ್ತು. ಪ್ರಾಣಾಪಾಯದಿಂದ ಪಾರಾದ ಇಬ್ಬರೂ ಚಿಕಿತ್ಸೆಗೆ ಒಳಪಡುತ್ತಿದ್ದು, ಭಾರತಿನಗರ ಪೊಲೀಸರು ಈಗ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಡ್ರೈವರ್ ಲೋಕೇಶ್ ತಾಯಿ ಗೀತಾ, 'ನನ್ನ ಮಗ ನಿನ್ನೆ ಫೋನ್ ಮಾಡಿ ಅಣ್ಣ ತೀರಿಕೊಂಡರು ಅಂತ ಹೇಳಿದ್ದಾರೆ. ಮಗು ಮೂರು ತಿಂಗಳಿಂದ ಶಿವು ಜೊತೆಗೆ ಕೆಲಸ ಮಾಡುತ್ತಿದ್ದ. ಅವನು ತುಂಬಾ ಒಳ್ಳೆಯವನು," ಎಂದು ಕಣ್ಣೀರಿಂದ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ.
ಪೊಲೀಸರು ಇನ್ನಷ್ಟು ಮಾಹಿತಿ ತೆಗೆಯುತ್ತಿದ್ದಾರೆ
ಯಾವ್ಯಾವ ಪ್ರಕರಣಗಳಲ್ಲಿ ಜಗ್ಗ ಹಾಗೂ ಇತರ ಆರೋಪಿಗಳು ಭಾಗಿಯಾಗಿದ್ದಾರೆ ಎಂಬ ಕ್ರೈಂ ರಿಕಾರ್ಡ್ ಪರಿಶೀಲನೆ ನಡೆಯುತ್ತಿದೆ. ಶಾಸಕರ ಆಪ್ತರು ಹಾಗೂ ರಾಜಕೀಯ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಡಿಸಿಎಂ ಮಟ್ಟದ ಸಭೆಗಳಲ್ಲೂ ಇದರ ಬಗ್ಗೆ ಉಲೇಖವಾಗುತ್ತಿದೆ ಎನ್ನಲಾಗಿದೆ.