ಸೋಫಿಯಾ ಖುರೇಶಿ ಬೆನ್ನಿಗೆ ನಿಂತ ಧವನ್; ಭಾರತೀಯ ಮುಸಲ್ಮಾನರಿಗೆ ಸೆಲ್ಯೂಟ್ ಎಂದ ಗಬ್ಬರ್ ಸಿಂಗ್!
ಪಾಕಿಸ್ತಾನ ಮೂಲದ ಉಗ್ರರ ಮಟ್ಟಹಾಕುವಲ್ಲಿ ಕೈಗೊಂಡ ಆಪರೇಷನ್ ಸಿಂದೂರ ಕಾರ್ಯಚರಣೆ ಬಗ್ಗೆ ಇಡೀ ದೇಶಕ್ಕೆ ವಿವರಣೆ ನೀಡಿದ ಸೋಫಿಯಾ ಖುರೇಷಿ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಇದೀಗ ಸೋಫಿಯಾ ಬಗ್ಗೆ ಗಬ್ಬರ್ ಸಿಂಗ್ ಖ್ಯಾತಿಯ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇಡೀ ದೇಶವೇ ಆಪರೇಷನ್ ಸಿಂದೂರ ಮತ್ತು ಆ ಬಗ್ಗೆ ಪ್ರೆಸ್ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಶಿ ಬಗ್ಗೆ ಇಡೀ ದೇಶವೇ ಸಂಭ್ರಮಿಸುತ್ತಿದೆ. ಆದರೆ ಮಧ್ಯಪ್ರದೇಶ ಮೂಲದ ಸಚಿವರೊಬ್ಬರು ಕೊಂಕು ನುಡಿದಿದ್ದರು.
ಮಧ್ಯಪ್ರದೇಶ ಸರ್ಕಾರದ ಬುಡಕಟ್ಟು ಸಚಿವ ಕುನ್ವರ್ ವಿಜಯ್ ಶಾ ಎನ್ನುವವರು, ಸೋಫಿಯಾ ಖುರೇಶಿ ಅವರನ್ನು ಉಗ್ರರ ಸಹೋದರಿ ಎಂದು ಕರೆಯುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಭರದಲ್ಲಿ, 'ನಮ್ಮ ದೇಶದ ಪುತ್ರಿಯರ ಸಿಂದೂರವನ್ನು ಅಳಿಸಿದ ಪಾಕಿಸ್ತಾನದ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ ಮೋದಿಯವರು ಕಳಿಸಿದರು ಎಂದು ಹೇಳಿದ್ದು' ದೇಶಾದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇನ್ನು ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್, 'ಆಪರೇಷನ್ ಸಿಂದೂರ' ಕಾರ್ಯಾಚರಣೆಯ ಯಶಸ್ಸಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಭಾರತೀಯ ಸೇನೆಗೆ ಗೌರವ ಸಲ್ಲಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, 'ಭಾರತೀಯರ ಆತ್ಮ ಅಡಗಿರುವುದೇ ಒಗ್ಗಟ್ಟಿನಲ್ಲಿ. ಕರ್ನಲ್ ಸೋಫಿಯಾ ಖುರೇಶಿ ಸೇರಿದಂತೆ ದೇಶದ ಪರವಾಗಿ ಹೋರಾಡುವ ಮೂಲಕ ನಾವೆಲ್ಲರೂ ಒಂದೇ ಎಂದು ಸಾರಿದ ಅಸಂಖ್ಯಾತ ಭಾರತೀಯ ಮುಸಲ್ಮಾನರಿಗೆ ಹ್ಯಾಟ್ಸ್ಅಪ್. ಜೈ ಹಿಂದ್ ಎಂದು ಗಬ್ಬರ್ ಸಿಂಗ್ ಖ್ಯಾತಿಯ ಧವನ್ ಟ್ವೀಟ್ ಮಾಡಿದ್ದಾರೆ.
ಶಿಖರ್ ಧವನ್ ಅವರ ಈ ಪೋಸ್ಟ್, ದೇಶದ ಏಕತೆ, ಧೈರ್ಯ ಮತ್ತು ಮಹಿಳಾ ಅಧಿಕಾರಿಗಳ ಪಾತ್ರವನ್ನು ಮೆಚ್ಚುಗೆ ಸಲ್ಲಿಸುವುದರೊಂದಿಗೆ, ದೇಶಭಕ್ತಿಯ ಸಂದೇಶವನ್ನು ಹರಡಿದೆ.
Film On Operation Sindoor
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಪಾಕಿಸ್ತಾನ ಮತ್ತು ಪಾಕಿಸ್ತಾನ-ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ 'ಆಪರೇಷನ್ ಸಿಂದೂರ್' ಕಾರ್ಯಚರಣೆ ನಡೆಸಿತ್ತು.