- Home
- Sports
- Cricket
- ಪೇಸರ್ ವಿರುದ್ಧ ಮೈದಾನದಲ್ಲೇ ಸಿಡಿದೆದ್ದ ಗೌತಿ! ಗಂಭೀರ್ ಕೆಂಗಣ್ಣಿಗೆ ಗುರಿಯಾದ ಸ್ಟಾರ್ ಪ್ಲೇಯರ್!
ಪೇಸರ್ ವಿರುದ್ಧ ಮೈದಾನದಲ್ಲೇ ಸಿಡಿದೆದ್ದ ಗೌತಿ! ಗಂಭೀರ್ ಕೆಂಗಣ್ಣಿಗೆ ಗುರಿಯಾದ ಸ್ಟಾರ್ ಪ್ಲೇಯರ್!
ಭಾರತ-ಶ್ರೀಲಂಕಾ ಅಭ್ಯಾಸ ಪಂದ್ಯದ ವೇಳೆ, ಹೆಡ್ ಕೋಚ್ ಗೌತಮ್ ಗಂಭೀರ್ ಸ್ಟಾರ್ ಬೌಲರ್ ಬೌಲಿಂಗ್ ಶೈಲಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಲೆಂಗ್ತ್ ಎಸೆಯುತ್ತಿದ್ದುದನ್ನು ಕಂಡು, ಗಂಭೀರ್ ಬೌಂಡರಿ ಲೈನ್ಗೆ ಬಂದು ಪಿಚ್ಗೆ ತಕ್ಕಂತೆ 'ಫುಲರ್ ಲೆಂಗ್ತ್' ಎಸೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಟೆಸ್ಟ್ಗೆ ಕ್ಷಣಗಣನೆ!
ಭಾರತ ಮತ್ತು ಶ್ರೀಲಂಕಾ ನಡುವಿನ ರೋಚಕ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 15ರಿಂದ ಆರಂಭವಾಗಲಿರುವ ಈ ಮಹತ್ವದ ಸರಣಿಗೂ ಮುನ್ನ, ಎರಡೂ ತಂಡಗಳ ನಡುವೆ ಅಭ್ಯಾಸ ಪಂದ್ಯ ನಡೆಯುತ್ತಿದೆ. ಈ ಅಭ್ಯಾಸ ಪಂದ್ಯದ ಅಂತಿಮ ಫಲಿತಾಂಶ ಹೊರಬೀಳುವ ಮುನ್ನವೇ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಿಂದ ಬಿಗ್ ಅಪ್ಡೇಟ್ ಒಂದ ಹೊರಬಿದ್ದಿದೆ. ಅದೇನೆ ಎಂದರೆ ಗಂಬೀರ್ ಸ್ಟಾರ್ ಬೌಲರ್ ವಿರುದ್ಧ ಹರಿಹಾಯ್ದಿದ್ದಾರೆ ಎನ್ನುವ ಸಂಗತಿ. ಬನ್ನಿ ಅದೇನು ಎಂದು ನೋಡಿಕೊಂಡು ಬರೋಣ!
ಗೌತಿ ಅಸಮಾಧಾನ!
ಮೈದಾನದಲ್ಲಿ ಭಾರತೀಯ ಬೌಲರ್ಗಳ ಲೈನ್ ಅಂಡ್ ಲೆಂಗ್ತ್ ಕಂಡು ಹೆಡ್ ಕೋಚ್ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೌದು, ಪಂದ್ಯ ನಡೆಯುತ್ತಿದ್ದ ಸಮಯದಲ್ಲೇ ಕೋಚ್ ಗಂಭೀರ್ ಪ್ರಮುಖ ವೇಗಿಯೊಬ್ಬರ ಬೌಲಿಂಗ್ ಶೈಲಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮೈದಾನದಲ್ಲೇ ಪ್ರತ್ಯಕ್ಷರಾಗಿ 'ಕ್ಲಾಸ್' ತೆಗೆದುಕೊಂಡ ಘಟನೆ ನಡೆದಿದೆ.
ಪಂದ್ಯದಲ್ಲಿ ನಡೆದಿದ್ದೇನು?
ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಟೀಮ್ ಇಂಡಿಯಾ 6 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಆದರೆ, ಪ್ರತ್ಯುತ್ತರದಲ್ಲಿ ಶ್ರೀಲಂಕಾ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟ್ ಬೀಸಿ ಭಾರತಕ್ಕಿಂತ 6 ರನ್ಗಳ ಸಣ್ಣ ಮುನ್ನಡೆ ಕಾಯ್ದುಕೊಂಡಿತು.
ರನ್ ಬಿಟ್ಟುಕೊಟ್ಟ ಪ್ರಮಖ ವೇಗಿಗಳು!
ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ಬ್ಯಾಟರ್ಗಳಿಗೆ ಭಾರತೀಯ ಬೌಲರ್ಗಳು ಆರಂಭದಲ್ಲಿ ಕಠಿಣ ಸವಾಲು ನೀಡಲು ವಿಫಲರಾದರು. ಯುವ ವೇಗಿಗಳಾದ ಗುರ್ನೂರ್ ಬ್ರಾರ್ ಮತ್ತು ಪ್ರಸಿದ್ಧ್ ಕೃಷ್ಣ ಲೆಂತ್ ತಪ್ಪಿ ಬೌಲಿಂಗ್ ಮಾಡಿ ಧಾರಾಳವಾಗಿ ರನ್ ಬಿಟ್ಟುಕೊಡುತ್ತಿದ್ದರು. ಈ ಹಂತದಲ್ಲಿ ದಾಳಿಗಿಳಿದ ಅನುಭವಿ ವೇಗಿ ಮೊಹಮ್ಮದ್ ಸಿರಾಜ್, ತಮ್ಮ ಸ್ಪೆಲ್ನಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರಾದರೂ, ಅವರ ಬೌಲಿಂಗ್ 'ಲೆಂಗ್ತ್' ಬಗ್ಗೆ ಗಂಭೀರ್ ಅವರಿಗೆ ತೃಪ್ತಿಯಿರಲಿಲ್ಲ. ಅದಕ್ಕೆ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮೈದಾನಕ್ಕಿಳಿದು ಡೈರೆಕ್ಟ್ ಇನ್ಸ್ಟ್ರಕ್ಷನ್!
ಶ್ರೀಲಂಕಾದ ಉಪಖಂಡದ (Subcontinent) ಪಿಚ್ಗಳಲ್ಲಿ ವೇಗಿಗಳು ಎಂತಹ ಲೆಂಗ್ತ್ನಲ್ಲಿ ಬೌಲಿಂಗ್ ಮಾಡಬೇಕು ಎಂಬ ಬಗ್ಗೆ ಗಂಭೀರ್ ಸ್ಪಷ್ಟ ಯೋಜನೆ ಹೊಂದಿದ್ದರು. ಸಿರಾಜ್ ತಮಗೆ ಸಿಕ್ಕ ವಿಕೆಟ್ನ ಹೊರತಾಗಿಯೂ, ಪಿಚ್ಗೆ ಸೂಕ್ತವಲ್ಲದ ಶಾರ್ಟ್ ಅಥವಾ ಶಾರ್ಟ್ ಆಫ್ ಲೆಂಗ್ತ್ ಎಸೆತಗಳನ್ನು ಎಸೆಯುತ್ತಿರುವುದನ್ನು ಕಂಡು ಗಂಭೀರ್ ಸಹನೆ ಕಳೆದುಕೊಂಡರು.
ಕಟ್ಟುನಿಟ್ಟಿನ ಸೂಚನೆ ನೀಡಿದ ಗಂಭೀರ್!
ಕೂಡಲೇ ಡ್ರೆಸ್ಸಿಂಗ್ ರೂಮ್ನಿಂದ ನೇರವಾಗಿ ಮೈದಾನದ ಬೌಂಡರಿ ಲೈನ್ಗೆ ಆಗಮಿಸಿದ ಮುಖ್ಯ ತರಬೇತುದಾರ ಗೌತಮ್ ಗಂಭೀರ್, ಸಿರಾಜ್ರನ್ನು ಕರೆದು ಬೌಲಿಂಗ್ ತಂತ್ರಗಾರಿಕೆ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪಿಚ್ನ ಪರಿಸ್ಥಿತಿಗೆ ತಕ್ಕಂತೆ 'ಫುಲರ್ ಲೆಂಗ್ತ್' ಎಸೆತಗಳನ್ನು ಎಸೆಯುವಂತೆ ವಿವರಿಸಿದರು. ಈ ಸಂಭಾಷಣೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸರಣಿಗೂ ಮುನ್ನ ಗಂಭೀರ್ ಅವರ ಈ 'ಶಿಸ್ತಿನ ಪಾಲನೆ' ಅಭಿಮಾನಿಗಳ ಗಮನ ಸೆಳೆದಿದೆ.
ಭಾರತಕ್ಕೆ 206 ರನ್ಗಳ ಟಾರ್ಗೆಟ್
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು 6 ವಿಕೆಟ್ಗೆ 200 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್ನ 6 ರನ್ಗಳ ಮುನ್ನಡೆಯೊಂದಿಗೆ ಟೀಮ್ ಇಂಡಿಯಾಗೆ ಗೆಲ್ಲಲು 206 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಭಾರತೀಯ ಬ್ಯಾಟಿಂಗ್ ಲೈನ್ಅಪ್ ಹೊಂದಿರುವ ಬಲಕ್ಕೆ ಈ ಗುರಿ ತಲುಪುವುದು ಸುಲಭ ಎಂದೇ ವಿಶ್ಲೇಷಿಸಲಾಗುತ್ತಿದೆಯಾದರೂ, ಈ ಅಭ್ಯಾಸ ಪಂದ್ಯವು ಟೆಸ್ಟ್ ಸರಣಿಗೂ ಮುನ್ನ ರೆಡ್-ಬಾಲ್ ಕ್ರಿಕೆಟ್ಗೆ ಹೊಂದಿಕೊಳ್ಳಲು ಆಟಗಾರರಿಗೆ ಉತ್ತಮ ವೇದಿಕೆ ಒದಗಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

