ಕುಡಿದ ಅಮಲಿನಲ್ಲಿದ್ದ ಚಾಲಕನ ಬೇಜವಾಬ್ದಾರಿಯಿಂದಾಗಿ ಮೆಡಿಕೋ ಪ್ರಿಯಾಂಕಾ ಹೈದರಾಬಾದ್ನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಇದು ದೇಶಾದ್ಯಂತ ವೈದ್ಯಕೀಯ ವಿದ್ಯಾರ್ಥಿಗಳ ರಸ್ತೆ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ. ಈ ದುರಂತವು ಮೆಡಿಕಲ್ ಕಾಲೇಜುಗಳ ಸುತ್ತಮುತ್ತ ಸುರಕ್ಷತಾ ತಪಾಸಣೆ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮದ ಅಗತ್ಯವನ್ನು ಎತ್ತಿ ತೋರಿಸುತ್ತದೆ.
ಹೈದರಾಬಾದ್: ನಮ್ಮ ಮಗಳಿಗೆ ಬದುಕಲು ಕೇವಲ ಶೇ. 1ರಷ್ಟು ಅವಕಾಶವಿದ್ದರೂ ಸಾಕು.. ಹೇಗಾದರೂ ಮಾಡಿ ಅವಳನ್ನು ಉಳಿಸಿಕೊಡಿ.. ಎಂದು ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಯ ಹೊರಗೆ ಕೇಳಿಬರುತ್ತಿರುವ ಈ ಆರ್ತನಾದ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿದೆ. ನಾಳೆ ವೈದ್ಯೆಯಾಗಿ ನೂರಾರು ಜನರ ಪ್ರಾಣ ಉಳಿಸಬೇಕಾಗಿದ್ದ ಪ್ರಿಯಾಂಕಾ ಇಂದು ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಯಾವ ತಪ್ಪಿಗೆ ಈ ಶಿಕ್ಷೆ?
28 ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಪ್ರಿಯಾಂಕಾ ಆಗಸ್ಟ್ 3, 2026 ರಂದು ಭೀಕರ ಅಪಘಾತಕ್ಕೆ ಒಳಗಾಗದರು. ರಾಜಮಹೇಂದ್ರವರಂನಲ್ಲಿ ಅಮಲಿನಲ್ಲಿದ್ದ ಯುವಕರು ಕಾರನ್ನ ಅವರ ಮೇಲೆ ಹರಿಸಿ ಭೀಕರ ಗಾಯಗೊಳಿಸಿದ್ದರು. ಅವರು ಮದ್ಯಪಾನ ಮಾಡಿ ವಾಹನ ಚಲಾಯಿಸಿರಲಿಲ್ಲ. ಅಥವಾ ಸಂಚಾರ ನಿಯಮ ಉಲ್ಲಂಘಿಸಿರಲಿಲ್ಲ. ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ, ಮದ್ಯದ ಅಮಲಿನಲ್ಲಿ ಬಂದ ಮತ್ತೊಬ್ಬ ವಾಹನ ಸವಾರ ಗುದ್ದಿದ್ದೇ ಈ ಅವಾಂತರಕ್ಕೆ ಕಾರಣ. ಇಂದು ತಪ್ಪು ಮಾಡಿದವರು ರಿಮಾಂಡ್ನಲ್ಲಿದ್ದಾರೆ, ಆದರೆ ಯಾವ ತಪ್ಪೂ ಮಾಡದ ಪ್ರಿಯಾಂಕಾ ವೆಂಟಿಲೇಟರ್ ಮೇಲೆ ಪ್ರಾಣಕ್ಕಾಗಿ ಹೋರಾಡುತ್ತಿದ್ದಾರೆ. ಇದು ಕೇವಲ ಒಂದು ಅಪಘಾತವಲ್ಲ, ಒಬ್ಬ ಯುವ ವೈದ್ಯೆಯ ಕನಸಿನ ಕೊಲೆ.
ಪ್ರಿಯಾಂಕಾ ಅವರ ಈ ಕಥೆ ಕೇವಲ ಒಂದು ಕುಟುಂಬದ ಕಣ್ಣೀರಲ್ಲ. ಕಳೆದ ಒಂದು ದಶಕದ ಅಂಕಿಅಂಶಗಳನ್ನು ಗಮನಿಸಿದರೆ, ದೇಶಾದ್ಯಂತ ವೈದ್ಯಕೀಯ ವಿದ್ಯಾರ್ಥಿಗಳು ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ.
- 2016-2018: ಹೈದರಾಬಾದ್ನ ಉಸ್ಮಾನಿಯಾ ಮೆಡಿಕಲ್ ಕಾಲೇಜಿನ ಐವರು ವಿದ್ಯಾರ್ಥಿಗಳು ಬಸ್ ಅಪಘಾತದಲ್ಲಿ ಮೃತಪಟ್ಟಿದ್ದರು. ಹರಿಯಾಣ ಮತ್ತು ತಮಿಳುನಾಡಿನಲ್ಲಿಯೂ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಅಪಘಾತಕ್ಕೆ ಬಲಿಯಾಗಿದ್ದರು.
- 2022-ವಾರ್ಧಾ ದುರಂತ: ಮಹಾರಾಷ್ಟ್ರದ ವಾರ್ಧಾದಲ್ಲಿ ಕಾರು ಸೇತುವೆಯಿಂದ ಕೆಳಕ್ಕೆ ಬಿದ್ದು ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಒಂದೇ ಕ್ಷಣದಲ್ಲಿ ಪ್ರಾಣ ಕಳೆದುಕೊಂಡಿದ್ದರು.
- 2024-ಕೇರಳದ ಸರಣಿ ಸಾವು: ಕೇರಳದಲ್ಲಿ ನಡೆದ ಭೀಕರ ಅಪಘಾತದಲ್ಲಿ ಆರು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಕರ್ನೂಲು ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ಬಸ್ಗೆ ಬಲಿಯಾಗಿದ್ದ ಘಟನೆಯೂ ಮರೆಯುವಂತಿಲ್ಲ.
- 2025-ಮುಂದುವರಿದ ವಿಷಾದ: ಈ ವರ್ಷದ ಆರಂಭದಲ್ಲೇ ಹೈದರಾಬಾದ್ ಮತ್ತು ಕೃಷ್ಣಾ ಜಿಲ್ಲೆಗಳಲ್ಲಿ ಮೆಡಿಕಲ್ ವಿದ್ಯಾರ್ಥಿನಿಯರು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ವ್ಯವಸ್ಥೆಯ ಲೋಪ ಎಲ್ಲಿದೆ?
ವೈದ್ಯಕೀಯ ವಿದ್ಯಾರ್ಥಿಗಳು ದಿನದ 24 ಗಂಟೆಯೂ ಕರ್ತವ್ಯದಲ್ಲಿರುತ್ತಾರೆ. ನೈಟ್ ಡ್ಯೂಟಿ ಮುಗಿಸಿ ನಿದ್ರೆಯಿಲ್ಲದ ಕಣ್ಣುಗಳೊಂದಿಗೆ ಮುಂಜಾನೆ ಹಾಸ್ಟೆಲ್ಗೆ ಅಥವಾ ಮನೆಗೆ ಹಿಂದಿರುಗುವಾಗ ಅವರು ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಮೆಡಿಕಲ್ ಕಾಲೇಜುಗಳಲ್ಲಿ ರಾತ್ರಿ ಡ್ಯೂಟಿ ಮುಗಿಸುವ ವಿದ್ಯಾರ್ಥಿಗಳಿಗಾಗಿ ಸುರಕ್ಷಿತ ಶಟಲ್ ಬಸ್ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಲೋಪ. ಮೆಡಿಕಲ್ ಕಾಲೇಜುಗಳ ಸುತ್ತಮುತ್ತಲಿನ ರಸ್ತೆಗಳಲ್ಲಿ ಸರಿಯಾದ ಬೆಳಕು ಮತ್ತು ಸ್ಪೀಡ್ ಬ್ರೇಕರ್ಗಳಿಲ್ಲದಿರುವುದು ಅಪಾಯವನ್ನು ಹೆಚ್ಚಿಸುತ್ತಿದೆ. ರಾತ್ರಿ ವೇಳೆ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವವರ ಮೇಲೆ ಕಟ್ಟುನಿಟ್ಟಿನ ನಿಗಾ ಇಲ್ಲದಿರುವುದು ಪ್ರಿಯಾಂಕಾ ಅಂತಹವರಿಗೆ ಶಾಪವಾಗುತ್ತಿದೆ.
ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿದರೆ ಕೇವಲ ಒಬ್ಬ ವ್ಯಕ್ತಿ ಸಾಯುವುದಿಲ್ಲ, ಒಬ್ಬ ವೈದ್ಯನನ್ನು ಸಮಾಜ ಕಳೆದುಕೊಳ್ಳುತ್ತದೆ. ಒಂದು ಕುಟುಂಬದ ಆಧಾರಸ್ತಂಭ ಕುಸಿಯುತ್ತದೆ. ಪ್ರಿಯಾಂಕಾ ಮತ್ತೆ ಕಣ್ಣು ತೆರೆಯಲಿ, ಅವಳ ಕನಸು ನನಸಾಗಲಿ ಎಂಬುದು ಇಡೀ ನಾಡಿನ ಪ್ರಾರ್ಥನೆ. ಆದರೆ, ಇನ್ನು ಮುಂದೆ ಯಾವ ಪ್ರಿಯಾಂಕಾ ಕೂಡ ರಸ್ತೆಯಲ್ಲಿ ಬಲಿಯಾಗಬಾರದು ಎನ್ನುವುದೇ ಸಮಾಜ ಮತ್ತು ಸರ್ಕಾರಕ್ಕೆ ಇರುವ ದೊಡ್ಡ ಸವಾಲು.


