ಶ್ರೀಲಂಕಾ ಎದುರಿನ ಟೆಸ್ಟ್ ಸಿರೀಸ್ ನೋಡ್ತಿರುವ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ ಆಗಿದೆ. ನಾಯಕ ಶುಬ್ಮನ್ ಗಿಲ್ಲ ಸೇರಿ ಒಟ್ಟ 13 ಮಂದಿ ಆಟಗಾರರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಇದು ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿದೆ.
ಶ್ರೀಲಂಕಾ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೂ ಮುನ್ನ ಭಾರತ ಕ್ರಿಕೆಟ್ ತಂಡಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 13 ಮಂದಿ ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದಾರೆ. ಇದು ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಲಂಕಾ ಸರಣಿಗೂ ಮುನ್ನ ಅಗ್ನಿಪರೀಕ್ಷೆ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ದೃಷ್ಟಿಯಿಂದ ಭಾರತಕ್ಕೆ ಈ ಶ್ರೀಲಂಕಾ ಪ್ರವಾಸ ಅತ್ಯಂತ ನಿರ್ಣಾಯಕವಾಗಿದೆ. ಆಗಸ್ಟ್ 15 ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ತಂಡದಲ್ಲಿ ಈಗ ಆತಂಕ ಮನೆಮಾಡಿದೆ. ಅಭ್ಯಾಸ ಪಂದ್ಯದ ವೇಳೆ ನಾಯಕ ಶುಭಮನ್ ಗಿಲ್ ಅವರ ಬೆರಳಿಗೆ ಗಾಯವಾಗಿದ್ದು, ಅವರು ಮೈದಾನದಿಂದ ಹೊರಗುಳಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಕೆ.ಎಲ್. ರಾಹುಲ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಗಾಯಗೊಂಡಿರುವ ಒಟ್ಟು 13 ಆಟಗಾರರು ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಅಥವಾ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಚಿಕಿತ್ಸೆ ಮತ್ತು ಪುನಶ್ಚೇತನ ಪಡೆಯುತ್ತಿದ್ದಾರೆ.
ಯಾರಿಗೆ ಯಾವ ಗಾಯ?
- ಜಸ್ಪ್ರಿತ್ ಬುಮ್ರಾ: ಮೊಣಕಾಲು ಗಾಯ
- ಹಾರ್ದಿಕ್ ಪಾಂಡ್ಯ: ಸ್ನಾಯು ಸೆಳೆತದ ಸಮಸ್ಯೆ
- ಶುಭಮನ್ ಗಿಲ್: ಬೆರಳಿನ ಗಾಯ
- ಆಕಾಶ್ ದೀಪ್: ಬೆನ್ನುಮೂಳೆಯ ಸ್ಟ್ರೆಸ್ ಫ್ರಾಕ್ಚರ್
- ರಿಯಾನ್ ಪರಾಗ್: ಬಲಗೈ ಮಣಿಕಟ್ಟಿನ ಗಾಯ
- ನಿತೀಶ್ ಕುಮಾರ್ ರೆಡ್ಡಿ: ಹ್ಯಾಮ್ಸ್ಟ್ರಿಂಗ್ ಸಮಸ್ಯೆ.
- ಮತ್ತು ಹರ್ಷಿತ್ ರಾಣಾ: ಹ್ಯಾಮ್ಸ್ಟ್ರಿಂಗ್ ಸಮಸ್ಯೆ.
- ವರುಣ್ ಚಕ್ರವರ್ತಿ, ಸುಯಾಶ್ ಶರ್ಮಾ, ಅಶೋಕ್ ಶರ್ಮಾ, ಯುದ್ಧವೀರ್ ಸಿಂಗ್, ಹಿಮಾಂಶು ಸಿಂಗ್ ಇವರೆಲ್ಲರೂ ವಿವಿಧ ರೀತಿಯ ಗಾಯಗಳಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಯಿ ಸುದರ್ಶನ್ ಅಲಭ್ಯ?
ಯುವ ಬ್ಯಾಟರ್ ಸಾಯಿ ಸುದರ್ಶನ್ ಅವರ ಕಾಲಿನ ಬೆರಳಿನ ಮೂಳೆ ಮುರಿತ (Toe Fracture) ಇನ್ನೂ ಪೂರ್ಣವಾಗಿ ಗುಣಮುಖವಾಗಿಲ್ಲ. ಈ ಕಾರಣದಿಂದ ಅವರು ಸಂಪೂರ್ಣ ಶ್ರೀಲಂಕಾ ಸರಣಿಯಿಂದ ಹೊರಬೀಳುವ ಸಾಧ್ಯತೆಯಿದೆ. ಇನ್ನು ವಾಷಿಂಗ್ಟನ್ ಸುಂದರ್ ಅವರ ಲಭ್ಯತೆಯ ಬಗ್ಗೆಯೂ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಒಂದೇ ಸಮಯದಲ್ಲಿ ಇಷ್ಟು ಸಂಖ್ಯೆಯ ಪ್ರಮುಖ ಆಟಗಾರರು ಗಾಯದ ಸಮಸ್ಯೆಗೆ ತುತ್ತಾಗಿರುವುದು ಟೀಮ್ ಇಂಡಿಯಾದ ಆಯ್ಕೆ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಗೌತಮ್ ಗಂಭೀರ್ ಅವರು ಲಭ್ಯವಿರುವ ಬೆಂಚ್ ಸ್ಟ್ರೆಂತ್ ಅನ್ನು ಬಳಸಿಕೊಂಡು ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಮತ್ತು ಲಂಕಾ ಸವಾಲನ್ನು ಹೇಗೆ ಎದುರಿಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.


