ಐಪಿಎಲ್ 2025 ಪುನರಾರಂಭಕ್ಕೆ ಬಿಸಿಸಿಐ ಸಿದ್ಧತೆ, 3 ನಗರಗಳು ಶಾರ್ಟ್ ಲಿಸ್ಟ್
ಭಾರತ-ಪಾಕಿಸ್ತಾನ ಕದನ ವಿರಾಮದ ಹಿನ್ನೆಲೆಯಲ್ಲಿ ಐಪಿಎಲ್ 2025 ಅನ್ನು ಪುನರಾರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಪಂದ್ಯಾವಳಿ ನಡೆಸುವ ಸಾಧ್ಯತೆಗಳಿವೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇಂಡಿಯನ್ ಪ್ರೀಮಿಯರ್ ಲೀಗ್ 2025 ಅನ್ನು ಮತ್ತೆ ಪುನರಾರಂಭ ಮಾಡಲು ಮುಂದಾಗಿದೆ. ಅದಕ್ಕಾಗಿ ಮೂರು ಪ್ರಮುಖ ನಗರಗಳನ್ನು ಗುರುತಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಮಿಲಿಟರಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಟೂರ್ನಿಯನ್ನು ಅನಿರ್ಧಿಷ್ಟಾವಧಿ ಮುಂದೂಡಲಾಗಿದೆ ಎಂದು ಘೋಷಣೆ ಮಾಡಲಾಗಿತ್ತು. ಈಗ ಭಾರತ ಮತ್ತು ಪಾಕಿಸ್ತಾನ ಸದ್ಯಕ್ಕೆ ಕದನ ವಿರಾಮ ಘೋಷಿಸಿದೆ.

ಒಂದು ವಾರದಲ್ಲಿ ಪಂದ್ಯಾವಳಿ ಪುನರಾರಂಭ ಮಾಡಲು ಬಿಸಿಸಿಐ ಚಿಂತನೆ ನಡೆಸಿದ್ದು ದಕ್ಷಿಣ ಭಾರತದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಪಂದ್ಯಾವಳಿ ನಡೆಸುವುದು ಸೂಕ್ತ ಎಂದು ಚಿಂತನೆ ನಡೆಸಿದೆಯಂತೆ. ಮುಂದಿನವಾರ ಐಪಿಎಲ್ ಲೀಗ್ ಪುನರಾರಂಭ ಮಾಡುವುದಾದರೆ ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ನಡೆಸುವುದು ಸೇಫ್ ಎಂಬುದನ್ನು ಬಿಸಿಸಿಐ ಪರಿಗಣಿಸುತ್ತಿದೆಯಂತೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಅನ್ನು ಶಾರ್ಟ್ಲಿಸ್ಟ್ ಮಾಡಿದೆಯಂತೆ. ಒಂದು ವೇಳೆ ಗಡಿಯಲ್ಲಿ ಪರಿಸ್ಥಿತಿ ಸುಧಾರಿಸಿದರೆ, ಮಂಡಳಿಯು ಈಗ ನಿಗದಿಯಾದ ಸ್ಥಳದಲ್ಲೇ ಮ್ಯಾಚ್ ನಡೆಸಲು ಚಿಂತಿಸಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಾರ್ಚ್ 22ರಿಂದ ಆರಂಭಗೊಂಡ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ-ಪಂಜಾಬ್ ಪಂದ್ಯವು ಸೇರಿದಂತೆ 58 ಪಂದ್ಯಗಳು ನಡೆದಿವೆ. ಲೀಗ್ ಹಂತದಲ್ಲಿ ಇನ್ನು 12 ಪಂದ್ಯಗಳು, ಪ್ಲೇ ಆಫ್ ಮೂರು ಹಾಗೂ ಫೈನಲ್ ಸೇರಿದಂತೆ ಇನ್ನು 16 ಪಂದ್ಯಗಳು ನಡೆಯುವುದು ಬಾಕಿ ಉಳಿದಿವೆ. ಮೇ 25ಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ಎಂದು ಈ ಹಿಂದೆ ನಿಯಮಾನುಸಾರ ನಿರ್ಧಾರವಾಗಿತ್ತು. ಆದ್ರೆ ಈಗ ಎಲ್ಲವೂ ಬದಲಾಗುವ ಲಕ್ಷಣಗಳು ಕಾಣಿಸುತ್ತಿವೆ. ಮುಂದಿನ ವಾರ ಐಪಿಎಲ್ ಅನ್ನು ಪುನರಾರಂಭಿಸುವಲ್ಲಿನ ಸವಾಲುಗಳ ಬಗ್ಗೆ ಕೂಡ ಬಿಸಿಸಿಐ ಅನೌಪಚಾರಿಕವಾಗಿ ಫ್ರಾಂಚೈಸಿಗಳ ಜೊತೆಗೆ ಹೇಳಿಕೊಂಡಿದೆಯಂತೆ.
ಇನ್ನು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಕೆಲವು ಆಟಗಾರರು ಜೂನ್ 11 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ನ ಫೈನಲ್ನಲ್ಲಿ ಆಡಲಿದ್ದಾರೆ. ಹೀಗಾಗಿ ಮೇ ತಿಂಗಳೊಳಗೆ ಐಪಿಎಲ್ ಮುಗಿಸುವುದು ಅನಿವಾರ್ಯವಾಗಿದೆ. ಇಲ್ಲವಾದರೆ ವಿದೇಶಿ ಆಟಗಾರರು ತಮ್ಮ ದೇಶಕ್ಕೆ ಮರಳಲಿದ್ದಾರೆ. ಇಲ್ಲಿ ಎರಡು ತಿಂಗಳ ಕಾಲ ನಿರಂತರವಾಗಿ ಐಪಿಎಲ್ ಆಡಿರುವುದರಿಂದ ಅವರಿಗೆ ಸ್ವಲ್ಪ ದಿನಗಳ ವಿಶ್ರಾಂತಿ ಕೂಡ ಬೇಕಾಗುತ್ತದೆ. ಒಂದು ವಾರದಲ್ಲಿ ಐಪಿಎಲ್ ಪುನರಾಂಭಗೊಂಡರೆ ವಿದೇಶಿ ಆಟಗಾರರು ಭಾರತದಲ್ಲೇ ಉಳಿಯಲಿದ್ದಾರೆ.
ಭಾರತದ ಸದ್ಯದ ಪರಿಸ್ಥಿತಿಯಿಂದ ಬಾಂಗ್ಲಾದೇಶ ಪ್ರವಾಸದ ಬಗ್ಗೆ ಅನುಮಾನಗಳಿವೆ. ಜೊತೆಗೆ ಆ ದೇಶದಲ್ಲಿ ಕೂಡ ಪರಿಸ್ಥಿತಿಗಳು ಸರಿ ಇಲ್ಲ. ಬಿಸಿಸಿಐ ತನ್ನ ತಂಡಗಳನ್ನು ಬಾಂಗ್ಲಾದೇಶಕ್ಕೆ ಕಳುಹಿಸುವ ಮೊದಲು ಸರ್ಕಾರದ ಅನುಮತಿ ಪಡೆಯಬೇಕು. ಈ ವರ್ಷ ಭಾರತ ಏಷ್ಯಾ ಕಪ್ ಅನ್ನು ಆಯೋಜಿಸಲಿದೆ. ಪಾಕಿಸ್ತಾನವನ್ನು ಆಹ್ವಾನಿಸುವ ಮೊದಲು ಬಿಸಿಸಿಐ ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ" ಎಂದು ಮೂಲಗಳು ತಿಳಿಸಿವೆ.