- Home
- Sports
- Cricket
- ಇಂಗ್ಲೆಂಡ್ ಸರಣಿ ಮುಗಿಯುತ್ತಿದ್ದಂತೆ ಕೋಚಿಂಗ್ ಸ್ಟಾಫ್ ಸೇವೆ ಅಂತ್ಯ, ಮಹತ್ವದ ನಿರ್ಧಾರಕ್ಕೆ ಮುಂದಾದ ಬಿಸಿಸಿಐ
ಇಂಗ್ಲೆಂಡ್ ಸರಣಿ ಮುಗಿಯುತ್ತಿದ್ದಂತೆ ಕೋಚಿಂಗ್ ಸ್ಟಾಫ್ ಸೇವೆ ಅಂತ್ಯ, ಮಹತ್ವದ ನಿರ್ಧಾರಕ್ಕೆ ಮುಂದಾದ ಬಿಸಿಸಿಐ
ಟೀಂ ಇಂಡಿಯಾ ಕೋಚಿಂಗ್ ಸ್ಟಾಫ್ನಲ್ಲಿ ಮೇಜರ್ ಸರ್ಜರಿಗೆ ಬಿಸಿಸಿಐ ಮುಂದಾಗಿದೆ. ಪ್ರಧಾನ ಕೋಚ್ ಗಂಭೀರ್ ತೀವ್ರ ಟೀಕೆ ಎದುರಿಸುತ್ತಿದ್ದರೆ ಇಂಗ್ಲೆಂಡ್ ವಿರುದ್ಧ ಸರಣಿ ಮುಗಿಯುತ್ತಿದ್ದಂತೆ ಕೋಚಿಂಗ್ ಸ್ಟಾಫ್ ಸೇವೆ ಅಂತ್ಯಗೊಳ್ಳಲಿದೆ.

ಇಬ್ಬರಿಗೆ ಗೇಟ್ ಪಾಸ್
ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲು ಟೀಂ ಇಂಡಿಯಾದಲ್ಲಿನ ಮಹತ್ತರ ಬದಲಾವಣೆಗೆ ಕಾರಣವಾಗುತ್ತಿದೆ. ಹೀನಾಯ ಸೋಲಿನ ಪರಾಮರ್ಶಗಳು ನಡೆಯುತ್ತಿದೆ. ಇದೇ ವೇಳೆ ಕೋಚ್ ಗೌತಮ್ ಗಂಭೀರ್ ಹಾಗೂ ಸಪೋರ್ಟಿಂಗ್ ಕೋಚ್ಗಳು ವಿರುದ್ಧ ಟೀಕೆಗಳು ಹೆಚ್ಚಾಗುತ್ತಿದೆ. ತೀವ್ರ ಟೀಕೆ, ಆರೋಪಗಳ ಕಾರಣ ಬಿಸಿಸಿಐ ಇದೀಗ ಸರ್ಜರಿಗೆ ಮುಂದಾಗಿದೆ. ಅದರಲ್ಲೂ ಇಂಗ್ಲೆಂಡ್ ಸರಣಿ ಮುಗಿಯುತ್ತಿದ್ದಂತೆ ಇಬ್ಬರ ಸೇವೆ ಅಂತ್ಯಗೊಳ್ಳಲಿದೆ.
ಹೊಸ ಕೋಚಿಂಗ್ ಸ್ಟಾಫ್ ಹುಡುಕಾಟ
ಟೀಂ ಇಂಡಿಯಾ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಹಾಗೂ ಅಸಿಸ್ಟೆಂಟ್ ಕೋಚ್ ರ್ಯಾನ್ ಟೆನ್ ಡೊಶೆಟ್ ಸೇವೆ ಇಂಗ್ಲೆಂಡ್ ಸರಣಿ ಮುಗಿಯುತ್ತಿದ್ದಂತೆ ಅಂತ್ಯಗೊಳ್ಳಲಿದೆ. ಇಬ್ಬರ ಸೇವೆ ಮತ್ತೊಂದು ವರ್ಷಕ್ಕೆ ಮುಂದುವರಿಸಲು ಬಿಸಿಸಿಐ ಬಯಸಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ದದ 3 ಏಕದಿನ ಪಂದ್ಯಗಳು ಅಂತ್ಯಗೊಳ್ಳುತ್ತಿದ್ದಂತೆ ಹೊಸ ಕೋಚಿಂಗ್ ಸ್ಟಾಫ್ ನೇಮಕಗೊಳ್ಳುವ ಸಾಧ್ಯತೆ ಇದೆ.
ಇಂಗ್ಲೆಂಡ್ ಸರಣಿ ಮುಗಿಯುತ್ತಿದ್ದಂತೆ ತವರಿಗೆ ಮರಳಲಿದ್ದಾರೆ ಡೊಶೆಟ್
ರ್ಯಾನ್ ಟೆನ್ ಡೊಶೆಟ್ ಅಸೆಸ್ಟೆಂಟ್ ಕೋಚ್ ಅವಧಿ 2 ವರ್ಷ, ಮತ್ತೊಂದು ವರ್ಷಕ್ಕೆ ವಿಸ್ತರಣೆಗೆ ಅವಕಾಶವಿದೆ. ಆದರೆ ಡೊಶೆಟ್ ಈಗಾಗಲೇ ಟೀಂ ಮ್ಯಾನೇಜ್ಮೆಂಟ್ ಹಾಗೂ ಬಿಸಿಸಿಐ ಬಳಿ ತವರಿಗೆ ಮರಳುವುದಾಗಿ ಸೂಚಿಸಿದ್ದಾರೆ ಎನ್ನಲಾಗಿದೆ. ವರ್ಷವಿಡಿ ಟೀಂ ಇಂಡಿಯಾ ಜೊತೆ ಪ್ರಯಾಣ ಮಾಡುವ ಕಾರಣ ಕುಟುಂಬದ ಜೊತೆ ಕಳೆಯಲು ಸಮಯ ಸಿಗುತ್ತಿಲ್ಲ. ಹೀಗಾಗಿ ತಾವು ಮರಳುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಮಾರ್ನೆ ಮಾರ್ಕೆಲ್ ನಿರ್ಧಾರ ನಿಗೂಢ, ಟಿ ದಿಲೀಪ್ಗೆ ಸಂಕಷ್ಟ
ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ನಿರ್ಧಾರ ಇನ್ನೂ ಸ್ಪಷ್ಟವಾಗಿಲ್ಲ. ಮಾರ್ನೆ ಮಾರ್ಕೆಲ್ ಮತ್ತೊಂದು ವರ್ಷಕ್ಕೆ ಅವಧಿ ವಿಸ್ತರಣೆ ಮಾಡುವ ಕುರಿತು ಯಾವುದೇ ನಿರ್ಧಾರ ತಿಳಿಸಿಲ್ಲ. ಇತ್ತ ಬಿಸಿಸಿಐ ಮಹತ್ತರ ಬದಲಾವಣೆಗೆ ಮುಂದಾಗಿದೆ. ಇತ್ತ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಈಗಾಗಲೇ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಸರಣಿ ಮುಗಿಯುತ್ತಿದ್ದಂತೆ ದಿಲೀಪ್ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಈಗಾಗಲೇ ಐಪಿಎಲ್ ಫ್ರಾಂಚೈಸಿ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಜಿಂಬಾಬ್ವೆ ಪ್ರವಾಸಕ್ಕೆ ವಿವಿಎಸ್ ಲಕ್ಷ್ಮಣ್ಗೆ ಜವಾಬ್ದಾರಿ
ಇಂಗ್ಲೆಂಡ್ ಸರಣಿ ಮುಗಿಸಿದ ಬಳಿಕ ಟೀಂ ಇಂಡಿಯಾ ಟಿ20 ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಮಾಡಲಿದೆ. ಈ ಜವಾಬ್ದಾರಿಯನ್ನು ವಿವಿಎಸ್ ಲಕ್ಷ್ಮಣ್ಗೆ ನೀಡಲಾಗಿದೆ. ಜುಲೈ ಅಂತ್ಯದಲ್ಲಿ ಭಾರತ ತಂಡ ಈ ಪ್ರವಾಸ ಮಾಡಲಿದೆ. ಇದರ ನಡುವೆ ಬಿಸಿಸಿಐ ಸಭೆ ಸೇರಿಲಿದೆ.
ಶ್ರೀಲಂಕಾ ಸರಣಿಗೆ ಹೊಸ ಸ್ಟಾಫ್
ಆಗಸ್ಟ್ ಮೊದಲ ವಾರದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಲಿದೆ. ಶ್ರೀಲಂಕಾ ಪ್ರವಾಸಕ್ಕೆ ಹೊಸ ಕೋಚಿಂಗ್ ಸ್ಟಾಫ್ ನೇಮಕಗೊಳ್ಳುವ ಸಾಧ್ಯತೆ ಇದೆ. ಜಿಂಬಾಬ್ವೆ ಪ್ರವಾಸಕ್ಕೆ ಬೌಲಿಂಗ್ ಕೋಚ್ ಆಗಿರುವ ಲಕ್ಷ್ಮೀಪತಿ ಬಾಲಾಜಿಗೆ ಲಂಕಾ ಸರಣಿಯ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

