- Home
- Sports
- Cricket
- ಕೊನೆಗೂ ಬಿಸಿಸಿಐ ಬಳಿ ಕ್ಷಮೆ ಕೇಳಿದ ಮೊಹ್ಸಿನ್ ನಖ್ವಿ, ಆದ್ರೆ ಮತ್ತೆ ಕಂಡೀಷನ್ ಎಂದ ACC ಅಧ್ಯಕ್ಷ!
ಕೊನೆಗೂ ಬಿಸಿಸಿಐ ಬಳಿ ಕ್ಷಮೆ ಕೇಳಿದ ಮೊಹ್ಸಿನ್ ನಖ್ವಿ, ಆದ್ರೆ ಮತ್ತೆ ಕಂಡೀಷನ್ ಎಂದ ACC ಅಧ್ಯಕ್ಷ!
ದುಬೈ: 2025ರ ಏಷ್ಯಾಕಪ್ ಟೂರ್ನಿ ಮುಗಿದು ಎರಡು ದಿನ ಕಳೆದಿದೆ. ಹೀಗಿದ್ದೂ ಏಷ್ಯಾಕಪ್ ಚಾಂಪಿಯನ್ ಭಾರತಕ್ಕೆ ಟ್ರೋಫಿ ಸಿಕ್ಕಿಲ್ಲ. ಇದೆಲ್ಲದರ ನಡುವೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ, ಬಿಸಿಸಿಐ ಕ್ಷಮೆ ಕೋರಿದ್ದಾರೆ. ಆದ್ರೆ ಟ್ರೋಫಿ ನೀಡಲು ಮತ್ತೊಂದು ಕಂಡೀಷನ್ ಹಾಕಿದ್ದಾರೆ.
ಪಾಕ್ ಎದುರು ಭಾರತ ಜಯಭೇರಿ
17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಫೈನಲ್ನಲ್ಲಿ ಬದ್ದ ಎದುರಾಳಿ ಪಾಕಿಸ್ತಾನವನ್ನು 5 ವಿಕೆಟ್ ಗಳಿಂದ ಮಣಿಸಿ ಒಂಬತ್ತನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದ ಭಾರತ
ಆದರೆ ಏಷ್ಯನ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನದ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ನಾವು ಟ್ರೋಫಿ ಸ್ವೀಕರಿಸೊಲ್ಲ ಅಂತ ಭಾರತ ಮೊದಲೇ ತಿಳಿಸಿತ್ತು. ಹೀಗಿದ್ದೂ ಟ್ರೋಫಿ ನೀಡಲು ನಖ್ವಿ ಬಯಸಿದ್ದರಿಂದ, ಭಾರತ ತಂಡ ಏಷ್ಯಾಕಪ್ ಟ್ರೋಫಿ ಸ್ವೀಕರಿಸಿರಲಿಲ್ಲ.
ಮುಖಭಂಗ ಅನುಭವಿಸಿದ ನಖ್ವಿ
ಸ್ವಲ್ಪ ಹೊತ್ತು ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿದ್ದ ನಖ್ವಿ, ತಮಗಾದ ಮುಖಭಂಗದ ಬಳಿಕ ಏಷ್ಯಾಕಪ್ ಟ್ರೋಫಿ, ಮೆಡಲ್ ಸಹಿತ ತಾವಿದ್ದ ಹೋಟೆಲ್ಗೆ ವಾಪಾಸ್ಸಾಗಿದ್ದರು. ನಖ್ವಿಯ ಈ ನಡೆಯನ್ನು ಟೀಂ ಇಂಡಿಯಾ ಆಟಗಾರರು ಹಾಗೂ ಬಿಸಿಸಿಐ ಬಲವಾಗಿ ಖಂಡಿಸಿತ್ತು.
ಟ್ರೋಫಿ ಇಲ್ಲದೇ ಭಾರತ ಸಂಭ್ರಮಾಚರಣೆ
ಇನ್ನು ಟೀಂ ಇಂಡಿಯಾ ಆಟಗಾರರು ಟ್ರೋಫಿ ಇಲ್ಲದೆಯೂ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಬರಿಗೈನಲ್ಲೇ ಚಾಂಪಿಯನ್ನರ ಸಂಭ್ರಮಾಚರಣೆ ಮಾಡಿ ಗಮನ ಸೆಳೆದಿದ್ದರು.
ಬಿಸಿಸಿಐ ಎದುರು ಮಂಡಿಯೂರಿದ ನಖ್ವಿ
ಮಂಗಳವಾರ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಮೊಹ್ಸಿನ್ ನಖ್ವಿಯವರ ಈ ಹಠಮಾರಿ ಧೋರಣೆಯನ್ನು ಬಿಸಿಸಿಐ ಖಂಡಿಸಿತ್ತು. ಇದಾದ ಬಳಿಕ ನಖ್ವಿ ಬಿಸಿಸಿಐ ಎದುರು ಮಂಡಿಯೂರಿದ್ದಾರೆ.
ತಪ್ಪು ಒಪ್ಪಿಕೊಂಡ ನಖ್ವಿ
ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡ ನಖ್ವಿ, ಏನಾಗಿದೆಯೋ ಅದು ಸರಿಯಲ್ಲ, ಈ ರೀತಿ ಆಗಬಾರದಿತ್ತು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರು ಬಿಸಿಸಿಐ ಬಳಿ ಕ್ಷಮೆಯಾಚಿಸಿದ್ದಾರೆ.
ಮತ್ತೆ ಕಂಡೀಷನ್ ಹಾಕಿದ ನಖ್ವಿ
ಇನ್ನು ಟ್ರೋಫಿ ನೀಡುವ ವಿಚಾರವಾಗಿ ಮಾತನಾಡಿರುವ ನಖ್ವಿ, ಸೂರ್ಯಕುಮಾರ್ ಯಾದವ್ ದುಬೈಗೆ ಬಂದು ಏಷ್ಯಾಕಪ್ ಟ್ರೋಫಿ ಹಾಗೂ ಮೆಡಲ್ಗಳನ್ನು ತೆಗೆದುಕೊಂಡು ಹೋಗಲಿ ಎಂದು ಕಂಡೀಷನ್ ಹಾಕಿದ್ದಾರೆ.