- Home
- Entertainment
- Cine World
- ಸಂಗೀತ ನಿರ್ದೇಶಕನ ಲೈಂ*ಗಿಕ ಕಿರುಕುಳದಿಂದ ಹಾಡುವುದನ್ನೇ ಬಿಟ್ಟೆ: ಗಾಯಕಿ ಸ್ವಾಗತಾ ಕೃಷ್ಣನ್
ಸಂಗೀತ ನಿರ್ದೇಶಕನ ಲೈಂ*ಗಿಕ ಕಿರುಕುಳದಿಂದ ಹಾಡುವುದನ್ನೇ ಬಿಟ್ಟೆ: ಗಾಯಕಿ ಸ್ವಾಗತಾ ಕೃಷ್ಣನ್
ಖ್ಯಾತ ಗಾಯಕಿ ಸ್ವಾಗತಾ ಕೃಷ್ಣನ್ ಅವರು, ಓರ್ವ ಸಂಗೀತ ನಿರ್ದೇಶಕರಿಂದ ತಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ, ಇದೇ ಕಾರಣಕ್ಕೆ ಸಂಗೀತ ಕ್ಷೇತ್ರವನ್ನೇ ತೊರೆದೆ ಎಂದು ಸ್ಫೋಟಕ ಹೇಳಿಕೆ ನೀಡಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಚಿತ್ರರಂಗದ ಅನೇಕ ನಟ-ನಟಿಯರು ಮತ್ತು ಮಹಿಳೆಯರು ತಮಗೆ ವೃತ್ತಿಪರವಾಗಿ ಆಗುವ ಅನ್ಯಾಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಅದರಲ್ಲೂ 2018-19ರಲ್ಲಿ, #MeToo ಹ್ಯಾಶ್ಟ್ಯಾಗ್ ಮೂಲಕ ಗಾಯಕಿ ಚಿನ್ಮಯಿ ಅವರು ಕವಿ ವೈರಮುತ್ತು ವಿರುದ್ಧ ಮಾಡಿದ ಆರೋಪಗಳು ಇಂದಿಗೂ ಚರ್ಚೆಯಲ್ಲಿದೆ.
ಈ ನಡುವೆ, ಖ್ಯಾತ ಗಾಯಕಿ ಮತ್ತು ಬಿಗ್ಬಾಸ್ ಖ್ಯಾತಿಯ ಮಾಯಾ ಕೃಷ್ಣನ್ ಅವರ ಸಹೋದರಿ ಸ್ವಾಗತಾ ಕೃಷ್ಣನ್, ಇದೀಗ ಓರ್ವ ಪ್ರಸಿದ್ಧ ಸಂಗೀತ ನಿರ್ದೇಶಕನ ಮೇಲೆ ಗಂಭೀರ ಲೈಂಗಿಕ ಆರೋಪ ಮಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, 'ನಾನು ಕ್ರೂರ ಲೈಂಗಿಕ ಕಿರುಕುಳಕ್ಕೆ ಬಲಿಯಾದೆ. ಈ ಕೆಟ್ಟ ಅನುಭವದಿಂದಾಗಿಯೇ ನಾನು ಸಂಗೀತ ಕ್ಷೇತ್ರದಿಂದ ಸಂಪೂರ್ಣವಾಗಿ ದೂರ ಉಳಿದೆ. ಸದ್ಯ ರಿಷಿಕೇಶದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದರೂ, ಆ ಘೋರ ಘಟನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಆ ಖ್ಯಾತ ಸಂಗೀತ ನಿರ್ದೇಶಕ ಒಬ್ಬಳನ್ನಲ್ಲ, ಹಲವು ಮಹಿಳೆಯರನ್ನು ಹಾಳುಮಾಡಿದ್ದಾನೆ' ಎಂದು ಸ್ವಾಗತಾ ಹೇಳಿದ್ದಾರೆ.
ಸ್ವಾಗತಾ ಮಾತು ಮುಂದುವರಿಸಿ, 'ಒಮ್ಮೆ ಆಸ್ತಿ ಮಾರಿದ ಹಣ ನನ್ನ ಬಳಿ ಇದೆ ಎಂದು ಅವನಿಗೆ ಹೇಳಿದ್ದೆ. ಆಗ ಆತ, ಬಡ್ಡಿ ಸಮೇತ ವಾಪಸ್ ಕೊಡುವುದಾಗಿ ಹೇಳಿ ಹಲವು ಕಾರಣಗಳನ್ನು ನೀಡಿ ನನ್ನಿಂದ ಹಣ ಪಡೆದ. ಆ ಹಣದಲ್ಲಿ ಮನೆ, ಐಷಾರಾಮಿ ಕಾರು ಖರೀದಿಸಿ ಎಂಜಾಯ್ ಮಾಡಿದ. ಅವನ ಹೆಂಡತಿಗೆ ಐಫೋನ್ ಕೊಡಿಸಿದ್ದೂ ನಾನೇ. ಇದಕ್ಕೆ ಪ್ರತಿಯಾಗಿ, ಆತ ನನಗೆ ಹಾಡಲು ಕೆಲವು ಹಾಡುಗಳನ್ನು ಕೊಟ್ಟ. ಈ ಎಲ್ಲವನ್ನೂ ಅವನ ಕುಟುಂಬದವರೂ ಸೇರಿಯೇ ಮಾಡಿದರು' ಎಂದು ವಿವರಿಸಿದ್ದಾರೆ.
‘7 ವರ್ಷಗಳ ಹಿಂದೆ, ಒಂದು ದಿನ ಸ್ಟುಡಿಯೋದಲ್ಲಿಯೇ ನನ್ನ ಮೇಲೆ ಬಲವಂತವಾಗಿ ಅತ್ಯಾ*ಚಾರ ಎಸಗಿದ. ಅದನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡು, ಈ ವಿಷಯವನ್ನು ಯಾರಿಗೂ ಹೇಳಬಾರದು, ಹೇಳಿದರೆ ಎಲ್ಲರಿಗೂ ತೋರಿಸುತ್ತೇನೆ ಎಂದು ಬ್ಲ್ಯಾಕ್ಮೇಲ್ ಮಾಡಿದ. ಸೌಂಡ್ ಪ್ರೂಫ್ ರೂಮ್ನಲ್ಲಿ ಈ ಘಟನೆ ನಡೆಯಿತು. ಆತ ಹಲವು ಸೀಕ್ರೆಟ್ ಕ್ಯಾಮೆರಾಗಳನ್ನು ಇಟ್ಟಿದ್ದ. ನನ್ನ ಬಗ್ಗೆ ತಪ್ಪು ಮಾಹಿತಿ ಹಬ್ಬಿಸಿದ. ಅವನ ಹೆಂಡತಿಯೂ ಅವನೊಂದಿಗೆ ಸೇರಿ ನನಗೆ ಮೋಸ ಮಾಡಿದಳು' ಎಂದು ಸ್ವಾಗತಾ ಆರೋಪಿಸಿದ್ದಾರೆ.
‘ಅವನು ಇದೇ ರೀತಿ ಹಲವು ಮಹಿಳೆಯರ ವಿಡಿಯೋಗಳನ್ನು ನೋಡುತ್ತಿರುತ್ತಾನೆ. ಮಕ್ಕಳ ವಿಡಿಯೋಗಳನ್ನೂ ನೋಡುತ್ತಾನೆ. ಅಮೆರಿಕದಲ್ಲಿ ಎಪ್ಸ್ಟೀನ್ ಫೈಲ್ಸ್ ಬಗ್ಗೆ ಮಾತನಾಡುತ್ತಾರೆ. ಆದರೆ ಅದರ ರಾಜನೇ ಮದ್ರಾಸ್ನಲ್ಲಿದ್ದಾನೆ. ನಾನು ಕೊಟ್ಟ ಕೋಟ್ಯಂತರ ರೂಪಾಯಿ ಹಣವನ್ನು ವಾಪಸ್ ಕೇಳಿದರೆ, ನಾನು ಸೌಂಡ್ ಕಾರ್ಡ್ ಕದ್ದಿದ್ದೇನೆ ಎಂದು ಸುಳ್ಳು ಆರೋಪ ಮಾಡುತ್ತಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ನನಗೆ ಧೈರ್ಯವಿರಲಿಲ್ಲ. ಒಬ್ಬ ಮಹಿಳೆ ಇವನಿಂದ ಗರ್ಭಿಣಿಯಾಗಿ, ಗರ್ಭಪಾತ ಮಾಡಿಸಿಕೊಂಡಿದ್ದಾಳೆ. ಈ ವಿಷಯವನ್ನು ಆ ಮಹಿಳೆಯೇ ನನಗೆ ಮೆಸೇಜ್ ಮೂಲಕ ತಿಳಿಸಿದ್ದಳು. ಇದಕ್ಕೆಲ್ಲ ಅವನ ಹೆಂಡತಿಯೂ ಸಹಕರಿಸಿದ್ದಾಳೆ' ಎಂದು ಸ್ವಾಗತಾ ಹೇಳಿದ್ದಾರೆ.
‘ಇಂಥವನಿಗೆ ಪ್ರಶಸ್ತಿಗಳನ್ನು ಕೊಡುತ್ತಾರೆ. ಬೇರೆಯವರ ಕೆಲಸಕ್ಕೆ ಇವನು ಪ್ರಶಸ್ತಿ ಪಡೆಯುತ್ತಾನೆ. ಅವನಿಗೆ ಪಿಯಾನೋ ನುಡಿಸಲೂ ಬರುವುದಿಲ್ಲ. ನಂತರ ನಮ್ಮ ಮನೆಗೆ ಬಂದು ಈ ವಿಷಯವನ್ನು ಯಾರಿಗೂ ಹೇಳಬೇಡ ಎಂದು ಕಾಲಿಗೆ ಬಿದ್ದು ಅಂಗಲಾಚಿದ. ಈ ಪರಿಸ್ಥಿತಿಯಲ್ಲಿ ನನಗೆ ಬೆಂಬಲವಾಗಿ ನಿಂತು ನನ್ನನ್ನು ಕಾಪಾಡಿದ್ದು ನನ್ನ ಸಹೋದರಿ ಮಾಯಾ ಮಾತ್ರ’ ಎಂದು ಸ್ವಾಗತಾ ತಿಳಿಸಿದ್ದಾರೆ.
ಈ ಸಂದರ್ಶನದಲ್ಲಿ ಸ್ವಾಗತಾ, ಜಿ.ವಿ. ಪ್ರಕಾಶ್, ಜಿಬ್ರಾನ್, ಅನಿರುದ್ಧ್, ಇಮಾನ್ ಅವರಂತಹ ಸಂಗೀತ ನಿರ್ದೇಶಕರು ಅತ್ಯಂತ ವೃತ್ತಿಪರರು ಎಂದು ಹೊಗಳಿದ್ದಾರೆ. ಹಾಗಾಗಿ ಈ ಪಟ್ಟಿಯಲ್ಲಿರುವವರು ಆರೋಪಿಗಳಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ಆ ಪ್ರಮುಖ ಆರೋಪಿ ಯಾರು ಎಂಬುದೇ ಇದೀಗ ಅಭಿಮಾನಿಗಳ ಪ್ರಶ್ನೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

