'ಮರ್ಡರ್' ಮಾಡಲು ಹೋದ RGVಗೆ ಕಾನೂನಿನ ಕುಣಿಕೆ
ಹೈದರಾಬಾದ್ (ಜು. 05) ದಕ್ಷಿಣ ಭಾರತದ ಹೆಸರಾಂತ ನಿರ್ದೇಶಕ, ಆಗಾಗ ವಿವಾದಿತ ಹೇಳಿಕೆ ನೀಡುವ ರಾಮ್ ಗೋಪಾಲ್ ವರ್ಮಾ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ತೆಲಂಗಾಣದ ಮರ್ಯಾದಾ ಹತ್ಯೆ ವಿಚಾರವನ್ನು ಸಿನಿಮಾ ಮಾಡಲು ಹೊರಟ ವರ್ಮಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸತ್ಯ ಕತೆ ಆಧರಿಸಿ ಸಿನಿಮಾ ಮಾಡಲು ಹೋದ ರಾಮ್ ಗೋಪಾಲ್ ವರ್ಮಾ ಕಾನೂನಿನ ಸಂಕಷ್ಟ ಎದುರಿಸಬೇಕಾಗಿ ಬಂದಿದೆ.
ತೆಲಂಗಾಣದಲ್ಲಿ 2018ರಲ್ಲಿ ನಡೆದ ಮರ್ಯಾದಾ ಹತ್ಯೆ ಘಟನೆ ಆಧರಿಸಿ ನಿರ್ದೇಶಕ ಹಾಗೂ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದರು.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಒಂದನ್ನು ಶೇರ್ ಮಾಡಿ ಅಭಿಮಾನಿಗಳಿಗೆ ವಿಷಯ ತಿಳಿಸಿದ್ದರು.
ಮರ್ಡರ್ ಹೆಸರಿನಲ್ಲಿ ಸಿನಿಮಾ ನಿರ್ಮಿಸುತ್ತಿದ್ದೇನೆ, ಇದೊಂದು ಸತ್ಯ ಕತೆ ಆಧಾರಿತ ಸಿನಿಮಾ ಎಂದಿದ್ದರು.ಅಂತರ್ ಜಾತಿ ವಿವಾಹವೊಂದು ದುರಂತ ಅಂತ್ಯವಾದ ಸ್ಟೋರಿ ಇದರ ಬೇಸ್ ಆಗಿತ್ತು.
ಪರಸ್ಪರ ಪ್ರೀತಿ ಮಾಡುತ್ತಿದ್ದ ಅಮೃತ ಮತ್ತು ಪ್ರಣಯ್ ಕುಮಾರ್ ಮದುವೆಯಾಗಿದ್ದರು. ಆದರೆ ಈ ಮದುವೆಗೆ ಅಮೃತಾ ತಂದೆ ಮಾರುತಿ ರಾವ್ರ ವಿರೋಧ ಇತ್ತು.
ಮದುವೆಯ ನಂತರ ಗರ್ಭಿಣಿಯಾಗಿದ್ದ ಪತ್ನಿಯನ್ನು ಪ್ರಣಯ್ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭ ಆತನ ಹತ್ಯೆ ಮಾಡಲಾಗಿತ್ತು.
ಅಮೃತಾ ತಂದೆ ಮಾರುತಿರಾವ್ ಸುಪಾರಿ ನೀಡಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗಲೆ ಮಾರ್ಚ್ ತಿಂಗಳಿನಲ್ಲಿ ಮಾರುತಿ ರಾವ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು.
ಪ್ರಕರಣ ಇನ್ನು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗ ಈ ಕುರಿತು ಸಿನಿಮಾ ಮಾಡುವುದು ಸರಿಯಲ್ಲ ಎಂದು ಪ್ರಸ್ತಾಪಿಸಿ ಪ್ರಣಯ್ ತಂದೆ ಬಾಲಾಸ್ವಾಮಿ ಇದೀಗ ನ್ಯಾಯಾಲಯಕ್ಕೆ ಕೇಳಿಕೊಂಡಿದ್ದರು.,
ಅನುಮತಿಯಿಲ್ಲದೇ ನಮಗೆ ಸಂಬಂಧಿಸಿದ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಬಾಲಾಸ್ವಾಮಿ ಮನವಿ ಮೇರೆಗೆ ನ್ಯಾಯಾಲಯ ರಾಮ್ ಗೋಪಾಲ್ ವರ್ಮಾ ಸಿನಿಮಾದ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂ.21 ರಂದು ಅಪ್ಪಂದಿರ ದಿನದಂದು ರಾಮ್ ಗೋಪಾಲ್ ವರ್ಮಾ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದರು.