ನೀರವ್ ಮೋದಿ ತರ ದೇಶ ಬಿಟ್ಟೋದ್ರೆ ಕಷ್ಟ: ಕುಂದ್ರಾಗೆ ಬೇಲ್ ಇಲ್ಲ
- ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು ಇಲ್ಲ, ಜೈಲು ಅವಧಿ ವಿಸ್ತರಣೆ
- ಜಾಮೀನು ಕೊಟ್ಟು ದೇಶ ಬಿಟ್ಟೋದ್ರೆ ಕಷ್ಟ ಎಂದ ಮುಂಬೈ ಪೊಲೀಸರು
ಪೋರ್ನ್ ವಿಡಿಯೋ ನಿರ್ಮಾಣ ಹಾಗೂ ಮಾರಾಟ ದಂಧೆಯಲ್ಲಿ ಜೂನ್ನಲ್ಲಿ ಬಂಧನಕ್ಕೊಳಗಾದ ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು ನೀಡುವುದನ್ನು ಮುಂಬೈ ಪೊಲೀಸರು ಆಕ್ಷೇಪಿಸಿದ್ದಾರೆ. ಶಿಲ್ಪಾ ಶೆಟ್ಟಿ ಪತಿಗೆ ಜಾಮೀನು ಕೊಟ್ಟರೆ ಅದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ ಎಂದಿದ್ದಾರೆ.
ರಾಜ್ ಕುಂದ್ರಾ ಜು.27ರಂದು ರಿಲೀಸ್ ಆಗಬೇಕಿತ್ತು. ಆದರೆ ಅವರ ನ್ಯಾಯಾಂಗ ಬಂಧನವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಇದೀಗ ಮತ್ತೆ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಕುಂದ್ರಾಗೆ ಜಾಮೀನು ನೀಡುವುದನ್ನು ಮುಂಬೈ ಪೊಲೀಸರು ವಿರೋಧಿಸಿದ್ದಾರೆ.
ಕುಂದ್ರಾ ಬಿಡುಗಡೆಯಾದರೆ ಮತ್ತೆ ತನ್ನ ದಂಧೆ ಮುಂದುವರಿಸುವ ಸಾಧ್ಯತೆ ಇದ್ದು, ಹಾಗೆಯೇ ತಪ್ಪಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ ಎಂಬ ಆತಂಕವನ್ನೂ ಪೊಲೀಸರು ಕೋರ್ಟ್ ಮುಂದಿಟ್ಟಿದ್ದಾರೆ.
ಜಾಮೀನಿಗಾಗಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ, ಪೊಲೀಸರು ಎಪ್ರಿಲ್ನಲ್ಲಿ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಆದರೆ ಆ ಚಾರ್ಜ್ ಶೀಟ್ನಲ್ಲಿ ಕುಂದ್ರಾ ಹೆಸರಿಲ್ಲ, ಹಾಗೆಯೇ ಕೇಸ್ಗೆ ಸಂಬಂಧಿಸಿದ ಇತರ ಎಫ್ಐಆರ್ನಲ್ಲಿಯೂ ಕುಂದ್ರಾ ಹೆಸರಿಲ್ಲ. ಚಾರ್ಜ್ಶೀಟ್ನಲ್ಲಿ ಹೆಸರಿದ್ದವರೇ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎಂದು ಹೇಳಲಾಗಿದೆ.
ಸಂಪೂರ್ಣ ಆದೇಶವು ಪ್ರಕರಣದ ಕುರಿತ ಊಹೆಗಳನ್ನು ಆಧರಿಸಿವೆ. ಅದನ್ನು ಬದಿಗಿರಿಸಬಹುದಾಗಿದೆ. ಕುಂದ್ರಾ ವಿರುದ್ಧ ಅಪರಾಧದಲ್ಲಿ ಭಾಗಿಯಾಗಿರುವುದನ್ನು ತೋರಿಸಲು ಯಾವುದೇ ವಸ್ತು ಇಲ್ಲ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು, ಅಪರಾಧ ಗಂಭೀರವಾಗಿದೆ. ಈಗಲೂ ವಿಡಿಯೋ ಎಲ್ಲಿ ಅಪ್ಲೋಡ್ ಆಗಿದೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಒಂದು ವೇಳೆ ಜಾಮಿನು ನೀಡಿದರೆ ಕುಂದ್ರಾ ಮತ್ತದೇ ತಪ್ಪುಗಳನ್ನು ಆವರ್ತಿಸಬಹುದು. ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಬಹುದು. ಇದು ನಮ್ಮ ಸಮಾಯ, ಸಂಸ್ಕೃತಿ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ ಸಮಾಜಕ್ಕೂ ಕೆಟ್ಟ ಸಂದೇಶ ಹೋಗುತ್ತದೆ ಎಂದಿದ್ದಾರೆ
ಬ್ರಿಟಿಷ್ ಪ್ರಜೆಯಾಗಿರುವ ಕುಂದ್ರಾಗೆ ಜಾಮೀನು ನೀಡಿದರೆ ಆತ ದೇಶಬಿಟ್ಟು ತಪ್ಪಿಸಿಕೊಳ್ಳಬಹುದು. ಭಾರತದ ಹೊರಗಿದ್ದು ವಿಡಿಯೋ ಅಪ್ಲೋಡ್ ಮಾಡುವುದಮ್ಮಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದಿದ್ದಾರೆ ಪೊಲೀಸರು.
ಸಂತ್ರಸ್ತರೆಲ್ಲರೂ ಕಷ್ಟದ ಆರ್ಥಿಕ ಹಿನ್ನೆಲೆ ಇರುವವರಾಗಿದ್ದು, ಕುಂದ್ರಾ ಬಿಡುಗಡೆಯಾದರೆ ಅವರು ಸಾಕ್ಷಿ ಸಮೇತ ಮುಂದೆ ಬರುವ ಸಾಧ್ಯತೆ ಕಮ್ಮಿ ಇದೆ ಎಂದು ಪೊಲೀಸರು ಹೇಳಿದ್ದಾರೆ.
ನ್ಯಾಯಾಲಯವು ಆಗಸ್ಟ್ 20 ರಂದು ವಿಚಾರಣೆ ಮುಂದೂಡಿದೆ. ಇನ್ನೊಂದು ಬೆಳವಣಿಗೆಯಲ್ಲಿ ಕಳೆದ ವರ್ಷ ಮುಂಬೈ ಪೊಲೀಸರು ಅಶ್ಲೀಲ ವಿಷಯಕ್ಕೆ ಸಂಬಂಧಿಸಿದಂತೆ ದಾಖಲಿಸಿದ್ದ ಪ್ರಕರಣದಲ್ಲಿ ಮಂಗಳವಾರದ ಸೆಷನ್ಸ್ ನ್ಯಾಯಾಲಯವು ಕುಂದ್ರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.