ಜೈಲಿನಲ್ಲಿ ರಾಮ-ಸೀತೆಯ ಧಾರ್ಮಿಕ ಪುಸ್ತಕ ಓದುತ್ತಿದ್ದಾರೆ ಆರ್ಯನ್ ಖಾನ್
- ಜೈಲು ಗ್ರಂಥಾಲಯದಿಂದ ಧಾರ್ಮಿಕ ಪುಸ್ತಕ ಕೊಂಡು ಓದುತ್ತಿರುವ ಅರ್ಯನ್ ಖಾನ್
- ಲೈಬ್ರರಿಯಿಂದ ಧರ್ಮಕ್ಕೆ ಸಂಬಂಧಿಸಿದ ಪುಸ್ತಕ ತೆಗೆದುಕೊಂಡ ಸ್ಟಾರ್ ಕಿಡ್
ಬಾಲಿವುಡ್ ನಟ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಜೈಲಿನಲ್ಲಿ ಧಾರ್ಮಿಕ ಪುಸ್ತಕಗಳನ್ನು ಓದುತ್ತಿದ್ದಾರೆ ಎಂದು ಹೇಳಲಾಗಿದೆ. ಐಷರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಸಂಬಂಧ ಎನ್ಸಿಬಿಯಿಂದ ಅರೆಸ್ಟ್ ಆಗಿ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ಖಾನ್ಗೆ ಈಗಾಗಲೇ ಹಲವು ಬಾರಿ ಜಾಮೀನು ನಿರಾಕರಿಸಲಾಗಿದೆ.
![article_image2](https://static-ai.asianetnews.com/images/01fjnqtvjhhhwf8y9xt2hka2et/aryan-khan-2_300x169xt.jpg)
ಜೈಲು ಆಡಳಿತದ ಪ್ರಕಾರ ಜಾಮೀನು ತಿರಸ್ಕರಿಸಿದ ನಂತರ ಆರ್ಯನ್ ಖಾನ್ ಜೈಲಿನಲ್ಲಿ ಆತಂಕದಲ್ಲಿದ್ದರು. ಆ ಸಂದರ್ಭ ಜೈಲಿನ ಅಧಿಕಾರಿಗಳು ಅವನಿಗೆ ಗ್ರಂಥಾಲಯ(Library) ಪುಸ್ತಕಗಳನ್ನು ಓದಲು ಸೂಚಿಸಿದ್ದರು.
ಇದಕ್ಕೆ ಅನುಗುಣವಾಗಿ ಆರ್ಯನ್ಗೆ ಲೈಬ್ರರಿಯಿಂದ ಪುಸ್ತಕಗಳನ್ನು ನೀಡಲಾಗಿದೆ. ಕಳೆದ ಎರಡು ದಿನಗಳಲ್ಲಿ ಆರ್ಯನ್ ಖಾನ್ ರಾಮ ಹಾಗೂ ಸೀತೆಯ ಕುರಿತ ಪುಸ್ತಕ ಓದಿದ್ದಾರೆ. ಅದಕ್ಕೂ ಮೊದಲು ಲಯನ್ಸ್ ಗೇಟ್ ಎಂಬ ಪುಸ್ತಕ ಓದಿದ್ದರು.
ಜೈಲು ಆಡಳಿತದ ಪ್ರಕಾರ ಖೈದಿ ತನ್ನ ಸಂಬಂಧಿಕರಿಂದ ಪುಸ್ತಕ ತರಿಸಿಕೊಂಡು ಓದಬಹುದು. ಆದರೆ ಧಾರ್ಮಿಕ ಪುಸ್ತಕಗಳಿಗೆ ಮಾತ್ರ ಅವಕಾಶವಿದೆ.
ಕೈದಿ ಬಿಡುಗಡೆಯಾಗಿ ಹೋಗುವಾಗ ಆತ ತರಿಸಿಕೊಂಡಿದ್ದ ಪುಸ್ತಕ ಬಿಟ್ಟುಹೋದರೆ ಅದನ್ನು ಜೈಲು ಗ್ರಂಥಾಲಯಕ್ಕೆ ಸೇರಿಸಲಾಗುತ್ತದೆ.
ಐಷರಾಮಿ ಹಡಗಿನಲ್ಲಿ ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ಮಾದಕದ್ರವ್ಯ ಔಷಧಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ (ಎನ್ಡಿಪಿಎಸ್) ನ್ಯಾಯಾಲಯವು ಆರ್ಯನ್ ಖಾನ್ ಮತ್ತು ಇತರರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 30 ರವರೆಗೆ ವಿಸ್ತರಿಸಿದೆ.
ಬುಧವಾರ ಮುಂಜಾನೆ ವಿಶೇಷ ನ್ಯಾಯಾಲಯವು ಆರ್ಯನ್ ಖಾನ್ ಮತ್ತು ಇತರ ಇಬ್ಬರಿಗೆ ಡ್ರಗ್ಸ್ ವಶಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಲು ನಿರಾಕರಿಸಿತು. ಇದರ ಬೆನ್ನಲ್ಲೇ ಆರ್ಯನ್ ಖಾನ್ ತನ್ನ ಜಾಮೀನು ತಿರಸ್ಕಾರದ ಕುರಿತು ಎನ್ಡಿಪಿಎಸ್ ನ್ಯಾಯಾಲಯದ ಆದೇಶದ ವಿರುದ್ಧ ಬಾಂಬೆ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು.
ಬಾಂಬೆ ಹೈಕೋರ್ಟ್ ಅಕ್ಟೋಬರ್ 26 ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ. ಎನ್ಸಿಬಿ ತಂಡವು ಅಕ್ಟೋಬರ್ 2 ರಂದು ಗೋವಾಕ್ಕೆ ತೆರಳುತ್ತಿದ್ದ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮೇಲೆ ದಾಳಿ ಮಾಡಿತ್ತು.