'ನೀನು ವಿಲನ್ ಅಲ್ಲ, ಆ್ಯಂಟಿ ಹೀರೋ': 'ಲೆನಿನ್' ಪಾತ್ರದ ಹಿಂದಿನ ಕಥೆ ಹೇಳಿದ ನಟ ಪ್ರಮೋದ್
ಭರ್ಜರಿ ಪ್ರದರ್ಶನ ಕಾಣುತ್ತಿರುವ ಅಖಿಲ್ ಅಕ್ಕಿನೇನಿ ಅಭಿನಯದ 'ಲೆನಿನ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಚಿತ್ರದೊಂದಿಗೆ ಕನ್ನಡದ ನಟ ಪ್ರಮೋದ್ ಕೂಡ ಗಮನ ಸೆಳೆದಿದ್ದಾರೆ.

ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ
ಟಾಲಿವುಡ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಅಖಿಲ್ ಅಕ್ಕಿನೇನಿ ಅಭಿನಯದ 'ಲೆನಿನ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಚಿತ್ರದೊಂದಿಗೆ ಕನ್ನಡದ ನಟ ಪ್ರಮೋದ್ ಕೂಡ ಗಮನ ಸೆಳೆದಿದ್ದಾರೆ. ಸಿನಿಮಾದಲ್ಲಿ 'ವಸಂತ್' ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಮೋದ್ ಅವರ ಅಭಿನಯಕ್ಕೆ ಪ್ರೇಕ್ಷಕರು ಮತ್ತು ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದುವರೆಗೆ ವಿಲನ್ ಪಾತ್ರ ಮಾಡಿಲ್ಲ
ಚಿತ್ರದ ಯಶಸ್ಸಿನ ಸಂಭ್ರಮದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಪ್ರಮೋದ್, 'ಲೆನಿನ್' ಸಿನಿಮಾದಲ್ಲಿ ತಮ್ಮ ಪಾತ್ರ ಹೇಗೆ ಸಿಕ್ಕಿತು ಎಂಬ ಕುತೂಹಲಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನಿರ್ದೇಶಕ ಮುರಳಿ ಕಿಶೋರ್ ಅಬ್ಬೂರು ಕಥೆ ಹೇಳಿದ ಕ್ಷಣವನ್ನು ನೆನಪಿಸಿಕೊಂಡ ಪ್ರಮೋದ್, "ವಸಂತ್ ಪಾತ್ರದ ಕಥೆ ಕೇಳಿದ ಕೂಡಲೇ ನಾನು ಸಂಪೂರ್ಣವಾಗಿ ಬೆರಗಾದೆ. ಪಾತ್ರದ ಆಳ, ಅದರ ಪಯಣ ಮತ್ತು ಕಥೆಯಲ್ಲಿನ ಮಹತ್ವ ನನ್ನನ್ನು ತುಂಬಾ ಆಕರ್ಷಿಸಿತು. ಈ ಪಾತ್ರವನ್ನು ನಾನೇ ಮಾಡಬೇಕು ಎಂದು ಮನಸ್ಸಿನಲ್ಲಿ ತೀರ್ಮಾನಿಸಿದ್ದರೂ, ನಾನು ಇದುವರೆಗೆ ವಿಲನ್ ಪಾತ್ರ ಮಾಡಿಲ್ಲ ಎಂದು ನಿರ್ದೇಶಕರಿಗೆ ಹೇಳಿದೆ" ಎಂದು ತಿಳಿಸಿದ್ದಾರೆ.
ನನ್ನ ಕಥೆಯ ಆ್ಯಂಟಿ ಹೀರೋ
ಅದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕರು, "ಇದು ವಿಲನ್ ಪಾತ್ರವಲ್ಲ ಬ್ರದರ್... ನೀನು ನನ್ನ ಕಥೆಯ ಆ್ಯಂಟಿ ಹೀರೋ" ಎಂದು ಹೇಳಿದ ಕ್ಷಣವೇ ನಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಆರಂಭವಾಯಿತು. ಅಲ್ಲಿಂದಲೇ 'ವಸಂತ್' ಪಾತ್ರದ ಪಯಣ ಶುರುವಾಯಿತು ಎಂದು ಪ್ರಮೋದ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಮುಂದುವರಿದು, "ಇಂದು ತೆಲುಗು ಪ್ರೇಕ್ಷಕರು ನನ್ನ ಪಾತ್ರಕ್ಕೆ ನೀಡುತ್ತಿರುವ ಪ್ರೀತಿ ಮತ್ತು ಮೆಚ್ಚುಗೆ ನನ್ನ ಮನಸ್ಸನ್ನು ತುಂಬಿದೆ. ನನ್ನ ಮೇಲೆ ನಂಬಿಕೆ ಇಟ್ಟು ಈ ಅವಕಾಶ ನೀಡಿದ ನಿರ್ದೇಶಕ ಕಿಶೋರ್ ಅಬ್ಬೂರು, ನಾಗಾರ್ಜುನ ಸರ್, ಅಖಿಲ್ ಅಣ್ಣ ಹಾಗೂ ಅನ್ನಪೂರ್ಣ ಸ್ಟುಡಿಯೋಸ್ಗೆ ನಾನು ಸದಾ ಋಣಿಯಾಗಿರುತ್ತೇನೆ" ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಉತ್ತಮ ಪ್ರತಿಕ್ರಿಯೆ
'ಲೆನಿನ್' ಸಿನಿಮಾದಲ್ಲಿ ಅಖಿಲ್ ಅಕ್ಕಿನೇನಿ ನಾಯಕನಾಗಿ ನಟಿಸಿದ್ದರೆ, ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಹಿರಿಯ ನಟರಾದ ಶಿವಾಜಿ, ಸುನೀಲ್, ಬ್ರಹ್ಮಾಜಿ, ಈಶ್ವರಿ ರಾವ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಪ್ರತಿಯೊಬ್ಬರ ಅಭಿನಯಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಟ್ಟಾರೆ, 'ಲೆನಿನ್' ಚಿತ್ರದ ಯಶಸ್ಸಿನೊಂದಿಗೆ ಪ್ರಮೋದ್ ಅವರ ವಸಂತ್ ಪಾತ್ರವೂ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದು, ತೆಲುಗು ಚಿತ್ರರಂಗದಲ್ಲೂ ಅವರ ನಟನಾ ಸಾಮರ್ಥ್ಯಕ್ಕೆ ಹೊಸ ಗುರುತನ್ನು ತಂದುಕೊಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

