ಭಾರತಕ್ಕೆ 5 ಚಿನ್ನದ ಪದಕ ತಂದುಕೊಟ್ಟ ಮಾಧವನ್ ಪುತ್ರ; ಸೂರ್ಯ, ಅನುಷ್ಕಾ ಸೇರಿದಂತೆ ಅನೇಕರಿಂದ ಅಭಿನಂದನೆಯ ಮಹಾಪೂರ
ಭಾರತಕ್ಕೆ 5 ಚಿನ್ನದ ಪದಕ ತಂದುಕೊಟ್ಟ ಮಾಧವನ್ ಪುತ್ರನಿಗೆ ನಟ ಸೂರ್ಯ, ಅನುಷ್ಕಾ ಸೇರಿದಂತೆ ಅನೇಕರಿಂದ ಅಭಿನಂದನೆಯ ಮಹಾಪೂರ ಹರಿದುಬಂದಿದೆ.
ಬಹುತೇಕ ಕಲಾವಿದರ ಮಕ್ಕಳು ಸ್ಟಾರ್ ಆಗಬೇಕು, ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಆದರೆ ಖ್ಯಾತ ನಟ ಆರ್ ಮಾಧವನ್ ಮಗ ಹಾಗಲ್ಲ. ಕ್ರೀಡೆಯಲ್ಲಿ ಗುರಿತಿಸಿಕೊಂಡಿರುವ ಮಾಧವನ್ ಪುತ್ರ ವೇದಾಂತ್ ಇದೀಗ 5 ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಮಾಧವನ್ ಪುತ್ರ ಅದ್ಭುತ ಸ್ವಿಮ್ಮರ್. ಚಿಕ್ಕ ವಯಸ್ಸಿನಿಂದನೇ ಸ್ವಿಮ್ಮಿಂಗ್ ಟ್ರೇನಿಂಗ್ ಪಡೆಯುತ್ತಿದ್ದ ವೇದಾಂತ್ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅನೇಕ ಕಡೆ ಭಾರತವನ್ನು ಪ್ರತಿನಿಧಿಸಿದ್ದಾರೆ. ಮಲೇಷಿಯನ್ ಇನ್ವಿಟೇಷನಲ್ ಏಜ್ ಗ್ರೂಪ್ ಚಾಂಪಿಯನ್ಶಿಪ್ನಲ್ಲಿ ಭಾಗಿ ಆಗಿ 5 ಚಿನ್ನದ ಪದಕ ಗೆದ್ದಿದ್ದಾರೆ.
ಮಗನ ಸಾಧನೆಯನ್ನು ನಟ ಮಾಧವನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ದೇವರ ಅನುಗ್ರ ಎಂದಿರುವ ಮಾಧವನ್, 'ನಿಮ್ಮೆಲ್ಲರ ಶುಭ ಹಾರೈಕೆಯಿಂದ ವೇದಾಂತ್ ಭಾರತಕ್ಕೆ 5 ಚಿನ್ನದ ಪದಕ ತಂದುಕೊಟ್ಟಿದ್ದಾನೆ. ಕೌಲಾಲಂಪುರ್ನಲ್ಲಿ ನಡೆದ ಮಲೇಷಿಯನ್ ಚಾಂಪಿಯನ್ಶಿಪ್ನಲ್ಲಿ 50 ಮೀಟರ್, 100 ಮೀಟರ್, 200 ಮೀಟರ್, 400 ಮೀಟರ್ ಹಾಗೂ 1500 ಮೀಟರ್ ಸ್ವಿಮಿಂಗ್ ರೇಸ್ ಗೆದ್ದಿದ್ದಾರೆ. ನನಗೆ ಹೆಮ್ಮೆ ಆಗುತ್ತಿದೆ’ ಎಂದು ಮಾಧವನ್ ಬರೆದುಕೊಂಡಿದ್ದಾರೆ.
ಮಾಧವನ್ ಪೋಸ್ಟ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಅಭಿಮಾನಿಗಳ ಜೊತೆಗೆ ಖ್ಯಾತ ಕಲಾವಿದರು ಕಾಮೆಂಟ್ ಮಾಡಿ ವಿಶ್ ಮಾಡುತ್ತಿದ್ದಾರೆ.
ತಮಿಳು ಸ್ಟಾರ್ ಸೂರ್ಯ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಲಾರಾ ದತ್ತ ಸೇರಿದಂತೆ ಅನೇಕರು ವೇದಾಂತ್ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ವೇದಾಂತ್ ಈಜು ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದು ಇದೇ ಮೊದಲೇನು ಅಲ್ಲ. ಈ ಮೊದಲು ಅನೇಕ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಿ ಪದಕ ಗೆದ್ದಿದ್ದರು. 2023ರ ಖೇಲೋ ಇಂಡಿಯಾ ಟೂರ್ನಮೆಂಟ್ನಲ್ಲಿ ವೇದಾಂತ್ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದರು. ಈ ವೇಳೆ ಅವರಿಗೆ ಐದು ಚಿನ್ನ ಹಾಗೂ ಎರಡು ಬೆಳ್ಳಿ ಪದಕ ಸಿಕ್ಕಿತ್ತು.