IOC: ಜನರೇ ಮತ್ತೊಂದು ಶಾಕ್ಗೆ ಸಿದ್ಧರಾಗಿ; ಯಾವುದೇ ಕ್ಷಣದಲ್ಲಾದರೂ ಹೆಚ್ಚಾಗಲಿದೆ ಬೆಲೆ
ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಲು ನಿರ್ಧರಿಸಿದೆ. ಇದರ ಜೊತೆಗೆ, ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ಗಳ ತೀವ್ರ ಕೊರತೆ ಉಂಟಾಗಿದ್ದು, ಬೆಂಗಳೂರಿನ ಸಾವಿರಾರು ಹೋಟೆಲ್ಗಳು ಮುಚ್ಚುವ ಭೀತಿಯನ್ನು ಎದುರಿಸುತ್ತಿವೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ
ದೇಶದಲ್ಲಿ ಅಡುಗೆ ಅನಿಲದ ಬಿಕ್ಕಟ್ಟು ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ನಡುವೆಯೇ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಲು ನಿರ್ಧಾರ ಮಾಡಿದೆ. 'ಬೆಲೆ ಏರಿಸದೆ ಬೇರೆ ದಾರಿಯೇ ಇಲ್ಲ' ಎಂದು ಐಓಸಿ ಕಂಟ್ರಿ ಹೆಡ್ ಬಿ.ಬಿ. ಪಾತ್ರ ಅವರು ವಿತರಕರಿಗೆ ಪತ್ರ ಬರೆದಿದ್ದಾರೆ.
ಎಷ್ಟು ದರ ಹೆಚ್ಚಳ?
ಯಾವುದೇ ಕ್ಷಣದಲ್ಲಾದರೂ ಬೆಲೆ ಏರಿಕೆ ಜಾರಿಗೆ ಬರಬಹುದು. ಎಷ್ಟು ರೂಪಾಯಿ ಹೆಚ್ಚಳವಾಗಲಿದೆ ಎಂಬುದನ್ನು ಸೇಲ್ಸ್ ಟೀಮ್ ತಿಳಿಸಲಿದೆ ಎಂದು ಸೋಮವಾರ ವಿತರಕರಿಗೆ ಕಳುಹಿಸಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದ ಕಾರಣ ನೀಡಿ ಐಓಸಿ ಈ ಪತ್ರವನ್ನು ಕಳುಹಿಸಿದೆ.
ವಾಣಿಜ್ಯ ಸಿಲಿಂಡರ್ಗಳ ವಿತರಣೆಯಲ್ಲಿ ವ್ಯತ್ಯಯ
ಅಡುಗೆ ಅನಿಲದ ಸಮಸ್ಯೆ ತೀವ್ರವಾಗಿರುವುದರಿಂದ ವಾಣಿಜ್ಯ ಸಿಲಿಂಡರ್ಗಳ ವಿತರಣೆಯನ್ನು ನಿಲ್ಲಿಸಿರುವುದಾಗಿ ಐಓಸಿ ತಿಳಿಸಿದೆ. ಬೆಂಗಳೂರಿನ ಹೋಟೆಲ್ಗಳು ಮತ್ತು ಕೈಗಾರಿಕೆಗಳಿಗೆ ಗ್ಯಾಸ್ ಸಪ್ಲೈ ನಿಲ್ಲಿಸಲಾಗಿದೆ. ಗ್ರಾಹಕರು ಬೇರೆ ದಾರಿ ನೋಡಿಕೊಳ್ಳುವಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಚೆನ್ನೈ ವಿಭಾಗ ಸೂಚನೆ ನೀಡಿದೆ. ಇದರ ಬೆನ್ನಲ್ಲೇ, ಭಾರತ್ ಪೆಟ್ರೋಲಿಯಂ ಮತ್ತು ಎಚ್ಪಿ ಕೂಡಾ ನಿರ್ಬಂಧಗಳನ್ನು ಹೇರಿವೆ.
ಸಂಕಷ್ಟದಲ್ಲಿ ಬೆಂಗಳೂರಿನ 35 ಸಾವಿರ ಹೋಟೆಲ್ಗಳು
ಈ ಬೆಳವಣಿಗೆಯಿಂದ ಬೆಂಗಳೂರು ನಗರದ ಸುಮಾರು 35,000 ಹೋಟೆಲ್ಗಳು ಸಂಕಷ್ಟಕ್ಕೆ ಸಿಲುಕಿವೆ. ನಗರಕ್ಕೆ ತಿಂಗಳಿಗೆ 3 ಲಕ್ಷ ಸಿಲಿಂಡರ್ಗಳ ಅಗತ್ಯವಿದೆ. ಪ್ರತಿದಿನ 22,000 ಸಿಲಿಂಡರ್ಗಳು ಬೇಕಾಗಿದ್ದು, ಸದ್ಯ ಕೇವಲ 11,000 ಸಿಲಿಂಡರ್ಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಈಗಿರುವ ಸ್ಟಾಕ್ ಖಾಲಿಯಾದರೆ ಹೋಟೆಲ್ಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೋಟೆಲ್ ಮಾಲೀಕರ ಸಂಘ ಮುಖ್ಯಮಂತ್ರಿಯನ್ನು ಭೇಟಿಯಾಗಲು ತೀರ್ಮಾನಿಸಿದೆ.
ಇದನ್ನೂ ಓದಿ: ಎರಡು ದಿನದ ಬಳಿಕ ಮತ್ತೆ ಕುಸಿತವಾಯ್ತು ಚಿನ್ನದ ಬೆಲೆ; ಯುಗಾದಿ, ರಂಜಾನ್ಗೆ ಖರೀದಿಸಿ ಬಂಗಾರ
ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಕೊರತೆ
ಕೇರಳದಲ್ಲೂ ಎಲ್ಪಿಜಿ ಬಳಕೆಯ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಹೋಟೆಲ್ ವಲಯದಲ್ಲಿ ಬಳಸುವ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ಲಭ್ಯತೆಯಲ್ಲಿ ಕೊರತೆ ಉಂಟಾಗಲಿದೆ ಎಂದು ಹೋಟೆಲ್ ಮಾಲೀಕರಿಗೆ ಮಾಹಿತಿ ಸಿಕ್ಕಿದೆ. ಎಲ್ಪಿಜಿ ಡಿಸ್ಟ್ರಿಬ್ಯೂಟರ್ಸ್ ಫೆಡರೇಷನ್ ಈ ಕುರಿತು ವಿತರಕರಿಗೆ ಪತ್ರ ಬರೆದಿದೆ. ಹೋಟೆಲ್ಗಳು ಮತ್ತು ಕೈಗಾರಿಕೆಗಳು ಬಳಸುವ 19 ಕೆ.ಜಿ ಹಾಗೂ 47.5 ಕೆ.ಜಿ ಸಿಲಿಂಡರ್ಗಳ ಲಭ್ಯತೆಯಲ್ಲಿ ಕೊರತೆ ಉಂಟಾಗಿದೆ.
ಇದನ್ನೂ ಓದಿ: ಇರಾನ್ ಇಸ್ರೇಲ್ ಯುದ್ಧದಿಂದ ಷೇರುಪೇಟೆಯಲ್ಲಿ ಮಹಾಪತನ: 10 ದಿನದಲ್ಲಿ 31 ಲಕ್ಷ ಕೋಟಿ ಸಂಪತ್ತು ನಾಶ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.

