Asianet Suvarna News Asianet Suvarna News

Sugar Free ಮೋದಕ, ಸಕ್ಕರೆ ಕಾಯಿಲೆ ಇರೋರು ಭಯ ಪಡ್ದೆ ತಿನ್ಬೋದು

ಬೇರೆಲ್ಲಾ ಹಬ್ಬಗಳಂತೆ ಗಣೇಶ ಚತುರ್ಥಿಯ ಆಚರಣೆಯು ಸಿಹಿತಿಂಡಿಗಳಿಲ್ಲದೆ ಅಪೂರ್ಣವಾಗಿದೆ. ಗಣಪತಿಯು ಮೋದಕ ಪ್ರಿಯ, ನೀವೂ ಕೂಡ ಮೋದಕ ಇಷ್ಟಪಡುವವರ ಸಾಲಿನಲ್ಲಿ ಇರಬಹುದು. ಆದರೆ, ಶುಗರ್ ಸಮಸ್ಯೆ ಇರೋದ್ರಿಂದ ಮೋದಕ ಹೇಗೆ ತಿನ್ನೋದು ಅಂತ ಯೋಚಿಸುತ್ತಿದ್ದರೆ, ಇಲ್ಲಿದೆ ನೋಡಿ ಸಕ್ಕರೆಯನ್ನೆ ಉಪಯೋಗಿಸದೆ ತಯಾರಿಸುವ ಮೋದಕದ ಪಾಕವಿಧಾನ..

Here Is Recipe For Ganesh's Favourite Modak Without Sugar
Author
First Published Aug 30, 2022, 12:07 PM IST

ಗಣೇಶ ಚತುರ್ಥಿಯ ಬಹು ನಿರೀಕ್ಷಿತ ಆಚರಣೆಗೆ ಇನ್ನು ಒಂದು ದಿನವಷ್ಟೇ ಬಾಕಿ ಇದೆ. ನಮ್ಮ ಕರುನಾಡಿನಲ್ಲಿ ಭರ್ಜರಿ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. ಏರಿಯಾದ ಮೂಲೆ ಮೂಲೆಗಳಲ್ಲೂ ಗಣಪತಿ ಮೂರ್ಗತಿಳನ್ನು ಸ್ಥಾಪಿಸುವ ಮೂಲಕ ಹಬ್ಬ ಆಚರಿಸುತ್ತಾರೆ. ಮಾತ್ರವಲ್ಲ ಮನೆಯಲ್ಲೂ ಗಣಪನನ್ನು ಕೂರಿಸಿ, ಹೂಗಳಿಂದ ಅಲಂಕರಿಸಿ, ವಿವಿಧ ಭಕ್ಷ್ಯಗಳನ್ನು ಗಣೇಶನಿಗೆ ಸಮರ್ಪಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ನೈವೇದ್ಯಕ್ಕೆ ನಾನಾರೀತಿಯ ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತದೆ. ಸಿಹಿ ತಿಂಡಿಗಳನ್ನು ಆನಂದಿಸಲು ನಾಲಿಗೆ ಇಚ್ಛೆಪಡುವುದು ಒಂದೆಡೆಯಾದರೆ, ಆರೋಗ್ಯ ಸಮಸ್ಯೆಯಿಂದಾಗಿ ಸಿಹಿ ತಿಂಡಿಯಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಕೆಲವರಿಗೆ. ಆದರೆ, ಸಕ್ಕರೆಯನ್ನು ಬಳಸದೆಯೂ ಮೋದಕವನ್ನು ತಯಾರಿಸಬಹುದು. ಈ ಸ್ಪೆಷಲ್ ಮೋದಕವನ್ನು ಸಕ್ಕರೆ ಕಾಯಿಲೆ ಇರೋರು ಸಹ ಬಾಯಿ ಚಪ್ಪರಿಸಿಕೊಂಡು ತಿನ್ಬೋದು. ಇಲ್ಲಿದೆ ರೆಸಿಪಿ.

ಮೋದಕ ಮಾಡಲು ಬೇಕಾದ ಪದಾರ್ಥಗಳು

  1. 400 ಗ್ರಾಂ ಬೀಜರಹಿತ ಖರ್ಜೂರ (Seedless Dates)
  2. 100 ಗ್ರಾಂ ಬಾದಾಮಿ
  3. 100 ಗ್ರಾಂ ಗೋಡಂಬಿ (Cashew)
  4. 100 ಗ್ರಾಂ ವಾಲ್ನಟ್ಸ್
  5. 100 ಗ್ರಾಂ ಒಣದ್ರಾಕ್ಷಿ
  6. 100 ಗ್ರಾಂ ಒಣ ಕೊಬ್ಬರಿ 
  7. 30 ಗ್ರಾಂ ಗಸಗಸೆ (Poppy seeds)
  8. 1 ಚಮಚ ತುಪ್ಪ

ಗಣೇಶ ಚತುರ್ಥಿಗೆ ಮನೆಯಲ್ಲೇ ರುಚಿಕರವಾದ ಲಡ್ಡು ಮಾಡಿ

ತಯಾರಿಸುವ ವಿಧಾನ:

  • ಗೋಡಂಬಿ, ಬಾದಾಮಿ (Almonds) ಮತ್ತು ವಾಲ್‌ನಟ್ (Walnuts) ಸೇರಿದಂತೆ ಎಲ್ಲಾ ಒಣ ಹಣ್ಣುಗಳನ್ನು ತೆಗೆದುಕೊಂಡು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಜೊತೆಗೆ ಬೀಜರಹಿತ ಖರ್ಜೂರ ಮತ್ತು ಒಣ ಕೊಬ್ಬರಿ ತುಂಡುಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ.
  •  ಕತ್ತರಿಸಿದ ನಟ್ಸ್ ಗಳನ್ನು ಪ್ರತ್ಯೇಕವಾಗಿ 1 ರಿಂದ 2 ನಿಮಿಷಗಳ ಕಾಲ ಸುಟ್ಟು ಹೋಗದಿರುವಂತೆ ನೋಡಿ, ಹುರಿದುಕೊಂಡ ಬಳಿಕ ಅವುಗಳನ್ನು ಬೇರೆ ತಟ್ಟೆಗೆ ವರ್ಗಾಯಿಸಿ.
  •  ಈಗ ಸಣ್ಣಗೆ ಕತ್ತರಿಸಿ ಇಟ್ಟುಕೊಂಡಿದ್ದ ಕೊಬ್ಬರಿ ತುಂಡುಗಳನ್ನೂ ಕೂಡ ಕಂದು ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ. ಇದನ್ನು ಹುರಿದ ನಂತರ, ಪಕ್ಕಕ್ಕೆ ಇರಿಸಿಕೊಂಡು, ಬಾಣಲಿಗೆ ಗಸಗಸೆ ಬೀಜಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಪ್ರತ್ಯೇಕವಾಗಿ ತಟ್ಟೆಯಲ್ಲಿ ತೆಗೆದಿಡಿ.
  •  ಅದೇ ಬಾಣಲೆಯಲ್ಲಿ ತುಪ್ಪವನ್ನು (Ghee) ಬಿಸಿ ಮಾಡಿ ಮತ್ತು ಅದಕ್ಕೆ ಕತ್ತರಿಸಿದ ಖರ್ಜೂರ ಮತ್ತು ಒಣದ್ರಾಕ್ಷಿ ಸೇರಿಸಿ, ಸುಮಾರು ಐದು ನಿಮಿಷಗಳ ಕಾಲ ಈ ಮಿಶ್ರಣವು ಜಿಗುಟಾದ ದ್ರವ್ಯರಾಶಿಯಾಗಿ ಬದಲಾಗುವವರೆಗೆ ಹುರಿಯಿರಿ. ಇದನ್ನು ಕೂಡ ಕೆಳಗಿರಿಸಿ ಇದು ತಣ್ಣಗಾಗಲು ಬಿಡಿ.
  •  ಎಲ್ಲಾ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಉರಿದುಕೊಂಡ ಬಳಿಕ ಹುರಿದಿಟ್ಟುಕೊಂಡಿದ್ದ ಎಲ್ಲಾ ಬೀಜಗಳನ್ನು (ನಟ್ಸ್) ಪುಡಿ ಮಾಡಿ ಮತ್ತು ತೆಂಗಿನ ತುಂಡುಗಳೊಂದಿಗೆ ಗಸಗಸೆಯನ್ನು ಮಿಕ್ಸಿ ಮಾಡಿಕೊಂಡು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ. ಮಿಶ್ರಣದ ರುಚಿ ಹೆಚ್ಚಿಸಲು ಮತ್ತು ಅಂಟು ಅನುಭವವನ್ನು ನೀಡಲು ಖರ್ಜೂರ ಹಾಗೂ ಒಣ ದ್ರಾಕ್ಷಿಗಳನ್ನು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.

ಗಣೇಶ ಹಬ್ಬಕ್ಕೆ ಚಕ್ಕುಲಿ, ಉಂಡೆ ಮಾಡೋದು ಮರೀಬೇಡಿ, ಇಲ್ಲಿದೆ ರೆಸಿಪಿ

  •  ನಂತರ, ಈ ಮಿಶ್ರಣವನ್ನು ಪ್ಯಾನ್‌ಗೆ ತೆಗೆದುಕೊಂಡು ಅದಕ್ಕೆ ಪುಡಿ ಮಾಡಿಟ್ಟುಕೊಂಡಿದ್ದ ನಟ್ಸ್ ಗಳನ್ನೂ ಸೇರಿಸಿ. ಹಾಗೂ ಇನ್ನುಳಿದ ಎಲ್ಲಾ ಮಿಶ್ರಣಗಳನ್ನು ಅದಕ್ಕೆ ಸೇರಿಸಿಕೊಂಡು, ಗ್ಯಾಸನ್ನು ಮಧ್ಯಮ ಉರಿಯಲ್ಲಿ ಇರಿಸಿ ಮತ್ತು ಮಿಶ್ರಣವು ಜಿಗುಟಾದ ದ್ರವ್ಯರಾಶಿಯಾಗುವವರೆಗೆ (Sticky mass) 2 ರಿಂದ 3 ನಿಮಿಷಗಳ ಕಾಲ ನಿರಂತರವಾಗಿ ಬೆರೆಸಿ. 
  • ಈ ಮಿಶ್ರಣವು ತಯಾರಾದ ಬಳಿಕ ಒಂದು ಬಟ್ಟಲಿನಲ್ಲಿ ಹಾಕಿ. ಸ್ವಲ್ಪ ಸಮಯದವರೆಗೆ ತಣ್ಣಗಾಗಲು (Cool) ಬಿಡಿ. ಜಿಗುಟಾದ ದ್ರವ್ಯರಾಶಿಯನ್ನು ರೂಪಿಸಲು ಮಿಶ್ರಣವನ್ನು ಗಟ್ಟಿಯಾಗಿ ಒತ್ತಿ ಕಲಸಿಕೊಳ್ಳಿ. ಹೀಗೆ ತಯಾರಿಸಿಕೊಂಡು ಜಿಗುಟಾದ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಮತ್ತು ಅವುಗಳನ್ನು ಮೋದಕ ತಯಾರಿಸುವ ಅಚ್ಚಿನಲ್ಲಿ ಇರಿಸಿ. ಸರಿಯಾದ ಆಕಾರದಲ್ಲಿ ಮೋದಕ ಪಡೆಯಲು ಸರಿಯಾದ ಕ್ರಮದಲ್ಲಿ ಬಲವಾಗಿ ಒತ್ತಿ. ಅಲ್ಲಿಗೆ ಮೋದಕ ಸಿದ್ಧವಾಗುತ್ತದೆ.

ಶುಗರ್ ಸಮಸ್ಯೆ ಇರುವವರೂ ಕೂಡ ಈ ರುಚಿಕರವಾದ ಮೋದಕವನ್ನು ತಿಂದು ಹಬ್ಬವನ್ನು ಸಂಭ್ರಮಿಸಬಹುದು. 

Follow Us:
Download App:
  • android
  • ios