ಇಂದು ವಟ ಸಾವಿತ್ರಿ ವ್ರತ. ವಿವಾಹಿತ ಮಹಿಳೆಯರು ತಮ್ಮ ಪತಿಯ ಧೀರ್ಘಾಯಸ್ಸನ್ನು ಕೋರಿ ವ್ರತ ಆಚರಿಸುತ್ತಾರೆ. ಇಷ್ಟಕ್ಕೂ ಮಹಾನ್ ಸತಿ ಸಾವಿತ್ರಿಯ ಕತೆ ಬಲ್ಲಿರಾ?
ಇಂದು ಮೇ 30ರಂದು ದೇಶದೆಲ್ಲೆಡೆ ಮಹಿಳೆಯರು ವಟ ಸಾವಿತ್ರಿ ವ್ರತ ಆಚರಿಸುತ್ತಾರೆ. ಇದು ಅತ್ಯಂತ ಕಠಿಣ ವ್ರತಗಳಲ್ಲೊಂದಾಗಿದ್ದು, ಇದನ್ನು ಆಚರಿಸುವುದರಿಂದ ಪತಿಯ ಆಯಸ್ಸು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಇಷ್ಟಕ್ಕೂ ಯಾರು ಈ ಸಾವಿತ್ರಿ? ಏನವಳ ಕತೆ ತಿಳಿದಿದ್ದೀರಾ?
ಮದ್ರ(Madra) ದೇಶದ ರಾಜ ಅಶ್ವಪತಿ ಸುಭಿಕ್ಷವಾದ ರಾಜ್ಯ ನಡೆಸಿಕೊಂಡು ಹೋಗುತ್ತಿದ್ದ. ಪ್ರಜೆಗಳೆಲ್ಲರೂ ಆತನ ಆಡಳಿತದಲ್ಲಿ ಸಂತೋಷದಿಂದಿದ್ದರು. ರಾಜನಿಗೆ ಎಲ್ಲವೂ ಇದ್ದರೂ ಮಕ್ಕಳಿಲ್ಲ ಎಂಬ ಕೊರಗೊಂದು ಕಾಡುತ್ತಿತ್ತು. ಮಕ್ಕಳನ್ನು ಬೇಡಿ ಆತ 18 ವರ್ಷಗಳ ತಪಸ್ಸು ಮಾಡಿದ ನಂತರ ಸರಸ್ವತಿ ದೇವಿ ಕೃಪೆ ತೋರಿದಳು. ರಾಜರಾಣಿಗೆ ಮುದ್ದಾದ ಹೆಣ್ಣುಮಗುವೊಂದು ಜನಿಸಿತು. ಅದಕ್ಕೆ ಸಾವಿತ್ರಿ(Savitri) ಎಂದು ಹೆಸರಿಟ್ಟರು.
ಸಾವಿತ್ರಿ ಅರಮನೆಯ ಅತಿ ಮುದ್ದಿನ ಕೂಸಾಗಿ ಸಂತೋಷದಿಂದ ಬೆಳೆದಳು. ಜಾಣೆಯಾಗಿ ದೊಡ್ಡವಳಾದಳು. ಅಶ್ವಪತಿ ಆಕೆಯ ಸ್ವಯಂವರ ಏರ್ಪಡಿಸಿದ. ಈ ಸ್ವಯಂವರದಲ್ಲಿ ಪಕ್ಕದ ರಾಜ್ಯದ ರಾಜ
ದ್ಯುಮತ್ಸೇನನ ಮಗ ಸತ್ಯವಾನ(Satyavana)ನನ್ನು ಆಕೆ ಮೆಚ್ಚುತ್ತಾಳೆ.
ನಿಕಟ ಸಂಬಂಧದಲ್ಲಿ ಜಗಳಗಳಾಗ್ತಿದ್ರೆ ಈ ಗ್ರಹಗಳೇ ಕಾರಣ.. ನೀವೇನು ಮಾಡಬೇಕು?
ಅರಮನೆಯಲ್ಲಿ ವಿವಾಹ(wedding) ಸಂಭ್ರಮ ತುಂಬುತ್ತದೆ. ತಯಾರಿಗಳು ಭರದಿಂದ ಸಾಗುತ್ತವೆ. ಆಗ ಅಲ್ಲಿಗೆ ಬಂದ ನಾರದ ಮಹರ್ಷಿಗಳು, ಮದುವೆಯಾಗಿ ವರ್ಷ ಪೂರ್ತಿಯಾಗುವುದರೊಳಗೆ ಸತ್ಯವಾನ ಸಾವನ್ನಪ್ಪುತ್ತಾನೆ ಎಂಬ ಆತಂಕಕಾರಿಯಾದ ಸುದ್ದಿಯನ್ನು ಸಾವಿತ್ರಿ ಮತ್ತು ಅಶ್ವಪತಿಗೆ ಹೇಳುತ್ತಾರೆ. ಇದನ್ನು ಕೇಳಿದ ಅಶ್ವಪತಿ ಪೂರ್ತಿ ಆತಂಕ, ಭಯಗೊಳ್ಳುತ್ತಾನೆ. ಹಲವಾರು ವರ್ಷ ಬಯಸಿ ಪಡೆದ ಹೆಣ್ಣುಮಗು ವಿವಾಹವಾಗುತ್ತಿದ್ದಂತೆಯೇ ವಿಧವೆಯಾಗುತ್ತಾಳೆ ಎಂದರೆ ರಾಜನಾದರೂ ಹೇಗೆ ತಡೆದುಕೊಳ್ಳಬಲ್ಲ?! ಸಾವಿತ್ರಿಗೆ ಬೇರೆ ಹುಡುಗನನ್ನು ಆರಿಸುವಂತೆ ವಿಧವಿಧವಾಗಿ ಹೇಳುತ್ತಾನೆ. ಆದರೆ, ಸಾವಿತ್ರಿ ಒಪ್ಪುವುದಿಲ್ಲ. ಏನಾದರೂ ಸರಿ, ತಾನು ಸತ್ಯವಾನನನ್ನು ಮಾತ್ರ ವಿವಾಹವಾಗುವುದು ಎಂದು ಹಟ ಹಿಡಿಯುತ್ತಾಳೆ. ಕಡೆಗೆ ರಾಜನೇ ಮಗಳ ಹಟಕ್ಕೆ ಸೋತು ಅವಳನ್ನು ಸತ್ಯವಾನನಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ.
ವಿವಾಹವಾಗುತ್ತಿದ್ದಂತೆಯೇ ಸಾವಿತ್ರಿಯ ದುರದೃಷ್ಟ(bad luck)ಗಳು ಒಂದರ ಹಿಂದೊಂದು ಆರಂಭವಾಗುತ್ತವೆ. ಆರಂಭದಲ್ಲೇ ದ್ಯುಮತ್ಸೇನನ ರಾಜ್ಯ ಶತ್ರುಗಳ ಪಾಲಾಗುತ್ತದೆ. ಅವನಾಗಲೇ ಮುದಿಯಾಗಿ ಕುರುಡಾಗಿದ್ದ ರಾಜ. ರಾಜ್ಯ ಕಳೆದುಕೊಂಡ ಬಳಿಕ ತನ್ನ ಪತ್ನಿ, ಪುತ್ರ ಮತ್ತು ಸೊಸೆಯೊಂದಿಗೆ ಕಾಡಿನಲ್ಲಿ ಬದುಕನ್ನು ಸಾಗಿಸುತ್ತಾನೆ. ಆದರೆ, ಇದರಿಂದ ವಿಚಲಿತಳಾಗದ ಸಾವಿತ್ರಿ ನಗುನಗುತ್ತಾ ಬಂದುದನ್ನು ಸ್ವೀಕರಿಸಿ ಗಂಡ, ಅತ್ತೆ ಮಾವಂದಿರ ಸೇವೆ ಮಾಡುತ್ತಾ ಸಂತೋಷವಾಗಿರುತ್ತಾಳೆ.
ದಿನಗಳು ಉರುಳಿ ತಿಂಗಳುಗಳು ಕಳೆದು ಇನ್ನೇನು ನಾರದರು ಹೇಳಿದ್ದ ಗಡುವಿಗೆ ಮೂರೇ ದಿನ ಬಾಕಿ ಉಳಿದಿವೆ ಎಂದಾಗಲೂ ಸಾವಿತ್ರಿ ಧೃತಿಗೆಡಲಿಲ್ಲ. ಬದಲಿಗೆ ಪತಿಯನ್ನು ಒಂದು ನಿಮಿಷವೂ ಬಿಡದೆ ಅವನ ಜೊತೆಯೇ ಇದ್ದು ಕಾಪಾಡಿಕೊಳ್ಳುವ ಪಣ ತೊಟ್ಟಳು. ದೇವರ ಪ್ರಾರ್ಥನೆಯಲ್ಲಿ ತೊಡಗಿದಳು. ನಾರದ(Narada)ರು ಹೇಳಿದ ದಿನ ಬಂತು. ಸತ್ಯವಾನ ಎಂದಿನಂತೆ ಕಾಡಿಗೆ ಕಟ್ಟಿಗೆ ತರಲು ಹೊರಟ. ಸಾವಿತ್ರಿ ಒಬ್ಬನನ್ನೇ ಕಲುಹಿಸಲು ಒಪ್ಪದೇ ತಾನೂ ಜೊತೆಗೆ ಹೋದಳು. ಸ್ವಲ್ಪ ಕಟ್ಟಿಗೆ ಒಟ್ಟು ಮಾಡುವಷ್ಟರಲ್ಲಿ ಸತ್ಯವಾನ ಸಂಕಟವಾಗುತ್ತಿದೆ ಎಂದು ಮರದ ಕೆಳಗೆ ಸಾವಿತ್ರಿಯ ತೊಡೆ ಮೇಲೆ ತಲೆಯಿಟ್ಟು ಮಲಗಿದ. ಇದ್ದಕ್ಕಿದ್ದಂತೆ ನರಳಲಾರಂಭಿಸಿದ ಆತ ಇದ್ದಕ್ಕಿದ್ದಂತೆ ನಿಶ್ಚಲನಾದ. ಆಗ ಅಲ್ಲಿ ಕಾಣಿಸಿಕೊಂಡಿದ್ದು ಯಮಧರ್ಮರಾಯ(Yama).
Shani Jayanti 2022: ಪ್ರಖ್ಯಾತ ಶನಿ ದೇವಾಲಯಗಳಿವು.. ಭೇಟಿ ಕೊಟ್ಟರೆ ಶನಿದೋಷದಿಂದ ಮುಕ್ತಿ
ಕ್ಷಣಮಾತ್ರದಲ್ಲಿ ಸತ್ಯವಾನನ ಆತ್ಮ(Soul)ವನ್ನು ಪಾಶದಲ್ಲಿ ತೆಗೆದುಕೊಂಡು ದಕ್ಷಿಣ ದಿಕ್ಕಿ ಯಮ ಹೊರಡುತ್ತಿದ್ದಂತೆಯೇ ಹಿಂದೆಯೇ ಸಾವಿತ್ರಿಯೂ ಹೊರಟಳು. ಒಂದೇ ಗಂಡನನ್ನು ಹಿಂದಿರುಗಿಸು. ಇಲ್ಲವೇ ತಾನೂ ಜೊತೆಯಾಗಿ ಬರುವೆ ಎಂದು ಹಟ ಹಿಡಿದಳು. ಆಕೆಯ ಸಮಯ ಮುಗಿದಿಲ್ಲ ಎಂದು ಯಮ ಪರಿ ಪರಿಯಾಗಿ ಹೇಳಿದರೂ ಕೇಳಲಿಲ್ಲ. ವರ ಕೊಡುತ್ತೇನೆಂದರೂ ಮಣಿಯಲಿಲ್ಲ. ಸತ್ಯವಾನ ಬದುಕದಿದ್ದರೆ ತಾನೂ ಸಾಯಬೇಕು ಎಂದು ಹಟ ಹಿಡಿದಳು. ಕಡೆಗೂ ಸಾವಿತ್ರಿಯ ಪತಿ ಭಕ್ತಿಗೆ ಯಮ ಮಣಿಯಲೇ ಬೇಕಾಯಿತು. ಆಲದ ಮರದ ಕೆಳಗೆ ಮಲಗಿದ್ದ ಸತ್ಯವಾನನ ದೇಹ ಉಸಿರಾಡತೊಡಗಿತು. ನೂರ್ಕಾಲ ಚೆನ್ನಾಗಿ ಬಾಳುವಂತೆ ಹರಸಿ ಯಮ ಅಲ್ಲಿಂದ ಹೊರಟ.
ಮನೆಗೆ ಮರಳಿದ ದಂಪತಿಗೆ ಮತ್ತೊಂದು ಅಚ್ಚರಿ ಕಾದಿತ್ತು. ದ್ಯುಮತ್ಸೇನನಿಗೆ ಶತ್ರುಗಳು ರಾಜ್ಯವನ್ನು ಮರಳಿಸಿದ್ದರು. ನಂತರ ಅವರೆಲ್ಲರೂ ಸಂತೋಷದಿಂದ ಬಾಳಿದರು.
