ರಾಜಧಾನಿಯ ಅತಿದೊಡ್ಡ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ನ.21ರಿಂದ ಜರುಗಲಿದ್ದು, 15 ವರ್ಷದ ನಂತರ ಕೆಂಪಾಂಬುಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ನಡೆಸಲು ಉದ್ದೇಶಿಸಲಾಗಿದೆ. 

ಬೆಂಗಳೂರು (ನ.13): ರಾಜಧಾನಿಯ ಅತಿದೊಡ್ಡ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ನ.21ರಿಂದ ಜರುಗಲಿದ್ದು, 15 ವರ್ಷದ ನಂತರ ಕೆಂಪಾಂಬುಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ನಡೆಸಲು ಉದ್ದೇಶಿಸಲಾಗಿದೆ. ಕಡಿಮೆ ನೀರು ಸಂಗ್ರಹ ಸೇರಿದಂತೆ ನಾನಾ ಕಾರಣಗಳಿಂದ 2008ರ ಬಳಿಕ ಪರಿಷೆಯ ವೇಳೆ ತೆಪ್ಪೋತ್ಸವ ನಡೆದಿರಲಿಲ್ಲ. ಈ ಬಾರಿ ಉತ್ತಮ ಮಳೆಯಿಂದ ತುಂಬಿರುವ ಕೆರೆಯಲ್ಲಿ ಪುನಃ ಉತ್ಸವ ನಡೆಸಲು ಸಜ್ಜಾಗಲಾಗಿದೆ. ಇದಕ್ಕಾಗಿ ಕೆರೆಯ ಪಾಚಿ, ತ್ಯಾಜ್ಯ ತೆಗೆಯಲು ಬಿಬಿಎಂಪಿ ನಿರ್ಧರಿಸಿದೆ. ನ.21ರಂದು ಲಕ್ಷಾಂತರ ಜನ ಬರುವ ಹಿನ್ನೆಲೆಯಲ್ಲಿ ತೊಂದರೆ ಆಗದಿರಲೆಂದು ಈ ಬಾರಿ ನ.20ರಂದೇ ಸಂಜೆ ಪರಿಷೆ ಉದ್ಘಾಟಿಸಲು ಯೋಜಿಸಲಾಗಿದೆ.

ಗ್ರಾಮೀಣ ಸೊಗಡು: ಕಡಲೆ ಕಾಯಿ ಪರಿಷೆ ನಡೆಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಸವನಗುಡಿಯ ಸುತ್ತ ಇರುವ ಜಾಗವನ್ನು ಸ್ವಚ್ಛಗೊಳಿಸುವ ಕೆಲಸ ಆರಂಭಿಸಲಾಗಿದೆ. ಪರಿಷೆ ಆರಂಭಕ್ಕೂ ಮೂರ್ನಾಲ್ಕು ದಿನಗಳ ಮೊದಲೇ ಪಾದಚಾರಿ ಮಾರ್ಗದ ಮೇಲೆ ಕಡಲೆಕಾಯಿ ವ್ಯಾಪಾರ ಶುರುವಾಗಲಿದೆ. ಇದರ ಜೊತೆಗೆ ವಿವಿಧ ರೀತಿಯ ಆಟಿಕೆ, ತಿಂಡಿ-ತಿನಿಸು ಮತ್ತಿತರ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲು ಸುಮಾರು ಎರಡು ಸಾವಿರ ಮಳಿಗೆ ತೆರೆಯುವ ಸಾಧ್ಯತೆ ಇದೆ. ಪರಿಷೆಗೆ ಸುಮಾರು 6 ಲಕ್ಷ ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ.

Kempegowda International Airport: ಡಿಸೆಂಬರ್‌ನಿಂದ ಟರ್ಮಿನಲ್‌-2ರಲ್ಲಿ ವಿಮಾನ ಸೇವೆ

ತರಹೇವಾರಿ ಕಡಲೆಕಾಯಿ: ಉತ್ತಮ ಮಳೆಯಿಂದಾಗಿ ಕ​ನ​ಕ​ಪುರ, ದೊ​ಡ್ಡ​ಬ​ಳ್ಳಾ​ಪುರ, ರಾ​ಮ​ನ​ಗರ, ಮಾ​ಗಡಿ, ಚಿ​ಕ್ಕ​ಬ​ಳ್ಳಾ​ಪುರದಲ್ಲಿ ಕಡಲೆಕಾಯಿ ಬೆ​ಳೆ ನಿರೀಕ್ಷೆಗೆ ಮೀರಿ ಬಂದಿದೆ. ಹೀಗಾಗಿ ವ್ಯಾಪಾರಸ್ಥರು, ರೈತರು ದೊಡ್ಡ ಪ್ರಮಾಣದಲ್ಲಿ ಪರಿಷೆಯಲ್ಲಿ ಭಾಗಿಯಾಗುವ ಲಕ್ಷಣವಿದೆ.

ಥೀಮ್‌ಪಾರ್ಕ್: ಪರಿಷೆಯ ಮೂರು ದಿನಗಳಲ್ಲಿ ಬ್ಯೂಗಲ್‌ ರಾಕ್‌ ಮತ್ತು ನರಸಿಂಹಸ್ವಾಮಿ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಈಗಾಗಲೆ ಬುಲ್‌ ಟೆಂಪಲ್‌ ಹಿಂಬಾಗದ ಉದ್ಯಾನವನ ಅಭಿವೃದ್ಧಿಯ ಕಾರ್ಯ ಚಾಲ್ತಿಯಲ್ಲಿದೆ. ಕಡಲೆ ಮಾರುವ ಹಳ್ಳಿಯ ರೈತ, ರೈತ ಮಹಿಳೆ, ವ್ಯಾಪಾರಿಗಳ ಹಳ್ಳಿಯ ವಾತಾವರಣ ರೂಪಿಸುವ ಥೀಮ್‌ ಪಾರ್ಕ್ ರೂಪಿಸುವ ಯೋಜನೆಯಿದೆ. ಹೊರಗಿನಿಂದ ಬಂದ ಜನತೆಗೆ ಇದರ ಪರಿಕಲ್ಪನೆ ಮೂಡಿಸುವ ಉದ್ದೇಶವಿದೆ ಎಂದು ಶಾಸಕ ಎಲ್‌.ಎ. ರವಿಸುಬ್ರಹ್ಮಣ್ಯ ತಿಳಿಸಿದರು.

ಗೌಡ, ಕೃಷ್ಣರನ್ನು ಆಹ್ವಾನಿಸಿಲ್ಲ:ಡಿ.ಕೆ.ಶಿವಕುಮಾರ್‌ ಗರಂ

2008ರಲ್ಲಿ ಕೊನೆಯ ಬಾರಿ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆದಿತ್ತು. ಈ ಬಾರಿ ಕೆರೆಯಲ್ಲಿ ನೀರು ತುಂಬಿದ್ದರಿಂದ ಪರಿಷೆಯಲ್ಲಿ ತೆಪ್ಪೋತ್ಸವ ನಡೆಸಲು ಮುಂದಾಗಿದ್ದೇವೆ. ಜತೆಗೆ ದೇವಸ್ಥಾನದ ಹಿಂಬಾಗದ ಉದ್ಯಾನದಲ್ಲಿ ಕಡಲೆಕಾಯಿ ಮಾರುವ ಶಾಶ್ವತ ಕಲಾಕೃತಿ ಸ್ಥಾಪಿಸಿ ಥೀಮ್‌ ಪಾರ್ಕ್ ಮಾಡಲು ಯೋಜಿಸಿದ್ದೇವೆ.
-ಎಲ್‌.ಎ.ರವಿಸುಬ್ರಹ್ಮಣ್ಯ, ಶಾಸಕ