ದೀಪಾವಳಿ ಹಬ್ಬ ಬಂತೆಂದ್ರೆ ಕೇವಲ ನಾವು ಮಾತ್ರ ಖುಷಿ ಪಡಲ್ಲ. ನಮ್ಮ ಜೊತೆ ಬದುಕಿನ ಭಾಗವಾಗಿರುವ ಗೋವುಗಳು ಕೂಡ ಸಂಭ್ರಮಿಸುತ್ತವೆ. ಹೌದು, ದೀಪಾವಳಿ ಹಬ್ಬದಂದು ಗೋವುಗಳಿಗೆ ಪೂಜೆ ಮಾಡೋದು ಹಿಂದಿನಿಂದಲೂ ನಡೆದುಕೊಂಡು ಬಂದಿರೋ ಸಂಪ್ರದಾಯ. 

ಚಿಕ್ಕಮಗಳೂರು (ಅ.26): ದೀಪಾವಳಿ ಹಬ್ಬ ಬಂತೆಂದ್ರೆ ಕೇವಲ ನಾವು ಮಾತ್ರ ಖುಷಿ ಪಡಲ್ಲ. ನಮ್ಮ ಜೊತೆ ಬದುಕಿನ ಭಾಗವಾಗಿರುವ ಗೋವುಗಳು ಕೂಡ ಸಂಭ್ರಮಿಸುತ್ತವೆ. ಹೌದು, ದೀಪಾವಳಿ ಹಬ್ಬದಂದು ಗೋವುಗಳಿಗೆ ಪೂಜೆ ಮಾಡೋದು ಹಿಂದಿನಿಂದಲೂ ನಡೆದುಕೊಂಡು ಬಂದಿರೋ ಸಂಪ್ರದಾಯ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಅರಗಿ ಗ್ರಾಮದ ರತನ್ ಎಂಬುವರ ಮನೆಯಲ್ಲಿ ಗೋವುಗಳಿಗೆ ವಿಶೇಷವಾಗಿ ಪೂಜೆ ನೆರವೇರಿಸಲಾಯ್ತು. 

Add Asianetnews Kannada as a Preferred SourcegooglePreferred

ಗೋವುಗಳನ್ನ ಸ್ನಾನ ಮಾಡಿಸಿ, ಮೈ ಮೇಲೆ ರಂಗೋಲಿ ಬಿಡಿಸಿ, ಗೋವುಗಳ ಹಣೆಗೆ ತಿಲಕ ಇಟ್ಟು ಮನೆಯವರು ಸಂಭ್ರಮಿಸಿದ್ರು. ಆ ಬಳಿಕ ಮಾವಿನ ತೋರಣ-ಹೂಮಾಲೆ ತೊಡಿಸಿ ಗೋವುಗಳನ್ನ ಸಿಂಗರಿಸಿದ್ರು. ಕೊನೆಗೆ ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ಗೋವುಗಳಿಗೆ ದೀಪದಾರತಿ ಮಾಡಿ ಪೂಜಿಸಲಾಯ್ತು. ಈ ಹಬ್ಬ ನಮಗಷ್ಟೇ ಅಲ್ಲ ನಿಮಗೂ ಕೂಡ.. ಅನ್ನೋ ಮನೆಯವರ ಪ್ರೀತಿಗೆ ಗೋವುಗಳ ಮೂಕವಿಸ್ಮಿತರಾಗಿಯೇ ತಮ್ಮ ಮಾಲೀಕರಿಗೆ ಕೃತಜ್ಞತೆ ತೋರಿದವು.

ಪವಿತ್ರ ದೇವಿರಮ್ಮ ಬೆಟ್ಟದಲ್ಲಿ ಪ್ಲಾಸ್ಟಿಕ್ ಕವರ್, ಬಾಟಲಿಗಳ ರಾಶಿ !

ದೀಪಾವಳಿ ಪ್ರಯುಕ್ತ ವಾಹನ, ಅಂಗಡಿ ಪೂಜೆ: ತಾಲೂಕಿನ ವಿವಿಧೆಡೆ ದೀಪಾವಳಿ ಪ್ರಯುಕ್ತ ವಾಹನ ಪೂಜಾ ಕಾರ್ಯಕ್ರಮ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಮನೆ ಸ್ವಚ್ಛಗೊಳಿಸಿ, ರಂಗೋಲಿ ಇಟ್ಟು, ಅಭ್ಯಂಜನ ಸ್ನಾನ ಮಾಡಿ, ವಾಹನಗಳನ್ನು ತೊಳೆದು ದೀಪಾವಳಿಗೆ ಚಾಲನೆ ನೀಡಿದ್ದರು. ಚಿಣ್ಣರು, ಯುವಕರು ಪಟಾಕಿ ಸಿಡಿಸಿ ಈ ಸಂಭ್ರಮಕ್ಕೆ ಮೆರಗು ತಂದಿದ್ದರು. ದೀಪಾವಳಿಯ ಆರಂಭದ ಎರಡು ದಿನಗಳ ಸಂಭ್ರಮ ಮುಗಿದಿದೆ. ದೀಪಾವಳಿಯ ಅಮವಾಸ್ಯೆಯಂದು ವಾಹನ ಪೂಜೆ, ಅಂಗಡಿ ಪೂಜೆಗಳು ನಡೆಯುತ್ತಿದ್ದವು. ಈ ಬಾರಿ ಅಮವಾಸ್ಯೆ ದಿನವೇ ಸೂರ್ಯಗ್ರಹಣ ಹಿನ್ನೆಲೆ ಸೋಮವಾರವೇ ಪೂಜಾ ಕಾರ್ಯಕ್ರಮಗಳು ನಡೆದವು. 

ಅನೇಕರು ತಮ್ಮ ವಾಹನಗಳನ್ನು ದೇವಾಲಯಕ್ಕೆ ತಂದು ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಕೃಷಿ ಯಂತ್ರ, ಪಂಪ್‌ ಸೆಟ್‌ ಇತ್ಯಾದಿ ಯಂತ್ರೋಪಕರಣಗಳನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಯಿತು. ಅನೇಕ ಸಂಘ ಸಂಸ್ಥೆಯ ಮುಖ್ಯಸ್ಥರು, ಕಚೇರಿ ಮತ್ತು ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳನ್ನು ಮಾವಿನ ತಳಿರು ತೋರಣಗಳಿಂದ ಶೃಂಗರಿಸಿ ಧನಲಕ್ಷ್ಮೀ ಪೂಜೆ ಸಲ್ಲಿಸುವ ಮೂಲಕ ವ್ಯಾಪಾರ ವೃದ್ಧಿಗಾಗಿ ಪ್ರಾರ್ಥಿಸಿದರು.

ಅಲಂಕೃತಗೊಂಡ ಅಂಗಡಿಗಳು: ಅಂಗಡಿ, ಹೋಟೆಲ್‌ಗಳನ್ನು ಅಲಂಕರಿಸಲಾಗಿತ್ತು. ಹಳೇ ಲೆಕ್ಕಗಳನ್ನು ಮುಗಿಸಿ ಹೊಸ ಲೆಕ್ಕಕ್ಕೆ ನಾಂದಿ ಹಾಡಲಾಯಿತು. ಹಳೇ ಪುಸ್ತಕ ತೆಗೆದು ಹೊಸ ಪುಸ್ತಕ ಇಡಲಾಯಿತು. ಸ್ಟುಡಿಯೋಗಳಲ್ಲಿ ಕ್ಯಾಮೆರಾಗಳಿಗೆ, ಸಲೂನ್‌ಗಳಲ್ಲಿ ಕತ್ತರಿ, ಬಾಚಣಿಗೆಗಳನ್ನು, ಪುಸ್ತಕದ ಅಂಗಡಿಯಲ್ಲಿ ಪೆನ್ನು ಪುಸ್ತಕಗಳನ್ನು ಹೀಗೆ ಆಯಾ ಅಂಗಡಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.

ಪೂಜೆಗೆ ಬಂದವರಿಗೆ ಸತ್ಕಾರ: ಅಂಗಡಿ ಪೂಜೆಗೆ ಬಂದವರಿಗೆ ಪ್ರಸಾದದ ಜತೆಗೆ ಸಿಹಿ ತಿಂಡಿ ನೀಡಿ, ತಂಪು ಪಾನೀಯ ಕೊಟ್ಟು ಸತ್ಕರಿಸಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಎರಡು ದಿನ ಪಟಾಕಿ ವ್ಯಾಪಾರ ಹೆಚ್ಚು ನಡೆಯಿತು.

Chikkamagaluru: ಪೌರ ಕಾರ್ಮಿಕರ ಮನೆಯಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಿದ ಸಿ ಟಿ ರವಿ

ಬೆಳಕಿನ ಹಬ್ಬಕ್ಕೆ ಎಲ್ಲಡೆ ಜಗಮಗ: ಬಹುತೇಕ ಮನೆಗಳಿಗೆ ವಿದ್ಯುತ್‌ ಅಲಂಕಾರ ಮಾಡಲಾಗಿತ್ತು. ಕೆಲವು ಕಡೆ ಆಕರ್ಷಕ ಗೂಡುದೀಪಗಳು, ಆಕಾಶಬುಟ್ಟಿಗಳನ್ನು ಇಡಲಾಗಿತ್ತು. ಆಕರ್ಷಕ ಹಣತೆಗಳು ಬೆಳಗಿದವು. ಬುಧವಾರ ಬಲಿಪಾಡ್ಯಮಿಯಂದು ಕೊನೇ ದಿನದ ಸಂಭ್ರಮಕ್ಕೆ ಜನ ಸಜ್ಜಾಗಿದ್ದಾರೆ.