Asianet Suvarna News Asianet Suvarna News

ಚಿಕ್ಕಮಗಳೂರು: ದತ್ತ ಜಯಂತಿಗೆ ಶಾಂತಿಯುತ ತೆರೆ, ಮಾಲಾಧಾರಿಗಳಿಗೆ ಪಾದುಕೆ ದರ್ಶನ

ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ದತ್ತ ಮಾಲಾಧಾರಿಗಳು ಪಾದುಕೆ ದರ್ಶನ ಪಡೆದು ದತ್ತ ಪೀಠ ಸಂಪೂರ್ಣ ಹಿಂದೂಗಳ ಪೀಠವಾಗಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದ್ರು.

Peaceful End for Datta Jayanti in Chikkamagaluru grg
Author
First Published Dec 27, 2023, 1:36 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಡಿ.27):  ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿದ್ದ ಅದ್ಧೂರಿ ದತ್ತ ಜಯಂತಿಗೆ ಶಾಂತಿಯುತ ತೆರೆ ಬಿದ್ದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ದತ್ತ ಮಾಲಾಧಾರಿಗಳು ಪಾದುಕೆ ದರ್ಶನ ಪಡೆದು ದತ್ತ ಪೀಠ ಸಂಪೂರ್ಣ ಹಿಂದೂಗಳ ಪೀಠವಾಗಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದ್ರು.

ಇರುಮುಡಿ ಅರ್ಪಿಸಿದ ದತ್ತಭಕ್ತರು : 

ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ಆಯೋಜಿಸಲಾಗಿದ್ದ ಈ ಬಾರಿಯ ದತ್ತ ಜಯಂತಿ ಉತ್ಸವ ಶಾಂತಿಯುತವಾಗಿ ಸಂಪನ್ನಗೊಂಡು ರಾಜ್ಯದ ಮೂಲೆ ಮೂಲೆಗಳಿಂದ ದತ್ತಾತ್ರೇಯನ ಭಜನೆ ಮಾಡುತ್ತ ದತ್ತಪೀಠಕ್ಕೆ ಆಗಮಿಸಿದ ಮಾಲಾಧಾರಿಗಳು, ಹೋಮ, ಹವನ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇರುಮುಡಿ ಅರ್ಪಿಸಿ ಹಿಂತಿರುಗಿದರು.

ದತ್ತಪೀಠ ಭಾಗಶಃ ಹಿಂದೂಗಳಿಗೆ ಸಿಕ್ಕಂತಾಗಿದೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸರತಿ ಸಾಲಿನಲ್ಲಿ ಸಾಗಿ ಪಾದುಕೆ ದರ್ಶನ : 

ಭಕ್ತರು, ಬ್ಯಾರಿಕೇಡ್‌ನಲ್ಲಿ ಸರತಿಯಲ್ಲಿ ಸಾಗಿ ಪಾದುಕೆಗಳ ದರ್ಶನ ಪಡೆದರು. ಗುಹೆ ಎದುರು ಭಾಗದ ಆವರಣದಲ್ಲೇ ನಡೆದ ಹೋಮ ಹವನಗಳನ್ನು ಕಣ್ತುಂಬಿಕೊಂಡು ಹೊರ ಆವರಣದ ಶೆಡ್ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅಲ್ಲಿಯೇ ಇರುಮುಡಿ ಅರ್ಪಿಸಿದರು.

ಹೋಮ ಹವನ, ಧಾರ್ಮಿಕ ಸಭೆ: 

ಸರ್ಕಾರದಿಂದ ನೇಮಿಸಲ್ಪಟ್ಟ ಶ್ರೀಧರ್ ಭಟ್ ಕುಡಿನೆಲ್ಲಿ ಮತ್ತು ಶಿವರಾಂ ಭಟ್ ಶೃಂಗೇರಿ ಅವರುಗಳು ಪಾದುಕೆಗಳಿಗೆ ಪೂಜೆ ನೆರವೇರಿಸಿದರೆ,  ಪ್ರವೀಣ್ ಭಟ್ ಕಮ್ಮರಡಿ, ಖಾಂಡ್ಯ ಪ್ರವೀಣ್, ಸುಮಂತ್ ನೆಮ್ಮಾರ್  ಪುರೋಹಿತರ ತಂಡ ಹೋಮ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇದೇ ವೇಳೆ ನಡೆದ ಧಾರ್ಮಿಕ ಸಭೆಯಲ್ಲಿ ಕಡೂರು ಎಳನಡು ಮಠದ ಶ್ರೀ ಜ್ಞಾನ ಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಬೀರೂರಿನ ಬಾಳೆಹೊನ್ನೂರು ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಶ್ರೀ ಶೈಲ ಶಾಖಾ ಮಠದ ಶ್ರೀ ಚನ್ನಮಲ್ಲಿಜಾರ್ಜುನ ಸ್ವಾಮೀಜಿ, ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಶ್ರೀ ಜಯಬಸವಾನಂದ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡಿದರು.

ಪೀಠಕ್ಕೆ ಗಣ್ಯರ ಭೇಟಿ : 

ವಿಶ್ವಹಿಂದೂ ಪರಿಷತ್ ಅಖಿಲ ಭಾರತ ಸಹಕಾರ್ಯದರ್ಶಿ ಶಂಕರ್ ಗಾಯ್ಕರ್, ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ್, ಆಧ್ಯಾತ್ಮಿಕ ಗುರು ದ್ವಾರಕನಾಥ್, ಹೈಕೋರ್ಟ್ ವಕೀಲ ಜಗದೀಶ್ ಬಾಳಿಗ, ಚೈತನ್ಯಮಯಿ ಡಾ.ಮಾತಾ ಅಂಬಿಕಾ ಇತರರು ಉತ್ಸವದಲ್ಲಿ ಭಾಗವಹಿಸಿದರು. ಮಾಜಿ ಶಾಸಕ ಸಿ.ಟಿ.ರವಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಇತರರು ಭಾಗವಹಿಸಿದ್ದರು. ಕಡೂರು ತಾಲ್ಲೂಕು ಹಾಗೂ ಹಾಸನ ಜಿಲ್ಲೆಗಳಿಂದ ನೂರಾರು ವಾಹನಗಳಲ್ಲಿ ಮಾಲಾಧಾರಿಗಳು ಏಕ ಕಾಲದಲ್ಲಿ ಪೀಠದತ್ತ ಆಗಮಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನ ಗಿರಿ ರಸ್ತೆಯಲ್ಲಿ ಆಗಾಗಾ ಟ್ರಾಫಿಕ್ ಜಾಮ್ ಉಂಟಾಯಿತು. 

ಬಿಗಿ ಪೊಲೀಸ್ ಭದ್ರತೆ : 

ದತ್ತಪೀಠದ ಮಾರ್ಗದುದ್ದಕ್ಕೂ ಹಾಗೂ ಪೀಠದ ಪರಿಸರದಲ್ಲಿರುವ ಎಲ್ಲ ಗೋರಿಗಳ ಬಳಿಯೂ ಬಿಗಿ ಪೊಲೀಸ್ ಪಹರೆ ಏರ್ಪಡಿಸಲಾಗಿತ್ತು. ನಗರದ ಸೂಕ್ಷ್ಮ ಪ್ರದೇಶಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಸಿ.ಎಸ್.ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಆಮಟೆ ಪೀಠದಲ್ಲೇ ಇದ್ದರು.ನ್ಯಾಯಾಲಯದ ಆದೇಶದಂತೆ ಕಳೆದ ಬಾರಿ ರಾಜ್ಯ ಸರ್ಕಾರ ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸಿರುವ ಹಿನ್ನೆಲೆಯಲ್ಲಿ ಇಂದು ಪೀಠದಲ್ಲಿ ನಡೆದ ಎಲ್ಲಾ ಪೂಜಾ ಕೈಂಕರ್ಯಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗೂ ಸಮಿತಿ ಉಸ್ತುವಾರಿಯಲ್ಲೇ ನಡೆಯಿತು.  

ದತ್ತ ಜಯಂತಿ: ದತ್ತಮಾಲಾಧಾರಿ ಸಿ ಟಿ ರವಿಯಿಂದ ಮನೆ ಮನೆಗೆ ತೆರಳಿ ಭಿಕ್ಷಾಟನೆ

ರಸ್ತೆ ಬದಿಯಲ್ಲಿದ್ದ ದರ್ಗಾಕ್ಕೆ ಕಿಡಿಗೆಡಿಗಳಿಂದ ಹಾನಿ : 

ಯವಕರಗುಂಪು ರಸ್ತೆ ಬದಿಯಲ್ಲಿದ್ದ ದರ್ಗಾಕ್ಕೆ ಹಾನಿ ಮಾಡಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂತವೇರಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.ಚಿಕ್ಕಮಗಳೂರು-ತರೀಕೆರೆ ರಾಜ್ಯ ಹೆದ್ದಾರಿ ಬದಿಯಲ್ಲಿರುವ ದರ್ಗಾದ ಬಳಿ ಭದ್ರಾವತಿ ತಾಲೂಕಿನಿಂದ ಸುಮಾರು 25 ಬೈಕ್‌ಗಳಲ್ಲಿ ಆಗಮಿಸಿದ್ದ ಯವಕರಗುಂಪು ದರ್ಗಾದ ಬಳಿ ಬೈಕ್ ನಿಲ್ಲಿಸಿಕೊಂಡು ಘೋಷಣೆ ಕೂಗುತ್ತ ಗೊಂದಲ ಸೃಷ್ಟಿಸಿದ್ದಾರೆ. ಈ ವೇಳೆ ದರ್ಗಾದ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಅಪರಿಚಿತರನ್ನು ಮುಂದೆ ಹೋಗುವಂತೆ ತಿಳಿಸಿದ್ದಾರೆ. 

ಪೊಲೀಸರ ಸೂಚನೆ ಧಿಕ್ಕರಿಸಿದ ಅವರು ದರ್ಗಾದ ಬಳಿ ಆಗಮಿಸಿ ಹಸಿರು ಬಾವುಟವನ್ನು ಕಿತ್ತು ಹಾಕಿದ್ದಲ್ಲದೇ ಅಲ್ಲಿದ್ದ ಕಾಣಿಕೆ ಡಬ್ಬಿಗೂ ಹಾನಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ತರಿಕೆರೆ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Latest Videos
Follow Us:
Download App:
  • android
  • ios