Asianet Suvarna News Asianet Suvarna News

Nag Panchami 2024 : ಇದು ನಾಗನ ಆರಾಧನೆಯೂ ಹೌದು, ಅಣ್ಣ-ತಂಗಿ ಬಾಂಧವ್ಯ ಬೆಸೆಯುವ ಹಬ್ಬವೂ ಹೌದು

ಈ ಹಬ್ಬವು ಅಣ್ಣ-ತಂಗಿ ಇಬ್ಬರೂ ಸೇರಿ ನಾಗರಾಜನನ್ನು ಪೂಜಿಸುವ ಹಬ್ಬವೆಂದು ಪ್ರತೀತಿ. ಅದರಲ್ಲಿಯೂ ನಾಗಪಂಚಮಿ ಶ್ರಾವಣ ಮಾಸದ ಮೊದಲ ಹಬ್ಬ. ಇಲ್ಲಿಂದ ವರ್ಷದ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ.
 

Nag Panchami 2024 what is the significance of Nagapanchami festival in india rav
Author
First Published Aug 9, 2024, 10:33 AM IST | Last Updated Aug 9, 2024, 11:49 AM IST

- ಬಸವರಾಜ ಎಂ. ಯರಗುಪ್ಪಿ
ನಾಗರಪಂಚಮಿ ನಾ ಹೇಗೆ ಮರೆಯಲಿ ಅಣ್ಣಾ. ಗೆಳತಿಯರೊಡನೆ ಜೋಕಾಲಿ ಆಡುವ ಆಸೆ ಅಣ್ಣಾ. ನನ್ನನ್ನು ತವರಿಗೆ ಕರೆಯುವುದನ್ನು ಮರೆಯಬೇಡ ಅಣ್ಣಾ. ಇದು ಪ್ರತಿಯೊಬ್ಬ ಸಹೋದರಿಯರ ಕೋರಿಕೆ. ಹಾಗೆಯೇ ‘ಪಂಚಮಿ ಬಂದಿತು ಸನಿಹಾಕ, ಅಣ್ಣ ಬರಲಿಲ್ಲ ಕರಿಯಾಕ’ ಎಂದು ಗಂಡನ ಮನೆಯಲ್ಲಿರುವ ಸಹೋದರಿ ತವರ ಮನೆಯನ್ನು ನೆನೆಸಿಕೊಂಡು ತನ್ನ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಎಷ್ಟೇ ವರ್ಷವಾಗಿದ್ದರೂ ಸಹ ಸಹೋದರಿಯರಿಗೆ ತವರು ಮನೆಯ ಮೇಲಿನ ವ್ಯಾಮೋಹ ಕಡಿಮೆಯಾಗಿರುವುದಿಲ್ಲ. ಏಕೆಂದರೆ ಈ ಹಬ್ಬವು ಅಣ್ಣ-ತಂಗಿ ಇಬ್ಬರೂ ಸೇರಿ ನಾಗರಾಜನನ್ನು ಪೂಜಿಸುವ ಹಬ್ಬವೆಂದು ಪ್ರತೀತಿ. ಅದರಲ್ಲಿಯೂ ನಾಗಪಂಚಮಿ ಶ್ರಾವಣ ಮಾಸದ ಮೊದಲ ಹಬ್ಬ. ಇಲ್ಲಿಂದ ವರ್ಷದ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ.

ನಾಗರ ಪಂಚಮಿಯು ಉತ್ತರ ಕರ್ನಾಟಕದವರಿಗೆ ದೊಡ್ಡ ಹಬ್ಬವಾಗಿದೆ. ಹಬ್ಬದಲ್ಲಿ ನಾಗದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ.

ಪಿತೃದೋಷ, ನಾಗದೋಷ ನಿವಾರಣೆಗಾಗಿ ನಾಗಪಂಚಮಿ ದಿನದಂದು ಮಾಡಿ ಈ 6 ಕೆಲಸ

ನಾಗರ ಪಂಚಮಿ ಕಥೆ

ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ 4 ಜನ ಅಣ್ಣಂದಿರಿದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ವೇಳೆ ಅಲ್ಲಿಗೆ ಬಂದ ನಾಗರಹಾವು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ನಂತರ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿ ನನ್ನ 4 ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಳು. ಬಳಿಕ ನಾಗರ ಹಾವು ಒಬ್ಬ ಅಣ್ಣನನ್ನು ಬದುಕಿಸಿತು. ನಂತರ ಅಣ್ಣ-ತಂಗಿ ಇಬ್ಬರೂ ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ನಾಗರ ಪಂಚಮಿ ಪೌರಾಣಿಕ ಹಿನ್ನೆಲೆ

ಶ್ರಾವಣ ಮಾಸವೆಂದರೆ ಹಿಂದುಗಳಿಗೆ ಪವಿತ್ರವಾದ ತಿಂಗಳು. ಈ ಮಾಸದ ಚತುರ್ಥಿ ಹಾಗೂ ಪಂಚಮಿಯಂದು ಬರುವ ನಾಗರ ಪಂಚಮಿಯ ಪೌರಾಣಿಕ ಹಿನ್ನೆಲೆಯೂ ವಿಶಿಷ್ಟವಾಗಿದೆ. ಜನಮೇಜಯ ತಂದೆಯ ಪರೀಕ್ಷಿತರಾಜನ ಸಾವಿಗೆ ಸರ್ಪ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಭೂ ಲೋಕದಲ್ಲಿರುವ ಸರ್ಪಗಳನ್ನು ನಾಶ ಮಾಡಲು ಸರ್ಪಯಜ್ಞ ಆರಂಭಿಸುತ್ತಾನೆ. ಈ ವೇಳೆ ಸರ್ಪಗಳ ಸಂಬಂಧಿಯಾದ ಆಸ್ತಿಕ ಮುನಿಯು ಪರೀಕ್ಷಿತರಾಜರನ್ನು ಸಮಾಧಾನಗೊಳಿಸಿ, ಪ್ರಾಣಿ ಹಿಂಸೆ ಮಹಾಪಾಪ ಎಂದು ಹೇಳಿ ಸರ್ಪಯಜ್ಞ ನಿಲ್ಲಿಸುತ್ತಾನೆ. ಈ ದಿನವನ್ನೇ ನಾಡಿನಲ್ಲಿ ನಾಗರ ಪಂಚಮಿಯಾಗಿ ಆಚರಿಸುತ್ತಾರೆ ಎಂದು ಪೌರಾಣಿಕ ಕಥೆ ಹೇಳುತ್ತದೆ.

ನಾಗರ ಪಂಚಮಿಯ ಪೂಜೆ

ನಾಗರಪಂಚಮಿಯ ದಿನ ಅರಿಶಿಣ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ 9 ಪ್ರಮುಖ ಗುಂಪುಗಳಾಗಿವೆ. ಈ ವರ್ಷ ನಾಗರ ಪಂಚಮಿ ಶುಕ್ರವಾರ ಬಂದಿದ್ದು, ಈ ದಿನವೇ ಶುಕ್ರಗೌರಿ ವ್ರತವನ್ನು ಸಹ ಆಚರಿಸುವುದರಿಂದ ನಾಗರಪಂಚಮಿಯಂದು ನಾಗದೇವತೆಯೊಂದಿಗೆ ಶಿವ ಪಾರ್ವತಿಯನ್ನು ಪೂಜಿಸಲಾಗುವುದು.

ಉತ್ತರ ಕರ್ನಾಟಕದಲ್ಲಿ ವಿಶೇಷ ಆಚರಣೆ

ಸಾಮಾನ್ಯವಾಗಿ ನಾಗರಪಂಚಮಿ ಆರಂಭವಾಗುವುದೇ ನಾಗರ ಅಮಾವಾಸ್ಯೆಯಿಂದ. ಅಮಾವಾಸ್ಯೆಯ ನಂತರ 3ನೇ ದಿನ ರೊಟ್ಟಿ ಹಬ್ಬ, 4ನೇ ದಿನ ಚತುರ್ಥಿ, 5ನೇ ದಿನ ಪಂಚಮಿ ಆಚರಿಸುತ್ತಾರೆ. ರೊಟ್ಟಿ ಹಬ್ಬದಂದು ಮನೆಯಲ್ಲಿ ಬಗೆ ಬಗೆಯ ಪಲ್ಯ, ಚಟ್ನಿ ತಯಾರಿಸಿ ರೊಟ್ಟಿ, ಚಪಾತಿಯನ್ನು ತಯಾರಿಸಿ ತಮ್ಮ ಅಕ್ಕಪಕ್ಕದ ಮನೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ಇದಕ್ಕೆ ಕಾರಣ ನಾಗರಪಂಚಮಿ ಹಬ್ಬದ ನಾಲ್ಕೈದು ದಿನ ಉಂಡಿ, ಹೋಳಿಗೆ ಮಾಡುವುದರಿಂದ ನಾಲ್ಕೈದು ದಿನಕ್ಕೆ ಬೇಕಾಗುವಷ್ಟು ಸಜ್ಜಿ, ಜೋಳದ ಹಿಟ್ಟಿನಲ್ಲಿ ಎಳ್ಳು ಹಾಕಿ ರೊಟ್ಟಿ ತಯಾರಿಸುತ್ತಾರೆ. ಅದನ್ನೇ ಬಾಂಧವ್ಯ ರೂಪದಲ್ಲಿ ಹಂಚಿಕೊಳ್ಳುತ್ತಾರೆ.

ರೊಟ್ಟಿ ಹಬ್ಬದ ನಂತರ ಶೇಂಗಾ ಉಂಡಿ, ಅಳ್ಳಿಟ್ಟು ಉಂಡಿ, ಎಳ್ಳುಂಡಿ, ಬೂಂದಿ ಉಂಡಿ ಹಾಗೂ ಚಕ್ಕುಲಿ ಸೇರಿ ಬಗೆ ಬಗೆಯ ಉಂಡಿಗಳನ್ನು ತಯಾರಿಸುತ್ತಾರೆ. ಈ ಉಂಡಿಗಳನ್ನು ಶ್ರಾವಣ ಮಾಸ ಪೂರ್ತಿ ತಿನ್ನುವುದು ವಾಡಿಕೆ. ಬೇರೆ ಬೇರೆ ಊರುಗಳಲ್ಲಿರುವ ತಮ್ಮ ಸಂಬಂಧಿಕರಿಗೆ ಉಂಡಿ ಕೊಟ್ಟು ತರುವ ಸಂಪ್ರದಾಯವಿದೆ. ಅದರಲ್ಲಿಯೂ ತವರು ಮನೆಯಿಂದ ಉಂಡಿ ಬರಲೇಬೇಕು. ಇದು ಸಹೋದರ ಸಹೋದರಿಯರ ಮಧ್ಯೆ ಬಾಂಧವ್ಯಕ್ಕೆ ಸಾಕ್ಷಿಯಾಗುತ್ತದೆ.

ರೈತರು ಹುತ್ತಕ್ಕೆ ಹಾಲೆರೆಯುವ ಹಬ್ಬ

ನಾಗರಪಂಚಮಿಯು ರೈತರ ಹಬ್ಬವಾಗಿದೆ. ಅದರಲ್ಲಿಯೂ ಮುಂಗಾರು ಬೆಳೆ ಬರುವ ಕಾರಣ ರೈತರಿಗೆ ಇದು ಸಂಭ್ರಮದ ಹಬ್ಬ. ವಿಷಜಂತು ಎಂದು ಕರೆಯುವ ಹಾವುಗಳು ರೈತರಿಗೆ ಕೃಷಿ ಸ್ನೇಹಿಗಳಾಗಿವೆ. ಮಣ್ಣಿನಲ್ಲಿರುವ ಕೀಟಗಳನ್ನು ತಿನ್ನುವ ಹಾವುಗಳು ಭೂಮಿಯ ಫಲವತ್ತಾದ ಪ್ರದೇಶದಲ್ಲಿಯ ಹುತ್ತದಲ್ಲಿ ವಾಸವಾಗಿರುತ್ತವೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ರೈತರು ನಾಗರ ಪಂಚಮಿಯಿಂದ ವಿಷಜಂತುಗಳು ಮನುಷ್ಯರಿಗೆ ಕಾಟ ನೀಡದೆ, ಭೂಮಿಯಲ್ಲಿಯ ಕೀಟಗಳನ್ನು ತಿಂದು ಫಸಲು ಕೈಗೆ ಬರಲಿ ಎಂಬ ಕಾರಣಕ್ಕೆ ಹುತ್ತಕ್ಕೆ ಹಾಲೆರೆಯುತ್ತಾರೆ.

ನಾಗಪಂಚಮಿ ದಿನವೇ ಶಿವನ ದೇವಾಲಯದಲ್ಲಿ ನಾಗ ಪ್ರತ್ಯಕ್ಷ; ದರ್ಶನಕ್ಕೆ ಮುಗಿಬಿದ್ದ ಭಕ್ತರು

ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಒಲೆಯ ಮೇಲೆ ತವೆಯನ್ನು ಇಡಬಾರದು ಹಾಗೂ ಭೂಮಿಯನ್ನು ಅಗೆಯಬಾರದು ಮುಂತಾದ ನಿಷೇಧ ನಿಯಮಗಳನ್ನು ಹಿರಿಯರು ಈ ದಿನ ಪಾಲಿಸುತ್ತಾ ಬಂದಿದ್ದಾರೆ. ಅದರ ನಡುವೆ ರೊಟ್ಟಿ ಹಬ್ಬ ಮಾಡಿ, ಬಗೆ ಬಗೆಯ ಉಂಡಿಗಳನ್ನು ಮಾಡಿ, ನಾಗದೇವತೆಯನ್ನು ಪೂಜಿಸಿ, ಹುತ್ತಗಳಿಗೆ ಹಾಲೆರದು ಸಂಭ್ರಮದಿಂದ ಆಚರಿಸಿ, ಪ್ರೀತಿ, ವಿಶ್ವಾಸ ಬಂಧುತ್ವದೊಂದಿಗೆ ಸಹೋದರ ಮತ್ತು ಸಹೋದರಿಯರ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬವಾಗಿ ಈ ನಾಗ ಪಂಚಮಿ ಬರುವ ವರ್ಷದವರೆಗೆ ಹರುಷದಿಂದ ಇರುವಂತೆ ಮಾಡುತ್ತದೆ.

Latest Videos
Follow Us:
Download App:
  • android
  • ios