Asianet Suvarna News Asianet Suvarna News

ಸಹಸ್ರ ಚಂದ್ರ ದರ್ಶನ ಮಾಡಿದವ್ರಿಗೇಕೆ ಕೊಡಬೇಕು ದಶದಾನ?

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಧ್ಯಕ್ಷ ಜೋ ಬಿಡೆನ್‌ಗೆ ದಶದಾನ ನೀಡಿದ್ದಾರೆ. ಏನಿದರ ಮಹತ್ವ? ಉಪನಿಶದ್ ಪ್ರಕಾರ ದಶದಾನ ಏಕೆ ಮಾಡಬೇಕು?

Modi donates Dasha dana to Joe Biden what is the benefit of Dashadanam according to Hindu belief skr
Author
First Published Jun 22, 2023, 10:45 AM IST | Last Updated Jun 22, 2023, 11:00 AM IST

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಶ್ವೇತಭವನದಲ್ಲಿ ಆತಿಥ್ಯ ನೀಡಿದರು. ಆ ಸಂದರ್ಭದಲ್ಲಿ ಇಬ್ಬರೂ ನಾಯಕರು ಪರಸ್ಪರ ಉಡುಗೊರಗಳನ್ನು ಹಂಚಿಕೊಂಡರು. ಪ್ರಧಾನಿ ಮೋದಿ ಜೋ ಬಿಡನ್ ಅವರಿಗೆ ಕರಕುಶಲ ಶ್ರೀಗಂಧದ ಪೆಟ್ಟಿಗೆಯನ್ನು ಮತ್ತು ಪ್ರಥಮ ಮಹಿಳೆಗೆ 7.5 ಕ್ಯಾರೆಟ್ ಪರಿಸರ ಸ್ನೇಹಿ ಹಸಿರು ವಜ್ರವನ್ನು ನೀಡಿದರು. ವಿಶೇಷವೆಂದರೆ, ಈ ಗಂಧದ ಪೆಟ್ಟಿಗೆಯೊಳಗೆ ಹಿಂದೂ ಸಂಪ್ರದಾಯದಂತೆ ಮೋದಿ ದಶದಾನ ಮಾಡಿದರು. 

ಹಿಂದೂ ಧರ್ಮದಲ್ಲಿ ಅನೇಕ ಕಾರಣಗಳಿಗೆ ದಶದಾನ ಕೊಡುವ ಪದ್ಧತಿ  ಇದೆ. ಇದೀಗ ಮೋದಿಯೇಕೆ ಬೈಡನ್‌ಗೆ ದಶದಾನ ನೀಡಿದರು, ದಶದಾನ ಎಂದರೆ ಏನು, ಪ್ರಯೋಜನವೇನು ಎಲ್ಲ ವಿವರ ನೋಡೋಣ. 

ನಮ್ಮ ವೇದಗಳ ಪ್ರಕಾರ ದಾನವನ್ನು ನೀಡುವುದು ಒಂದು ಮಹತ್ವದ ಕಾರ್ಯವಿಧಾನವಾಗಿದೆ. ಮರಣಾನಂತರ, ಒಬ್ಬ ವ್ಯಕ್ತಿಯು ಜೀವಿತಾವಧಿಯಲ್ಲಿ ಮಾಡಿದ ಕರ್ಮದ ಪ್ರಕಾರ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಆದರೆ, ದಶದಾನವು ಆ ವ್ಯಕ್ತಿಗೆ ಮೋಕ್ಷ ಸಾಧಿಸಲು ಸಹಾಯ ಮಾಡುತ್ತದೆ. ಆದರೆ, ಮೋದಿ ಈಗ ಬೈಡನ್‌ಗೆ ದಶದಾನ ಕೊಟ್ಟ ಕಾರಣ ಬೇರೆಯೇ ಇದೆ. 

ಬೈಡೆನ್‌ಗೆ ಕರುನಾಡ ಶ್ರೀಗಂಧ ಉಡುಗೊರೆ : ದಶದಾನ ಮಾಡಿದ ಪ್ರಧಾನಿ ಮೋದಿ

ಸಹಸ್ರಹುಣ್ಣಿಮೆ ದರ್ಶನ
ನವೆಂಬರ್‌ನಲ್ಲಿ ಬಿಡೆನ್‌ಗೆ 81ನೇ ವರ್ಷ ತುಂಬುತ್ತಿದೆ. ಸಾಮಾನ್ಯವಾಗಿ ವ್ಯಕ್ತಿಗೆ 80 ವರ್ಷ, 8 ತಿಂಗಳು ತುಂಬಿದಾಗ ಅವರು ಒಂದು ಸಾವಿರ ಹುಣ್ಣಿಮೆಗಳ ದರ್ಶನ(Sahasra purna chandrodayam) ಮಾಡಿರುತ್ತಾರೆ. ಈ ಸಂದರ್ಭವನ್ನು 'ದೃಷ್ಟ ಸಹಸ್ರಚಂದ್ರೋ' ಎನ್ನಲಾಗುತ್ತದೆ ಮತ್ತು ಇದಕ್ಕಾಗಿ ದಶದಾನ ನೀಡುವ ವಾಡಿಕೆ ಇದೆ. ಅದರಂತೆ ಪ್ರಧಾನಿ ಮೋದಿ, ಬಿಡೆನ್‌ಗೆ ಗಂಧದ ಪೆಟ್ಟಿಗೆಯೊಳಗೆ, ಕೆತ್ತನೆಗಳುಳ್ಳ ಬೆಳ್ಳಿ ಬಟ್ಟಲುಗಳಲ್ಲಿ 10 ರೀತಿಯ ದಾನದ ವಸ್ತುಗಳನ್ನು ನೀಡಿದ್ದಾರೆ. 

ಗೋದಾನದ ರೂಪದಲ್ಲಿ ಬೆಳ್ಳಿ ತೆಂಗಿನಕಾಯಿ, ಭೂದಾನವಾಗಿ ಕರ್ನಾಟಕದ ಶ್ರೀಗಂಧದ ಕೊರಡು, ತಿಲದಾನವಾಗಿ ತಮಿಳುನಾಡಿನ ಬಿಳಿ ಎಳ್ಳು ದಾನ, ಹಿರಣ್ಯದಾನವಾಗಿ ರಾಜಸ್ಥಾನದ 24 ಕ್ಯಾರೆಟ್​ ಬಂಗಾರದ ನಾಣ್ಯ, ರೌಪ್ಯದಾನವಾಗಿ ರಾಜಸ್ಥಾನದ ಕೆತ್ತನೆಯ ಬೆಳ್ಳಿ ನಾಣ್ಯ ದಾನ, ಲವಣದಾನವಾಗಿ ಗುಜರಾತಿನ ಉಪ್ಪು, ಆಜ್ಯದಾನವಾಗಿ ತುಪ್ಪ, ಧಾನ್ಯ ದಾನ, ವಸ್ತ್ರ ದಾನ, ಬೆಲ್ಲ ದಾನವನ್ನು ಮಾಡಿದ್ದಾರೆ. ಇದರೊಂದಿಗೆ ಗಣೇಶನ ಬೆಳ್ಳಿಯ ವಿಗ್ರಹ, ಬೆಳ್ಳಿಯ ದೀಪವನ್ನೂ ಇರಿಸಲಾಗಿದೆ. ಪ್ರಧಾನಮಂತ್ರಿಯವರು ಜೋ ಬಿಡೆನ್ ಅವರಿಗೆ 'ದಿ ಟೆನ್ ಪ್ರಿನ್ಸಿಪಾಲ್ ಉಪನಿಷದ್' ಪುಸ್ತಕದ ಮೊದಲ ಆವೃತ್ತಿಯ ಮುದ್ರಣದ ಪ್ರತಿಯನ್ನು ಕೂಡಾ ನೀಡಿದ್ದಾರೆ. ಈ ಆಚರಣೆಯು ಉದ್ದೇಶ ಸಹಸ್ರ ಚಂದ್ರ ದರ್ಶನ ಮಾಡಿದವರಿಗೆ ಅವರ ವೃದ್ಧಾಪ್ಯದಲ್ಲಿ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಒದಗಿಸುವುದು ಮತ್ತು ಈ ಜೀವನದಲ್ಲಿ ಎಲ್ಲಾ ಸಮಸ್ಯೆಗಳಿಂದ ಆಧ್ಯಾತ್ಮಿಕ ವಿಮೋಚನೆಯನ್ನು ಮುಂದುವರಿಸಲು ಪ್ರೋತ್ಸಾಹಿಸುವುದು. ವ್ಯಕ್ತಿಯು ಜ್ಞಾನೋದಯ ಹಂತ ತಲುಪಿದ್ದು, ಅದನ್ನು ಸಾಧಿಸಲು ಪ್ರೋತ್ಸಾಹಿಸುವುದು ಉದ್ದೇಶವಾಗಿರುತ್ತದೆ. 

Adhik Maas 2023 ಯಾವಾಗ ಆರಂಭ? ಈ ಮಾಸದ ವಿಶೇಷತೆ ಏನು?

ಹಿಂದೂ ನಂಬಿಕೆಯಂತೆ ದಶ ದಾನದ ಪ್ರಯೋಜನಗಳು

1. ಭೂಮಿ ಅಥವಾ ಚಂದನಂ - ಇದನ್ನು ಮಾಡುವುದರಿಂದ, ಒಬ್ಬ ವ್ಯಕ್ತಿಯು ಬ್ರಹ್ಮಹತ್ಯೆಯಂತಹ ಮಹಾಪಾಪಗಳಿಂದ ಮುಕ್ತನಾಗುತ್ತಾನೆ. ಆರ್ಥಿಕ ಅಸಾಮರ್ಥ್ಯದ ಸಂದರ್ಭದಲ್ಲಿ ಭೂಮಿಯನ್ನು ದಾನವಾಗಿ ನೀಡುವ ಬದಲು ಚಂದನ (ಗಂಧ) ಮರದ ತುಂಡನ್ನು ಅರ್ಪಿಸಲಾಗುತ್ತದೆ. ಚಂದನವು ಅದರ ಪರಿಮಳದಿಂದಾಗಿ ಭೂಮಿಯ ಅಂಶದೊಂದಿಗೆ ಸಂಬಂಧಿಸಿದೆ.
2. ತಿಲ - ತಿಲವು ಕಪ್ಪು ಎಳ್ಳಿನ ಬೀಜವನ್ನು ಸೂಚಿಸುತ್ತದೆ, ಅದು ಆಲೋಚನೆ, ಮಾತು ಮತ್ತು ಕ್ರಿಯೆಯಲ್ಲಿನ ಪಾಪವನ್ನು ತೆಗೆದುಹಾಕುತ್ತದೆ.
3. ಚಿನ್ನ - ಇದು ಎಲ್ಲಾ ದೇವರುಗಳನ್ನು ತೃಪ್ತಿಪಡಿಸುತ್ತದೆ ಮತ್ತು ಯಮ ಲೋಕದ ದುಃಖಗಳಲ್ಲಿ ಒಂದನ್ನು ಉಳಿಸುತ್ತದೆ.
4. ತುಪ್ಪ - ದೇವತೆಗಳನ್ನು ಮೆಚ್ಚಿಸಲು ತುಪ್ಪ ನೀಡಲಾಗುತ್ತದೆ.
5. ವಸ್ತ್ರಂ - ಯಮದೂತರಿಂದ ತೊಂದರೆಯನ್ನು ತಪ್ಪಿಸಲು ವಸ್ತ್ರ ನೀಡಲಾಗುತ್ತದೆ.
6. ಧಾನ್ಯಂ - ಯಮ ಲೋಕದ ದ್ವಾರಪಾಲಕರಿಂದ ತೊಂದರೆಯನ್ನು ತಪ್ಪಿಸಲು.
7. ಬೆಲ್ಲ - ಒಬ್ಬ ವ್ಯಕ್ತಿಯನ್ನು ಉತ್ತಮ ಲೋಕಕ್ಕೆ ಕರೆದೊಯ್ಯಲು ಬೆಲ್ಲವನ್ನು ಕೊಡಲಾಗುತ್ತದೆ.
8. ಬೆಳ್ಳಿ - ಪಾಪಗಳಿಂದ ವಿನಾಯಿತಿ ಪಡೆಯುವುದು ಮತ್ತು ಸ್ವರ್ಗವನ್ನು ಆನಂದಿಸುವುದು.
9. ಉಪ್ಪು - ಯಮನ ಭಯವನ್ನು ನಿವಾರಿಸಲು ಉಪ್ಪನ್ನು ದಾನ ನೀಡಲಾಗುತ್ತದೆ.
10. ಗೋವು - ಗೋವಿನ ದಾನವು ಎಲ್ಲ ರೀತಿಯ ನರಕಗಳ ಆಚೆಗೆ ಒಯ್ಯುತ್ತದೆ ಮತ್ತು ಮುಕ್ತಿಯನ್ನು ಪಡೆಯುತ್ತದೆ.

Latest Videos
Follow Us:
Download App:
  • android
  • ios