Asianet Suvarna News Asianet Suvarna News

Male Mahadeshwara Betta: 32 ದಿನದಲ್ಲಿ 2.53 ಕೋಟಿ ರೂ.ಗೂ ಅಧಿಕ ಕಾಣಿಕೆ ಸಂಗ್ರಹ

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ..
ನಿನ್ನೆ ತಡರಾತ್ರಿವರೆಗೂ ನಡೆದ ಹುಂಡಿ ಎಣಿಕೆ..
 2,53,58,519 ರೂಪಾಯಿ ಕಾಣಿಕೆ ಅರ್ಪಿಸಿರುವ ಭಕ್ತರು..
ಈ ಬೆಟ್ಟದ ಮಹತ್ವವೇನು?

Male Mahadeshwara temple receives 2.5 cr donation in a month skr
Author
First Published May 31, 2023, 11:08 AM IST

ಚಾಮರಾಜನಗರ: ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಸುವ ಕಾರ್ಯ ನಿನ್ನೆ ತಡರಾತ್ರಿವರೆಗೂ ನಡೆದಿದ್ದು, ಕಳೆದ 32 ದಿನಗಳ ಅವಧಿಯಲ್ಲಿ ಮಹದೇಶ್ವರನಿಗೆ 2.53 ಕೋಟಿ ರೂಪಾಯಿಗೂ ಹೆಚ್ಚು ನಗದು ಸಂಗ್ರಹವಾಗಿದೆ. ಇದರಲ್ಲಿ 14 ಲಕ್ಷ ರುಪಾಯಿಗೂ ಹೆಚ್ಚು ಹಣ ನಾಣ್ಯದ ರೂಪದಲ್ಲೇ ಸಂಗ್ರಹವಾಗಿದೆ. ಅಷ್ಟೇ ಅಲ್ಲ, ನಗದಿನ ಜೊತೆಗೆ, 65 ಗ್ರಾಂ ಚಿನ್ನ, 3ಕೆಜಿ 358 ಗ್ರಾಂ ಬೆಳ್ಳಿ ಸಮರ್ಪಣೆಯಾಗಿದೆ.

ಮಲೆ ಮಾದೇಶ್ವರನ ಸನ್ನಿಧಿ
ಮಲೆ ಮಹದೇಶ್ವರ ಪುರಾತನ ಮತ್ತು ಪವಿತ್ರ ದೇವಾಲಯವು ಮಹದೇಶ್ವರರು ವಾಸಿಸುತ್ತಿದ್ದ ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು, ಇಲ್ಲಿ ಮಹದೇಶ್ವರರು, ಸಿದ್ದಿಪುರುಷರಾಗಿ ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡಿದರು. ಏಳು ಬೆಟ್ಟಗಳ ಸುತ್ತಮುತ್ತಲಿನ ಜನರಿಗೆ ಅಹಿಂಸೆಯನ್ನು ಕಲಿಸಿದರು. ಕ್ಷೇತ್ರವು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿದ್ದು, ಮೈಸೂರಿನಿಂದ ಸುಮಾರು 150 ಕಿಮೀ ಮತ್ತು ಬೆಂಗಳೂರಿನಿಂದ ಸುಮಾರು 210 ಕಿಮೀ ದೂರದಲ್ಲಿದೆ. ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿದ್ದು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದ ಲಕ್ಷಾಂತರ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ. ದಟ್ಟವಾದ ಅರಣ್ಯದ ನಡುವೆ ಇರುವ ಈ ದೇವಾಲಯವು ಸುಮಾರು 155 ಎಕರೆಯಷ್ಟು ಸ್ಥಳವನ್ನು ಹೊಂದಿದ್ದು, ಯಾತ್ರಾರ್ಥಿಗಳನ್ನು ಮಾತ್ರವಲ್ಲದೆ ಪ್ರಕೃತಿ ಪ್ರೇಮಿಗಳನ್ನೂ ಆಕರ್ಷಿಸುತ್ತದೆ. 
ಅನುಮಲೆ, ಜೇನುಮಲೆ, ಕಾನುಮಲೆ, ಪಚ್ಚೆಮಲೆ, ಪಾವಲಮಲೆ, ಪೊನ್ನಾಚಿಮಲೆ ಮತ್ತು ಕೊಂಗುಮಲೆ- ಈ ಏಳು ಶಿಖರಗಳು ಸೇರಿ ಮಲೆ ಮಹದೇಶ್ವರ ಬೆಟ್ಟವಾಗಿದೆ. ಶಿವರಾತ್ರಿ, ದೀಪಾವಳಿ, ಯುಗಾದಿ, ಗೌರಿ ಹಬ್ಬಗಳ ಆಚರಣೆ ಇಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. 

Vastu colours for home: ಪ್ರತಿ ಕೋಣೆಗೂ ಎಚ್ಚರಿಕೆಯಿಂದ ಬಣ್ಣ ಆಯ್ಕೆ ಮಾಡಿ!

ಶಿವನ ಅವತಾರ
ಶ್ರೀ ಮಹದೇಶ್ವರು ಸಂತರಾಗಿದ್ದು, ಸುಮಾರು 15ನೇ ಶತಮಾನದಲ್ಲಿ ಇಲ್ಲಿ ಇದ್ದಿರಬಹುದೆಂದು ಪುರಾವೆಗಳು ಸೂಚಿಸುತ್ತವೆ. ಶಿವನ ಅವತಾರವೆಂದೇ ಅವರನ್ನು ಪರಿಗಣಿಸಲಾಗಿದ್ದು, ಈಗಲೂ ಅವರು ದೇವಾಲಯದಲ್ಲಿ ಲಿಂಗದ ರೂಪದಲ್ಲಿ ತಪಸ್ಸು ಮಾಡುತ್ತಿದ್ದಾರೆ ಎಂದು ನಂಬಲಾಗಿದೆ. ಇಲ್ಲಿರುವ ಲಿಂಗ ತಾನಾಗಿಯೇ ವ್ಯಕ್ತವಾಗಿದ್ದಾಗಿದೆ. ಸಂತ ಮಹದೇಶ್ವರರು ಈ ಬಾಗದಲ್ಲಿ ಹುಲಿಯ ಮೇಲೆ ಓಡಾಡುತ್ತಿದ್ದರು ಮತ್ತು, ಇಲ್ಲಿನ ಸುತ್ತಮುತ್ತಲಿನ ಜನರ ಕಷ್ಟಕಾರ್ಪಣ್ಯಗಳನ್ನು ಬಗೆಹರಿಸುತ್ತಿದ್ದರು ಎನ್ನಲಾಗುತ್ತದೆ. ಅವರ ಅನೇಕ ಪವಾಡಗಳನ್ನು ಸ್ಥಳೀಯ ಜನಪದರ ಬಾಯಲ್ಲಿ ಕೇಳಬಹುದು. 
ಅದರಂತೆ ಆದಿ ಜಾಂಬವ ಸಮುದಾಯದ ಉತ್ತರಾಜಮ್ಮ ಮತ್ತು ಚಂದ್ರಶೇಖರ ಮೂರ್ತಿ ದಂಪತಿಗೆ ಜನಿಸಿದ ಮಹದೇಶ್ವರರು ಸುತ್ತೂರು ಮಠ ಮತ್ತು ಕುಂತೂರು ಮಠದ ಅಂದಿನ ಶ್ರಿಗಳಿಂದ ಮಾರ್ಗದರ್ಶನ ಪಡೆದಿದ್ದರು. ಬಳಿಕ ಶ್ರವಣ ಎಂಬ ದುಷ್ಟ ರಾಜನ ಹಿಂಸೆಯಿಂದ ಸ್ಥಳೀಯ ಬುಡಕಟ್ಟುಗಳಿಗೆ ಬಿಡುಗಡೆ ಕೊಡಿಸಿ, ಅವರ ಬದುಕನ್ನು ಹಸನು ಮಾಡಿದರು. ಇಲ್ಲೊಂದು ಮಠ ನಿರ್ಮಿಸಿ ಸ್ಥಳೀಯ ಬುಡಕಟ್ಟುಗಳ ಜೀವನಶೈಲಿ, ಸಂಸ್ಕೃತಿಯನ್ನು ಕಾಪಾಡುವ ಪ್ರಯತ್ನ ಪಟ್ಟರು.
ಮಹದೇಶ್ವರ ದೇವಾಲಯವು ಸ್ವತಃ ಅವರೇ ನಿರ್ಮಿಸಿದ ಸಾಲೂರು ಮಠದ ನಿರ್ವಹಣೆಯಲ್ಲಿ 1953ರವರೆಗೂ ಇತ್ತು. ನಂತರದಲ್ಲಿ ಮದ್ರಾಸ್ ಸರ್ಕಾರದ ಆಡಳಿತಕ್ಕೆ ಹೋಗಿ, ಸಧ್ಯ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದೆ. 

ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಯಾವಾಗ? ಈ ಯಾತ್ರೆಯ ಮಹತ್ವವೇನು?

ಪ್ರವಾಸಿ ತಾಣ
ಮಲೆ ಮಹದೇಶ್ವರ ಬೆಟ್ಟವು ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿವೆ. ಬೆಟ್ಟದ ತುದಿಯು ಸುಸಜ್ಜಿತ ರಸ್ತೆಗಳು ಮತ್ತು ಕಾಲುದಾರಿಗಳೊಂದಿಗೆ ಉತ್ತಮವಾಗಿ ಅಭಿವೃದ್ಧಿಗೊಂಡಿದೆ. ಸಂದರ್ಶಕರು ತಮ್ಮ ವಾಸ್ತವ್ಯದ ಸಮಯದಲ್ಲಿ ಬಾಡಿಗೆಗೆ ಪಡೆಯಲು ವಿಲ್ಲಾಗಳಿವೆ. ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಅನೇಕ ಅಂಗಡಿಗಳಿವೆ. ಕರ್ನಾಟಕ ಮತ್ತು ತಮಿಳುನಾಡಿನಿಂದ ಪ್ರತಿದಿನ 100ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಇಲ್ಲಿ ಸುತ್ತಮುತ್ತಲು ಇನ್ನೂ ಹಲವು ಆಕರ್ಷಣೀಯ ತಾಣಗಳಿದ್ದು, ಭಕ್ತರನ್ನು ಕೈ ಬೀಸಿ ಕರೆಯುತ್ತವೆ. 
 

Follow Us:
Download App:
  • android
  • ios