ಪ್ರಯಾಗ್‌ರಾಜ್‌ನ ಮೌನಿ ಅಮವಾಸ್ಯೆ ಸ್ನಾನದ ವೇಳೆ ಕಾಲ್ತುಳಿತದಿಂದ 30 ಜನರು ಮೃತಪಟ್ಟರು. ಸುಳ್ಳು ಸುದ್ದಿ ಹಬ್ಬಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳದಲ್ಲಿದ್ದ 16,000 ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿದ್ದು, ತನಿಖೆ ನಡೆಯುತ್ತಿದೆ. ನ್ಯಾಯಾಂಗ ತನಿಖೆಗೂ ಆದೇಶಿಸಲಾಗಿದೆ.

ಮೌನಿ ಅಮವಾಸ್ಯೆಯ ದಿನ 10 ಕೋಟಿಗೂ ಅಧಿಕ ಭಕ್ತರು ಪ್ರಯಾಗ್​ರಾಜ್​ನಲ್ಲಿ ಅಮೃತಸ್ನಾನ ಮಾಡಲು ಮುಗಿಬಿದ್ದ ಸಂದರ್ಭದಲ್ಲಿ, ಕಾಲ್ತುಳಿತ ಉಂಟಾಗಿ ಸುಮಾರು 30 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶ ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರೂ ಯಾರೋ ಕಿಡಿಗೇಡಿಗಳು ಹಬ್ಬಿಸಿದ ಒಂದು ಸುಳ್ಳು ಸುದ್ದಿಯಿಂದ ಜನರು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದರಿಂದ ಈ ಅವಘಡ ಸಂಭವಿಸಿತು ಎಂದು ಹೇಳಲಾಗುತ್ತಿದೆ. ಘಟನೆ ನಡೆದ ದಿನವೇ ಇದರ ಹಿಂದೆ ದೊಡ್ಡ ಪಿತೂರಿಯೊಂದು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಲಕ್ಷಾಂತರ ಜನರು ನೆರೆದ ಸಂದರ್ಭದಲ್ಲಿಯೇ ಆಗುವ ಅವಘಡಗಳನ್ನು, ಕಾಲ್ತುಳಿತವನ್ನು ತಿರುಪತಿಯ ವೈಕುಂಠ ದ್ವಾದಶಿಯ ವಿಶೇಷ ದರ್ಶನದ ಟಿಕೆಟ್​ ಹಂಚಿಕೆ ವೇಳೆ ನೋಡಿದ್ದೇವೆ. 10 ಕೋಟಿಗೂ ಅಧಿಕ ಭಕ್ತರು ಒಂದೆಡೆ ಸೇರುವ ಸಮಯದಲ್ಲಿ ಏನೆಲ್ಲಾ ಆಗಬಹುದು ಎನ್ನುವ ಮುನ್ಸೂಚನೆ ಇದ್ದೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿತ್ತು. ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿತ್ತು. ಭಯೋತ್ಪಾದನೆ ಕೃತ್ಯ ಎಸಗಲು ಹೊಂಚು ಹಾಕುತ್ತಿರುವವರನ್ನು ಮಟ್ಟ ಹಾಕುವ ವ್ಯವಸ್ಥೆಯನ್ನೂ ಈ ಸಂದರ್ಭದಲ್ಲಿ ಮಾಡಲಾಗಿದೆ.

Add Asianetnews Kannada as a Preferred SourcegooglePreferred

ಮಹಾಕುಂಭದ ಭಕ್ತರಿಗೆ ಮಸೀದಿ, ದರ್ಗಾಗಳಲ್ಲಿ ಉಪಚಾರ- ಆಹಾರ, ನೀರಿನ ವ್ಯವಸ್ಥೆ; ಇಲ್ಲಿದೆ ಫುಲ್ ಡಿಟೇಲ್ಸ್​

ಇದರ ಹೊರತಾಗಿಯೂ ಕಾಲ್ತುಳಿತ ಆಯಿತು. ಇಷ್ಟೊಂದು ಬೃಹತ್​ ಪ್ರಮಾಣದಲ್ಲಿ ಜನರು ಸೇರಿರುವಾಗ ಕಾಲ್ತುಳಿತ ಸಹಜ ಎಂದು ಹಲವರು ಹೇಳಿದರೂ, ಇದರ ಹಿಂದೆ ದೊಡ್ಡದೊಂದು ಷಡ್ಯಂತ್ರ ಕೆಲಸ ಮಾಡಿದೆ ಎಂದೇ ಹೇಳಲಾಗುತ್ತಿದೆ. ಸುಳ್ಳು ಸುದ್ದಿಯೊಂದನ್ನು ಹರಿಬಿಡುವ ಮೂಲಕ ಕಾಲ್ತುಳಿತ ಉಂಟಾಯಿತು ಎಂದು ಸರ್ಕಾರ ಹೇಳಿತ್ತು. ಇದೇ ವೇಳೆ ಕೆಲ ಯುವಕರು ಏಕಾಏಕಿ ನುಗ್ಗಿ ಎಲ್ಲರನ್ನೂ ಬೀಳಿಸಿರುವುದಾಗಿಯೂ ಪ್ರತ್ಯಕ್ಷದರ್ಶಿಗಳೂ ಹೇಳಿದ್ದರು. ಇವೆಲ್ಲವನ್ನೂ ಪರಿಗಣಿಸಿ ಯೋಗಿ ಸರ್ಕಾರ ತನಿಖೆ ನಡೆಸುತ್ತಿದೆ. ಆದರೆ ಇದೀಗ ಎಲ್ಲರ ಊಹೆಗಳೂ ನಿಜ ಎನ್ನುವಂಥ ಸ್ಫೋಟಕ ಮಾಹಿತಿ ಈಗ ತನಿಖೆಯ ವೇಳೆ ರಿವೀಲ್​ ಆಗಿದೆ. 

 ಮೌನಿ ಅಮವಾಸ್ಯೆ ಎಂದರೆ ಜನವರಿ 29 ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಕಾಲ್ತುಳಿತದ ಸಂದರ್ಭದಲ್ಲಿ ಸಕ್ರಿಯವಾಗಿದ್ದ ಮೊಬೈಲ್‌ ಫೋನ್‌ಗಳ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ ಈ ಪೈಕಿ ಸುಮಾರು 16 ಸಾವಿರ ಫೋನ್​ಗಳು ಘಟನೆಯ ಬಳಿಕ ಸ್ವಿಚ್​ ಆಫ್​ ಆಗಿವೆ. ಸಂಪರ್ಕಕ್ಕೆ ಈ ಫೋನ್​ಗಳು ಸಿಗುತ್ತಿಲ್ಲ. ಹಾಗಿದ್ದರೆ ಕಾಲ್ತುಳಿದ ಕೆಲವೇ ನಿಮಿಷಗಳ ಮೊದಲು ಫೋನ್​ ಮಾಡಿ ಘಟನೆಯ ಬಳಿಕ ಸ್ವಿಚ್​ ಆಫ್​ ಮಾಡಿಕೊಂಡಿರುವ ಈ ಫೋನ್​ಗಳ ಬೆನ್ನತ್ತಿ ಹೋಗಿದ್ದಾರೆ ತನಿಖಾಧಿಕಾರಿಗಳು! ಸ್ವಿಚ್‌ ಆಫ್‌ ಆಗಿರುವ ಮೊಬೈಲ್‌ ಸಂಖ್ಯೆಗಳ ಗ್ರಾಹಕರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಅವರು. 


ಪೊಲೀಸ್‌ ಕಂಟ್ರೋಲ್‌ ರೂಮ್‌ನಲ್ಲಿ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಗಳಿಂದ ಮುಖ ಗುರುತಿಸುವಿಕೆ ಅಪ್ಲಿಕೇಶನ್ ಮೂಲಕ ಶಂಕಿತರನ್ನು ಗುರುತಿಸಲಾಗುತ್ತಿದೆ. ಕಾಲ್ತುಳಿತದ ಸಂದರ್ಭದಲ್ಲಿ ಕೆಲವು ಯುವಕರು ಏಕಾಏಕಿ ನುಗ್ಗಿ ಜನರನ್ನು ತಳ್ಳಿರುವುದು ಕೂಡ ಹಲವಾರು ರೀತಿಯ ಶಂಕೆಗೆ ಆಸ್ಪದ ಮಾಡಿಕೊಟ್ಟಿದೆ. ಅಂದಹಾಗೆ, ಅಂದು ನಡೆದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ಕು ಮಂದಿ ಸೇರಿದಂತೆ 30 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಇದಕ್ಕೆ ಕಾರಣ, ಅಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡಿದ್ದು ಎನ್ನಲಾಗಿದೆ. ಇದರಿಂದ ಹೆದರಿದ ಜನರು ಬ್ಯಾರಿಕೇಡ್‌ಗಳನ್ನು ಹಾರಿ ಮುನ್ನುಗ್ಗಿದ್ದರು. ಇದರಿಂದ ದುರಂತ ಸಂಭವಿಸಿತ್ತು. ಈ ಘಟನೆಯ ಹಿಂದೆ ವ್ಯವಸ್ಥಿತ ಪಿತೂರಿ ಇದೆ ಎಂದು ಅರಿತಿದ್ದ ಯೋಗಿ ಸರ್ಕಾರ, ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ಮೂವರು ಸದಸ್ಯರ ನ್ಯಾಯಾಂಗ ಆಯೋಗವು ತನಿಖೆ ನಡೆಸುತ್ತಿದೆ. ಸದ್ಯ 16 ಸಾವಿರ ಮೊಬೈಲ್​ ಫೋನ್​ಗಳು ಸ್ವಿಚ್​ ಆಫ್​ ಆಗಿರುವ ಬಗ್ಗೆ ತನಿಖೆ ಶುರುವಾಗಿದ್ದು, ಇನ್ನೊಂದು ತಿಂಗಳಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ. ಇದೇ ವೇಳೆ ಕಾಲ್ತುಳಿತದ ಕುರಿತು ಸುಪ್ರೀಂಕೋರ್ಟ್​ಗೂ ಅರ್ಜಿ ಸಲ್ಲಿಕೆಯಾಗಿದೆ.

ಕುಂಭಮೇಳದಲ್ಲಿ ಕಾಲ್ತುಳಿತಕ್ಕೊಳಗಾದವರು ಯಾರೂ ಸತ್ತಿಲ್ಲ... ಅವರಿಗೆ... ಬಾಬಾ ಬಾಗೇಶ್ವರ್​ ಸ್ಫೋಟಕ ಹೇಳಿಕೆ