Asianet Suvarna News Asianet Suvarna News

ಕೃಷ್ಣನಿಗೆ ಬೆಣ್ಣೆ, ಗಣೇಶನಿಗೆ ಲಡ್ಡು, ಈ ಮುರುಗನಿಗೆ ಮಾತ್ರ ಮಂಚ್ ಮೇಲೆ ಮಹಾಪ್ರೀತಿ!

ದೇವರಿಗೆ ಹಣ್ಣುಹಂಪಲು, ಡ್ರೈಫ್ರೂಟ್ಸ್, ಅನ್ನಾಹಾರ, ಪಾಯಸ ಇತ್ಯಾದಿಗಳನ್ನು ನೈವೇದ್ಯ ಮಾಡುವುದು ಸಾಮಾನ್ಯ ಪದ್ಧತಿ. ಆದರೆ, ಕೇರಳದ ಈ ದೇವಾಲಯದ ಬಾಲ ಸುಬ್ರಹ್ಮಣ್ಯನಿಗೆ ಭಕ್ತರೆಲ್ಲರೂ ಮಂಚ್ ಚಾಕೋಲೇಟ್ ನೀಡಿ ಖುಷಿ ಪಡಿಸಲು ನೋಡುತ್ತಾರೆ!

Kerala Munch Murugan temple where God and devotees get chocolate bars skr
Author
First Published Jan 15, 2023, 12:37 PM IST

ಮಂಚ್ ಮಂಚ್ ಮಂಚ್ ಮಂಚ್ ಜಾಹೀರಾತು ಹಾಡು ಕೇಳಿದರೆ ಅದೆಷ್ಟೋ ಮಕ್ಕಳಿಗೆ ಬಾಯಲ್ಲಿ ನೀರೂರುತ್ತದೆ. ಕೇವಲ ಮಕ್ಕಳೇಕೆ, ದೊಡ್ಡವರಿಗೆ ಕೂಡಾ ಮಂಚ್ ಮತ್ತಿತರೆ ಚಾಕೋಲೇಟ್ ಬಾರ್ ಎಂದರೆ ಇಷ್ಟವೇ. ಆದರೆ, ದೇವರು ಕೂಡಾ ನಂಗೂ ನೀವು ಕೊಡೋ ಹಣ್ಣು ಹಂಪಲು ಬೇಡ, ಮಂಚ್ ಚಾಕೋಲೇಟ್ ಕೊಡಿ ಎಂದದ್ದನ್ನು ಎಲ್ಲಾದರೂ ಕೇಳಿದ್ದೀರಾ?

ಕೇರಳದ ಈ ದೇವಾಲಯದ ದೇವರಿಗೆ ಮಂಚ್ ಎಂದರೆ ಅಚ್ಚುಮೆಚ್ಚು. ಏಕೆಂದರೆ ಇಲ್ಲಿರುವುದು ಬಾಲ ಮುರುಗನ್, ಅಂದರೆ ಪುಟಾಣಿ ಸುಬ್ರಹ್ಮಣ್ಯ. ದೇವರಾದರೇನಂತೆ, ಮಕ್ಕಳು ಮಕ್ಕಳೇ ಅಲ್ಲವೇ? ಹಾಗಾಗಿ ಈ ದೇವರಿಗೆ ಭಕ್ತರು ಮಂಚ್ ಹಾಗೂ ಮತ್ತಿತರೆ ಚಾಕೋಲೇಟ್ ಬಾರ್ ಅರ್ಪಿಸುತ್ತಾರೆ. ಕಡೆಗೆ ಅದೇ ಮಂಚ್ ಚಾಕೋಲೇ‌ಟ್‌ಗಳನ್ನೇ ಪ್ರಸಾದವಾಗಿ ಪಡೆಯುತ್ತಾರೆ!

ಹೌದು, ಇದೇ ಕೇರಳದ ಚೆಮ್ಮೋತ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ. ಈ ದೇವರ ಮಂಚ್ ಪ್ರೀತಿ ನೋಡಿ, ಆತನಿಗೆ 'ಮಂಚ್ ಮುರುಗನ್' ಎಂದೇ ಅಡ್ಡ ಹೆಸರು ಇಡಲಾಗಿದೆ. ಗಣೇಶನಿಗೆ ಲಡ್ಡು, ಕೃಷ್ಣನಿಗೆ ಬೆಣ್ಣೆ, ಅಯ್ಯಪ್ಪನಿಗೆ ತುಪ್ಪ ಇಷ್ಟ ಇರುವಂತೆಯೇ ಈ ಬಾಲಮುರುಗನಿಗೆ ಮಂಚ್ ಎಂದರೆ ಬಹಳ ಇಷ್ಟ.

ಚಾಕೋಲೇಟ್ ಬಾರ್ ಪ್ರಸಾದವಾದ ಕತೆ
ಮೊದಲೆಲ್ಲ ಈ ದೇವಾಲಯಕ್ಕೆ ಭಕ್ತರು ಎಲ್ಲೆಡೆಯಂತೆ ಹಣ್ಣುಹಂಪಲು, ಕಾಯಿ, ದ್ರಾಕ್ಷಿ ಗೋಡಂಬಿ, ಮನೆಯಲ್ಲಿ ತಯಾರಿಸಿದ ಅಡುಗೆ ಆಹಾರ ಇತ್ಯಾದಿಗಳನ್ನೇ ನೈವೇದ್ಯಕ್ಕಾಗಿ ತೆಗೆದುಕೊಂಡು  ಹೋಗುತ್ತಿದ್ದರು. ಆದರೆ, 10 ವರ್ಷಗಳ ಹಿಂದೆ ನಡೆದ ಘಟನೆಯೊಂದು ಇಲ್ಲಿನ ದೇವರ ಅಭಿರುಚಿಯನ್ನೇ ಬದಲಿಸಿತು. 

Makar Sankranti 2023: ಸ್ವರ್ಗದ ಬಾಗಿಲು ತೆರೆದಿರುವ ಪುಣ್ಯಕಾಲ ಉತ್ತರಾಯಣ

ದೇವಾಲಯದ ಬಳಿ ವಾಸಿಸುವ ಪುಟ್ಟ ಮುಸ್ಲಿಂ ಹುಡುಗನು ದೇವರಿಗೆ ಮಂಚ್ ನೀಡಿದ ಕತೆಯಿಂದ ಇದೆಲ್ಲ ಆರಂಭವಾಯಿತು. ದೇವಾಲಯದ ಬಳಿ ವಾಸಿಸುವ ಪುಟ್ಟ ಮುಸ್ಲಿಂ ಹುಡುಗನು ಒಮ್ಮೆ ಆಟವಾಡುವಾಗ ದೇವಸ್ಥಾನದ ಗಂಟೆಯನ್ನು ಬಾರಿಸಿದನು ಮತ್ತು ಹಾಗೆ ಮಾಡಿದ್ದಕ್ಕಾಗಿ ಅವನ ಪೋಷಕರು ಅವನನ್ನು ಗದರಿಸಿದ್ದರು. ಆ ರಾತ್ರಿ ಹುಡುಗನಿಗೆ ಅನಾರೋಗ್ಯ ಆರಂಭವಾಯಿತು. ಆತ ಮುರುಗನ್ ಹೆಸರನ್ನು ಜ್ವರದಲ್ಲೂ ಗೊಣಗುತ್ತಿದ್ದ. ಮರುದಿನ, ಅವನ ಹೆತ್ತವರು ಅವನನ್ನು ದೇವಾಲಯಕ್ಕೆ ಕರೆತಂದರು ಮತ್ತು ಅರ್ಚಕರು ದೇವರಿಗೆ ಏನನ್ನಾದರೂ ಅರ್ಪಿಸಲು ಕೇಳಿದರು. ಅವನ ಹೆತ್ತವರು ಎಣ್ಣೆ ಮತ್ತು ಹೂವುಗಳನ್ನು ಅರ್ಪಿಸಿದರೆ, ಹುಡುಗನು ಮೊಂಡುತನದಿಂದ ಗರ್ಭಗುಡಿಯಲ್ಲಿದ್ದ ದೇವರಿಗೆ ತನ್ನ ಬಳಿಯಿದ್ದ ಮಂಚ್ ಅರ್ಪಿಸಿದನು. ಇದರ ಬಳಿಕ ಹುಡುಗ ಅದ್ಭುತವಾಗಿ ಗುಣಮುಖನಾದನು. ಈ ಘಟನೆಯ ಬಳಿಕ ಎಲ್ಲರೂ ಮುರುಗನಿಗೆ ಮಂಚ್ ಅರ್ಪಿಸಿ ತಮ್ಮ ಮನದ ಪ್ರಾರ್ಥನೆ ಹೇಳಿಕೊಳ್ಳಲು ಆರಂಭಿಸಿದರು. 

ಈಗಂತೂ ಇಲ್ಲಿ ದೇವರಿಗೆ ಮಂಚ್‌ನ ಹಾರವನ್ನೇ ಸಿದ್ಧಪಡಿಸಿ ಹಾಕಲಾಗುತ್ತದೆ. ಕೆಲವರಂತೂ ತಮ್ಮ ತೂಕದಷ್ಟು ಚಾಕೋಲೇಟ್ ಬಾರ್‌ಗಳನ್ನು ಅರ್ಪಿಸಿ ಭಕ್ತಿ ಮೆರೆಯುತ್ತಾರೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೇ ಭಕ್ತರಾಗಿ ಬರುತ್ತಾರೆ. ಅದರಲ್ಲೂ ಪರೀಕ್ಷಾ ಸಮಯದಲ್ಲಿ ಬಾಲಮುರುಗನ ಮನವೊಲಿಸಲು ಮಕ್ಕಳು ತಮ್ಮಿಷ್ಟದ ಚಾಕೋಲೇಟನ್ನು ಅವನಿಗೆ ನೀಡುತ್ತಾರೆ. ಪೂಜೆಯ ನಂತರ ಅವುಗಳನ್ನು 'ಪ್ರಸಾದ' ಎಂದು ಭಕ್ತರಿಗೆ ಹಂಚಲಾಗುತ್ತದೆ. ಜನರು ಜಾತಿ, ಧರ್ಮದ ಭೇದವಿಲ್ಲದೆ ಚಾಕೊಲೇಟ್ ಪೆಟ್ಟಿಗೆಗಳೊಂದಿಗೆ ದೇಗುಲಕ್ಕೆ ಆಗಮಿಸುತ್ತಾರೆ, ಮುರುಗನ ಆಶೀರ್ವಾದವನ್ನು ಪಡೆಯುತ್ತಾರೆ.

ಹೂವುಗಳು ಮತ್ತು ಬೆಲ್ಲದಂಥ ಇತರ ಸಾಂಪ್ರದಾಯಿಕ ವಸ್ತುಗಳೊಂದಿಗೆ 'ತುಲಾಭಾರ' ದಂಥ ಆಚರಣೆಗಳಿಗೂ ಇಲ್ಲಿ ಚಾಕೊಲೇಟ್ ಅನ್ನು ಬಳಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಭಕ್ತರು, ಇತರ ರಾಜ್ಯಗಳು ಮತ್ತು ವಿದೇಶಿಯರೂ ಸಹ ಚಾಕೊಲೇಟ್ ಬಾಕ್ಸ್‌ಗಳೊಂದಿಗೆ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ವಾರ ಭವಿಷ್ಯ: ಈ ರಾಶಿಯ ಬಾಳಲ್ಲಿ ತೆರೆಯಲಿದೆ ಹೊಸ ಅವಕಾಶಗಳ ಬಾಗಿಲು
     
21 ಸದಸ್ಯರ ಟ್ರಸ್ಟ್‌ನಿಂದ ನಿರ್ವಹಿಸಲ್ಪಡುವ ಈ ದೇಗುಲವನ್ನು ಮುರುಗನ ಕಟ್ಟಾ ಭಕ್ತರೊಬ್ಬರು ದಶಕಗಳ ಹಿಂದೆ ಕುಟುಂಬ ದೇವಾಲಯವಾಗಿ ನಿರ್ಮಿಸಿದ್ದಾರೆ.

Follow Us:
Download App:
  • android
  • ios