Asianet Suvarna News Asianet Suvarna News

Makar Sankranti 2023: ಸ್ವರ್ಗದ ಬಾಗಿಲು ತೆರೆದಿರುವ ಪುಣ್ಯಕಾಲ ಉತ್ತರಾಯಣ

ಉತ್ತರಾಯಣವು ಮಕರ ಸಂಕ್ರಾಂತಿಯಂದು (ಜನವರಿ 14) ಆರಂಭವಾಗಿ ಆರು ತಿಂಗಳವರೆಗೆ ಸೂರ್ಯನು ಉತ್ತರ ಗೋಳಾರ್ಧದ ಕಡೆಗೆ ಚಲಿಸುವ ಅವಧಿಯನ್ನು ಸೂಚಿಸುತ್ತದೆ. ಈ ಉತ್ತರಾಯಣದ ವಿಶೇಷತೆ ತಿಳಿಸುತ್ತೇವೆ.

Makar Sankranti 2023 Significance of Uttarayana skr
Author
First Published Jan 15, 2023, 10:51 AM IST

ಮಕರ ಸಂಕ್ರಾಂತಿಯಂದು ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸೂರ್ಯನ ಪರಿವರ್ತನೆಯನ್ನು ಸೂಚಿಸುತ್ತದೆ. ಈ ದಿನದಿಂದ ಸೂರ್ಯನ ಉತ್ತರದ ಪ್ರಯಾಣದ ಆರಂಭವಾಗುತ್ತದೆ. ಹಾಗಾಗಿ, ಇಂದಿನಿಂದ ಉತ್ತರಾಯಣ ಕಾಲ. 

ಉತ್ತರಾಯಣ 
ಸೂರ್ಯನು ಭೂ ಮಧ್ಯೆಯ ರೇಖೆಗೆ ಉತ್ತರಾಭಿಮುಖವಾಗಿ ಸಂಚರಿಸುವ ಈ ಕಾಲವು ಸಾಮಾನ್ಯವಾಗಿ ಜನವರಿ 14, 15ಕ್ಕೆ ಪ್ರಾರಂಭವಾಗುತ್ತದೆ. ಮಕರ ರಾಶಿಗೆ ಸೂರ್ಯನು ಪ್ರವೇಶಿಸಿದ ನಂತರ ಮುಂದಿನ ಮೂವತ್ತು ಘಳಿಗೆ ಬಹಳ ಪುಣ್ಯಕಾಲ. ಅದಕ್ಕೇ ಪಂಚಾಂಗದಲ್ಲಿ ಉತ್ತರಾಯಣ(Uttarayan) ಪುಣ್ಯಕಾಲದ ಸಮಯ ತಿಳಿಸಿರುತ್ತಾರೆ. 

ಅಧ್ಯಾತ್ಮಿಕ ಜಾಗೃತಿಯ ಕಾಲ
ಹಿಂದೂ ಪುರಾಣಗಳಲ್ಲಿ, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯನ ಪರಿವರ್ತನೆಯು ಆಧ್ಯಾತ್ಮಿಕ ಜಾಗೃತಿ ಮತ್ತು ನವೀಕರಣದ ಸಮಯವೆಂದು ಪರಿಗಣಿಸಲಾಗಿದೆ. ಉತ್ತರಾಯಣದಲ್ಲಿ ಬ್ರಹ್ಮಾಂಡದ ಧನಾತ್ಮಕ ಶಕ್ತಿ ಮತ್ತು ಆಧ್ಯಾತ್ಮಿಕ ಕಂಪನಗಳು ಪ್ರಬಲವಾಗಿರುತ್ತವೆ ಎಂದು ನಂಬಲಾಗಿದೆ. ಇದು ಯೋಗ ಮತ್ತು ಧ್ಯಾನದಂತಹ ಆಧ್ಯಾತ್ಮಿಕ ಅಭ್ಯಾಸಗಳಿಗೆ ಸೂಕ್ತ ಸಮಯವಾಗಿದೆ.

Makar Sankranti 2023: ಇಂದಿನ ಪುಣ್ಯಕಾಲವೇನು? ಈ ಅವಧಿಯಲ್ಲಿ ಏನು ಮಾಡಬೇಕು?

ಉತ್ತರಾಯಣ ಮತ್ತು ದಕ್ಷಿಣಾಯಣದ ನಡುವಿನ ವ್ಯತ್ಯಾಸವೇನು?
ಉತ್ತರಾಯಣವು ಮಕರ ಸಂಕ್ರಾಂತಿಯಂದು ಪ್ರಾರಂಭವಾಗುವ ಮತ್ತು ಮಳೆಗಾಲದ ಆರಂಭದವರೆಗೆ ಅಂದರೆ ಆರು ತಿಂಗಳವರೆಗೆ ಸೂರ್ಯನು ಉತ್ತರ ಗೋಳಾರ್ಧದ ಕಡೆಗೆ ಚಲಿಸುವ ಅವಧಿಯನ್ನು ಸೂಚಿಸುತ್ತದೆ. ಮಕರ ಸಂಕ್ರಾಂತಿಯಿಂದ ಕಟಕ ಸಂಕ್ರಾಂತಿವರೆಗ, ಪುಷ್ಯದಿಂದ ಆಷಾಢ ಮಾಸದವರೆಗೆ ಉತ್ತರಾಯಣ ಸಮಯವಾಗಿದೆ. ಈ ಸಮಯದಲ್ಲಿ ಅನೇಕ ಹಬ್ಬಗಳು ಮತ್ತು ತೀರ್ಥಯಾತ್ರೆಗಳು ನಡೆಯುತ್ತವೆ ಮತ್ತು ಬ್ರಹ್ಮಾಂಡದ ಧನಾತ್ಮಕ ಶಕ್ತಿ ಮತ್ತು ಆಧ್ಯಾತ್ಮಿಕ ಕಂಪನಗಳು ತಮ್ಮ ಪ್ರಬಲವಾಗಿರುತ್ತವೆ ಎಂದು ನಂಬಲಾಗಿದೆ. ಹಾಗಾಗಿ, ಈ ಅವಧಿಯನ್ನು ದೇವತೆಗಳ ದಿನದ ಸಮಯ ಎಂದೂ, ದಕ್ಷಿಣಾಯಣವನ್ನು ಅವರ ರಾತ್ರಿ ಎಂದೂ ಪರಿಗಣಿಸಲಾಗುತ್ತದೆ. ಹಾಗಾಗಿ, ಉತ್ತರಾಯಣ ಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಉತ್ತರಾಯಣದ ಪುಣ್ಯಕಾಲದಲ್ಲಿ  ಸಾಯುವವರು ನೇರ ಸ್ವರ್ಗಕ್ಕೆ ಹೋಗುತ್ತಾರೆಂದೂ ಹೇಳಲಾಗುತ್ತದೆ. ಮಹಾಭಾರತದಲ್ಲಿ ಭೀಷ್ಮನು ಶರಶಯ್ಯೆಯ ಮೇಲೆ ಮಲಗಿದ್ದಾಗಲೂ,'ಇಚ್ಛಾಮರಣ'ದ ವರವನ್ನು ಪಡೆದಿದ್ದ ಕಾರಣ ಉತ್ತರಾಯಣ ಪುಣ್ಯಕಾಲ ಬರುವವರೆಗೂ ಕಾದಿದ್ದು, ಉತ್ತರಾಯಣ ಬಂದ ನಂತರ ದೇಹತ್ಯಾಗ ಮಾಡಿದನೆಂಬ ವಿಚಾರ ಕಾಣ ಸಿಗುತ್ತದೆ.

ಮತ್ತೊಂದೆಡೆ, ದಕ್ಷಿಣಾಯನವು ಸೂರ್ಯನು ದಕ್ಷಿಣ ಗೋಳಾರ್ಧದ ಕಡೆಗೆ ಚಲಿಸುವ ಅವಧಿಯನ್ನು ಸೂಚಿಸುತ್ತದೆ, ಇದು ಮಳೆಗಾಲದ ನಂತರ ಪ್ರಾರಂಭವಾಗಿ ಮಕರ ಸಂಕ್ರಾಂತಿಯವರೆಗೆ ಇರುತ್ತದೆ. ಈ ಅವಧಿಯು ಕಡಿಮೆ ದಿನ ಮತ್ತು ದೀರ್ಘ ರಾತ್ರಿಗಳಿಂದ ನಿರೂಪಿಸಲ್ಪಟ್ಟಿದೆ ಮತ್ತು ಆಧ್ಯಾತ್ಮಿಕ ಅವನತಿ ಮತ್ತು ಕತ್ತಲೆಯ ಸಮಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ರೋಗಗಳು ಮತ್ತು ದುಃಖಗಳನ್ನು ಜಯಿಸಲು ಉಪವಾಸಗಳು, ಯಾಗಗಳು ಮತ್ತು ಪೂಜೆಗಳಂತಹ ಅನೇಕ ಧಾರ್ಮಿಕ ಚಟುವಟಿಕೆಗಳನ್ನು ದಕ್ಷಿಣಾಯಣದಲ್ಲಿ ನಡೆಸಲಾಗುತ್ತದೆ.

Weekly Love Horoscope: ಈ ರಾಶಿಯ ಪ್ರೇಮಿಗಳಿಗೆ ಅಂತೂ ಬರಲಿದೆ ಕಂಕಣಭಾಗ್ಯ

ಉತ್ತರಾಯಣದಲ್ಲಿ ಏನು ಮಾಡಬೇಕು?
ಉತ್ತರಾಯಣ ಪರ್ವಕಾಲದಲ್ಲಿ ಕರಿಎಳ್ಳು ಅರೆದು ಅದನ್ನು ಮೈಗೆ ಹಚ್ಚಿಕೊಂಡು ಎಲ್ಲರೂ ಸ್ನಾನ ಮಾಡಬೇಕು. ಇದರಿಂದ ರೋಗಗಳು ದೂರವಾಗುತ್ತವೆ. ಉತ್ತರಾಯಣ ಪರ್ವಕಾಲದಲ್ಲಿ ಹೆಂಗಸರು ತಲೆಯ ಸ್ನಾನ ಮಾಡಬಾರದು. ಆದರೆ ಎಳ್ಳು ಮೈಗೆ ತಿಕ್ಕಿ ಸ್ನಾನ ಮಾಡಬೇಕು ಎಂದು ಶಾಸ್ತ್ರ ಹೇಳುತ್ತದೆ. ಮದುವೆ, ಮುಂಜಿ, ದೇವರ ಕಾರ್ಯ ಸೇರಿದಂತೆ ಎಲ್ಲ ಸಮಾರಂಭ ಮೊದಲಾದ ಕಾರ್ಯಗಳನ್ನು ಮಾಡಲು ಈ ಉತ್ತರಾಯಣ ಕಾಲ ಪ್ರಶಸ್ತವಾಗಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios