Asianet Suvarna News Asianet Suvarna News

Devi Annapoorna: ಆಹಾರ, ಪೋಷಣೆಯ ಮಹಾತಾಯಿ ಅನ್ನಪೂರ್ಣೇಶ್ವರಿಯ ಆಸಕ್ತಿಕರ ಕತೆ

ನಾವು ತಿನ್ನುವ ಆಹಾರಕ್ಕೆ ಅವಮಾನಿಸಬಾರದು, ಅನ್ನಪೂರ್ಣೆ ಸಿಟ್ಟಾಗುತ್ತಾಳೆ ಎಂಬುದನ್ನು ಬಾಲ್ಯದಿಂದಲೇ ಕೇಳಿ ಬೆಳೆದಿರುತ್ತೇವೆ. ಹಾಗೆ ಮಾಡಿದರೆ, ಮುಂದೆ ಹಸಿವಿನಿಂದಲೇ ನಲುಗಬೇಕಾಗುತ್ತದೆ ಎಂಬ ನಂಬಿಕೆ ಎಲ್ಲರಲ್ಲೂ ಇರುತ್ತದೆ. ಏನು ಈ ಅನ್ನಪೂರ್ಣೆಯ ಕತೆ?

Interesting story of Devi Annapoorna skr
Author
Bangalore, First Published Feb 15, 2022, 10:29 AM IST

ನಾವು ಸ್ವಲ್ಪ ಅನ್ನ ಬಿಟ್ಟರೂ ತಂದೆ ತಾಯಿ ಹೇಳುವುದು ಕೇಳುತ್ತೇವೆ, 'ಊಟ ಬಿಟ್ರೆ ಅನ್ನಪೂರ್ಣಗೆ ಕೋಪ ಬರುತ್ತೆ. ಆಮೇಲೆ ತುಂಬಾ ಹಸಿವಾದಾಗ ಬೇಕೂ ಅಂದ್ರೂ ತಿನ್ನೋಕಿರಲ್ಲ' ಅಂತ. ಮಕ್ಕಳು ಊಟ ಮಾಡದಿದ್ದಾಗ ಹೊರನಾಡು ಅನ್ನಪೂರ್ಣೇಶ್ವರಿಗೆ ಹರಕೆ ಹೇಳಿಕೊಳ್ಳುವವರೂ ಸಾಕಷ್ಟಿದ್ದಾರೆ. 
ಆಹಾರ ನಾಲಿಗೆಗೆ ಮುಟ್ಟುವುದಲ್ಲ, ಅದು ಹೊಟ್ಟೆ ತುಂಬಿಸುವುದೇ ಮುಖ್ಯ, ಅದರಿಂದಲೇ ನಾವು ದೈಹಿಕವಾಗಿಯೂ, ಮಾನಸಿಕವಾಗಿಯೂ ಸದೃಢರಾಗುತ್ತೇವೆ. ಈ ಆಹಾರ ನೀಡುವವಳು ಅನ್ನಪೂರ್ಣೆ. ಅನ್ನಪೂರ್ಣೆ ಎಂದರೆ ಹೆಸರಿಗೆ ತಕ್ಕ ಹಾಗೆ ಅನ್ನ ನಮಗೆ ಪೂರ್ಣವೆನಿಸುವವರೆಗೂ ನೀಡುವ ಮಹಾತಾಯಿ. ಜಗದ ಹಸಿವನ್ನು ನೀಗಿಸುವವಳು. ಜೀವಿಗಳನ್ನು ಪೋಷಿಸಿ ಸಲಹುವವಳು. ಹಾಗಾಗಿಯೇ ಮನೆಯಲ್ಲಿ ಸದಾ ದವಸ, ಧಾನ್ಯ ತುಂಬಿರಲಿ ಎಂದು ಬೇಡಿ ಅನ್ನಪೂರ್ಣೆಯ ಫೋಟೋವನ್ನು ಅಡುಗೆಮನೆಯಲ್ಲಿ ಹಾಕಿಕೊಳ್ಳುವ ಅಭ್ಯಾಸ ಭಾರತೀಯರು ಹಾಗೂ ನೇಪಾಳಿಗರಿಗಿದೆ.

ಅನ್ನಪೂರ್ಣೆಯು ಪರಶಿವನ ಪತ್ನಿ ಪಾರ್ವತೀ ದೇವಿಯ ಅವತಾರವಾಗಿದ್ದಾಳೆ. ಆಕೆ ಆಹಾರಕ್ಕೆ ಆಶೀರ್ವದಿಸಿ ನೀಡಿದಾಗ ಅದು ಅಮೃತವಾಗಿ ಬದಲಾಗುತ್ತದೆ. ಈ ಅಮೃತವು ನಮಗೆ ಆರೋಗ್ಯವನ್ನೂ, ಕೆಲಸ ಮಾಡಲು ಬಲವನ್ನೂ ಕರುಣಿಸುತ್ತದೆ. ಕರ್ನಾಟಕದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ಹೇಗೆ ಭಕ್ತರ ಪ್ರೀತಿ ಗಳಿಸಿದ್ದಾಳೋ, ಭಾರತದಲ್ಲಿ ಕೇರಳದ ಕಣ್ಣೂರಿನ ಅನ್ನಪೂರ್ಣೇಶ್ವರಿ ದೇವಾಲಯ ಹಾಗೂ ಕಾಶಿಯ ಅನ್ನಪೂರ್ಣೆ ಹೆಸರುವಾಸಿಯಾಗಿದ್ದಾಳೆ. ಆಕೆ ವಾರಣಾಸಿಯ ತಾಯಿ, ರಾಣಿ ಎಂದೆಲ್ಲ ಕರೆಸಿಕೊಳ್ಳುತ್ತಾಳೆ. 

ಅನ್ನಪೂರ್ಣೆಯ ಕತೆ
ಒಮ್ಮೆ ಶಿವ ಪಾರ್ವತಿ ಪಗಡೆಯಾಡುವಾಗ ಶಿವನು ಮಾಯೆಯಿಂದ ಗೆಲ್ಲುತ್ತಾನೆ. ಇದನ್ನು ಪಾರ್ವತಿ ಪ್ರಶ್ನಿಸಿದಾಗ, ಈ ಜಗತ್ತೇ ಭ್ರಾಮಕ ಮಾಯೆಯಾಗಿದೆ. ಆಹಾರವೂ ಮಾಯೆಯಾಗಿದೆ ಎನ್ನುತ್ತಾನೆ. ಆಹಾರ, ಸಲಹೆ, ಪೋಷಣೆಯ ಭಾರ ಹೊತ್ತಿದ್ದ ಪಾರ್ವತಿಗೆ ಇದರಿಂದ ಕೋಪ ಬರುತ್ತದೆ. ಆಕೆ ಈ ಜಗತ್ತಿನಿಂದ ಮರೆಯಾಗುತ್ತಾಳೆ. ಅವಳಿಲ್ಲದೆ ಹೋದಾಗ ಭೂಮಿ ಬರಡಾಗುತ್ತದೆ. ಭಕ್ತರು ಹಸಿವಿನಿಂದ ಕಂಗಾಲಾಗುತ್ತಾರೆ. ಕಾಶಿಯಲ್ಲಿ ತನ್ನ ಭಕ್ತರು ಹಸಿವಿನಿಂದ ನರಳುವುದನ್ನು ನೋಡಿದ ಶಿವ(Lord Shankar)ನಿಗೆ ತನ್ನ ಮಾತಿನ ತಪ್ಪಿನ ಅರಿವಾಗುತ್ತದೆ. ಕೂಡಲೇ ಆತ ಅನ್ನಪೂರ್ಣೆ(Goddess Annapurna)ಯ ಬಳಿ ತನ್ನ ಭಕ್ತರಿಗಾಗಿ ಅನ್ನಭಿಕ್ಷೆ ಕೋರುತ್ತಾನೆ. ಜೊತೆಗೆ, ತಾನು ಹೇಳಿದ್ದು ತಪ್ಪು, ಆಹಾರ ಭ್ರಮೆಯಲ್ಲ, ಅದು ಆತ್ಮವಿರುವ ದೇಹ ಸಲಹುತ್ತದೆ ಎನ್ನುತ್ತಾನೆ. ಕರುಣಾಮಯಿಯಾದ ಆಕೆ, ಕೂಡಲೇ ಸುಭಿಕ್ಷತೆ ಕರುಣಿಸಿ, ಎಲ್ಲರ ಹಸಿವನ್ನು ನೀಗುತ್ತಾಳೆ. ಹೀಗೆ ಕಾಣೆಯಾದ ಆಕೆ ಮತ್ತೆ ಬಂದದ್ದು ಅಕ್ಷಯ ತೃತೀಯದ ದಿನ. ಅಂದಿನಿಂದಲೇ ಆಕೆಯನ್ನು ಅನ್ನಪೂರ್ಣೆ ಎಂಬ ಹೆಸರಿನಲ್ಲಿ ಕರೆಯಲಾರಂಭಿಸಿದ್ದು. ಹಾಗಾಗಿ, ಅಕ್ಷಯ ತೃತೀಯ ದಿನವು ಅನ್ನಪೂರ್ಣೆಯ ಜನ್ಮದಿನವಾಗಿದ್ದು, ಆ ದಿನ ಬಂಗಾರ ಖರೀದಿಗೆ ಉತ್ತಮವಾಗಿದೆ ಎನ್ನಲಾಗುತ್ತದೆ. 

Coastal Karnataka: ಮಲ್ಯ, ಸಚಿನ್, ಶಾಸ್ತ್ರಿ.. ನಾಗಾರಾಧನೆ ನಂಬಿ ತುಳುನಾಡಿಗೆ ಬರುವ ಸೆಲೆಬ್ರಿಟಿಗಳು..

ಇನ್ನಷ್ಟು ವಿಷಯಗಳು
ಶ್ರೀರಾಮ(Sri Ram)ನು ಲಂಕೆ(Sri Lanka)ಗೆ ಪಯಣ ಬೆಳೆಸುವಾಗ ಅನ್ನಪೂರ್ಣಾ ದೇವಿಯನ್ನು ಪೂಜಿಸಿ, ತನ್ನೊಂದಿಗೆ ಬರುವ ವಾನರ ಸೇನೆಯ ಹಸಿವನ್ನು ನೀಗಿಸುವಂತೆ ಬೇಡಿಕೊಳ್ಳುತ್ತಾನೆ ಎಂಬುದನ್ನು ವೇದಗಳಲ್ಲಿ ತಿಳಿಸಲಾಗಿದೆ. ಆಗ ತಾಯಿಯು ಆಹಾರ ಹಾಗೂ ಗೆಲುವಿಗೆ ಆಶೀರ್ವದಿಸುತ್ತಾಳೆ. 

ಸ್ಕಂದ ಪುರಾಣ(Skanda Purana)ದ ಪ್ರಕಾರ, ಅನ್ನಪೂರ್ಣಾ ದೇವಿಗೆ ಮೂರು ಕಣ್ಣುಗಳಿವೆ. ಹಣೆಯಲ್ಲಿ ಅರ್ಧ ಚಂದ್ರಾಕೃತಿ ಇರುತ್ತದೆ. ಬಹಳಷ್ಟು ಆಭರಣಗಳನ್ನು ಧರಿಸಿ ಕಂಗೊಳಿಸುವ ಅನ್ನಪೂರ್ಣೆಯು ಒಂದು ಕೈಲಿ ಆಹಾರ ತುಂಬಿದ ಬಟ್ಟಲನ್ನು ಹಿಡಿದಿದ್ದರೆ, ಮತ್ತೊಂದು ಕೈಲಿ ಒಡವೆಗಳನ್ನು ಹಿಡಿದಿರುತ್ತಾಳೆ. ಹೇಗೆ ಪಾರ್ವತಿಯು ಸಮೃದ್ಧಿಯ ತಾಯಿಯೋ, ಹಾಗೆಯೇ ಅನ್ನಪೂರ್ಣೆಯು ಆಹಾರದ ತಾಯಿಯಾಗಿದ್ದಾಳೆ. 

Chanakya Niti: ವೈವಾಹಿಕ ಜೀವನ ಹಾಳು ಮಾಡುವ ಆರು ಅಭ್ಯಾಸಗಳು

ಹಿಮವಂತನು ಎಲ್ಲ ಪರ್ವತಗಳ ರಾಜ. ತಾಯಿ ಪಾರ್ವತಿಯ ತಂದೆ. ಆತನ ಪುತ್ರಿಯಾಗಿಯೇ ಅನ್ನಪೂರ್ಣೆಯನ್ನು ನೋಡಲಾಗುವುದರಿಂದ ಹಿಮಾಲಯದ ಪರ್ವತಗಳಲ್ಲಿ ಅನ್ನಪೂರ್ಣ ಪರ್ವತವೂ ಇದೆ. 
 

Follow Us:
Download App:
  • android
  • ios