Asianet Suvarna News Asianet Suvarna News

ಸೋಮವಾರದಂದು ಈ ವಸ್ತುಗಳನ್ನು ಖರೀದಿಸಬೇಡಿ

ಸೋಮವಾರ ಶಿವನಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನ ಚಂದ್ರದೇವನ ಆರಾಧನೆಗೂ ಪ್ರಶಸ್ತವಾದ ದಿನವಾಗಿದೆ. ಸೋಮವಾರ ಕೆಲವು ವಸ್ತುಗಳನ್ನು ಕೊಂಡುಕೊಳ್ಳುವುದು ಅಶುಭವೆಂದು ಹೇಳಲಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು ಎಂಬುದನ್ನು ನೋಡೋಣ ಮತ್ತು ಸೋಮವಾರ ಶಿವನ ಕೃಪೆ ಪಡೆಯಲು ಏನು ಮಾಡಬೇಕು ಎಂಬುದನ್ನು ತಿಳಿಯೋಣ...

Do not purchase these items on Monday
Author
Bangalore, First Published Jul 11, 2022, 6:16 PM IST

ಹಿಂದೂ ಧರ್ಮದಲ್ಲಿ ಪುರಾಣ ಕಾಲದಿಂದಲೂ ಕೆಲವು ಆಚರಣೆಗಳು ರೂಢಿಯಲ್ಲಿವೆ. ಆ ಆಚರಣೆಗಳನ್ನು ಇಂದಿಗೂ ಹಲವರು ಆಚರಿಸುತ್ತಾ ಬಂದಿದ್ದಾರೆ. ಕೆಲವು ವಸ್ತುಗಳು ಮನೆಗೆ ಶುಭವನ್ನು ತಂದರೆ ಮತ್ತೆ ಕೆಲವು ವಸ್ತುಗಳು ಅಶುಭ ತರುವಂತದ್ದಾಗಿರುತ್ತದೆ. ವಸ್ತುಗಳು ಮನೆಗೆ ಅವಶ್ಯಕವೇ ಆದರೂ ಅದನ್ನು ಕೊಳ್ಳಲು ಒಂದು ಸರಿಯಾದ ದಿನವಿರುತ್ತದೆ. ಅದೇ ದಿನದಂದು ಕೊಂಡರೆ ಅದರಿಂದ ಮನೆಗೆ ಒಳಿತಾಗುತ್ತದೆ. ಶಾಸ್ತ್ರದ ಪ್ರಕಾರ ಕೆಲವು ಕಾರ್ಯಗಳನ್ನು ಮಾಡಲು ಸರಿಯಾದ ಸಮಯ ಮತ್ತು ದಿನವಿರುತ್ತದೆ. ಯಾವುದಾದರು ವಸ್ತುವನ್ನು ಖರೀದಿಸುವ ಮೊದಲು ಆ ವಸ್ತುವನ್ನು ಖರೀದಿಸಲು ಒಳ್ಳೆಯ ದಿನ ಹೌದೇ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಶಾಸ್ತ್ರದಲ್ಲಿ ತಿಳಿಸಿದ ಪ್ರಕಾರ ಶನಿವಾರದ ದಿನ ಲೋಹದ ವಸ್ತುಗಳನ್ನು ಖರೀದಿಸುವಂತಿಲ್ಲ, ಅದೇ ರೀತಿ ಕೆಲವು ವಸ್ತುಗಳನ್ನು ಸೋಮವಾರದ ದಿನ ಖರೀದಿಸುವಂತಿಲ್ಲ. ಹಾಗಾದರೆ ಸೋಮವಾರದಂದು ಯಾವ ವಸ್ತುಗಳನ್ನು ಖರೀದಿಸಬಹುದು ಮತ್ತು ಯಾವ ವಸ್ತುಗಳನ್ನು ಮನೆಗೆ ತರಬಾರದು ಎಂಬುದನ್ನು ತಿಳಿಯೋಣ.

ಈ ವಸ್ತುಗಳನ್ನು ಸೋಮವಾರ ಮನೆಗೆ ತರಬಾರದು:
ಜೀವನಕ್ಕೆ ನಕಾರಾತ್ಮಕ ಪರಿಣಾಮಗಳನ್ನು ತರುವ ವಸ್ತುಗಳನ್ನು ಮನೆಗೆ ತರಬಾರದು. ಅದರಲ್ಲೂ ಕೆಲವು ವಸ್ತುಗಳನ್ನು ತರುವುದಕ್ಕೆ ದಿನ ನೋಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು ಎಂದು ತಿಳಿಯೋಣ..

ಇದನ್ನು ಓದಿ : ಚಿತೆಯ ಪ್ರದಕ್ಷಿಣೆ - ಸಂಸ್ಕಾರದ ನಂತರ ಹಿಂದಿರುಗಿ ನೋಡಬಾರದು ಏಕೆ?

ಜ್ಯೋತಿಷ್ಯ ಶಾಸ್ತ್ರದ ಅನುಸಾರ ಸೋಮವಾರದ ದಿನ ಧಾನ್ಯಗಳು, ಕಲೆ ಸಂಬಂಧಿಸಿದ ವಸ್ತುಗಳು, ಕಾಪಿ ಪುಸ್ತಕ, ಪುಸ್ತಕಗಳು, ಕ್ರೀಡೆಗೆ ಸಂಬಂಧಿಸಿದ ವಸ್ತುಗಳು, ವಾಹನಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಇತ್ಯಾದಿ ವಸ್ತುಗಳನ್ನು ಸೋಮವಾರ ಖರೀದಿಸುವುದು ಅಶುಭವೆಂದು ಹೇಳಲಾಗುತ್ತದೆ.

ಸೋಮವಾರ ಖರೀದಿಸಬೇಕಾದ ವಸ್ತುಗಳು
ಶಿವನ ಆರಾಧನೆಗೆ ಸೋಮವಾರ ಎಷ್ಟು ಶ್ರೇಷ್ಠವೋ, ಚಂದ್ರನ ಆರಾಧನೆಗೂ ಅಷ್ಟೇ ಶ್ರೇಷ್ಠವಾದ ದಿನವಾಗಿದೆ. ಶಾಂತಿಯನ್ನು ತಂಪನ್ನು ನೀಡುವ ಚಂದ್ರನಿಗೆ ಶ್ವೇತ ವರ್ಣ ಪ್ರಿಯವಾಗಿದೆ. ಹಾಗಾಗಿ ಸೋಮವಾರದಂದು ಬಿಳಿ ಬಣ್ಣದ ವಸ್ತುಗಳನ್ನು ಖರೀದಿಸುವುದು ಶುಭವೆಂದು ಹೇಳಲಾಗುತ್ತದೆ. ಅಕ್ಕಿಯ ಬಣ್ಣವು ಬಿಳಿಯಾದ್ದರಿಂದ, ಈ ದಿನ ಅಕ್ಕಿಯನ್ನು ಖರೀದಿಸುವುದು ಶುಭವೆಂದು ಹೇಳಲಾಗುತ್ತದೆ. ಶ್ವೇತ ವರ್ಣದ ವಸ್ತ್ರವನ್ನು ಸೋಮವಾರ ಧರಿಸುವುದು ಸಹ ಶುಭ ಮತ್ತು ಇದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ : ಚಾತುರ್ಮಾಸದಲ್ಲಿ ಈ ರಾಶಿಯವರಿಗೆ ವಿಷ್ಣುವಿನ ವಿಶೇಷ ಕೃಪೆ

ಸೋಮವಾರ ಹೀಗೆ ಮಾಡುವುದರ ಮೂಲಕ ಶಿವನ ಕೃಪೆ ಪಡೆಯಬಹುದಾಗಿದೆ   
- ಸೋಮವಾರ ಮೊಸರು, ವಸ್ತ್ರ, ಸಕ್ಕರೆ ಮತ್ತು ಹಾಲನ್ನು ದಾನ ಮಾಡುವುದರಿಂದ ಶುಭ ಫಲ ಪ್ರಾಪ್ತವಾಗುತ್ತದೆ. ಶಿವ ಸ್ತ್ರೋತವನ್ನು ಪಾರಾಯಣ ಮಾಡುವುದರಿಂದ ಸಮಸ್ಯೆಗಳು ದೂರವಾಗುತ್ತವೆ.

- ಸೋಮವಾರ ಸಂಧ್ಯಾ ಸಮಯದಲ್ಲಿ ಕಪ್ಪುಎಳ್ಳು ಮತ್ತು ಅಕ್ಕಿಯನ್ನು ಮಿಶ್ರಣ ಮಾಡಿ ಅದನ್ನು ದಾನವಾಗಿ ನೀಡುವುದರಿಂದ ಆರ್ಥಿಕ ಸಂಕಷ್ಟ ದೂರವಾಗುತ್ತದೆ. ಅಷ್ಟೇ ಅಲ್ಲದೇ ಪಿತೃ ದೋಷವಿದ್ದರೂ ನಿವಾರಣೆಯಾಗುತ್ತದೆ.

- ಚಂದ್ರ ದೋಷವಿರುವವರು ಈ ದಿನ ಶ್ರೀಗಂಧದ ತಿಲಕವನ್ನು ಇಟ್ಟುಕೊಳ್ಳಬೇಕು ಮತ್ತು ಶ್ವೇತ ವಸ್ತ್ರವನ್ನು ಧರಿಸಬೇಕು.

- ಸೋಮವಾರ ಶಿವನಿಗೆ, ಶ್ರೀಗಂಧ, ಅಕ್ಷತೆ, ಹಾಲು, ದತೂರ ಮತ್ತು ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವನ ಕೃಪೆ ಪ್ರಾಪ್ತವಾಗುತ್ತದೆ.

- ಸೋಮವಾರ ಪ್ರದೋಷ ಕಾಲದಲ್ಲಿ ಶಿವನ ಆರಾಧನೆ ಮಾಡುವುದರಿಂದ ಶಂಕರನ ಕೃಪೆ ಪ್ರಾಪ್ತವಾಗುವುದಲ್ಲದೆ, ಮನೋಕಾಮನೆಗಳು ಸಿದ್ಧಿಸುತ್ತವೆ. 

ಸೋಮವಾರದ ಉಪಾಯಗಳನ್ನು ಮಾಡುವುದರ ಜೊತೆಗೆ ಸೋಮವಾರ ಖರೀದಿಸಬಾರದ ವಸ್ತುಗಳ ಬಗ್ಗೆ ಗಮನಹರಿಸಿದರೆ ಜೀವನದಲ್ಲಿ ನೆಮ್ಮದಿ ಮತ್ತು ಸಮೃದ್ಧಿ ಉಂಟಾಗುತ್ತದೆ.
 

Follow Us:
Download App:
  • android
  • ios