Asianet Suvarna News Asianet Suvarna News

ದೀಪಾವಳಿ ವರ್ಷ ಭವಿಷ್ಯ: ಯುಗಾದಿವರೆಗೆ 12 ರಾಶಿಗಳ ಭವಿಷ್ಯ ಹೇಗಿರಲಿದೆ?

ದೀಪಾವಳಿಯಿಂದ ಚೈತ್ರ ಮಾಸದ ಯುಗಾದಿವರೆಗೆ ಅಂದರೆ ಈ ಅಕ್ಟೋಬರ್ 26 ರಿಂದ ಮಾರ್ಚ್ 21ರವರೆಗಿನ ದಿನಗಳು ಹನ್ನೆರಡೂ ರಾಶಿಗಳಿಗೆ ಹೇಗಿರಲಿದೆ ಎಂಬುದನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

Diwali yearly predictions of zodiac signs skr
Author
First Published Oct 23, 2022, 11:07 AM IST

ಶ್ರೀಕಂಠ ಶಾಸ್ತ್ರಿ, ಜ್ಯೋತಿಷಿಗಳು.

ಚಾಂದ್ರಮಾನದ ಹನ್ನೆರಡು ಮಾಸಗಳಲ್ಲಿ ಎಂಟನೆಯ ಮಾಸ ಈ ಕಾರ್ತೀಕ ಮಾಸ. ಕಾರ್ತೀಕ ಮಾಸ ಶಿವನ ಮಾಸ ಅಂತ ಪರಿಗಣಿಸಲಾಗುತ್ತದೆ. ಶಿವನೇ ಕಾಲದ ಅಧಿಪತಿ. ಕಾಲ ಎಲ್ಲವನ್ನೂ ಸೃಷ್ಟಿಸುವ-ಎಲ್ಲವನ್ನೂ ಪಾಲನೆ ಮಾಡುವ- ಎಲ್ಲವನ್ನೂ ಭಕ್ಷಿಸುವ ಮಹಾ ಶಕ್ತಿ. ಶಿವನೇ ಮಹಾ ಸಮಯವಾಗಿ ನಮ್ಮ ಪ್ರತಿ ಕ್ಷಣವನ್ನೂ ತನ್ನಿಂದ ತುಂಬಿದ್ದಾನೆ.
ಇಂಥ ಅಗಣಿತ ವಿಸ್ತಾರ ಕಾಲದಲ್ಲಿ ನಮ್ಮ ಜೀವನ ಸಮಯ ಎಷ್ಟು ಪುಟ್ಟದ್ದು ಎಂಬ ಕಲ್ಪನೆ ನಮಗಿಲ್ಲ. ಆದರೂ ಈ ಕಾಲಚಕ್ರ ಪ್ರತಿ ಮನುಷ್ಯನ ಜೀವನಕ್ಕೂ ಒಂದು ಸಮಯದ ಚೌಕಟ್ಟನ್ನು ಏರ್ಪಾಡು ಮಾಡಿದೆ. ಅದನ್ನೇ ನಾವು ಗ್ರಹ-ನಕ್ಷತ್ರಗಳ ಮೂಲಕ ಇಷ್ಟು ದಶೆ-ಇಷ್ಟು ಭುಕ್ತಿ ಅಂತ ವಿಂಗಡಿಸಿಕೊಂಡು, ಒಬ್ಬ ಮನುಷ್ಯನ ಜೀವಿತಾವಧಿ ಇಷ್ಟು ಕಾಲ ಇರಬಹುದು ಎಂಬುದನ್ನು ಗಣಿತ ಮಾಡಿಕೊಂಡು ಆ ಪುಟ್ಟ ಸಮಯದಲ್ಲಿ ನಾವು ಎಷ್ಟು ಸುಖ-ದುಃಖಗಳನ್ನು ಅನುಭವಿಸುತ್ತೇವೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡುತ್ತೇವೆ.  ಇದನ್ನು ತಿಳಿಸಿಕೊಟ್ಟದ್ದೇ ನಮ್ಮ ಜ್ಯೋತಿಷ ಶಾಸ್ತ್ರ.
ಈ ಜ್ಯೋತಿಷ ಶಾಸ್ತ್ರ ಮನುಷ್ಯನಿಗೆ ಅವನ ಬದುಕಿನ ದಾರಿ ತೋರಿಸುವುದಲ್ಲದೆ, ಬದುಕಿನ ದಾರಿಯಲ್ಲಿ ಸಂಭವಿಸುವ ಕೆಲ ದುರ್ಘಟನೆಗಳಿಗೆ ಪರಿಹಾರ ಸೂಚಿಸಿ ಬದುಕಿನ ದಾರಿಗೆ ದೀಪವೂ ಆಗುತ್ತದೆ. ಹಾಗಾಗಿಯೇ ಇದನ್ನು ಜೀವನ ದೀಪ ಅಂತಾರೆ. ಇದರ ಸಹಾಯದಿಂದಲೇ ನಾವು ನಮ್ಮ ಜೀವನ ದಾರಿಯ ತಿರುಗಳನ್ನು ಸುಲಭವಾಗಿ ದಾಟಲಿಕ್ಕೆ ಸಾಧ್ಯ. ಈ ದೀಪಾವಳಿಯಿಂದ ನಮ್ಮ ಮುಂದಿನ ದಾರಿ ಹೇಗಿದೆ..? ಯಾವ ಸಂದರ್ಭದಲ್ಲಿ ಎಚ್ಚರ ವಹಿಸಬೇಕು..? ಯಾವ ಆರಾಧನೆಯಿಂದ ಮನೋಬಲ ಹೆಚ್ಚಲಿದೆ ಇತ್ಯಾದಿ ವಿಚಾರಗಳನ್ನು ರಾಶಿಫಲದ ಮೂಲಕ ತಿಳಿಯೋಣ.

ದೀಪಾವಳಿಯಿಂದ ಚೈತ್ರ ಮಾಸದ ಯುಗಾದಿವರೆಗೆ ಅಂದರೆ ಈ ಅಕ್ಟೋಬರ್ 26 ರಿಂದ ಮಾರ್ಚ್ 21ರವರೆಗಿನ ದಿನಗಳು ಹನ್ನೆರಡೂ ರಾಶಿಗಳಿಗೆ ಹೇಗಿರಲಿದೆ ಎಂಬುದನ್ನು ಗಮನಿಸೋಣ. ಈ ೫ ತಿಂಗಳ ಅಂತರದಲ್ಲಿ ರವಿ-ಚಂದ್ರಬುಧ-ಶುಕ್ರರ ಸಂಚಾರದ ಜೊತೆ ಪ್ರಧಾನವಾಗಿ ಪರಿಗಣಿಸಬೇಕಾದದ್ದು. ಕುಜನ ಸಂಚಾರ. ಹಾಗೂ ಜನವರಿಯಲ್ಲಿ ಆಗುವ ಶನಿಯ ಸ್ಥಾನಪಲ್ಲಟ. ಉಳಿದಂತೆ ಗುರು ಗ್ರಹವು ಮೀನರಾಶಿಯಲ್ಲೂ, ರಾಹು-ಕೇತುಗಳು ಕ್ರಮವಾಗಿ ಮೇಷ, ತುಲಾ ರಾಶಿಯಲ್ಲೇ ಇರಲಿವೆ. ಹೀಗಿರುವಾಗ ಗ್ರಹಗಳ ಪ್ರಭಾವ ಹೇಗಿರಲಿದೆ, ಯಾವ ಎಚ್ಚರಿಕೆಯನ್ನು ಸೂಚಿಸುತ್ತಿವೆ ಎಂಬುದನ್ನು ತಿಳಿಯೋಣ.

ಎಲ್ಲರೊಳಗಿನ ದೀಪ ಎಲ್ಲರನ್ನೂ ಬೆಳಗಲಿ

ಮೇಷ(Aries)
ದೀಪಾವಳಿ ನಂತರದ ದಿನಗಳು ನಿಮ್ಮ ಪಾಲಿಗೆ ವೃತ್ತಿ ಸ್ಥಿರತೆ, ಲಾಭ. ಹೊಸ ಅವಕಾಶಗಳನ್ನೇರ್ಪಾಡುಮಾಡುವುದಲ್ಲದೆ, ಪ್ರಶಂಸೆ ಸಮ್ಮಾನಗಳನ್ನು ತರಲಿವೆ ಎಂಬುದರಲ್ಲಿ ಸಂಶಯಬೇಡ. ರಾಶ್ಯಾಧಿಪತಿ ಕುಜ ನಿಮ್ಮ ಪಾಲಿಗೆ ಧೈರ್ಯ ಸಾಹಸ ಕಾರ್ಯಗಳಲ್ಲಿ ಜಯವನ್ನು ತಂದುಕೊಡುತ್ತಾನೆ. ಉಳಿದಂತೆ ಈ ಪ್ರಾರಂಭದ ದಿನಗಳಲ್ಲಿ ಹಾಲು- ಹೈನುಗಾರರಿಗೆ ಅಧಿಕ ಲಾಭವಿದೆ. ಸಂಗೀತ-ಸಾಹಿತ್ಯ-ಕಲಾ ಕ್ಷೇತ್ರದಲ್ಲಿರುವವರಿಗೆ ಅತ್ಯುತ್ತಮ ಫಲ, ಧನ ಸಹಾಯ, ವಿದ್ಯಾಸಕ್ತಿ, ಒಳ್ಳೆಯ ಮಾರ್ಗದರ್ಶನಗಳು ಸಿಗಲಿವೆ. ವಿದ್ಯಾರ್ಥಿಗಳಿಗೆ ಅನುಕೂಲ ಇರಲಿದೆ. ನವೆಂಬರ್ ಮಧ್ಯ ಭಾಗದಲ್ಲಿ ಸ್ವಲ್ಪ ದಾಂಪತ್ಯ ಅಸಮಾಧಾನ, ವ್ಯಾಪಾರದಲ್ಲಿ ಹಿನ್ನೆಡೆ, ನಷ್ಟ, ದೂರ ಪ್ರಯಾಣಗಳಲ್ಲಿ ಕೊಂಚ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ನಂಬಿಕೊಂಡ ವ್ಯಕ್ತಿಗಳಿಂದ ಅಸಮಾಧಾನ. ಪ್ರೇಮ ಭಗ್ನ. ಇತ್ಯಾದಿ ಅಸಮಾಧಾನ ಫಲಗಳಿರಲಿವೆ. ಜನವರಿ ಮಧ್ಯಭಾಗದ ನಂತರ ಮತ್ತೆ ಉನ್ನತ ಸ್ಥಾನ, ಉತ್ತಮ ಫಲಗಳ ಸಮೃದ್ಧತೆ ಉಂಟಾಗುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಜನ್ಮ ರಾಶಿಯಲ್ಲಿರುವ ರಾಹುವಿನಿಂದ ತಲೆ ಬಿಸಿ, ಟೆನ್ಷನ್. ಹಾಗೂ ಒತ್ತಡದ ಬದುಕುಂಟಾಗಲಿದೆ. ಹೀಗಾಗಿ ಪ್ರಾಣಾಯಾಮ, ಯೋಗ, ಧ್ಯಾನ ದಂಥ ಚಟುವಟಿಕೆಯಲ್ಲಿ ತೊಡಗುವುದು ಉತ್ತಮ.
ಪರಿಹಾರ- ಸುಬ್ರಹ್ಮಣ್ಯ ಪ್ರಾರ್ಥನೆ ಹಾಗೂ ನಾಗ ಕ್ಷೇತ್ರಗಳ ದರ್ಶನ ಮಾಡಿ
ಅದೃಷ್ಟ ಸಂಖ್ಯೆ- 1, 5 ಹಾಗೂ 9
ಬಣ್ಣ- ಹವಳದ ಬಣ್ಣ
ರತ್ನ- ಹವಳ, ಮಾಣಿಕ್ಯ

ವೃಷಭ(Taurus)
ಗುರು-ಶನಿಯರ ಪ್ರಭಾವ ನಿಮ್ಮ ರಾಶಿಗೆ ಹೆಚ್ಚಿನ ಉತ್ತಮ ಫಲಗಳನ್ನೇ ತಂದುಕೊಡುವುದರಿಂದ ದೀಪಾವಳಿ ಹಬ್ಬ ನಿಮ್ಮ ಪಾಲಿಗೆ ಹಿತವಾಗೇ ಇರಲಿದೆ. ವೃತ್ತಿಯಲ್ಲಿ ಶುಭ ಫಲವನ್ನು ಕಾಣುತ್ತೀರಿ. ಹಿರಿಯರಿಂದ ಪ್ರಶಂಸೆಗೆ ಪಾತ್ರರಾಗುತ್ತೀರಿ. ನೀವು ಮಾಡುವ ಕಾರ್ಯಗಳಿಗೆ ದೊಡ್ಡಮಟ್ಟದಲ್ಲಿ ಗೌರವ ಸಿಗಲಿದೆ. ನವೆಂಬರ್ ೧೩ರ ನಂತರ ಸ್ವಲ್ಪ ದೇಹಗಾಯ, ತಲೆಗೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಚರ್ಮ ರೋಗವೂ ಉಂಟಾಗಬಹುದು. ಹೀಗಾಗಿ ಆರೋಗ್ಯ ವಿಚಾರದಲ್ಲಿ ಎಚ್ಚರವಾಗಿರಿ. ವಿದ್ಯಾರ್ಥಿಗಳಿಗೆ ಸ್ವಲ್ಪ ಆಲಸ್ಯ, ಅನಗತ್ಯವಾದದ್ದರ ಮೇಲೆ ಆಸಕ್ತಿ, ಮನಸ್ಸು ಚಂಚಲವಾಗಿ ಅಸಮಾಧಾನದ ಫಲವನ್ನು ಅನುಭವಿಸಬೇಕಾಗುತ್ತದೆ. ಮನಸ್ಸಿನ ದೃಢತೆಗೆ ಯೋಗಾಭ್ಯಾಸ, ಪ್ರಾಣಾಯಾಮ ಅನಿವಾರ್ಯವಾಗಿದೆ. ಸ್ತ್ರೀ-ಪುರುಷರ ನಡುವೆ ಕೊಂಚ ಅಸಮಾಧಾನಗಳು, ಮನಸ್ತಾಪಗಳಾಗುವ ಸಾಧ್ಯತೆ ಇದೆ ಹೀಗಾಗಿ ಎಚ್ಚರವಾಗಿರಿ. ಜನವರಿ ನಂತರ ಕುಂಭ ರಾಶಿಗೆ ಪ್ರವೇಶಿಸುವ ಶನೈಶ್ಚರನಿಂದ ಮತ್ತೆ ಜೀವನ ಉನ್ನತ ಮಟ್ಟಕ್ಕೆ ಹೋಗಲಿದೆ. ವಿದೇಶ ವ್ಯವಹಾರಗಳಲ್ಲಿ ಲಾಭ. ಸಿವಿಲ್ ಕ್ಷೇತ್ರದಲ್ಲಿರುವವರು, ಸರ್ಕಾರಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರು, ಕನ್‌ಸ್ಟ್ರಕ್ಷನ್ ಫೀಲ್ಡ್‌ಗಳಲ್ಲಿ ಕೆಲಸಮಾಡುವವರಿಗೆಲ್ಲಾ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಲಾಭವನ್ನು, ಸಮಾಧಾನವನ್ನೂ, ಸೌಖ್ಯವನ್ನೂ ಹೊಂದುವ ಶೂಭ ಫಲವಿದೆ.  
ಪರಿಹಾರ- ಸುಬ್ರಹ್ಮಣ್ಯ ಪ್ರಾರ್ಥನೆ, ಕೊಲ್ಲೂರು ಮೂಕಾಂಬಿಕಾ ದರ್ಶನ ಮಾಡಿ
ಅದೃಷ್ಟ ಸಂಖ್ಯೆ- 5 ಹಾಗೂ 6
ಬಣ್ಣ- ಬಿಳಿ ಬಣ್ಣ
ರತ್ನ- ವಜ್ರ ಹಾಗೂ ನೀಲ.

ಮಿಥುನ (Gemini)
ಈ ಬಾರಿಯ ದೀಪಾವಳಿ ನಿಮ್ಮ ಪಾಲಿಗೆ ಮಿಶ್ರಫಲವನ್ನು ತರಲಿದೆ. ವೃತ್ತಿ ಸ್ಥಳದಲ್ಲಿ ಅನುಕೂಲ ವಾತಾವರಣ ಇರಲಿದ್ದು, ಪ್ರಶಂಸೆ, ಲಾಭ ಫಲಗಳಿರಲಿವೆ. ಹೊಸ ಅವಕಾಶಗಳು ಅರಸಿ ಬರಲಿವೆ. ವಿದ್ಯಾರ್ಥಿಗಳಿಗೆ ಅನುಕೂಲದ ದಿನಗಳಿವೆ. ವಿದೇಶ ಚಟುವಟಿಕೆಗಳಲ್ಲಿ ಲಾಭ ಬರಲಿದ್ದು, ಹಣಕಾಸಿಗೆ ತೊಂದರೆ ಇರುವುದಿಲ್ಲ. ಇದೇ ಅಕ್ಟೋಬರ್ ೧೫ರಿಂದ ಸ್ವಲ್ಪ ಚರ್ಮ ಸಂಬಂಧಿ ತೊಂದರೆ ಹಾಗೂ ತಲೆಗೆ ಸಂಬಂಧಿಸಿದ ತೊಂದರೆಗಳನ್ನು ಅನುಭವಿಸಬೇಕಾದೀತು. ಆಯುಧಗಳಿಂದ, ಯಂತ್ರಗಳಿಂದ ತೊಂದರೆಗೆ ಒಳಪಡುವ ಸಾಧ್ಯತೆ ಇದೆ. ನವೆಂಬರ್ ಮಧ್ಯ ಭಾಗದವರೆಗೆ ಸ್ವಲ್ಪ ಜಾಗ್ರತೆ ಬೇಕು. ವೃಥಾ ಖರ್ಚು, ಅನಗತ್ಯ ಕಾರ್ಯಗಳಿಗೆ ಆಗುವ ವ್ಯಯದಿಂದ ಹೈರಾಣಾಗುತ್ತೀರಿ. ನವೆಂಬರ್ ಮಧ್ಯಭಾಗದಿಂದ ಮತ್ತೆ ಅನುಕೂಲ ಉಂಟಾಗಲಿದೆ. ಜನವರಿ ಮಧ್ಯಭಾಗದಿಂದ ಸ್ವಲ್ಪ ದೈವಾನುಕೂಲ ಉಂಟಾಗಲಿದೆ. ಹಿರಿಯರಲ್ಲಿ ಗೌರವ ಹೆಚ್ಚಲಿದೆ. ಹಳೆಯ ಸಂಬಂಧಗಳು ಮತ್ತೆ ಜೀವ ಪಡೆಯಲಿವೆ. ಆದರೆ ಬುದ್ಧಿ ಸ್ವಲ್ಪ ಚಂಚಲವಾಗಲಿದೆ. ಮಾರ್ಚ್ ತಿಂಗಳಲ್ಲಿ ಸ್ವಲ್ಪ ದಾಂಪತ್ಯ ಜೀವನ ಏರುಪೇರಾಗಲಿದೆ. ವೃಥಾ ಮನಸ್ತಾಪ, ಅಸಮಾಧಾನಗಳಿಂದ ಮನೆಯ ವಾತಾವರಣ ಸ್ವಲ್ಪ ಕಹಿಯಾಗುತ್ತದೆ. ತಂದೆ-ಮಕ್ಕಳಲ್ಲೂ ಸ್ವಲ್ಪ ಅಸಮಧಾನದ ಹೊಗೆ ಇರಲಿದೆ. ವ್ಯಾಪಾರಿಗಳಿಗೆ ಮೋಸ, ದ್ರೋಹದಂಥ ಸಮಸ್ಯೆಗಳು ಉಂಟಾಗುತ್ತವೆ. ಎಚ್ಚರವಾಗಿರಿ.
ಪರಿಹಾರ- ಲಕ್ಷ್ಮೀ ನರಸಿಂಹ ಪ್ರಾರ್ಥನೆ ಮಾಡಿ
ಅದೃಷ್ಟ ಸಂಖ್ಯೆ-3 ಹಾಗೂ 5
ಬಣ್ಣ- ಹಸಿರು ಬಣ್ಣ
ರತ್ನ- ಪಚ್ಚೆ

ವಾರ ಭವಿಷ್ಯ: ಕಟಕಕ್ಕೆ ದುಃಖದ ಸುದ್ದಿ, ವೃಶ್ಚಿಕಕ್ಕೆ ಕೈಲಿರಲಿ ಬುದ್ಧಿ

ಕರ್ಕಾಟಕ(Cancer)
ದೀಪಾವಳಿ ಹಬ್ಬ ನಿಮ್ಮ ಪಾಲಿಗೆ ಹೆಚ್ಚಿನ ಆನಂದವನ್ನು ತರಲಿದೆ. ಭಾಗ್ಯದ ಗುರುವಿನಿಂದ ನಿಮ್ಮ ಎಲ್ಲ ಕಷ್ಟಗಳೂ ದೂರಾಗಲಿವೆ. ಮನೆಯಲ್ಲಿ ಮಂಗಳಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಭಾಗ್ಯೇಶೇ ಭಾಗ್ಯಭಾವಸ್ಥೇ ಬಹುಭಾಗ್ಯ ಸಮನ್ವಿತಃ ಎಂಬಂತೆ ಅನೇಕ ಬಗೆಯ ಸೌಭಾಗ್ಯಗಳನ್ನು ಹೊಂದಲಿದ್ದೀರಿ. ಉದ್ಯೋಗದಲ್ಲಿ ಸ್ಥಿರತೆ, ಲಾಭ ಫಲಗಳನ್ನು ಕಾಣಲಿದ್ದೀರಿ. ಸಿವಿಲ್ ಕ್ಷೇತ್ರದಲ್ಲಿರುವವರು, ವಿದೇಶ ವಹಿವಾಟು ಇತ್ಯಾದಿ ಮಾರ್ಗಗಳಲ್ಲಿ ದುಡಿಯುವವರಿಗೆ ಅನೂಹ್ಯ ಲಾಭ ಹಾಗೂ ಪ್ರಗತಿಗಳಿದ್ದಾವೆ. ದೈವಾರಾಧನೆ, ಯಜ್ಞ-ಯಾಗಗಳಲ್ಲಿ ಭಾಗವಹಿಸುವ ಪುಣ್ಯ ದೊರೆಯಲಿದೆ. ತೀರ್ಥ ಕ್ಷೇತ್ರ ದರ್ಶನ ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಬುದ್ಧಿಬಲವಿದೆ. ಉನ್ನತ ಶಿಕ್ಷಣದವರಿಗೂ ಅನುಕೂಲಗಳಿದ್ದಾವೆ. ಸ್ವಂತ ವ್ಯಾಪಾರಿಗಳಿಗೆ ಮನ್ನಣೆ ಸಿಗುವುದಲ್ಲದೆ ಹೆಚ್ಚಿನ ಆದಾಯವೂ ಬರಲಿದೆ. ತಂದೆ-ಮಕ್ಕಳ ಬಾಂಧವ್ಯ ವೃದ್ಧಿಯಾಗಲಿದೆ. ಮಕ್ಕಳ ಮಾತು ಉಚಿತವೆನಿಸುತ್ತದೆ. ಜನವರಿಯ ಮಧ್ಯಭಾಗದಿಂದ ಮನಸ್ಸಿಗೆ ಸ್ವಲ್ಪ ದುಃಖದ ವಾತಾವರಣ ಉಂಟಾಗಲಿದೆ. ಸೋಲನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ. ಆದರೆ ಪ್ರಾಮಾಣಿಕ ಪ್ರಯತ್ನಗಳಿಗೆ ಸಮಾಧಾನದ ಉತ್ತರ ಸಿಗಲಿದೆ ಎಂಬುದರಲ್ಲಿ ಸಂಶಯವಿಲ್ಲ. ಮಾರ್ಚ್ ತಿಂಗಳ ನಂತರ ವೃತ್ತಿಯಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು. ಶ್ರಮ ಹೆಚ್ಚಾಗುವ ಸಾಧ್ಯತೆ ಇದೆ. ಸ್ನೇಹ-ಪ್ರೀತಿ-ವಿಶ್ವಾಸಪರರಲ್ಲಿ ಅಪನಂಬಿಕೆ ಮೂಡುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲೂ ಸ್ವಲ್ಪ ಅಸಮಾಧಾನ ಇರಲಿದೆ.  ಜಾಗ್ರತೆ ಇರಲಿ.
ಪರಿಹಾರ- ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಸಪ್ತಶತಿ ಪಾರಾಯಣ ಮಾಡಿಸಿ
ಅದೃಷ್ಟ ಸಂಖ್ಯೆ- 2 ಹಾಗೂ 9
ಬಣ್ಣ- ಬಿಳಿ ಹಾಗೂ ಹಳದಿ ಬಣ್ಣ
ರತ್ನ- ಮುತ್ತು

ಸಿಂಹ(Leo)
ಪ್ರಾರಂಭದ ದಿನಗಳಲ್ಲಿ ರಾಶ್ಯಾಧಿಪತಿ ಸೂರ್ಯನ ಬಲಹೀನತೆಯ ಕಾರಣ ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲಿದೆ. ಸಹಾಯಕರಿಂದ ಅಸಮಾಧಾನದ ಮಾತುಗಳನ್ನು ಕೇಳಬೇಕಾಗುತ್ತದೆ. ಮನೆಯಲ್ಲಿ -ಕೆಲಸದಲ್ಲಿ ಪರಿಚಾರಕರಿಂದ ಅಸಮಾಧಾನ. ಆದರೆ ವತ್ತಿಯಲ್ಲಿ ಬಲವಿರುತ್ತದೆ. ಎಷ್ಟೇ ತೊಡಕುಗಳಿದ್ದರೂ ನಿಭಾಯಿಸುವ ಶಕ್ತಿ ಇರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲವಿದೆ. ಧೈರ್ಯ ಸಾಹಸ ಕಾರ್ಯಗಳಲ್ಲಿ ಬಲವೂ ಇದೆ. ಜಯವೂ ಸಿಗಲಿದೆ. ಕರ್ಮ ಹಾಗೂ ಲಾಭ ಸ್ಥಾನಗಳಲ್ಲಿ ಸಂಚರಿಸುವ ಕುಜನಿಂದ ವಿಶೇಷ ಲಾಭ ಇರಲಿದೆ. ಮಿಲಿಟರಿ, ಪೊಲೀಸ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ಸ್, ಪೆಟ್ರೋಲಿಯಂ ಕ್ಷೇತ್ರದವರಿಗೆ ಹೆಚ್ಚಿನ ಆದಾಯ ಇರಲಿದೆ. ಜನವರಿ ಮಧ್ಯಭಾಗದಿಂದ ದಾಂಪತ್ಯದಲ್ಲಿ ಸ್ವಲ್ಪ ಅಸಮಾಧಾನವಿರಲಿದೆ. ಆದರೆ ಗಾಬರಿ ಬೇಡ. ಸ್ವಕ್ಷೇತ್ರದ ಶನಿ ಬಿರುಗಾಳಿ ಬೀಸಿದ ಹಿಂದೆಯೇ ತಣ್ಣಗಾಗುತ್ತಾನೆ. ಸ್ವಲ್ಪ ಸಮಾಧಾನ ಕಾಯ್ದುಕೊಳ್ಳಬೇಕು. ಇಟ್ಟಿಗೆ, ಮಣ್ಣು, ಮರಳು, ಕಬ್ಬಿಣ ವ್ಯಾಪಾರಿಗಳಿಗೆ ಉತ್ತಮ ಫಲವಿದೆ. ವಿದೇಶ ಸಂಪರ್ಕದಲ್ಲಿ ದುಡಿಯುವವರಿಗೆ ಹೆಚ್ಚಿನ ಮನ್ನಣೆ, ಲಾಭಗಳಿದ್ದಾವೆ. ನೀವು ಎಚ್ಚರವಹಿಸಬೇಕಾದ ವಿಚಾರವೆಂದರೆ ತಂದೆ-ತಂದೆ ಸಮಾನರ ಬಳಿ ಸಮಾಧಾನವಾಗಿರಿ. ಪಿತೃಗಳ ಅಸಮಾಧಾನ ನಿಮ್ಮ ಎಲ್ಲ ರೀತಿಯ ತೊಡಕಿಗೆ ಕಾರಣವಾಗಲಿದೆ. ಹೆಚ್ಚಿನ ಶುಭಫಲಕ್ಕಾಗಿ ಯುಗಾದಿವರೆಗೆ ಸಹನೆಯಿಂದ ಕಾಯಬೇಕು.
ಪರಿಹಾರ- ಶಿವನ  ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿಸಿ
ಅದೃಷ್ಟ ಸಂಖ್ಯೆ- 1, 5 ಹಾಗೂ 9
ಬಣ್ಣ- ಕೆಂಪು ಬಣ್ಣ
ರತ್ನ- ಮಾಣಿಕ್ಯ, ಹವಳ

ಕನ್ಯಾ(Virgo)
ದೀಪಾವಳಿ ಹಬ್ಬ ನಿಮ್ಮ ಪಾಲಿಗೆ ಹೆಚ್ಚಿನ ಸಮಾಧಾನ-ಸಿಹಿ ಫಲವನ್ನೇ ತಂದುಕೊಡಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ. ಉತ್ತಮ ಮಾರ್ಗದರ್ಶನಗಳಿಂದ ವಿದ್ಯಾ ಮಾರ್ಗ ಸುಲಭವಾಗುತ್ತದೆ. ಕಲೆಯ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಮನ್ನಣೆ, ಹೊಸ ಅವಕಾಶ ಇತ್ಯಾದಿ ಶುಭಫಲದ ಜೊತೆಗೆ ಹಣಕಾಸಿನ ಸಮೃದ್ಧಿಯನ್ನು ತರಲಿದೆ. ಆದರೆ ತೊಡಕಿಲ್ಲ ಎಂದಲ್ಲ. ವ್ಯಯ, ಮರೆವು, ಆಲಸ್ಯಗಳೂ ಕೂಡ ನಿಮ್ಮನ್ನು ತಡೆದು ನಿಲ್ಲಿಸುತ್ತವೆ. ಹೀಗಾಗಿ ಜಾಗ್ರತೆ ಇರಲಿ. ವೃತ್ತಿ ಸಂಬಂಧಿ ಅನುಕೂಲವಿದೆ. ನಿಮ್ಮ ಕಾರ್ಯಕ್ಕೆ ತಕ್ಕ ಫಲ ಪ್ರಶಂಶೆಗಳು ಸಿಗಲಿವೆ. ಸಿಹಿ ಪದಾರ್ಥಗಳ ವ್ಯಾಪಾರ ಕ್ಷೇತ್ರದವರಿಗೆ ಹೆಚ್ಚಿನ ಬಲವಿದೆ. ಲೈಬ್ರರಿ, ಲಾ, ಅರ್ಚಕ ವೃತ್ತಿಯಲ್ಲಿರುವವರಿಗೂ ಹೆಚ್ಚಿನ ಆದಾಯ ಬರಲಿದೆ. ಸಂಗಾತಿಯ ನಡುವೆ ಸಾಮರಸ್ಯ ಇರಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳಿಗೆ ಅವಕಾಶ ಉಂಟಾಗಲಿವೆ. ಇದೆಲ್ಲದರ ಜೊತೆ ನೀವು ಆರೋಗ್ಯ ವಿಚಾರದಲ್ಲಿ ಎಚ್ಚರವಹಿಸಬೇಕು. ವಾತ ರೋಗ ನಿಮ್ಮನ್ನು ಬಾಧಿಸಲಿದೆ. ಆಂತರಿಕ ಶತ್ರುಗಳು ಕಾಡುವ ಸಾಧ್ಯತೆ ಕೂಡ ಇದೆ. ಹೀಗಾಗಿ ಪ್ರತಿಯೊಂದ ನಡೆಯೂ ಎಚ್ಚರವಾಗಿರಲಿ. ಸ್ವಲ್ಪ ಕಣ್ಣಿನ ಸಮಸ್ಯೆಗಳು ಉಂಟಾಗಬಹುದು. ತಪಾಸಣೆ ಮಾಡಿಸಿಕೊಳ್ಳಿ. ಮದ್ದೂರು ಸಮೀಪದ ನೇತ್ರ ನಾರಾಯಣ ಸ್ವಾಮಿ ದರ್ಶನ ಮಾಡಿ.
ಪರಿಹಾರ- ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ
ಅದೃಷ್ಟ ಸಂಖ್ಯೆ- 5 ಹಾಗೂ 9
ಬಣ್ಣ- ಹಸಿರು
ರತ್ನ- ಕೆಂಪು ಹಾಗೂ ಪಚ್ಚೆ

ಸೂರ್ಯ ಗ್ರಹಣ; ವಿಜ್ಞಾನ ಏನು ಹೇಳುತ್ತದೆ? ಗ್ರಹಣ ನೋಡೋದು ಹೇಗೆ?

ತುಲಾ(Libra)
ಆರೋಗ್ಯವೇ ನಿಮ್ಮ ಪಾಲಿಗೆ ದೀಪಾವಳಿ ಉಡುಗೊರೆ. ಜನ್ಮಾಧಿಪತಿ ಶುಕ್ರನ ಪ್ರಭಾವದಿಂದ ಆರೋಗ್ಯ ಸುಧಾರಿಸಲಿದೆ. ಮನೆ-ನಿವೇಶನದಂಥ ಕೆಲಸಗಳು ಸ್ವಲ್ಪ ನಿ
ಧಾನವಾಗಲಿವೆ. ವಿದ್ಯಾರ್ಥಿಗಳಿಗೆ ಅನುಕೂಲದ ದಿನಗಳಿದ್ದಾವೆ. ತಂದೆ-ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗಲಿದೆ. ನಿಮ್ಮ ಸಂಗಾತಿಯ ಮೇಲೆ ಸಂಶಯ, ಅಸಮಾಧಾನದಂಥ ಫಲಗಳು ಉಂಟಾಗಲಿವೆ. ಆದರೆ ನಿಮ್ಮ ಮನಸ್ಸು ಒಂದು ಬಗೆಯ ಚೌಕಟ್ಟಿನಲ್ಲಿರುವುದರಿಂದ ಹೆಚ್ಚಿನ ರಾಡಿ ಆಗುವುದಿಲ್ಲ. ವ್ಯಾಪಾರ ದೃಷ್ಟಿಯಿಂದ ಎಲ್ಲವನ್ನೂ ಲೆಕ್ಕಹಾಕುವ ಗುಣದವರಿಗೆ ಅಸಮಾಧಾನ. ಶತ್ರುಗಳು ದೂರಾಗುತ್ತಾರೆ. ಜನವರಿ ಮಧ್ಯಭಾಗದಿಂದ ನಿಮ್ಮ ಆಲೋಚನೆಗಳಿಗೆ ಬೆಲೆ ಬರಲಿದೆ. ಮಕ್ಕಳ ವಿಚಾರದಲ್ಲಿ ಹೆಚ್ಚು ಮಮಕಾರಕ್ಕೆ ಒಳಗಾಗಿ ನೋವನ್ನು ಅನುಭವಿಸುವ ಸಾಧ್ಯತೆ ಇದೆ. ವಿದೇಶ ಪ್ರಯಾಣದ ಇತ್ಯಾದಿಗಳ ಅನುಕೂಲವಿದೆ. ಮುಖ್ಯವಾಗಿ ಜನವರಿ ನಂತರ ಸ್ವಲ್ಪ ಗುಹ್ಯ ರೋಗಗಳು ಬಾಧಿಸಬಹುದು ಎಚ್ಚರವಾಗಿರಿ. ಸ್ತ್ರೀಯರ ವಿಚಾರದಲ್ಲಿ ಮನಸ್ಸು ಚಂಚಲವಾಗಿ ಹೆಚ್ಚಿನ ವ್ಯಯವನ್ನು ಅನುಭವಿಸಬೇಕಾಗುತ್ತದೆ. ಮನೋ ನಿಗ್ರಹಕ್ಕೆ ಧ್ಯಾನ ಅಭ್ಯಾಸ ಮಾಡಿ.
ಪರಿಹಾರ- ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ. ನಾಗ ಕ್ಷೇತ್ರ ದರ್ಶನ ಮಾಡಿ.
ಅದೃಷ್ಟ ಸಂಖ್ಯೆ- 5 ಹಾಗೂ 9
ಬಣ್ಣ- ಬಿಳಿ ಹಾಗೂ ಗಾಢ ನೀಲಿ
ರತ್ನ- ವಜ್ರ-ನೀಲ

 
ವೃಶ್ಚಿಕ(Scorpio)
ಹಬ್ಬದ ಪ್ರಾರಂಭದ ದಿನಗಳು ಸ್ವಲ್ಪ ಕಹಿ ಎನಿಸಿದರೂ ಕ್ರಮೇಣ ಹೆಚ್ಚಿನ ಅನುಕೂಲ ಇರಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಗುರುಬಲ ಇದ್ದೇ ಇರುವುದರಿಂದ ಹೆಚ್ಚಿನ ಆತಂಕ ಬೇಡ. ನವೆಂಬರ್ ಮಧ್ಯಭಾಗದ ನಂತರ ವೃತ್ತಿಯಲ್ಲಿ ಹೆಚ್ಚಿನ ಅನುಕೂಲ ಕಾಣುತ್ತೀರಿ. ಆದಾಯ ಹೆಚ್ಚಾಗಲಿದೆ. ಹೊಸ ಅವಕಾಶಗಳು ನಿಮ್ಮನ್ನು ಕೈಹಿಡಿಯಲಿವೆ. ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅನುಕೂಲ, ಉತ್ತಮ ಮಾರ್ಗದರ್ಶನ ಸಿಗಲಿದೆ. ನೀವು ಭಾಗವಹಿಸುವ ಸಭೆ, ಚಿಂತನಾ ಶಿಬಿರಗಳಲ್ಲಿ ನಿಮ್ಮ ನಿಲುವು ನಿರ್ಧಾರಗಳಿಗೆ ಹೆಚ್ಚಿನ ಮಾನ್ಯತೆ ಸಿಗಲಿದೆ. ಮಕ್ಕಳ ಸಹಕಾರ ಇರಲಿದೆ. ಮನೆ-ನಿವೇಶನದಂಥ ಕೆಲಸಗಳು ಸ್ವಲ್ಪ ನಿಧಾನವಾಗಲಿವೆ. ಪರಿಚಾರಕರಿಂದ ಸ್ವಲ್ಪ ಅಸಮಧಾನ ಇರಲಿದೆ. ಕ್ರಮೇಣ ಅನುಕೂಲ ಕಾಣುತ್ತೀರಿ. ಮಾರ್ಚ್ ತಿಂಗಳಲ್ಲಿ ಸ್ವಲ್ಪ ಆರೋಗ್ಯ ವ್ಯತ್ಯಾಸವಾಗಲಿದೆ. ಜನ ನಿಂದೆಗೆ ಗುರಿಯಾಗುವ ಸಾಧ್ಯತೆಯೂ ಇದೆ. ಗುಹ್ಯ ರೋಗ, ಕಾಲಿನ ಬಾಧೆಗಳು ನಿಮ್ಮನ್ನು ಕಾಡಬಹುದು. ಆರೋಗ್ಯದ ವಿಚಾರದಲ್ಲಿ ಹೆಚ್ಚನ ಗಮನವಿರಲಿ. ವಿಷ ಜಂತುಗಳ ಭಯ ನಿಮ್ಮನ್ನು ಕಾಡಬಹುದು. ಗ್ರಾಮ, ಹೊಲ, ತೋಟ, ನೀರಿನ ಬಳಿ ವಾಸಿಸುವರು ಎಚ್ಚರವಾಗಿರಿ.
ಪರಿಹಾರ- ಸುಬ್ರಹ್ಮಣ್ಯ ಪ್ರಾರ್ಥನೆ, ದುರ್ಗಾ ಕವಚ ಪಠಿಸಿ.
ಅದೃಷ್ಟ ಸಂಖ್ಯೆ- 2 ಹಾಗೂ 10.
ಬಣ್ಣ- ಕೆಂಪು ಹಾಗೂ ಕೇಸರಿ.
ರತ್ನ- ಹವಳ ಹಾಗೂ ಪುಷ್ಯರಾಗ.

ಧನುಸ್ಸು(Sagittarius)
ದೀಪಾವಳಿ ಹಬ್ಬದ ಪ್ರಾರಂಭದ ದಿನಗಳು ಸುಖ ಸಮೃದ್ಧಿಯನ್ನು ಉಂಟು ಮಾಡುವುದಲ್ಲಿದೆ ಬಂಧು, ಮಿತ್ರರ ಸಹಕಾರ ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ಕುಟುಂಬದಲ್ಲೂ ಹಿರಿಯರಿಂದ ಗೌರವ, ಮನ್ನಣೆ, ಆರ್ಥಿಕ ಸಹಾಯದಂಥ ಫಲಗಳು ಉಂಟಾಗುತ್ತವೆ. ನಿವೇಶನ ಖರೀದಿ ಮಾಡುವ ಮನಸ್ಸಾಗಲಿದೆ. ಗೃಹ ನಿರ್ಮಾಣಕ್ಕೂ ಕೈಹಾಕುವ ಸಾಧ್ಯತೆಗಳು ಹೆಚ್ಚು. ವಿದ್ಯಾರ್ಥಿಗಳಿಗೆ ಅನುಕೂಲದ ವಾತಾವರಣ. ವೃತ್ತಿಯಲ್ಲಿ ಅನುಕೂಲದ ಫಲವಿದೆ. ಸಂಗಾತಿಯಿಂದ ಲಾಭವೂ, ಸಾಮರಸ್ಯ ಜೀವನವೂ ಸಾಧ್ಯ. ಜನವರಿ ನಂತರ ಸೇವಕರು ಸಹಾಯಕರು ನಿಮ್ಮಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ಧೈರ್ಯ ಕುಂದುವುದಿಲ್ಲ. ಸಹೋದರರಲ್ಲಿ ಸಾಮರಸ್ಯ ಫಲವಿರಲಿದೆ. ಮಾರ್ಚ್ ವೇಳೆಗೆ ದಾಂಪತ್ಯದಲ್ಲಿ ಸ್ವಲ್ಪ ಅಸಮಾಧಾನದ ಗೆರೆ ಮೂಡಲಿದೆ. ವ್ಯಾಪಾರಿಗಳು ಕಂಗಾಲಾಗಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ. ನಂಬಿಕೊಂಡವರು ಕೈಕೊಡುವ ಸಾಧ್ಯತೆ ಹೆಚ್ಚು. ವೃತ್ತಿಯಲ್ಲೂ ಹಿತ ಶತ್ರುಗಳ ಬಾಧೆ ಹೆಚ್ಚಾಗುತ್ತದೆ. ಸ್ನೇಹಿತರ ಸಹವಾಸ ಸ್ವಲ್ಪ ಹಾದಿಗೆಡಿಸಬಹುದು. ಆಲೋಚನೆಗಳೇ ನಿಮಗೆ ಮುಳುವಾಗಬಹುದು. ಹಿರಿಯರ ಸಲಹೆ ಪಡೆಯಿರಿ. ವಿದೇಶ ಸಂಪರ್ಕ, ಹಾಗೂ ಅನ್ಯ ವರ್ಗದವರಿಂದ ಅನಿರೀಕ್ಷಿತ ಸಹಾಯ ಸಿಗಲಿದೆ.
ಪರಿಹಾರ- ಸುಬ್ರಹ್ಮಣ್ಯ ದರ್ಶನ, ಅಷ್ಟೋತ್ತರ ಸೇವೆ ಮಾಡಿಸಿ. ದತ್ತಾತ್ರೇಯ ಕ್ಷೇತ್ರ ದರ್ಶನ ಮಾಡಿ.
ಅದೃಷ್ಟ ಸಂಖ್ಯೆ- 3 ಹಾಗೂ 9
ಬಣ್ಣ- ಹಳದಿ
ರತ್ನ- ಪುಷ್ಯರಾಗ ಹಾಗೂ ನೀಲ

ಈ 5 ರಾಶಿಯವರಿಗೆ ಶನಿ ಮಾರ್ಗಿಯಿಂದ ಆರ್ಥಿಕ ಆಘಾತ, ಎಚ್ಚರದಿಂದಿರಿ!

ಮಕರ(Capricorn)
ರಾಶ್ಯಾಧಿಪತಿ ಶನಿಯ ಬಲವೇ ನಿಮ್ಮ ಬಲ. ಶಶ ಯೋಗದಲ್ಲಿರುವ ಶನೈಶ್ಚರ ಶಸ್ತಃ ಸರ್ವಜನೈಃ ಸುಭೃತ್ಯಬಲವಾನ್ ಎಂಬಂತೆ ಜನರ ಪ್ರಶಂಸೆ ಮನ್ನಣೆಗಳಿಗೆ ಪಾತ್ರರಾಗುತ್ತೀರಿ. ತೃತೀಯದ ಗುರು ಧೈರ್ಯವನ್ನೂ ನಂಬಿಕೆಯನ್ನೂ ಹೆಚ್ಚಿಸುತ್ತಾನೆ. ಕರ್ಮಾಧಿಪತಿ ಶುಕ್ರನ ಬಲವೂ ಇರುವುದರಿಂದ ದೀಪಾವಳಿ ನಿಮ್ಮ ಪಾಲಿಗೆ ಸಿಹಿ-ಸಂತೋಷವನ್ನು ವೃದ್ಧಿಸುತ್ತದೆ. ಹಾಲು-ಹೈನುಗಾರರಿಗೆ, ವಸ್ತ್ರ-ಆಭರಣ ವ್ಯಾಪಾರಿಗಳಿಗೆ, ಗೋವು, ತುಪ್ಪ ಇಂಥ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯ ಇರಲಿದೆ. ಕಲಾವಿದರಿಗೂ ಹೆಚ್ಚಿನ ಅನುಕೂಲ, ಮನ್ನಣೆ ಸಿಗಲಿವೆ. ಜನವರಿ ಮಧ್ಯ ಭಾಗದಿಂದ ಕುಟುಂಬದಲ್ಲಿ ಸಮಾಧಾನವಾಗಿರಿ. ಹಿರಿಯರ ಜೊತೆ ಸಮಾಧಾನದಿಂದಿರಿ. ಆಹಾರ ವಿಚಾರದಲ್ಲಿ ಎಚ್ಚರವಾಗಿರಿ. ವಿದ್ಯಾರ್ಥಿಗಳಿಗೆ ಆಲಸ್ಯ ಮೈಗೂಡುವ ಸಾಧ್ಯತೆ ಇದೆ. ಆಂಜನೇಯ ಪ್ರಾರ್ಥನೆ ಮಾಡಿ. ಮಾರ್ಚ್ ತಿಂಗಳಿಂದ ಶತ್ರುಗಳ ಬಾಧೆ ಇರಲಿದೆ. ಸಾಲದ ಸುಳಿಗೆ ಸಿಗುವ ಸಾಧ್ಯತೆಯೂ ಇದೆ. ಉದರ ಸಂಬಂಧಿ ತೊಂದರೆಗಳಾಗುವ ಸಾಧ್ಯತೆ ಇರಲಿದೆ. ಪ್ರಯಾಣ ವಿಚಾರದಲ್ಲಿ ಎಚ್ಚರವಾಗಿರಿ. ವೃತ್ತಿಯಲ್ಲಿ ಸ್ವಲ್ಪ ವಿಘ್ನಗಳು. ಅಸಮಾಧಾನಗಳು ಇರುವ ಸಾಧ್ಯತೆ ಇದೆ. ಆದರೆ ಕರ್ಮಾಧಿಪತಿ ಶುಕ್ರನ ಬಲದಿಂದ ನಿಮ್ಮ ಸಮಸ್ಯೆಗಳು ದೂರಾಗುತ್ತವೆ ಆತಂಕ ಬೇಡ.
ಪರಿಹಾರ- ವಿಷ್ಣು ಸಹಸ್ರನಾಮ ಪಠಿಸಿ
ಅದೃಷ್ಟ ಸಂಖ್ಯೆ- 5 ಹಾಗೂ 6
ಬಣ್ಣ- ನೀಲ ಹಾಗೂ ಹಸಿರು
ರತ್ನ- ಪಚ್ಚೆ ಹಾಗೂ ನೀಲ

ಕುಂಭ(Aquarius)
ದೀಪಾವಳಿಯ ಪ್ರಾರಂಭದ ದಿನಗಳು ನಿಮ್ಮ ಪಾಲಿಗೆ ಸೌಭಾಗ್ಯ ಫಲಗಳನ್ನು ಕರುಣಿಸುವ ಕಾಲವಾಗಿದೆ. ಭಾಗ್ಯ ಸ್ಥಾನದ ಶುಕ್ರ ‘ಸದಾರ ಸುಹೃದಾತ್ಮಜಂ ಕ್ಷಿತಿಪಲಬ್ಧ ಭಾಗ್ಯಂ’ ಎಂಬಂತೆ ಪತಿ, ಪತ್ನೀ, ಪುತ್ರಾದಿ ಭಾಗ್ಯಗಳ ಜೊತೆಗೆ ರಾಜರಿಂದ ಸಮ್ಮಾನಗಳನ್ನು ತಂದುಕೊಡಲಿದ್ದಾನೆ. ದ್ವಿತೀಯದ ಗುರುಬಲವೂ ನಿಮ್ಮ ವಿದ್ಯೆ, ಬುದ್ಧಿ, ಕುಟುಂಬ ಸೌಖ್ಯತೆಯನ್ನು ಹೆಚ್ಚಿಸುತ್ತದೆ. ಶುಕ್ರನ ಸಂಚಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಪ್ರಶಂಸೆಯನ್ನೂ ತಂದುಕೊಡುತ್ತದೆ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಸದ್ಯಕ್ಕೆ ನಿಮಗಿರುವ ತೊಡಕೆಂದರೆ ವ್ಯಯದ ಶನೈಶ್ಚರನ ಬಾಧೆ. ವಿಪರೀತ ಖರ್ಚಿನ ಜೊತೆ ಆಪ್ತರು ದೂರಾಗುವ ಸೂಚನೆಗಳು ನಿಮ್ಮನ್ನು ದುಃಖಕ್ಕೆ ದೂಡುತ್ತವೆ. ಶ್ರಮವೂ ಹೆಚ್ಚಾಗಲಿದೆ. ಜನವರಿ ಮಧ್ಯಭಾಗದಿಂದ ಮತ್ತೆ ಚೇತರಿಕೆಯಾಗುತ್ತದೆ. ಶಶ ಯೋಗದ ಫಲದಿಂದ ಆಳ್ವಿಕೆಯ ಗುಣ ಹೆಚ್ಚಾಗುತ್ತದೆ. ಮಾರ್ಚ್ ತಿಂಗಳಲ್ಲಿ ಉದರ ಸಂಬಂಧಿ ತೊಂದರೆಗಳುಂಟಾಗ ಬಹುದು. ಮಕ್ಕಳೇ ಶತ್ರುಗಳಂತಾಗುವ ಸಾಧ್ಯತೆಯೂ ಇರುತ್ತದೆ. ಬುದ್ಧಿ ಸ್ಥಿಮಿತ ತಪ್ಪುತ್ತದೆ. ಹೀಗಾಗಿ ತಪ್ಪದೆ ಯೋಗಾಭ್ಯಾಸ, ಧ್ಯಾನ ದಂಥ ಸರಳ ಮಾರ್ಗಗಳನ್ನು ಮೊರೆ ಹೋಗುವುದು ಅನಿವಾರ್ಯ.
ಪರಿಹಾರ- ಈಶ್ವರನಿಗೆ 11 ಶನಿವಾರ ರುದ್ರಾಭಿಷೇಕ ಮಾಡಿಸಿ.
ಅದೃಷ್ಟ ಸಂಖ್ಯೆ- 1
ಬಣ್ಣ- ನೀಲ ಹಾಗೂ ಕಪ್ಪು
ರತ್ನ- ನೀಲ ಹಾಗೂ ವಜ್ರ

ಮೀನ(Pisces)
ದೀಪಾವಳಿ ಹಬ್ಬ ನಿಮ್ಮ ಪಾಲಿಗೆ ಶುಭಾಶುಭ ಮಿಶ್ರಫಲಗಳ ಕಾಲವಾಗಿದೆ. ಪ್ರಾರಂಭದ ದಿನಗಳಲ್ಲಿ ನಿಮಗೆ ವ್ಯಥೆ, ವಸ್ತು ನಷ್ಟದಂಥ ಸಂಕಟ ಫಲವನ್ನು ಕೊಡಲಿದೆ. ಆದರೆ ಚೇತರಿಸಿಕೊಳ್ಳುವ ಛಾತಿ ನಿಮ್ಮಲ್ಲಿದೆ. ಲಾಭದ ಶನೈಶ್ಚರ ನಿಮಗೆ ಬೇರೆ ಮಾರ್ಗಗಳ ರೂಪದಲ್ಲಿ ಹೆಚ್ಚಿನ ಆದಾಯವ್ನನ್ನು ತಂದುಕೊಡಲಿದ್ದಾನೆ. ವಿದೇಶ ವ್ಯವಹಾರಗಳಲ್ಲಿ ಹೆಚ್ಚಿನ ಅನುಕೂಲ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಅಡಚಣೆ, ಮನಸ್ಸಿನ ಚಾಂಚಲ್ಯ ಉಂಟಾಗುತ್ತದೆ. ಕುಟುಂಬದಲ್ಲಿ ಸ್ವಲ್ಪ ಅಸಮಾಧಾನ. ಕೋಪ ತಾಪಗಳಿಂದ ಅಸಮಾಧಾನದ ವಾತಾವರಣ ಇರಲಿದೆ. ಬಾಯಿ ಹುಣ್ಣು, ಹಲ್ಲಿನ ಸಮಸ್ಯೆಗಳ ಜೊತೆ ಕಣ್ಣಿನ ತೊಂದರೆಗಳೂ ಉಂಟಾಗಬಹುದು. ಎಚ್ಚರವಾಗಿರಿ. ಜನವರಿ ಮಧ್ಯಭಾಗದಿಂದ ಸ್ವಲ್ಪ ಹೆಚ್ಚಿನ ಖರ್ಚು ಉಂಟಾಗಲಿವೆ. ಕಾಲಿನ ಬಾಧೆ ಕಾಡಲಿದೆ. ಮಾರ್ಚ್ ತಿಂಗಳಲ್ಲಿ ಬಂದುಗಳ ಜೊತೆ ಕಲವ, ನಿವೇಶ, ಗೃಹ ವಿಚಾರದಲ್ಲಿ ಮೋಸ, ಕಲಹ ಸಾಧ್ಯತೆಗಳಿದ್ದಾವೆ. ಎಚ್ಚರಿಕೆಯಿಂದ ವ್ಯವಹರಿಸಿ. ಆತ್ಮೀಯ ಸ್ನೇಹಿತರು ತಿರುಗಿಬೀಳುವ ಸಾಧ್ಯತೆ ಇದೆ. ರೋಗಗಳೂ ಕಾಡಬಹುದು. ನೀರು-ಆಹಾರದ ವಿಚಾರದಲ್ಲಿ ಎಚ್ಚರವಹಿಸಿ. ದಾಂಪತ್ಯ ಜೀವನದಲ್ಲೂ ಸಣ್ಣ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ. ಗುರುವಿನ ದೃಷ್ಟಿಯಿಂದ ಸ್ವಲ್ಪ ಚೇತರಿಕೆ ಇದೆ. ಕಂಗಾಲಾಗಬೇಡಿ.
ಪರಿಹಾರ- ಗಾಣಗಾಪುರ ಕ್ಷೇತ್ರ ದರ್ಶನ ಮಾಡಿ
ಅದೃಷ್ಟ ಸಂಖ್ಯೆ- 1 ಹಾಗೂ 9
ಬಣ್ಣ- ಕೆಂಪು ಕೇಸರಿ
ರತ್ನ- ಪುಷ್ಯರಾಗ ಹಾಗೂ ಮಾಣಿಕ್ಯ

Follow Us:
Download App:
  • android
  • ios