Asianet Suvarna News Asianet Suvarna News

Hassan: ಚೆಲುವ ಚನ್ನಿಗನ ರಥೋತ್ಸವದಲ್ಲಿ ಜನಸಾಗರ

ವಿಶ್ವವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ನಾಡಿನ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. 2 ವರ್ಷ ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಚನ್ನಕೇಶವ ಸ್ವಾಮಿ ಜಾತ್ರೆ ಸ್ಥಗಿತಗೊಂಡಿತ್ತು. 

channakeshavaswamy temple rathotsava in beluru hassan gvd
Author
Bangalore, First Published Apr 15, 2022, 3:21 PM IST

ಬೇಲೂರು (ಏ.15): ವಿಶ್ವವಿಖ್ಯಾತ ಬೇಲೂರು (Beluru) ಚನ್ನಕೇಶವಸ್ವಾಮಿ ನಾಡಿನ ರಥೋತ್ಸವ (Channakeshava Temple Rathotsava)  ಸಹಸ್ರಾರು ಭಕ್ತರ (Devotees) ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. 2 ವರ್ಷ ಕೊರೋನಾ ಲಾಕ್‌ಡೌನ್‌ (Corona Lockdown) ಹಿನ್ನೆಲೆಯಲ್ಲಿ ಚನ್ನಕೇಶವ ಸ್ವಾಮಿ ಜಾತ್ರೆ ಸ್ಥಗಿತಗೊಂಡಿತ್ತು. ಬುಧವಾರ ಮತ್ತು ಗುರುವಾರ ನಡೆದ ರಥೋತ್ಸವದಲ್ಲಿ ಭಕ್ತರ ಸಂಖ್ಯೆ 2 ಪಟ್ಟು ಹೆಚ್ಚಾಗಿತ್ತು. ಬೆಳಗಿನಿಂದಲೇ ರಾಜ್ಯದ (Karnataka) ಮೂಲೆ ಮೂಲೆಗಳಿಂದ ಭಕ್ತರು ಜಮಾಯಿಸತೊಡಗಿದರು. ದೇಗುಲದ ಸುತ್ತಮುತ್ತ ಹಾಗೂ ದೇವಸ್ಥಾನ ರಸ್ತೆಯಲ್ಲಿ ಸೂಜಿ ಬಿದ್ದರೂ ಕಾಣದಷ್ಟು ಜನ ಸಮೂಹ ನೆರೆದಿತ್ತು. 

ಒಂದು ತುದಿಯಿಂದ ಮತ್ತೊಂದು ತುದಿಗೆ ದಾಟಲು ಹರಸಾಹಸ ಪಡಬೇಕಾಗಿತ್ತು. ಮುಖ್ಯ ರಸ್ತೆ ಹಾಗೂ ಹೆದ್ದಾರಿ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದಾಗಿ ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಪಟ್ಟಣದಲ್ಲಿಂದು ಜನಸಾಗರದ ಜತೆಗೆ ವಾಹನಗಳು ಅಧಿ​ಕ ಸಂಖ್ಯೆಯಲ್ಲಿದ್ದವು. ಮಧ್ಯಾಹ್ನ 2.30ರ ನಂತರ ರಥ ಎಳೆಯಲು ಚಾಲನೆ ನೀಡಲಾಯಿತು. ರಥವನ್ನು ಎಳೆಯುವ ಸಂದರ್ಭದಲ್ಲಿ ಭಕ್ತರು ದೇವರಿಗೆ ಬಾಳೆಹಣ್ಣು ಧವನವನ್ನು ಎಸೆದು ಭಕ್ತಿಭಾವ ಮೆರೆದರು. ಗುರುವಾರ ಬಯಲು ರಂಗಮಂದಿರದ ಬಳಿ ರಥವನ್ನು ನಿಲ್ಲಿಸಲಾಗಿತ್ತು. ಗುರುವಾರ ದೇಗುಲದ 3 ಮೂಲೆಗಳನ್ನು ಸುತ್ತಿ ಎಳೆದು ನಂತರ ಸ್ವಸ್ಥಾನಕ್ಕೆ ತಂದು ನಿಲ್ಲಿಸಲಾಯಿತು.

ನಾಡಿನ ತೆರಿಗೆ ತಾಲೂಕಿನ ಸುತ್ತಮುತ್ತಲಿನ ಹತ್ತು ಗ್ರಾಮದ ನಾಡಗೌಡರನ್ನು ಪ್ರಮುಖ ದಿಕ್ಕುಗಳ ಪುರಪ್ರವೇಶದಲ್ಲಿ ಗೌರವದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಸುತ್ತಮುತ್ತಲಿನ ನಾಡ ಪಟೇಲರು ಬಂದಮೇಲೆ ರಥ ಎಳೆಯುವುದು ವಾಡಿಕೆಯಾಗಿ ಬೆಳೆದುಬಂದಿದೆ. ಗುರುವಾರ ಬ್ರಹ್ಮರಥವನ್ನು ಬಯಲು ರಂಗ ಮಂದಿರ ಬಳಿ ನಿಲ್ಲಿಸಲಾಗಿತ್ತು, ಈ ಜಾಗದಲ್ಲಿ ಶ್ರೀವಿಷ್ಣುವು ಮೋಹಿನಿ ಅವತಾರವನ್ನು ತಾಳಿ ಭಸ್ಮಾಸುರನನ್ನೇ ಕೊಂದ ಸ್ಥಳ ಎಂಬ ಪ್ರತೀತಿ ಇದೆ ಈ ದಿನ ನಡೆಯುವ ನಾಡಿನ ತೇರನ್ನು ಎಳೆಯಲು ಇಷ್ಟೇ ಸಮಯ ನಿಗದಿ ಇರುವುದಿಲ್ಲ.

Hassan: ವಿಜೃಂಭಣೆಯಿಂದ ನಡೆದ ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವ

ಶುಕ್ರವಾರ ನಾಡ ರಥೋತ್ಸವ ಸಂದರ್ಭದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೇಗುಲ ರಸ್ತೆಯಲ್ಲಿ ಬೆಳಗಿನಿಂದಲೇ ಭಾರೀ ವಾಹನಗಳ ಸಂಚಾರ ನಿಷೇ​ಧಿಸಲಾಗಿತ್ತು. ಮೂಡಿಗೆರೆಯಿಂದ ಬರುವ ವಾಹನಗಳಿಗೆ ಚನ್ನಕೇಶವ ಛತ್ರದ ಬಳಿ, ಬಿಕ್ಕೋಡಿನ ಮಾರ್ಗದಲ್ಲಿ ಬರುವ ವಾಹನಗಳಿಗೆ ಬಾಲಕಿಯರ ಕಾಲೇಜು ಸಮೀಪ, ಜೆ ಪಿ ನಗರದಿಂದ ಬರುವವರಿಗೆ ಸಂತೆ ಮೈದಾನದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು.

ಈ ಬಾರಿ ಯಜ್ಞಮರಗಾರರಿಗೆ ದೇಗುಲ ಸಮಿತಿಯಲ್ಲಿ ಸ್ಥಾನ ಕಲ್ಪಿಸಿಲ್ಲ ಎಂದು ಕೋರ್ಚ್‌ ಮೊರೆ ಹೋಗಿದ್ದರಿಂದ ದೇಗುಲ ವ್ಯವಸ್ಥಾಪನಾ ಸಮಿತಿಗೆ ಹೈಕೋರ್ಚ್‌ ತಡೆಯಾಜ್ಞೆ ನೀಡಿತ್ತು. ದೇಗುಲ ಮುಖ್ಯ ಕಾರ್ಯನಿರ್ವಹಣಾ​ಧಿಕಾರಿ ವಿದ್ಯುಲ್ಲತಾ ಹಾಗೂ ಸಿಬ್ಬಂದಿ ವ್ಯವಸ್ಥಾಪನಾ ಸಮಿತಿ ಇಲ್ಲದಿದ್ದರೂ ಕಳೆದ 1 ವಾರದಿಂದ ದೇಗುಲದ ಉತ್ಸವಗಳು ಹಾಗೂ ರಥೋತ್ಸವದಂದು ಶ್ರಮವಹಿಸಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಜತೆಗೆ ಪೊಲೀಸ್‌ ಇಲಾಖೆ ಪುರಸಭೆ ವಿದ್ಯುತ್‌ ಇಲಾಖೆ ಹಾಗೂ ಅರ್ಚಕ ವರ್ಗದವರು ಕೂಡ ರಥೋತ್ಸವದ ಯಶಸ್ಸಿಗೆ ಕಾರಣರಾಗಿದ್ದಾರೆ.

ರಥೋತ್ಸವದ ಅಂಗವಾಗಿ ಶ್ರೀಚನ್ನಕೇಶವ ಹಾಗೂ ಸೌಮ್ಯನಾಯಕಿ ಅಮ್ಮನವರಿಗೆ ಚಿನ್ನಾಭರಣಗಳಿಂದ ವಿಶೇಷವಾದ ಅಲಂಕಾರವನ್ನು ಮಾಡಲಾಗುತ್ತದೆ. ‘ಚೆಲುವ ಚೆನ್ನಿಗ’ನೆಂದೇ ಪ್ರಸಿದ್ಧಿ ಪಡೆದಿರುವ ಚೆನ್ನಕೇಶವ ಮೂರ್ತಿಯ ತಲೆಗೆ ಚಿನ್ನದ ಕಿರೀಟ, ಗಧೆ, ಪಟ್ಟಪೀತಾಂಬರಗಳನ್ನು ಉಡಿಸಿ ಕೈಗಳಿಗೆ ಚಿನ್ನದ ಕಡಗ ತೊಡಿಸಿ ಸುಂದರ ಮುಖಕ್ಕೆ ಮೂಗುಬಟ್ಟನ್ನು ಇಡಲಾಗಿತ್ತು. ಚೆನ್ನಕೇಶವನು ಮೋಹಿನಿ ಅವತಾರವನ್ನು ತಾಳಿ ಭಸ್ಮಾಸುರನನ್ನು ಸಂಹಾರ ಮಾಡಿರುವ ಬಗ್ಗೆ ಐತಿಹ್ಯ ಇರುವ ಹಿನ್ನೆಲೆಯಲ್ಲಿ ಚೆನ್ನಿಗನಿಗೆ ಅಲಂಕಾರದ ಸಮಯದಲ್ಲಿ ಮೂಗುಬೊಟ್ಟನ್ನು ಇಡಲಾಗುತ್ತದೆ. ಸರ್ವಾಲಂಕಾರಭೂಷಿತ ಬೃಹತ್‌ ಮೂರ್ತಿಯ ಜೊತೆಗೆ ಸೌಮ್ಯನಾಯಕಿ ಅಮ್ಮನವರ ವಿಶೇಷ ಅಲಂಕಾರದ ಅಂದವನ್ನು ಕಣ್ತುಂಬಿಕೊಳ್ಳಲು ಭಕ್ತರು ಬೆಳಗಿನಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು.

Hassan: 400 ಹೋತ ಬಲಿಕೊಟ್ಟು ದೇವಿಗೆ ಹರಕೆ ತೀರಿಸಿದ ಬಿಜೆಪಿ ಶಾಸಕ ಪ್ರೀತಂಗೌಡ

ಚನ್ನಕೇಶವಸ್ವಾಮಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದ ಕೆಲವೇ ಕ್ಷಣದಲ್ಲಿ ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದ ಭಕ್ತ ಸಮೂಹಕ್ಕೆ ಪಾನಕ, ಮಜ್ಜಿಗೆ, ಪ್ರಸಾದವನ್ನು ನೀಡಲಾಯಿತು. ಇಲ್ಲಿನ ಬಸ್‌ ನಿಲ್ದಾಣದಿಂದ ದೇಗುಲದ ರಸ್ತೆಯ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಪಾನಕ ಮಜ್ಜಿಗೆಯನ್ನು ವಿತರಿಸಲಾಯಿತು. ಪಟ್ಟಣದಲ್ಲಿನ ವಿವಿಧ ಸಂಘಸಂಸ್ಥೆಗಳು, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ವತಿಯಿಂದ ಸಾವಿರಾರು ಭಕ್ತರಿಗೆ ತಂಪಾದ ಮಜ್ಜಿಗೆಯನ್ನು ವಿತರಣೆ ಮಾಡಲಾಯಿತು.

Follow Us:
Download App:
  • android
  • ios