ಅ.26 ಬಲಿಪಾಡ್ಯಮಿ; ಈ ದಿನದ ಹಿನ್ನೆಲೆ, ಮಹತ್ವವೇನು?
ಬಲಿ ಚಕ್ರವರ್ತಿಯು ಮಹಾ ಪರಾಕ್ರಮಿ. ಪಾತಾಳದಲ್ಲಿರುವ ಈತ ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಜನಗಳಿಂದ ಪೂಜೆ ಸ್ವೀಕರಿಸುವ ದಿನ ಬಲಿ ಪಾಡ್ಯಮಿ.
ಬಲಿಪ್ರತಿಪದವು ದೀಪಾವಳಿ ಹಬ್ಬದ ನಾಲ್ಕನೇ ದಿನವಾಗಿದೆ, ಇದು ಭೂಮಿಯ ಮೇಲೆ ರಾಕ್ಷಸ-ರಾಜ ಬಲಿಯ ಆಗಮನದ ಸ್ಮರಣೆಯಾಗಿದೆ. ಇದನ್ನು ಕರ್ನಾಟಕದಲ್ಲಿ ಬಲಿ ಪಾಡ್ಯಮಿ ಎಂದರೆ ಮಹಾರಾಷ್ಟ್ರದಲ್ಲಿ ಬಲಿ ಪಾಡ್ವಾ ಎಂದು ಕರೆಯುತ್ತಾರೆ. ಬಲಿಪ್ರತಿಪಾದವನ್ನು ದೈತ್ಯ-ರಾಜ ಬಲಿಯ ಮೇಲೆ ವಾಮನ ಅವತಾರದಲ್ಲಿ ವಿಷ್ಣುವಿನ ವಿಜಯವನ್ನು ಗುರುತಿಸಲು ಆಚರಿಸಲಾಗುತ್ತದೆ. ಏನಿದು ಬಲಿ ಪಾಡ್ಯಮಿಯ ಕತೆ, ಈ ದಿನದ ಮಹತ್ವವೇನು?
ಬಲಿ ಪಾಡ್ಯಮಿ ತಿಥಿ
ಬಲಿಪ್ರತಿಪಾದ 2022, ಅಥವಾ ಬಲಿ ಪೂಜೆಯನ್ನು ಅಕ್ಟೋಬರ್ 26, ಬುಧವಾರದಂದು ಆಚರಿಸಲಾಗುತ್ತದೆ. ಬಲಿಪ್ರತಿಪದವು ಹಿಂದೂ ತಿಂಗಳ ಕಾರ್ತಿಕದಲ್ಲಿ ಶುಕ್ಲ ಪಕ್ಷದ ಮೊದಲ ಚಂದ್ರನ ದಿನದಂದು ಬರುತ್ತದೆ. ದೃಕ್ ಪಂಚಾಂಗದ ಪ್ರಕಾರ, ಬಲಿ ಪೂಜೆ ಮುಹೂರ್ತವು ಅಕ್ಟೋಬರ್ 26ರಂದು ಬೆಳಗ್ಗೆ 06:29 ಮತ್ತು 08:43 AM ನಡುವೆ ಇರುತ್ತದೆ. ಏತನ್ಮಧ್ಯೆ, ಪ್ರತಿಪದ ತಿಥಿಯು ಅಕ್ಟೋಬರ್ 25ರಂದು ಸಂಜೆ 04:18ಕ್ಕೆ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 26ರಂದು ಮಧ್ಯಾಹ್ನ 02:42ಕ್ಕೆ ಕೊನೆಗೊಳ್ಳುತ್ತದೆ.
ಬಲಿ ಪಾಡ್ಯಮಿ ಇತಿಹಾಸ
ಬಲಿಪ್ರತಿಪಾದವು ಭಗವಾನ್ ವಿಷ್ಣುವಿನ ಐದನೇ ಅವತಾರವಾದ ವಾಮನನು ರಾಕ್ಷಸ-ರಾಜ ಬಲಿ ಅಥವಾ ಮಹಾಬಲಿಯ ಮೇಲೆ ಸಾಧಿಸಿದ ವಿಜಯವನ್ನು ಆಚರಿಸುತ್ತದೆ. ಹಿಂದೂ ಪುರಾಣಗಳ ಪ್ರಕಾರ, ಬಲಿ ರಾಜನು ತನ್ನ ಧೈರ್ಯ ಮತ್ತು ವಿಷ್ಣುವಿನ ಭಕ್ತಿಗೆ ಹೆಸರುವಾಸಿಯಾಗಿದ್ದನು. ಅವನು ಅಸುರರ ರಾಜನಾಗಿದ್ದನು ಮತ್ತು ದೇವರುಗಳಿಂದ ತಿರಸ್ಕರಿಸಲ್ಪಟ್ಟನು. ಆತ ತನ್ನ ಸಾಮರ್ಥ್ಯದಿಂದ ಭೂಮಿ, ಪಾತಾಳ ಮತ್ತು ದೇವಲೋಕಕ್ಕೆ ಚಕ್ರರ್ತಿಯಾದನು. ಆಗ ಬಲಿಯಿಂದ ತಮ್ಮನ್ನು ಕಾಪಾಡಲು ದೇವತೆಗಳು ವಿಷ್ಣುವಿನಲ್ಲಿ ಪ್ರಾರ್ಥಿಸಿದರು. ಭಗವಾನ್ ವಿಷ್ಣುವು ವಾಮನನೆಂಬ ಕುಬ್ಜನ ಪಾತ್ರ ಧರಿಸಿ ಭೂಮಿಗೆ ಬಂದನು. ರಾಜ ಬಲಿಯ ಬಳಿ ಹೋಗಿ ಭಿಕ್ಷೆ ಬೇಡಿದನು. ಈ ಸಂದರ್ಭದಲ್ಲಿ ಬಂದಿರುವುದು ವಿಷ್ಣುವೆಂದೂ, ಆತ ಕೇಳಿದ್ದು ಕೊಟ್ಟರೆ ನೀನು ಸರ್ವಸ್ವವನ್ನೂ ಕಳೆದುಕೊಳ್ಳುವೆ ಎಂದೂ ರಾಕ್ಷಸರ ಗುರುಗಳಾದ ಶುಕ್ರಾಚಾರ್ಯರು ಎಚ್ಚರಿಸುತ್ತಾರೆ.
ಮಂಗಳವಾರ ಈ ಕೆಲಸ ಮಾಡೋದು ಅಮಂಗಳ! ತಪ್ಪಿಯೂ ಈ 5 ಕೆಲಸ ಮಾಡ್ಬೇಡಿ..
ಆದರೆ, ಸಾಕ್ಷಾತ್ ವಿಷ್ಣುವಿಗೇ ಕೊಡುವ ಶಕ್ತಿ ನನ್ನಲ್ಲಿದೆ ಎಂದರೆ ನಾನು ಆತ ಕೇಳಿದ್ದನ್ನು ಸಂತೋಷದಿಂದ ಕೊಡುತ್ತೇನೆ ಎನ್ನುತ್ತಾನೆ ಬಲಿ. ನಂತರ ವಾಮನನ ಬಳಿ ಹೋಗಿ ಏನು ಬೇಕೆಂದು ಕೇಳಲು 3 ಹೆಜ್ಜೆ ಜಾಗ ಕೊಡಲು ಕೇಳುತ್ತಾನೆ ವಾಮನ. ಅದಕ್ಕೆ ಬಲಿ ಒಪ್ಪಿದ ನಂತರ ವಾಮನನು ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತಾನೆ. ಆತನ ಒಂದು ಹೆಜ್ಜೆ ಇಡೀ ಭೂಮಿಯನ್ನೂ, ಮತ್ತೊಂದು ಹೆಜ್ಜೆ ಇಡೀ ಆಕಾಶವನ್ನೂ ಆಕ್ರಮಿಸಿದ. ಮೂರನೇ ಹೆಜ್ಜೆ ಎಲ್ಲಿಡಲಿ ಎಂದು ವಾಮನ ಪ್ರಶ್ನಿಸಿದಾಗ ತನ್ನ ತಲೆಯ ಮೇಲಿಡಲು ಬಲಿ ಹೇಳುತ್ತಾನೆ. ವಾಮನರೂಪಿ ವಿಷ್ಣುವು ಬಲಿಯ ತಲೆ ಮೇಲೆ ಕಾಲಿಟ್ಟಾಗ ಬಲಿಯು ಪಾತಾಳ ಸೇರುತ್ತಾನೆ. ಆದಾಗ್ಯೂ, ಅವನ ಔದಾರ್ಯದಿಂದ ಪ್ರಭಾವಿತನಾದ ವಿಷ್ಣುವು ರಾಜ ಬಲಿಗೆ ಭೂಲೋಕಕ್ಕೆ ವರ್ಷಕ್ಕೊಮ್ಮೆ ಹಿಂದಿರುಗಲು ಆಶೀರ್ವದಿಸಿದನು. ಆ ದಿನವನ್ನು ಕೇರಳದಲ್ಲಿ ಓಣಂ ಎಂದು ಆಚರಿಸಲಾದರೆ, ಇತರೆಲ್ಲೆಡೆ ಬಲಿ ಪಾಡ್ಯಮಿಯಂದು ಆಚರಿಸಲಾಗುತ್ತದೆ. ವರ್ಷಕ್ಕೊಮ್ಮೆ ಭೂಮಿಗೆ ಬಂದ ಬಲಿಗೆ ಆತಿಥ್ಯ ನೀಡಲಾಗುತ್ತದೆ.
ಜನಪದ ಕತೆ
ಇನ್ನೊಂದು ವಿಶಿಷ್ಠ ಕತೆಯಿದೆ. ವಾಮನ ತಲೆ ಮೇಲೆ ಹೆಜ್ಜೆ ಇಟ್ಟು ಬಲಿ ಪಾತಾಳದೊಳಕ್ಕೆ ಇಳಿಯುತ್ತಿರುವಾಗ ತನಗೆ ಮೋಕ್ಷ(Salvation) ಯಾವಾಗ ಎಂದು ಕೇಳುತ್ತಾನೆ, ಆಗ ವಿಷ್ಣು ಭೂಮಿಯ ಮೇಲೆ ಜನರ ಸುಳಿವಿಲ್ಲದಿದ್ದಾಗ ನಿನಗೆ ಮೋಕ್ಷ ದೊರೆಯುತ್ತದೆ ಎಂದೂ ಹೇಳಿದನೆಂದು ಜನಪದ ನಂಬಿಕೆ. ಅದರಂತೆ ಬಲಿ ಪ್ರತಿವರ್ಷ ನರಕಚತುರ್ದಶಿ(Narak chaturdashi)ಯ ದಿನ ಭೂಮಿಯಿಂದ ಹೊರಬಂದು ತುಂಬೆಗಿಡಕ್ಕೆ ಏಣಿ ಹಾಕಿಕೊಂಡು ಭೂಮಿಯ ಮೇಲೆ ಜನರಿರುವರೊ ಇಲ್ಲವೋ ಎಂದು ನೋಡುತ್ತಾನಂತೆ. ಜನರಿರುವುದನ್ನು ತೋರಿಸುವುದಕ್ಕಾಗಿಯೇ ಆ ದಿನ ಕೂಗು ಹಾಕುತ್ತಾ ಹೊಲದ ನಾಲ್ಕು ಮೂಲೆಗಳಿಗೂ ಬೂದಿಯನ್ನು ಬಿಡುವುದು ಈಗಲೂ ಕೆಲವು ಕಡೆ ರೂಢಿಯಲ್ಲಿದೆ.
ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು..
ಬಲೀಂದ್ರ ಪೂಜೆ
ಈ ದಿನ ಜನರು ಮಣ್ಣಿನಲ್ಲಿ ಬಲೀಂದ್ರನ ಮೂರ್ತಿ ಮಾಡಿ ತುಳಸಿ ಗಿಡದ ಬಳಿಯಿಟ್ಟು ಪೂಜೆ ಮಾಡುತ್ತಾರೆ. ಬಲೀಂದ್ರನ ಪೂಜೆಯಿಂದ ಮನೆಯಲ್ಲಿ ಸದಾ ಸುಖ, ಸಮೃದ್ಧಿ, ಶಾಂತಿ ತುಂಬಿರುತ್ತದೆ ಎಂಬ ನಂಬಿಕೆ ಇದೆ.