Asianet Suvarna News Asianet Suvarna News

ನಾಗರಪಂಚಮಿ ಹಬ್ಬ: ಮಾರುಕಟ್ಟೆಯಲ್ಲಿ ಉಂಡಿಗಳ ಆಕರ್ಷಣೆ..!

ನಗರೀಕರಣದ ಫಲವಾಗಿ ಹುಬ್ಬಳ್ಳಿ-ಧಾರವಾಡದಂಥ ಮಹಾನಗರದ ಮನೆ ಮನೆಗಳಲ್ಲಿ ಕುಟುಂಬ ಸದಸ್ಯರೆಲ್ಲರೂ ನೌಕರಿ ಇಲ್ಲವೇ ಕೆಲಸಗಳಿಗೆ ತೆರಳುವುದರಿಂದ ಹಬ್ಬಕ್ಕೆ ಉಂಡಿ ಸೇರಿದಂತೆ ಇತರ ಖಾದ್ಯಗಳನ್ನು ತಯಾರಿಸಲು ಸಮಯವೇ ಸಿಗುತ್ತಿಲ್ಲ. ಹೀಗಾಗಿ ಎಲ್ಲೆಡೆ ಹಬ್ಬಕ್ಕಾಗಿ ನಾನಾ ಉಂಡಿಗಳ ಮಾರಾಟ ಎರಡ್ಮೂರು ದಿನಗಳಿಂದ ಜೋರಾಗಿ ನಡೆದಿದೆ.
 

Attractiveness of Laddu in the Hubballi Market During Nagarapanchami Festival grg
Author
First Published Aug 20, 2023, 10:30 PM IST | Last Updated Aug 20, 2023, 10:30 PM IST

ಶಿವಾನಂದ ಅಂಗಡಿ

ಹುಬ್ಬಳ್ಳಿ(ಆ.20):  ನಾಗರಾಧನೆ ಹಬ್ಬ ನಾಗರಪಂಚಮಿ ಆ. 20, 21ರಂದು ಎರಡು ದಿನಗಳ ಕಾಲ ಉತ್ತರ ಕರ್ನಾಟಕ ಸೇರಿ ವಿವಿಧೆಡೆ ನಡೆಯಲಿದ್ದು, ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ತಯಾರಿಸಿದ ನಾನಾ ವಿಧದ ಉಂಡಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಹಿಂದೂಗಳ ಕ್ಯಾಲೆಂಡರ್‌ ಪ್ರಕಾರ ಶ್ರಾವಣಮಾಸದಲ್ಲಿ ನಾಗರಪಂಚಮಿ ಹಬ್ಬ ಬರುತ್ತದೆ. ನಾಗರ ಅಮಾವಾಸ್ಯೆ ಮುಗಿದ ನಾಲ್ಕನೇ ದಿನಕ್ಕೆ ನಾಗಚುತುರ್ಥಿ, ಐದನೇ ದಿನಕ್ಕೆ ನಾಗರಪಂಚಮಿಯನ್ನು ರಾಜ್ಯಾದಂತ ಆಚರಿಸುತ್ತಾರೆ. ಹಬ್ಬವನ್ನು ದೇಶದ ಇತರ ರಾಜ್ಯಗಳಲ್ಲೂ ಆಚರಿಸುವ ರೂಢಿ ಇದೆ. ಗ್ರಾಮೀಣ ಪ್ರದೇಶದಲ್ಲಿ ಈ ಬಾರಿ ಮಳೆ ಅಭಾವದಿಂದ ಸರಿಯಾಗಿ ಬಿತ್ತನೆಯೇ ಆಗಿಲ್ಲ. ಹೊಲಗಳೆಲ್ಲ ಖಾಲಿ ಇದ್ದು, ಬಿತ್ತನೆಯಾಗಿದ್ದರೂ ಸರಿಯಾಗಿ ಬೆಳೆಗಳು ಬೆಳವಣಿಗೆಯಾಗಿಲ್ಲ. ಹೀಗಾಗಿ ಹಬ್ಬಕ್ಕೆ ಬರದ ಕಾರ್ಮೋಡ ಕವಿದಿದೆ.

ಕರ್ನಾಟಕದಲ್ಲಿ ಮಹಿಳೆಗೆ ಮುಖ್ಯಮಂತ್ರಿಯಾಗುವ ಯೋಗವಿದೆ: ಕೋಡಿಶ್ರೀಗಳ ಭವಿಷ್ಯ

ಹಬ್ಬಕ್ಕೆ ಮುನ್ನಾದಿನ ರೊಟ್ಟಿಪಂಚಮಿ, ಆ. 22ರಂದು ಕೆರೆಕಟಂಬ್ಲಿ, 23ರಂದು ವರ್ಷದ ತೂಡಕು ಇರುತ್ತದೆ. ಎರಡು ದಿನದ ಹಬ್ಬದಲ್ಲಿ ಒಂದು ದಿನ ಮನೆಯಲ್ಲೇ ಕುಟುಂಬ ಸದಸ್ಯರು ಸೇರಿ ಮಣ್ಣಿನ ಇಲ್ಲವೇ ಬೆಳ್ಳಿಯ ನಾಗಗಳಿಗೆ ಹಾಲು ಎರೆಯುತ್ತಾರೆ. ಮರುದಿನ ಕುಟುಂಬದ ಮಹಿಳೆಯರು, ಮಕ್ಕಳು ನಾಗರಕಟ್ಟೆಗಳಿಗೆ ತೆರಳಿ ಕೊಬ್ಬರಿ ಬಟ್ಟಲಿನಲ್ಲಿ ಹಾಲು ಎರೆಯುತ್ತಾರೆ. ಅಳ್ಳಿಟ್ಟು, ಕಡಲೆ ಕಾಳಿನ ಉಸುಳಿ, ಅಳ್ಳು ಮತ್ತಿತರ ಖಾದ್ಯಗಳನ್ನು ಪೂಜೆಯ ಬಳಿಕ ಎಡೆ ಸಮರ್ಪಿಸುತ್ತಾರೆ.

ಉಂಡಿ ಹಬ್ಬ ಜೋರು

ನಗರೀಕರಣದ ಫಲವಾಗಿ ಹುಬ್ಬಳ್ಳಿ-ಧಾರವಾಡದಂಥ ಮಹಾನಗರದ ಮನೆ ಮನೆಗಳಲ್ಲಿ ಕುಟುಂಬ ಸದಸ್ಯರೆಲ್ಲರೂ ನೌಕರಿ ಇಲ್ಲವೇ ಕೆಲಸಗಳಿಗೆ ತೆರಳುವುದರಿಂದ ಹಬ್ಬಕ್ಕೆ ಉಂಡಿ ಸೇರಿದಂತೆ ಇತರ ಖಾದ್ಯಗಳನ್ನು ತಯಾರಿಸಲು ಸಮಯವೇ ಸಿಗುತ್ತಿಲ್ಲ. ಹೀಗಾಗಿ ಎಲ್ಲೆಡೆ ಹಬ್ಬಕ್ಕಾಗಿ ನಾನಾ ಉಂಡಿಗಳ ಮಾರಾಟ ಎರಡ್ಮೂರು ದಿನಗಳಿಂದ ಜೋರಾಗಿ ನಡೆದಿದೆ.

ಇಲ್ಲಿಯ ದುರ್ಗದ ಬೈಲ್‌ ಹಾಗೂ ಕೇಶ್ವಾಪುರದ ಸರ್ಕಲ್‌ನಿಂದ ರಮೇಶ ಭವನಕ್ಕೆ ತೆರಳುವ ರಸ್ತೆಯಲ್ಲಿ ಹಬ್ಬಕ್ಕಾಗಿಯೇ ಅಂಜು-ಮಂಜು ಪುಡ್‌್ಸ ಹಾಗೂ ಸ್ವಾಮಿ ಪುಡ್‌್ಸ ಅಂಗಡಿಯವರು ವಿವಿಧ ಉಂಡಿಗಳನ್ನು ತಯಾರಿಸಿದ್ದಾರೆ. ಶೇಂಗಾ, ಎಳ್ಳು, ರವೆ, ಬೇಸನ್‌, ಡಾಣಿ, ಗುಳಿಗಿ, ಅಂಟಿನ ಉಂಡೆ, ಮೋತಿಚೂರು, ಗೊಳ್ಳಡಕಿ ಉಂಡಿಗಳನ್ನು ಪಂಚಮಿ ಹಬ್ಬಕ್ಕಾಗಿ ತಯಾರಿಸಲಾಗಿದೆ. ಹಾಲು ಎರೆಯುವ ವೇಳೆ ಬೇಕಾಗುವ ಅಳ್ಳು ಸಹ ಮಾರಾಟಕ್ಕೆ ಲಭ್ಯವಿವೆ.
ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ವಿವಿಧ ಬಗೆಯ ಗುರೆಳ್ಳು, ಶೇಂಗಾ ಚಟ್ನಿ, ಪುಟಾಣಿ ಚಟ್ನಿ, ಕೆಂಪು ಕಾರ ಹೀಗೆ ತರಹೇವಾರಿ ಖಾದ್ಯಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಶನಿವಾರ ರೊಟ್ಟಿ ಪಂಚಮಿ ಆಚರಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ನಾನಾ ತರಹದ ಚಟ್ನಿ, ರೊಟ್ಟಿಗಳು ಗ್ರಾಹಕರ ಮನೆ ಸೇರಿವೆ.

ಶೇಂಗಾ, ಎಳ್ಳು, ರವೆ, ಬೇಸನ್‌, ಡಾಣಿ, ಗುಳಿಗಿ ಉಂಡಿಗಳಿಗೆ ಕಿಲೋಗೆ . 240 ದರ ನಿಗದಿಯಾಗಿದ್ದು, ಆಯಾ ಅಂಗಡಿಗಳಲ್ಲಿ ದರಗಳಲ್ಲಿ ವ್ಯತಾಸವಿದೆ. ಅಂಟಿನ ಉಂಡಿ ಮಾತ್ರ . 440ಕ್ಕೆ ಕಿಲೋ ಮಾರಾಟ ಮಾಡುತ್ತಿದ್ದಾರೆ. ಚಕ್ಕಲಿ, ಅಳ್ಳು, ಸಪ್ಪನ ಗುಳಿಗಿ, ಸಪ್ಪನ ಡಾಣಿ ಸಹ ಎಲ್ಲೆಡೆ ಸಿಗುತ್ತಿವೆ.

ನಾಗರ ಪಂಚಮಿಯ ಮಹತ್ವವೇನು? ಆಚರಣೆ ಹೇಗೆ ಮಾಡಬೇಕು..?

ಪಂಚಮಿ ಹಬ್ಬಕ್ಕಾಗಿಯೇ 5ರಿಂದ 6 ಕ್ವಿಂಟಲ್‌ ಲೆಕ್ಕದಲ್ಲಿ ನಾನಾ ವಿಧದ ಉಂಡಿಗಳನ್ನು ತಯಾರಿಸಿದ್ದೇವೆ. 30 ವರ್ಷಗಳಿಂದ ಈ ವ್ಯಾಪಾರ ಮಾಡಿಕೊಂಡಿದ್ದು, ವಾರದಿಂದ ಮನೆಯಲ್ಲಿಯೇ ನಾವೇ ಸ್ವತಃ ಎಲ್ಲ ಉಂಡಿಗಳನ್ನು ತಯಾರಿಸಿದ್ದೇವೆ. ಗ್ರಾಹಕರಿಗೆ ಅನುಕೂಲವಾಗುವ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು, ಮನೆಯಲ್ಲಿ ತಯಾರಿಸಿದ್ದಕ್ಕಿಂತ ಸ್ವಲ್ವ ಹೆಚ್ಚಿಗೆ ಖರ್ಚು ಬರುತ್ತದೆ. ಕುಟುಂಬ ಸದಸ್ಯರ ಸಮಯ ಉಳಿಯುತ್ತದೆ ಎಂದು ಅಂಜು-ಮಂಜು ಪುಡ್ಸ್‌ ಮಾಲೀಕ ಚೇತನ ಅ. ಮಹೇಂದ್ರಕರ ಹೇಳಿದ್ದಾರೆ. 

ನೌಕರಿಗೆ ಸೇರಿದಂತೆ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಕುಟುಂಬ ಕೆಲಸವನ್ನು ಮಾಡುತ್ತ ಸಕಾಲದಲ್ಲಿ ಪಂಚಮಿ ಉಂಡಿ ತಯಾರಿಸಲು ಆಗುತ್ತಿಲ್ಲ. ಹೀಗಾಗಿ ಮಾರಾಟ ಮಳಿಗೆಗಳಲ್ಲಿ ನಾವು ಪ್ರತಿವರ್ಷ ಶೇಂಗಾ, ಡಾಣಿ, ರವೆ ಲಾಡುಗಳನ್ನು ಖರೀದಿಸಿ ಹಬ್ಬವನ್ನು ಆಚರಿಸುತ್ತೇವೆ ಎಂದು ನಾಗಶೆಟ್ಟಿಕೊಪ್ಪ ರೇಣುಕಾ ಜೈನ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios